ಮಂಗಳೂರು : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ ಐತಾಳ್ “ಶಾಲಾ ಶೈಕ್ಷಣಿಕ ಬದುಕಿನ ಜೊತೆಗೆ ಭಾರತೀಯ ಲಲಿತ ಕಲೆಯಲ್ಲಿ ಆಗ್ರಪಂಕ್ತಿಯಲಿರುವ ನೃತ್ಯ ಕಲೆಯ ಅಭ್ಯಾಸದಿಂದ ಮನಸ್ಸನ್ನು ಸುಂದರವಾಗಿ ಇಡಲು ಸಾಧ್ಯ. ಶಾಸ್ತ್ರೀಯ ಚೌಕಟ್ಟಿನಲ್ಲಿ ಈ ಕಲೆಯ ಪ್ರಚಾರ ಪ್ರಸಾರ ನಿರಂತರವಾಗಿ ಸಾಗಲಿ” ಎಂದು ಅಭಿಪ್ರಾಯಪಟ್ಟರು.
ಪರಿಷತ್ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ್ ಅಧ್ಯಕ್ಷತೆ ವಹಿಸಿ “ಪರಿಷತ್ ಇಂತಹ ಕಾರ್ಯಕ್ರಮವನ್ನು ಕ್ರಮವಾಗಿ ಮಂಗಳೂರು, ಉಡುಪಿ ಮತ್ತು ಪುತ್ತೂರು ಮೊದಲಾದ ಕಡೆಗಳಲ್ಲಿ ನೃತ್ಯ ಕಲಿಯುತ್ತಿರುವ ಪ್ರತಿಭೆಗಳ ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ” ಎಂದರು.

ನಗರದ 9 ನೃತ್ಯ ಸಂಸ್ಥೆಗಳ 60 ಮಕ್ಕಳು ಭಾಗವಹಿಸಿದ್ದರು. ನೃತ್ಯ ಪರಿಷತ್ ಸದಸ್ಯರಾದ ವಿದ್ವಾನ್ ಪ್ರವೀಣ್ ಕದ್ರಿ, ವಿದ್ವಾನ್ ಸುದರ್ಶನ್ ಕೋಡಿಕಲ್, ವಿದುಷಿ ಲತಾ ಶಶಿಧರನ್, ವಿದ್ವಾನ್ ಚಂದ್ರಶೇಖರ ನಾವಡ ಮೊದಲಾದವರು ಉಪಸ್ಥಿತರಿದ್ದರು. ವಿದುಷಿ ಸವಿತಾ ಜೀವನ್ ನಿರೂಪಿಸಿ, ಕಾರ್ಯದರ್ಶಿ ವಿದುಷಿ ಶಾರದಾಮಣಿ ಶೇಖರ್ ವಂದಿಸಿದರು.
