ಬಂಟ್ವಾಳ : ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ನೃತ್ಯಧಾರಾ ಮತ್ತು ಯಕ್ಷಗಾನ ಹಾಸ್ಯ ಕಲಾವಿದ ಕೀರ್ತಿಶೇಷ ರಸಿಕ ರತ್ನ ನಯನ ಕುಮಾರ್ ಸ್ಮರಣಾರ್ಥ ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 01 ನವೆಂಬರ್ 2025ರಂದು ಬಿ.ಸಿ. ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ದೀಪಪ್ರಜ್ವಲನ ಬಳಿಕ ಕಲಾಕೇಂದ್ರದ ವಿದ್ಯಾರ್ಥಿನಿಯರಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೃತ್ಯಗುರು ಪುತ್ತೂರು ವಿಶ್ವ ಕಲಾನಿಕೇತನದ ಕರ್ನಾಟಕ ಕಲಾಶ್ರೀ ಪುರಸ್ಕೃತೆ ವಿದುಷಿ ನಯನ ವಿ. ರೈ ಕುದ್ಮಾಡಿ ವಹಿಸಿ ಮಾತನಾಡಿ “ಭರತನಾಟ್ಯ ಕಲೆಗೆ ಅವಕಾಶಗಳೊಂದಿಗೆ ಪ್ರೋತ್ಸಾಹಗಳು ದೊರಕುತ್ತಿದ್ದು, ಸಾಂಸ್ಕೃತಿಕವಾಗಿ ನಮ್ಮ ಬೆಳವಣಿಗೆಗೆ ಇದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಉತ್ತಮ ಕೆಲಸವನ್ನು ಮಾಡುತ್ತಿದೆ” ಎಂದು ಶುಭ ಹಾರೈಸಿದರು.

ಕಲಾನಯನ ಪ್ರಶಸ್ತಿಯನ್ನು ಸಂಶೋಧಕ, ವಿಶ್ರಾಂತ ಪ್ರಾಧ್ಯಾಪಕ ಡಾ. ವೈ.ಉಮಾನಾಥ ಶೆಣೈಯವರಿಗೆ ಪ್ರದಾನಗೈದು ಗೌರವಿಸಲಾಯಿತು. ನಿವೃತ್ತ ಅಧಿಕಾರಿ ವಿಜಯಕುಮಾರಿ ಶೆಣೈ ಇವರನ್ನು ಅಭಿನಂದಿಸಲಾಯಿತು. ಬೆಳಕು ವಿನ್ಯಾಸಕಾರ ಪೃಥ್ವಿನ್ ಕೆ. ಉಡುಪಿ ಇವರನ್ನು ಸನ್ಮಾನಿಸಲಾಯಿತು. ಸಂಚಾಲಕ ಉದಯ ವೆಂಕಟೇಶ ಭಟ್ ಸ್ವಾಗತಿಸಿ, ವಂದಿಸಿದರು. ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
