ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಇದರ 2ನೇ ವರ್ಷದ ವಾರ್ಷಿಕ ನೃತ್ಯ ಸಂಭ್ರಮ ‘ಪರಿಭ್ರಮಣ -2025’ ದಿನಾಂಕ 06 ಡಿಸೆಂಬರ್ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಯುತ ಡಾ. ಎ.ಪಿ. ಕೃಷ್ಣ ಇವರು ಇಂದಿನ ಸಮಾಜಕ್ಕೆ ಇಂತಹ ಸಂಸ್ಕಾರಯುತ ಶಿಕ್ಷಣ ಎಷ್ಟು ಮುಖ್ಯ ಎಂದು ತಿಳಿಸಿದರು. ಅಭ್ಯಾಗತರಾಗಿ ಆಗಮಿಸಿದ ಮಂಗಳೂರಿನ ಹಿರಿಯ ನೃತ್ಯಗುರು, ನಾಟ್ಯನಿಕೇತನ ಕೊಲ್ಯ ಇದರ ನೃತ್ಯ ನಿರ್ದೇಶಕರೂ ಆಗಿರುವ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಶೆಣೈ ಇವರು ಮಕ್ಕಳಲ್ಲಿ ಇಂತಹ ಆಸಕ್ತಿಯನ್ನು ಹುಟ್ಟಿಸಿ ಬೆಳೆಸುವಲ್ಲಿ ಪೋಷಕರ ಜೊತೆಗೆ ಇಂತಹ ಕಲಾ ಸಂಸ್ಥೆಗಳ ಪರಿಶ್ರಮ ಎಷ್ಟು ಇರುತ್ತದೆ ಎಂದು ತಿಳಿಸುತ್ತಾ ಅದೇ ಮಾರ್ಗದಲ್ಲಿ ಸಾಗುತ್ತಿರುವ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಹಾಗೂ ಅದರ ಅಂಗಸಂಸ್ಥೆ ಕಲಾಸೂರ್ಯ ಮಂಗಳೂರು ಇವರಿಗೆ ಶುಭ ಹಾರೈಸಿದರು.


ಕಾರ್ಯಕ್ರಮವು ಕಲಾಸೂರ್ಯ ನೃತ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಶ್ರೀಮತಿ ಸೌಜನ್ಯ ಪಡುವೆಟ್ನಾಯ ಇವರ ಶಂಖನಾದ, ವಿದುಷಿ ಶ್ರೀಮತಿ ಪ್ರೀತಿಕಲಾ ಇವರ ಓಂಕಾರನಾದ ಹಾಗೂ ಪ್ರಾರ್ಥನೆಯಿಂದ ಸಭಾಂಗಣದಲ್ಲಿ ಕಲೆ – ಸಂಸ್ಕೃತಿಯ ಮಿಲನಕ್ಕೆ ನಾಂದಿ ಹಾಡಿತು.
ಮುಂದೆ ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿಗಳಿಂದ ವಿದುಷಿ ಸೌಜನ್ಯ ಪಡುವೆಟ್ನಾಯ ಇವರ ನಿರ್ದೇಶನದಲ್ಲಿ ಅಚ್ಚುಕಟ್ಟಾದ, ಸುಂದರ ನೃತ್ಯ ಪ್ರಸ್ತುತಿ ನಡೆಯಿತು.


ನಂತರ ಅಭ್ಯಾಗತರಾದ ವಿದುಷಿ ರಾಜಶ್ರೀ ಶೆಣೈ ಇವರಿಗೆ ಅವರ ಶಿಷ್ಯ ವಿದ್ವಾನ್ ಬಿ. ದೀಪಕ್ ಕುಮಾರ್ ಇವರು ತಮ್ಮ ಮಗಳು ಕುಮಾರಿ ಮಾತಂಗಿ ರಚಿಸಿದ ದಶವತಾರ ಕುರಿತ ಸಾಹಿತ್ಯಕ್ಕೆ ನರ್ತಿಸುವ ಮೂಲಕ ಅಚ್ಚರಿಯ ಉಡುಗೊರೆ ನೀಡಿದ್ದು ಅಭ್ಯಾಗತರ ಜೊತೆಗೆ ಸಭಿಕರೆಲ್ಲರ ಮನಸ್ಸು ತುಂಬಿತು. ಕೊನೆಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಇದರ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ಇವರ ನಿರ್ದೇಶನದಲ್ಲಿ ‘ತ್ರಿಶಕ್ತಿ’ ವಿಶೇಷ ನೃತ್ಯಪ್ರಸ್ತುತಿ ಜನಮೆಚ್ಚುಗೆ ಗಳಿಸಿತು.

ಇಂತಹ ಸುಂದರ ಕಾರ್ಯಕ್ರಮದ ಇನ್ನೊಂದು ಶಕ್ತಿ ಹಿಮ್ಮೇಳದ ಕಲಾವಿದರು. ನಟುವಾಂಗದಲ್ಲಿ ವಿದ್ವಾನ್ ಬಿ. ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಶ್ರೀಮತಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ. ಮನೋಹರ್ ರಾವ್ ಹಾಗೂ ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದರು. ಮಕ್ಕಳ ಮುಖವರ್ಣಿಕೆಯಲ್ಲಿ ಶ್ರೀಮತಿ ಶಶಿಪ್ರಭಾ ಹಾಗೂ ವಿದ್ವಾನ್ ಬಿ. ಗಿರೀಶ್ ಕುಮಾರ್ ಇವರು ಸಹಕರಿಸಿದರು. ಶ್ರೀಮತಿ ಸತ್ಯಶೀಲಾ ಸ್ವಾಗತಿಸಿ, ಕಲಾಸೂರ್ಯ ನೃತ್ಯಾಲಯದ ಸಂಚಾಲಕರಾದ ಶ್ರೀ ವಿಕ್ರಮ್ ಪಡುವೆಟ್ನಾಯ ವಂದಿಸಿ, ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

