ಕಟಪಾಡಿ : ಸಾಹಿತಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರ ಹತ್ತನೇಯ ತುಲು ಕೃತಿ ‘ಪತ್ತ್’ ತುಲು ಕಬಿತೆಲೆ ತಂಚಿ ಎಂಬ ಕವನ ಸಂಕಲನದ ಲೋಕರ್ಪಣಾ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾ ಮಂಟಪದಲ್ಲಿ ನಡೆದ ‘ತುಳುನಾಡ್ ಕನ್ಕ್ಲೇವ್ -2025’ ತುಲುವ ಜವನೆರೆ ಆಯನೊ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ನಡೆಯಿತು.
ಸಮಾರಂಭದಲ್ಲಿ ಅಖಿಲ ಭಾರತ ಆಕಾಶವಾಣಿ ಮಂಗಳೂರು ಕೇಂದ್ರದಲ್ಲಿ ಹಿರಿಯ ಶ್ರೇಣಿ ಪ್ರಸಾರಕರಾಗಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಗೀತ, ರಂಗಭೂಮಿ, ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀಯುತ ಮುದ್ದು ಮೂಡುಬೆಳ್ಳೆ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು “ಒಬ್ಬ ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕುಶಲಾಕ್ಷಿ ಕಣ್ವತೀರ್ಥರವರ ಸಾಧನೆ ಮೆಚ್ಚುವಂತದ್ದು, ತುಳು ಸಾಹಿತ್ಯದ ಹತ್ತು ಕೃತಿಗಳನ್ನು ಪ್ರಕಟಿಸುವುದೆಂದರೆ ಸಾಮಾನ್ಯವೇನಲ್ಲ,ಇವರ ಕವನಗಳಲ್ಲಿ ಪರಿಸರ ಕಾಳಜಿ,ಸಮಾಜಕ್ಕೆ ಸಂದೇಶಗಳು ತುಂಬಿಕೊಂಡಿದ್ದು ಕೆಲವು ಕವನಗಳು ರಾಗವಾಗಿ ಹಾಡಲು ಬರುವಂತಿದೆ. ಕಿರಿಯ ಬರಹಗಾರರನ್ನು ತಿದ್ದಿ ತೀಡಿ ಮುನ್ನಡೆಸುವ ಅವರ ಕೆಲಸ ಶ್ಲಾಘನೀಯ, ಮಕ್ಕಳ ತುಳು ಸಾಹಿತ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಮುಂದಿನ ಜನಾಂಗಕ್ಕೆ ಮಾತೃ ಭಾಷೆಯ ಜ್ಞಾನವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ, ಅವರಿಂದ ತುಳು ಭಾಷೆಯಲ್ಲಿ ಇನ್ನಷ್ಟು ಕೃತಿಗಳು ಮೂಡಿಬರಲಿ” ಎಂದು ಶುಭ ಹಾರೈಸಿದರು.