ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ಯಕ್ಷಕಲಾ ಪೊಳಲಿ ಇದರ 30ನೇ ವರ್ಷದ ಪ್ರಯುಕ್ತ ತ್ರಿಂಶತ್ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ ಇವರು ಆಶೀರ್ವಚನ ನೀಡಿದರು. ಯಕ್ಷಕಲಾ ಪೋಷಕ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಡಾ. ವಸಂತಕುಮಾರ ಪೆರ್ಲ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮಂಗಳೂರಿನ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಹಾಗೂ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಗೆ ಯಕ್ಷಕಲಾ ಗೌರವ ನೀಡಲಾಯಿತು. ಜತೆಗೆ 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಲಾ ಸೇವೆ ನೀಡಿದ 5 ಮಂದಿ ಕಲಾವಿದರಿಗೆ ಗೌರವಾರ್ಪಣೆ, ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ನೀಡಲಾಯಿತು. ಕೀರ್ತಿಶೇಷ 8 ಮಂದಿ ಕಲಾವಿದರ ಸಂಸ್ಮರಣೆ ಮಾಡಲಾಯಿತು. ಉಜಿರೆ ಅಶೋಕ್ ಭಟ್ ಅವರು ಸಂಸ್ಮರಣ ಭಾಷಣ ಮಾಡಿದರು. ಕದ್ರಿ ನವನೀತ್ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು. ಜ್ಯೋತಿಷಿ ಕೋಡಿಮಜಲು ಆನಂತಪದ್ಮನಾಭ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ಪಿ. ಮಾಧವ ಭಟ್, ಆಡಳಿತ ಮೊಕ್ತಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬಿಲ್ಲವಾಸ್ ದುಬೈ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಬೆಂಗಳೂರಿನ ಉದ್ಯಮಿ ರಾಜೇಂದ್ರ ಕಕ್ಯಪದವು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯಕ್ಷಕಲಾ ಸಂಸ್ಥಾಪಕ ಅನಭ ಪೊಳಲಿ ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿ ಶುಭಹಾರೈಸಿದರು. ಬೆಳಗ್ಗೆ ಯಕ್ಷೋತ್ಸವವನ್ನು ಪೊಳಲಿ ಕ್ಷೇತ್ರದ ಅರ್ಚಕ ಅನಂತಪದ್ಮನಾಭಭಟ್, ವಿದ್ವಾಂಸ ಡಾ. ಪ್ರಭಾಕರ ಜೋಶಿ ಉದ್ಘಾಟಿಸಿದರು. ಯಕ್ಷಕಲಾ ಸಂಚಾಲಕ ವೆಂಕಟೇಶ ನಾವಡ ಪೊಳಲಿ ಸ್ವಾಗತಿಸಿದರು. ಸಂಯೋಜಕ ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು. ತೆಂಕುತಿಟ್ಟಿನ ಕಲಾವಿದರಿಂದ ‘ಜ್ವಾಲಾ ಪ್ರತಾಪ’, ‘ವೀರ ಬಬ್ರುವಾಹನ’, ‘ದಮಯಂತಿ ಪುನಃ ಸ್ವಯಂವರ’, ಬಡಗು ತಿಟ್ಟಿನ ಕಲಾವಿದರಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.