ವಿರಾಜಪೇಟೆ : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ ಕೊಡಗಿನ ಕನ್ನಡ ನುಡಿ ವೈಭವದ ಹಬ್ಬ ‘ನುಡಿ ಉತ್ಸವ-2025’ದ ಲಾಂಛನ ಬಿಡುಗಡೆ ಕಾರ್ಯಕ್ರಮವು ದಿನಾಂಕ 11 ನವೆಂಬರ್ 2025ರಂದು ನಡೆಯಿತು.
ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಇವರು ಲಾಂಛನ ಬಿಡುಗಡೆಗೊಳಿಸಿ “ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗುವ ಈ ಕಾರ್ಯಕ್ರಮವು ಸಂಭ್ರಮದ ಕಾರ್ಯಕ್ರಮವಾಗಿದ್ದು, ನಮ್ಮ ನಾಡಿನ ಹೆಮ್ಮೆಯ ಹಬ್ಬವು ಆಗಿದೆ. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡ ನಾಡು ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ರಾಜ್ಯೋತ್ಸವದ ಆಚರಣೆಯು ನಾವು ನಾಡಿಗೆ ಸಲ್ಲಿಸುವ ಗೌರವವಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನುಡಿ ಉತ್ಸವ ಸಮಿತಿಯ ಸಂಚಾಲಕರು ಹಾಗೂ ಪತ್ರಕರ್ತರಾದ ಅಬ್ದುಲ್ ರೆಹಮಾನ್ ಮಾತನಾಡಿ “ಕನ್ನಡಮ್ಮನ ಸೇವೆಗೆ ನಾವು ಸದಾ ಸಿದ್ಧರಿರಬೇಕು. ವಿರಾಜಪೇಟೆಯ ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ನುಡಿ ಉತ್ಸವ ಕಾರ್ಯಕ್ರಮದಲ್ಲಿ ಈ ಹಿಂದಿನಿಂದಲೂ ಸಕ್ರಿಯವಾಗಿ ಪ್ರತಿಯೊಬ್ಬರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ” ಎಂದರು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, “ನುಡಿ ಉತ್ಸವಕ್ಕೆ ಇಂದು ವರ್ಣ ರಂಜಿತವಾಗಿ ಚಾಲನೆಯನ್ನು ನೀಡಲಾಗಿದ್ದು, ಮುಂದಿನ ದಿವಸಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು” ಎಂದು ತಿಳಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ್ ಮೌರ್ಯ ಕಾರ್ಯಕ್ರಮದ ಸ್ವರೂಪದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರು ನುಡಿ ಉತ್ಸವದ ವಿಡಿಯೋ ತುಣುಕನ್ನು ಬಿಡುಗಡೆಗೊಳಿಸಿದರು.

ಅಮ್ಮತ್ತಿಯ ಜಾದೂಗಾರರಾದ ರಾಜೇಶ್ ಜಾದು ಪ್ರದರ್ಶನ, ಚೆನ್ನಯನಕೋಟೆಯ ರಮೇಶ್ ಮತ್ತು ತಂಡದವರಿಂದ ಕಹಳೆ, ಜನಪದ ಕಲೆ ಪ್ರದರ್ಶನ ಹಾಗೂ ಸೆಂಟ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನವು ಮೂಡಿ ಬಂತು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಸ್ವಾಗತಿಸಿ, ವಿದ್ಯಾರ್ಥಿಗಳಾದ ಪ್ರಕೃತಿ, ಬ್ರಿಜೇಶ್ ನಿರೂಪಿಸಿ, ಪ್ರಾಧ್ಯಾಪಕ ಶಾಂತಿಭೂಷಣ್ ವಂದಿಸಿದರು. ನುಡಿ ಉತ್ಸವದ ಪ್ರಯುಕ್ತ ದಿನಾಂಕ 20 ನವೆಂಬರ್ 2025ರಂದು ಕಾಲೇಜಿನಲ್ಲಿ ಅಂತರ್ ತರಗತಿ ನುಡಿಗೀತ ಗಾಯನ ಸ್ಪರ್ಧೆ, ಸಭಾ ಕಾರ್ಯಕ್ರಮ, ಸಾಂಪ್ರದಾಯಿಕ ದಿನ, ವಿದ್ಯಾರ್ಥಿ ಕಲಾವಿದರಿಂದ ಕಲಾಪ್ರದರ್ಶನ ಸಂಭ್ರಮದಿಂದ ಜರುಗಲಿದೆ.
