ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜ್ ಚೇಳ್ಯಾರು ಸಹಬಾಗಿತ್ವದಲ್ಲಿ ನಡೆದ ‘ನಲ್ಮೆ ಬಲ್ಮೆ’ ವಿದ್ಯಾರ್ಥಿಗಳಿಗಾಗಿ ಮೂರು ದಿನದ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ರಂಗ ಪ್ರದರ್ಶನದೊಂದಿಗೆ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆಯಿತು.
ಮುಖ್ಯ ಅತಿಥಿ ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಯಿದ್ದು, ಅದರ ಅಭಿವ್ಯಕ್ತಿಗೆ ರಂಗ ತರಬೇತಿ ಉತ್ತಮ ಅವಕಾಶವಾಗಿದ್ದು ಉತ್ತಮ ಕಲಾವಿದರು ಮೂಡಿಬರಬೇಕು” ಎಂದು ಆಶಿಸಿದರು. ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ. ರಾಜಮೋಹನ ರಾವ್ ಮಾತನಾಡಿ “ಪಠ್ಯ ಪೂರಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಇರುತ್ತಾರೆ” ಎಂದರು. ಎಂ.ಆರ್.ಪಿ.ಎಲ್. ಸಂಸ್ಥೆಯ ನಿವೃತ್ತ ಪ್ರಬಂಧಕಿ ಹಾಗು ಲೇಖಕಿ ವೀಣಾ ಶೆಟ್ಟಿಯವರು “ನಲ್ಮೆ ಬಲ್ಮೆಯಂತಹ ತರಬೇತಿ ಕಾರ್ಯಕ್ರಮಗಳಿಂದ ಸುಪ್ತವಾಗಿರುವ ಪ್ರತಿಭೆಗಳು ಪ್ರಕಟವಾಗಲು ಸಾಧ್ಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಿಂಗಾರ ಸಂಸ್ಥೆಯ ಯೋಜನೆ ಪ್ರಯೋಜನಕಾರಿಯಾಗಿದೆ” ಎಂದರು.
ಶಕ್ತಿನಗರ ನಾಲ್ಯ ಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಾನಂದ ಸುವರ್ಣ ಮಾತನಾಡಿ “ಔದ್ಯೋಗಿಕ ಲೋಕದಲ್ಲಿ ಇಂದು ಸಮರ್ಥವಾಗಿ ಸಂವಹನ ಕಲೆ ಅಗತ್ಯವಾಗಿದ್ದು, ರಂಗಭೂಮಿ ಪೂರಕವಾಗಿರುತ್ತದೆ” ಎಂದರು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ್ ಹೆಬ್ಬಾರ್ “ಮಾತೃ ಭಾಷೆಯ ಕುರಿತು ಪ್ರೀತಿ ಅಗತ್ಯವಾಗಿದ್ದು, ತುಳು ಭಾಷೆ ಮತ್ತು ಸಂಸ್ಕೃತಿಯ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು” ಎಂದರು. ಸಿಂಗಾರ ಸುರತ್ಕಲ್ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ “ಗ್ರಾಮೀಣ ಪ್ರದೇಶದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಲಭ್ಯವಾಗಿಸುವ ಪ್ರಯತ್ನ ಇದಾಗಿದ್ದು, ವಿದ್ಯಾರ್ಥಿಗಳಲ್ಲಿ ಆತ್ಮ ಗೌರವದ ಭಾವ ಮೂಡಿದೆ” ಎಂದು ನುಡಿದರು.
ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಅವರು “ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದು, ಹಿರಿಯರ ಜ್ಞಾನ ಪರಂಪರೆ ಉಳಿಸಿಕೊಳ್ಳುವ ಅಗತ್ಯವಿದೆ” ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು ಮಾತನಾಡಿ “ಶಿಬಿರ ವಿದ್ಯಾರ್ಥಿಗಳ ಮನೋವೃತ್ತಿಯಲ್ಲಿ ಬದಲಾವಣೆ ತಂದಿದ್ದು ಅವಕಾಶ ಕಲ್ಪಿಸಿದ ಅಕಾಡೆಮಿ ಮತ್ತು ಸಿಂಗಾರ ಸಂಸ್ಥೆಗಳ ಕಾರ್ಯ ಶ್ಲಾಘನೀಯ” ಎಂದರು. ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮತ್ತು ಅವನೀಶ್ ಇವರನ್ನು ಗೌರವಿಸಲಾಯಿತು. ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ಗೌತಮಿ, ಪ್ರಜ್ವಲ್, ಅಕ್ಷತಾ ಅನುಭವ ಹಂಚಿಕೊಂಡರು. ಉಪನ್ಯಾಸಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ರವಿಚಂದ್ರ, ಜಯಶ್ರೀ, ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.