ಸುರತ್ಕಲ್ : ಚೇಳಾಯ್ರು ಖಂಡಿಗೆಯ ಶ್ರೀ ನಾಟ್ಯಾಂಜಲಿ ಕಲಾ ಮಂದಿರದ ಪಾರ್ವತಿ ವೇದಿಕೆಯಲ್ಲಿ ದಿನಾಂಕ 13 ಮೇ 2025ರಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿಯಲ್ಲಿ ‘ಮಾತಿನ ಮಂಟಪ’ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷೆ ಗುರು ಶುಭಾ ಧನಂಜಯ್ ಇವರು ಮಾತನಾಡಿ “ನೃತ್ಯದಲ್ಲಿ ಭಾವ ಹಾಗೂ ಅಭಿನಯ ಎಷ್ಟು ಮುಖ್ಯವೋ ಅಷ್ಟೇ ತಾಳ ಹಾಗೂ ಲಯವೂ ಮುಖ್ಯ. ಭಾವಕ್ಕೆ, ಅಭಿನಯಕ್ಕೆ ನಾವು ಎಷ್ಟು ಪ್ರಾಧಾನ್ಯ ಕೊಡುತ್ತೇವೆಯೋ, ಅಷ್ಟೇ ತಾಳಕ್ಕೂ ಲಯಕ್ಕೂ ಪ್ರಾತಿನಿಧ್ಯ ನೀಡಲೇಬೇಕು. ಇದು ಒಂದಕ್ಕೊಂದು ಬೆಸೆದರೆ ಮಾತ್ರ ಯಾವುದೇ ನೃತ್ಯ ಪ್ರಕಾರಗಳು ವಿಜೃಂಭಿಸುವುದಕ್ಕೆ ಸಾಧ್ಯ” ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ‘ಮಾತಿನ ಮಂಟಪ’ದಲ್ಲಿ ವಿದುಷಿಯರಾದ ಸುಮಂಗಲಾ ರತ್ನಾಕರ್, ಡಾ. ಭ್ರಮರಿ ಶಿವಪ್ರಕಾಶ್, ವಿದ್ಯಾಶ್ರೀ ರಾಧಾಕೃಷ್ಣ, ರಶ್ಮಿ ಉಡುಪ ಮತ್ತು ವಿದ್ಯಾ ಚಂದ್ರಶೇಖರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ. ಚಂದ್ರಶೇಖರ ನಾವಡರು ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು.