ಉಡುಪಿ : ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಅವರು 2025ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ (ಜಂಟಿ ಹೆಸರಲ್ಲಿ) ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂಪಾಯಿ 20000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.
ಡಾ. ಮಾಲತಿ ಕೃಷ್ಣಮೂರ್ತಿ ಇವರು ಉಡುಪಿಯ ಕಲ್ಯಾಣಪುರ ಸಮೀಪದ ಮೂಡುಕುದುರು ಎಂಬಲ್ಲಿ ಶ್ರೀನಿವಾಸ ರಾವ್ ಮತ್ತು ವರದಾಲಕ್ಷ್ಮೀ ಇವರ ಮಗಳಾಗಿ 1952ರಲ್ಲಿ ಜನಿಸಿದರು. ಮಿಲಾಗ್ರಿಸ್ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿ, ಮೈಸೂರು ವಿ. ವಿ. ಯಲ್ಲಿ ಬಿ. ಎ. ಪದವಿ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್, ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ, ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಎಂ. ಎ. ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇತಿಹಾಸ ತಜ್ಞ ಡಾ. ಬಿ. ಸುರೇಂದ್ರ ರಾವ್ ಇವರ ಮಾರ್ಗದರ್ಶನದಲ್ಲಿ Trade and Commerce in Colonial South Kanara (1799-1862) ಪ್ರಬಂಧಕ್ಕೆ ಪಿ. ಎಚ್. ಡಿ ಪದವಿ ಪಡೆದಿದ್ದಾರೆ. 1972ರಿಂದ ಇವರು ಇತಿಹಾಸ ಉಪನ್ಯಾಸಕರಾಗಿ, ಪ್ರಾಧ್ಯಾಪಕಿಯಾಗಿ ಭಂಡಾರ್ಕಾರ್ಸ್ ಕಾಲೇಜು ಹಾಗೂ ಎಂ. ಜಿ. ಎಂ. ಕಾಲೇಜಿನಲ್ಲಿ ಕಾರ್ಯನಿರ್ವಹಿಸಿ ನಂತರ ವಿಭಾಗ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ, 2008ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಡಾ. ಬಿ. ಎ. ವಿವೇಕ ರೈಗಳ ಸಂಪಾದಕತ್ವದ ‘ಮಂಗಳೂರು ದರ್ಶನ’ದ ಪ್ರಥಮ ಸಂಪುಟದಲ್ಲಿ ‘ಬ್ರಿಟಿಷ್ ಆಡಳಿತ ಅವಧಿಯಲ್ಲಿ ಮಂಗಳೂರಿನ ವ್ಯಾಪಾರ ಮತ್ತು ಆಡಳಿತ’ ಎಂಬ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಸುಮಾರು 25ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಣಿಪಾಲದ Institute of Communication 2002ರ ವಿದ್ಯಾರ್ಥಿಗಳಿಗೆ Temple town of Udupi ದಾಖಲೀಕರಣಕ್ಕೆ ಮಾರ್ಗದರ್ಶನ, ಬಂಟರ ಇತಿಹಾಸ ಪ್ರಾಜೆಕ್ಟ್ ಇದರಲ್ಲಿ ಸಹಾಯಕ ಮಾರ್ಗದರ್ಶಕರಾಗಿ, ಹಲವಾರು ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ದ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
1994ರಲ್ಲಿ ‘ಕುಂದಾಪುರ ತಾಲೂಕು ಒಂದು ಅಧ್ಯಯನ’ ಎಂಬ ಗ್ರಂಥವನ್ನು ಎಚ್. ವಿ. ನರಸಿಂಹ ಮೂರ್ತಿಯವರೊಂದಿಗೆ ಸಂಪಾದಿಸಿದ್ದಾರೆ. ಇವರ ‘ಭಾಸ್ಕರಾನಂದ ಸಾಲೆತ್ತೂರು: ತುಳುವ ವಸ್ತು ಪ್ರಪಂಚ’ ಎಂಬ ಕೃತಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಿಂದ ಪ್ರಕಟಗೊಂಡಿದೆ.
Subscribe to Updates
Get the latest creative news from FooBar about art, design and business.
ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಜಂಟಿ ಹೆಸರಿನ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಆಯ್ಕೆ
No Comments2 Mins Read
Previous Articleಧಾರವಾಡದ ರಂಗಾಯಣದಲ್ಲಿ ಯಶಸ್ವಿಯಾಗಿ ನಡೆದ ‘ಗುರು ಗುಣಗಾನ’
Next Article ತೆಕ್ಕಟ್ಟೆಯಲ್ಲಿ ಯಕ್ಷ-ಗಾನ-ನಮನ