Subscribe to Updates

    Get the latest creative news from FooBar about art, design and business.

    What's Hot

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ
    Article

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷರಂಗದ ಶ್ರೇಷ್ಠ ಭಾಗವತರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಯವರು 2025ನೇ ಸಾಲಿ‌ನ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ದಿನಾಂಕ 01 ಜೂನ್ 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ದಶಮಾನೋತ್ಸವ ಸಂಭ್ರಮದಲ್ಲಿ ಸ್ವಾಮೀಜಿಗಳ ಹಾಗೂ ಗಣ್ಯರ ಸಮಕ್ಷದಲ್ಲಿ, ಯಕ್ಷರಂಗಕ್ಕೆ ಸಂಬಂಧಪಟ್ಟ ಈ ಪ್ರಶಸ್ತಿಯನ್ನು ಕುರಿಯರಿಗೆ ಪ್ರದಾನ ಮಾಡಲಾಗುವುದು ಎಂದು ಪಟ್ಲ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ ಶೆಟ್ಟಿಯವರು ತಿಳಿಸಿದ್ದಾರೆ. ಪಟ್ಲ ಪ್ರಶಸ್ತಿಯು ಒಂದು ಲಕ್ಷ ನಗದನ್ನು ಹೊಂದಿದ್ದು, ಸರಕಾರೇತರ ಮಟ್ಟದಲ್ಲಿ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಪ್ರಶಸ್ತಿ ಎನಿಸಿಕೊಂಡಿದೆ.

    ಹಿಮ್ಮೇಳದೊಂದಿಗೆ ಮುಮ್ಮೇಳದ ಅಂಗವನ್ನೂ ತಿಳಿದವರು ಮಾತ್ರ ‘ಭಾಗವತ’ ಎನಿಸಿಕೊಳ್ಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಯವರು ಈ ನಿಟ್ಟಿನಲ್ಲಿ ‘ಭಾಗವತ ಶ್ರೇಷ್ಠ’ ಎಂಬುದು ಅತಿಶಯೋಕ್ತಿಯ ಮಾತಾಗಲಾರದು. ತಲೆಗೆ ರುಮಾಲು ಸುತ್ತಿ, ಹಣೆಗೆ ತಿಲಕವಿಟ್ಟು, ಶುಭ್ರವಾದ ವಸ್ತ್ರ ಧರಿಸಿ, ಜಾಗಟೆ ಹಿಡಿದು ರಂಗಸ್ಥಳದಲ್ಲಿ ಕುರಿಯ ಭಾಗವತರು ಕುಳಿತುಕೊಂಡರೆ, ಅಂದು ಅದ್ಭುತ ಯಕ್ಷಗಾನ ಪ್ರದರ್ಶನ ಕಾಣುವ ಸೌಭಾಗ್ಯ ಪ್ರೇಕ್ಷಕರಿಗೆ. ಉತ್ತಮ ಶಾರೀರ, ಪ್ರಸಂಗಗಳ ಕಂಠಪಾಟ, ರಾಗ, ತಾಳ, ಲಯಗಳ ಕುರಿತಾದ ಅಭಿಜ್ಞತೆ, ಕಾಲಗತಿಯನ್ನು ಅರಿತು ಸಮುಚಿತ ರಾಗಗಳ ಬಳಕೆ, ರಸಗಳಿಗನುಗುಣವಾಗಿ ರಾಗಗಳ ಸಮರ್ಪಕ ಬಳಕೆ, ಆಶುಕವಿತ್ವ, ಶಿಸ್ತುಬದ್ಧ ಪ್ರದರ್ಶನ ಹಾಗೂ ವೇಷಧಾರಿಗಳನ್ನು ಸಮರ್ಪಕವಾಗಿ ಕುಣಿಸುವ ನಿರ್ದೇಶನ – ಇವೆಲ್ಲಾ ಕುರಿಯ ಭಾಗವತರಲ್ಲಿರುವ ವಿಶೇಷ ಗುಣಗಳು.

    ಹೆಸರೇ ತಿಳಿಸುವಂತೆ ಗಣಪತಿ ಶಾಸ್ತ್ರಿಯವರು ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿದ ಸುಪ್ರಸಿದ್ಧ ‘ಕುರಿಯ’ ಮನೆತನದವರು. ಹವ್ಯಕ ಸಮಾಜದ ಪ್ರತಿಷ್ಠಿತ ಚಕ್ರಕೋಡಿ ಮನೆತನದ ಕವಲು ‘ಕುರಿಯ ಮನೆತನ’. ಯಕ್ಷರಂಗದಲ್ಲಿ ಸಂಚಲನ ಹುಟ್ಟಿಸಿದ, ಯಕ್ಷದಿಗ್ಗಜರೆಂಬ ನೆಗಳ್ತೆಗೆ ಪಾತ್ರರಾದ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿಯವರ ತಮ್ಮನಾದ ಕುರಿಯ ರಾಮಶಾಸ್ತ್ರಿ–ಗಂಗಮ್ಮ ದಂಪತಿಗಳ ತೃತೀಯ ಪುತ್ರನಾಗಿ 12-08-1954ರಲ್ಲಿ ಗಣಪತಿ ಶಾಸ್ತ್ರಿಯವರು ಜನಿಸಿದರು. ಚಿಕ್ಕಂದಿನಲ್ಲೇ ರಕ್ತಗತವಾಗಿ ಬಂದಿದ್ದ ಯಕ್ಷಗಾನ ಕಲೆಯತ್ತ ಸೆಳೆಯಲ್ಪಟ್ಟರು. ದೊಡ್ಡಪ್ಪ ಕುರಿಯ ವಿಠಲ ಶಾಸ್ತ್ರಿಗಳು ಆ ಕಾಲದ ಶ್ರೇಷ್ಠ ಯಕ್ಷಗಾನ ಗುರುಗಳಾದ ಕಾರಣ, ಅವರಲ್ಲೇ ಶಿಷ್ಯತ್ವ ಸ್ವೀಕರಿಸಿ, ಯಕ್ಷಗಾನದ ಹೆಜ್ಜೆಗಳನ್ನು ಕಲಿತರು. ತಮ್ಮ 15ನೇ ವಯಸ್ಸಿನಲ್ಲೇ ಶಾಲೆಯಲ್ಲಿ ಮಹಿಷಾಸುರ, ಕಂಸ, ಮೈರಾವಣ, ಕಾರ್ತ್ಯವೀರ್ಯ, ಅತಿಕಾಯ ಮುಂತಾದ ಪಾತ್ರಗಳನ್ನು ನಿರ್ವಹಿಸುವಷ್ಟರ ಮಟ್ಟಿಗೆ ಕುರಿಯರು ಬೆಳೆದರು.

    ಕುರಿಯರ ‘ಮಹಿಷಾಸುರ’ ಪಾತ್ರ ಅವರಿಗೆ ಅಪಾರ ಹೆಸರನ್ನು ತಂದಿತ್ತು. ಬಾಲ್ಯದಲ್ಲೇ ಉತ್ತಮ ವೇಷಧಾರಿಗಳಾಗಿ ರೂಪುಗೊಂಡರೂ, ಭಾಗವತಿಕೆಯತ್ತ ಅಭಿರುಚಿ ಹೊಂದಿದರು. ತಮ್ಮ 15ನೇ ವಯಸ್ಸಿನಲ್ಲಿಯೇ ‘ಅಗರಿ ಶೈಲಿ’ಯಲ್ಲಿ ಭಾಗವತಿಕೆ ಮಾಡಿದ್ದರು. ಭಾಗವತಿಕೆಯಲ್ಲಿ ಪರಿಪೂರ್ಣತೆ ಸಾಧಿಸಲಿಕ್ಕಾಗಿ, ಸುಪ್ರಸಿದ್ಧ ಚೆಂಡೆವಾದಕರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಶಿಷ್ಯರಾದ ಪಾರೆಕೋಡಿ ಕೃಷ್ಣ ಭಟ್ಟರಲ್ಲಿ ತೆಂಕುತಿಟ್ಟಿನ ತಾಳಜ್ಞಾನವನ್ನೂ, ಬಲ್ಲಾಳರ ಇನ್ನೋರ್ವ ಶಿಷ್ಯರಾದ ಬಾಯಾರು ಸುಬ್ರಾಯ ಭಟ್ಟರಲ್ಲಿ ರಾಗಜ್ಞಾನವನ್ನೂ ಕಲಿತರು. ರಂಗದ ನಡೆಯನ್ನು ಸುಪ್ರಸಿದ್ಧ ಚೆಂಡೆವಾದಕರಾದ ನೆಡ್ಲೆ ನರಸಿಂಹ ಭಟ್ಟರಿಂದಲೂ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಂದ ಮಾರ್ಗದರ್ಶನವನ್ನೂ ಪಡೆದುಕೊಂಡರು. 1975ರಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ, ಅಪ್ಪಟ ದೇಶಪ್ರೇಮಿಯಾಗಿದ್ದ ಕುರಿಯರು ರಾಷ್ಟ್ರೀಯ ವಿಚಾರಧಾರೆ ಹೊಂದಿದ್ದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಬಾಲ್ಯದಿಂದಲೇ ಸೆಳೆಯಲ್ಪಟ್ಟವರು. 1975ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ಬಿಸಿ ಕುರಿಯರಿಗೂ ತಟ್ಟಿತು. ಸಂಘದ ನಿಷ್ಠಾವಂತ ಕಾರ್ಯಕರ್ತರಾದ ಕುರಿಯರು ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು. ಜೈಲಿನಲ್ಲೇ ಹರಿಕತೆ, ಯಕ್ಷಗಾನ ಮುಂತಾದ ಚಟುವಟಿಕೆಯಲ್ಲಿ ಕುರಿಯರು ತೊಡಗಿಸಿಕೊಂಡರು. ಈ ಅವಧಿಯಲ್ಲೇ ಕುರಿಯರಿಗೆ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗದ ನೇಮಕಾತಿ ದೊರೆಯಿತು. ಆದರೂ ಜೈಲಿನಲ್ಲಿದ್ದ ಕಾರಣ ಉದ್ಯೋಗ ಪಡೆಯುವಲ್ಲಿ ವಂಚಿತರಾದರು. ಇದರಿಂದ ವಿಚಲಿತರಾಗದ ಶಾಸ್ತ್ರಿಗಳು, ತಮಗೆ ದೈವದತ್ತವಾಗಿ ಒದಗಿ ಬಂದ ಯಕ್ಷಗಾನ ಕಲೆಯಲ್ಲೇ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಛಲದಿಂದ ಯಕ್ಷರಂಗ ಪ್ರವೇಶಿಸಿದರು. ಶಾಸ್ತ್ರಿಯವರ ಈ ನಿರ್ಧಾರ ಮುಂದೆ ಯಕ್ಷರಂಗಕ್ಕೆ ಅಪಾರವಾದ ಲಾಭ ತಂದು ಕೊಟ್ಟಿತು. ಯಕ್ಷರಂಗಕ್ಕೆ ಓರ್ವ ಸಮರ್ಥ ಭಾಗವತ ಹಾಗೂ ನಿರ್ದೇಶಕರಾಗಿ ಶಾಸ್ತ್ರಿಯವರು ಮೂಡಿಬಂದರು. ನೌಕರಿ ವಂಚಿತರಾಗಿ ವೈಯುಕ್ತಿಕವಾಗಿ ಕುರಿಯರಿಗೆ ನಷ್ಟವಾದರೂ, ಇದರಿಂದ ಯಕ್ಷರಂಗಕ್ಕೆ ಅಪಾರ ಲಾಭ ದೊರಕಿತು. ಯಕ್ಷರಂಗಕ್ಕೊಬ್ಬ ‘ರಂಗನಾಯಕ’ ದೊರಕಲು ಈ ಘಟನೆ ಕಾರಣವಾಯಿತು.

    ಕಟೀಲಿನ ಮೂರನೇ ಮೇಳ ಪ್ರಾರಂಭಗೊಂಡಾಗ, ಶಾಸ್ತ್ರಿಗಳು ಮೂರನೇ ಮೇಳದ ಪ್ರಧಾನ ಭಾಗವತರಾಗಿ ಸೇರ್ಪಡೆಯಾದರು. ಇದು ಮುಂದಕ್ಕೆ ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿತ್ತಲ್ಲದೇ, ಕಟೀಲು ಮೇಳದ ತಿರುಗಾಟದಿಂದ ಕುರಿಯರೂ ಬೆಳೆಯಲು ಅವಕಾಶವಾಯಿತು. ಕುರಿಯರಿಗೆ ರಕ್ತಗತವಾಗಿ ಬಂದಿದ್ದ ಯಕ್ಷಗಾನ ಕಲೆಯು ಈ ಅವಧಿಯಲ್ಲಿ ಉದ್ದೀಪನಗೊಂಡು, ಯಕ್ಷಗಾನಕ್ಕೊಂದು ಶ್ರೇಷ್ಠ ಭಾಗವತರು ದೊರಕುವಲ್ಲಿ ನಾಂದಿಯಾಯಿತು. ಉತ್ತಮ ಕಂಠ, ಪ್ರಸಂಗಗಳ ಮೇಲಿರುವ ಹಿಡಿತ, ಸ್ವತಃ ವೇಷಧಾರಿಯಾದ ಕಾರಣ ಹೆಜ್ಜೆಗಳ ಮೇಲಿನ ತಿಳುವಳಿಕೆ, ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ಅಪಾರ ಜ್ಞಾನ ಎಲ್ಲವೂ ಕುರಿಯರನ್ನು ಉತ್ತಮ ಭಾಗವತರನ್ನಾಗಿ ರೂಪಿಸಿದವು. ಕಟೀಲು ಮೂರನೇ ಮೇಳದಲ್ಲೇ ನಿರಂತರ 28 ವರ್ಷಗಳ ತಿರುಗಾಟ ನಡೆಸಿದ ಕುರಿಯರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಟೀಲು ಮೇಳವನ್ನೇ ವೇದಿಕೆಯಾಗಿ ಬಳಸಿಕೊಂಡರು. ಈ ಕಾಲದಲ್ಲೇ ಸುಪ್ರಸಿದ್ಧ ಚೆಂಡೆವಾದಕರಾದ ತಮ್ಮ ಗುರುಗಳಾದ ನೆಡ್ಲೆ ನರಸಿಂಹ ಭಟ್ಟರೊಂದಿಗೇ ತಿರುಗಾಟ ನಡೆಸುವ ಸೌಭಾಗ್ಯ ಪಡೆದುಕೊಂಡದ್ದು ಮಾತ್ರವಲ್ಲ, ಈ ಅವಧಿಯಲ್ಲಿ ನೆಡ್ಲೆಯವರಿಂದ ರಂಗದ ಸಂಪೂರ್ಣ ಮಾಹಿತಿಯನ್ನು ಪಡೆದು ‘ಉತ್ತಮ ಭಾಗವತ’ನಾಗಲು ಏನೆಲ್ಲಾ ಬೇಕೋ, ಅವೆಲ್ಲದರಲ್ಲೂ ಪರಿಣತಿ ಗಳಿಸಿಕೊಂಡರು. ಕುರಿಯರು ಪರಿಪೂರ್ಣ ಭಾಗವತರಾಗಲು ನೆಡ್ಲೆಯವರ ಕೊಡುಗೆ ನೆನಪಿಸಲೇಬೇಕು. ಮುಂದಕ್ಕೆ ಕುರಿಯರಿಗೆ ಸಂಬಂಧದಲ್ಲಿ ಭಾವನಾಗಿದ್ದ ಪದ್ಯಾಣ ಶಂಕರನಾರಾಯಣ ಭಟ್ಟರು ಕುರಿಯರಿಗೆ ಮದ್ದಲೆವಾದನಕ್ಕೆ ಸಾಥಿಯಾಗಿ ದೊರಕಿ, ಕುರಿಯರ ಭಾಗವತಿಕೆ ಮಿಂಚಲಾರಂಭಿಸಿತು. ಪದ್ಯಾಣರೊಂದಿಗಿನ ತಿರುಗಾಟದಲ್ಲಿ ಇವರು ಜಾಂಬವತೀ ಕಲ್ಯಾಣ, ಪುರುಷಾಮೃಗ ಮುಂತಾದ ಪೌರಾಣಿಕ ಪ್ರಸಂಗಗಳಲ್ಲಿ ಹೊಸತನದ ಪ್ರಯೋಗ ಮಾಡಿ ರಂಗಕ್ಕೆ ಅರ್ಪಿಸಿದ್ದರು. ಸುಪ್ರಸಿದ್ಧ ಮದ್ದಲೆವಾದಕರಾಗಿದ್ದ ಅಡೂರು ಗಣೇಶ್ ರಾವ್ ಹಾಗೂ ಅಡೂರು ಲಕ್ಷ್ಮೀನಾರಾಯಣರವರ ಸಾಂಗತ್ಯವೂ ಕುರಿಯರಿಗೆ ಕಟೀಲು ಮೂರನೇ ಮೇಳದಲ್ಲಿ ದೊರಕಿತು.

    ಶಾಸ್ತ್ರಿಯವರು ಉತ್ತಮ ಭಾಗವತರು ಮಾತ್ರವಲ್ಲ, ಶ್ರೇಷ್ಠ ನಿರ್ದೇಶಕರೂ ಹೌದು. ರಂಗದ ನಡೆ, ಪರಿಕ್ರಮ, ಪಾತ್ರಗಳ ಒಳ – ಹೊರಗು ಅರ್ಥೈಸುವಿಕೆ, ಕಲಾವಿದರ ಅಂತಃಸತ್ವವನ್ನು ಅರಿತು ಅವರನ್ನು ಬೆಳೆಸುವ ಕೌಶಲ್ಯ, ಪ್ರಸಂಗದ ಮೂಲ ಉದ್ದೇಶ ತಿಳಿದು ಕಥೆಯನ್ನು ರಂಗಕ್ಕೆ ಅಳವಡಿಸುವ ವಿಧಾನ – ಈ ಎಲ್ಲವೂ ಕುರಿಯರಲ್ಲಿ ಮೇಳೈಸಿತ್ತು. ಪ್ರಸಂಗವನ್ನು ಸರಿಯಾದ ಸಮಯಕ್ಕೆ ‘ಮುಗಿಸುವ’ ಜವಾಬ್ದಾರಿ ಭಾಗವತರದ್ದು ಎಂಬ ನಿಯಮಕ್ಕೆ ಬದ್ಧರಾಗಿದ್ದ ಕುರಿಯರು, ರಂಗದ ನಡೆ ಮೀರದಂತೆ, ಕಲಾವಿದರನ್ನು ಸಮನ್ವಯಗೊಳಿಸಿ, ಪ್ರಸಂಗವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸುವ ಕೌಶಲ್ಯ ಹೊಂದಿದ್ದರು. ರಂಗದಲ್ಲಿ ಕಲಾವಿದರು ತಪ್ಪಿ ನಡೆದರೆ ಕೋಪದಿಂದ ಅವರನ್ನು ಬೈದರೂ, ರಂಗಸ್ಥಳದಿಂದ ಇಳಿದ ಬಳಿಕ, ಆ ಕಲಾವಿದನನ್ನು ಕರೆದು, ಆತನ ತಪ್ಪನ್ನು ವಿನಯದಿಂದಲೇ ಹೇಳಿ ಸಮಾಧಾನ ಪಡಿಸುವ ಆದರ್ಶ ಗುಣ ಕುರಿಯರದ್ದು.‌ ಎಷ್ಟೇ ದೊಡ್ಡ ಕಲಾವಿದರೇ ಇರಲಿ, ಅವರು ರಂಗದಲ್ಲಿ ತಪ್ಪಿದಲ್ಲಿ ಕೂಡಲೇ ತಿದ್ದುವ ವಿಶಿಷ್ಟ ನಿರ್ದೇಶಕತ್ವ ಕುರಿಯರಲ್ಲಿದೆ. ರಂಗದಲ್ಲಿ ಶಿಸ್ತು ಬೇಕು ಎನ್ನುವ ನಿಲುವುಳ್ಳ ಕುರಿಯರೇ ಸ್ವತಃ ಶಿಸ್ತಿನ ಸಿಪಾಯಿ. ‘ಪಾತ್ರಕ್ಕೆ ನ್ಯಾಯ ಒದಗಿಸಲಾಗದ ಕಲಾವಿದ ಎಷ್ಟೇ ಸುಪ್ರಸಿದ್ಧನಾದರೂ ಅವರಿಗೆ ನಾನು ಮಾನ್ಯತೆ ನೀಡಲಾರೆ’ ಎಂಬ ಕಠೋರ ನಿಲುವನ್ನು ತೋರಿದವರು. ಆ ಕಾರಣದಿಂದಲೇ ಕುರಿಯರ ಗರಡಿಯಲ್ಲಿ ಪಳಗಿದ ಕಲಾವಿದರು ಶ್ರೇಷ್ಠರಾದುದು. ಈ ಎಲ್ಲಾ ಆದರ್ಶಗುಣಗಳಿಂದಲೇ ಕುರಿಯರಿಗೆ ‘ರಂಗನಾಯಕ’ ಎಂಬ ಬಿರುದು ಸಂದಿದ್ದು ನ್ಯಾಯವಾಗಿದೆ. ಕುರಿಯರು ಇತರ ಭಾಗವತರಿಗಿಂತಲೂ ಭಿನ್ನವಾಗಿ ಗುರುತಿಸಿಕೊಳ್ಳಲು ಸಕಾರಣವಿದೆ. ಅದು, ಕುರಿಯರ ರಂಗಕೌಶಲ್ಯ, ರಂಗಪ್ರಜ್ಞೆ ಹಾಗೂ ಸೂಕ್ತ ನಿರ್ದೇಶನ. ತಮ್ಮ ತಿರುಗಾಟದ 28 ವರ್ಷಗಳನ್ನು ಕಟೀಲಿನ ಮೂರನೇ ಮೇಳದಲ್ಲೇ ನಡೆಸಿರುವ ಕುರಿಯ ಭಾಗವತರ ಒಡನಾಟದ ಕಲಾವಿದರಲ್ಲಿ ಹೆಚ್ಚಿನವರು ಕುರಿಯರ ನಿರ್ದೇಶನ ಹಾಗೂ ಮಾರ್ಗದರ್ಶನದಿಂದಲೇ ಪ್ರಭಾವಿತರಾಗಿ ಬೆಳೆದವರು. ನೂರಕ್ಕೂ ಮಿಕ್ಕಿದ ಯಕ್ಷಗಾನ ಕಲಾವಿದರು ಕುರಿಯರ ನಿರ್ದೇಶನದಲ್ಲಿ ಪಳಗಿ ಪ್ರಸಿದ್ಧ ಹೊಂದಿರುವುದು ಉಲ್ಲೇಖನೀಯ. ಯಕ್ಷರಂಗದಲ್ಲಿ ಇಂದು ಸುಪ್ರಸಿದ್ಧ ಕಲಾವಿದರೆಂದು ಗುರುತಿಸಿಕೊಂಡಿರುವ ಕೈರಂಗಳ ಕೃಷ್ಣ ಮೂಲ್ಯ, ಅಮ್ಮುಂಜೆ ಮೋಹನ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ನಗ್ರಿ ಮಹಾಬಲ ರೈ, ಸತೀಶ್ ನೈನಾಡು, ಸುರೇಶ್ ಕುಪ್ಪೆಪದವು, ಜಗದಾಭಿರಾಮ ಪಡುಬಿದ್ರಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ರಾಧಾಕೃಷ್ಣ ಕಲ್ಲುಗುಂಡಿ, ಕೃಷ್ಣಪ್ಪ ಕಟ್ಟಪಡ್ಪು ಮುಂತಾದವರು ಕುರಿಯರ ನಿರ್ದೇಶನದ ಗರಡಿಯಲ್ಲಿ ಪಳಗಿದವರಾಗಿದ್ದು, ಇವರ ಬೆಳವಣಿಗೆಯ ಹಿಂದೆ ಕುರಿಯರ ಶ್ರಮವನ್ನು ಗುರುತಿಸಬಹುದು. ಈ ಕಲಾವಿದರು ಇಂದಿಗೂ ಕುರಿಯರನ್ನು ‘ಪ್ರಾತಃ ಸ್ಮರಣೀಯರು’ ಎಂದು ಹೇಳುತ್ತಿರುವುದು ಕುರಿಯರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇತ್ತೀಚೆಗೆ ರಂಗಸ್ಥಳದಲ್ಲಿ ಅರುಣಾಸುರನ ಪಾತ್ರದಲ್ಲೇ ನಿಧನರಾದ ಸುಪ್ರಸಿದ್ಧ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟರು ವಿಜೃಂಭಿಸಲು ಕುರಿಯರ ನಿರ್ದೇಶನವೇ ಕಾರಣವೆಂದು ಗೇರುಕಟ್ಟೆಯವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕುರಿಯರ ಸಮಕಾಲೀನರಾಗಿದ್ದ ಗೇರುಕಟ್ಟೆಯರಿಗೆ ಪ್ರಸಿದ್ಧಿ ತಂದುಕೊಟ್ಟ ‘ಮಹಿಷಾಸುರ’ ಪಾತ್ರಕ್ಕೆ ಕುರಿಯರ ಕಾಣಿಕೆ ಅಪಾರ. ಕುರಿಯರೂ, ಸ್ವತಃ ಮಹಿಷಾಸುರ ಪಾತ್ರದಲ್ಲಿ ಪ್ರಸಿದ್ಧ ಕಲಾವಿದರಾಗಿದ್ದ ಕಾರಣ, ಕುರಿಯರ ಸೂಕ್ತ ನಿರ್ದೇಶನದಿಂದಾಗಿ ಗಂಗಯ್ಯ ಶೆಟ್ಟರ ಮಹಿಷಾಸುರನ ಪಾತ್ರ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತ್ತು.

    ಕಲಾವಿದರ ಸಾಮರ್ಥ್ಯ ಗುರುತಿಸಿ, ಅವರನ್ನು ಯೋಗ್ಯ ಕಲಾವಿದರನ್ನಾಗಿ ರೂಪಿಸುವಲ್ಲಿ ಕುರಿಯರ ರಂಗನಾಯಕತ್ವದ ಗುಣವನ್ನು ಗಮನಿಸಬಹುದು. ಸಾಧಿಸಬೇಕೆಂಬ ಛಲವುಳ್ಳ ಕಲಾವಿದನು ಕುರಿಯರ ಕೈಗೆ ದೊರಕಿದರೆ, ಆತನು ಶ್ರೇಷ್ಠ ಕಲಾವಿದನಾಗಿ ರೂಪುಗೊಳ್ಳುವುದು ಖಚಿತ ಎಂಬುದು ಕುರಿಯರೊಂದಿಗೆ ತಿರುಗಾಟ ನಡೆಸಿದ ಕಲಾವಿದರ ಅಭಿಪ್ರಾಯ ಸತ್ಯವೂ ಹೌದು. ಕುರಿಯರು ‘ಮಾತಾಡುವ ಭಾಗವತರು’ ಎಂಬ ವಿಶೇಷಣ ಹೊಂದಿದ ಕಲಾವಿದರು. ಇದಕ್ಕೆ ಮುಖ್ಯ ಕಾರಣವೆಂದರೆ, ರಂಗಸ್ಥಳದಲ್ಲಿ ಪಾತ್ರಧಾರಿಗಳ ‘ನಡೆ – ನುಡಿ’ಗಳ ಕಡೆ ಸದಾ ಗಮನ ಹರಿಸುತ್ತಾ, ತಪ್ಪಿದಲ್ಲಿ ರಂಗದಲ್ಲೇ ತಿದ್ದುವ ಅಸಾಧಾರಣ ವ್ಯಕ್ತಿತ್ವ ಕುರಿಯರವರದ್ದಾದುದರಿಂದ. ‘ಭಾಗವತನಾದವನು ಪ್ರಸಂಗದ ಎಲ್ಲಾ ಪಾತ್ರಗಳೂ ತಾನೇ ಆಗಿರಬೇಕಾದ ಹೊಣೆಗಾರಿಕೆ ಉಳ್ಳವನು’ ಎಂಬ ನಿಲುವಿಗೆ ಶಾಸ್ತ್ರಿಗಳು ಅಂಟಿಕೊಂಡವರಾಗಿದ್ದು ರಂಗದಲ್ಲಿ ತಾವೇ ಒಂದು ಪಾತ್ರವಾಗುತ್ತಾರೆ.

    ‘ಮುಮ್ಮೇಳದ ಕಲಾವಿದರು ಯಾವುದೇ ಕಾರಣಕ್ಕೂ ರಂಗದಲ್ಲಿರುವಾಗ ಹಿಮ್ಮೇಳದವರನ್ನು ನೋಡಬಾರದು’ ಎಂಬ ನಿಯಮವನ್ನು ಪಾಲಿಸುವ ಕುರಿಯದವರು, ಕಲಾವಿದರಿಗೆ ಇದನ್ನು ಬಾಲಪಾಟವಾಗಿ ಹೇಳಿ ಕೊಡುತ್ತಿದ್ದರು. ಹಿಂದೊಮ್ಮೆ ಹಿರಿಯ ಕಲಾವಿದರೋರ್ವರು, ಅನನುಭವಿ ಚೆಂಡೆವಾದಕರ ವಾದನ ಸರಿಯಾಗಲಿಲ್ಲ ಎಂಬ ಕಾರಣಕ್ಕೆ, ಆ ಚೆಂಡೆವಾದಕನತ್ತ ತಿರುಗಿ ನೋಡಿದರಂತೆ. ಇದನ್ನು ಗಮನಿಸಿದ ಕುರಿಯರು, ಪ್ರದರ್ಶನ ಮುಗಿದ ನಂತರ ಚೌಕಿಯಲ್ಲಿ ಆ ಹಿರಿಯ ಕಲಾವಿದರನ್ನು ‘ವಿಚಾರಿಸಿದರಂತೆ’. ತನ್ನ ತಪ್ಪು ತಿಳಿದ ಆ ಹಿರಿಯ ಕಲಾವಿದರು ತಾವು ನಿವೃತ್ತರಾಗುವವರೆಗೂ ಹಿಮ್ಮೇಳದವರತ್ತ ತಿರುಗಿ ನೋಡಿರಲಿಲ್ಲ. ಅಂಥಹ ಶಿಸ್ತು ಕುರಿಯರಲ್ಲಿತ್ತು‌. ತೆಂಕುತಿಟ್ಟಿನ ವಿಶಿಷ್ಟ ಪ್ರಸಂಗ ಎನಿಸಿಕೊಂಡಿರುವ ‘ಕಿರಾತಾರ್ಜನ, ದುಶಾಃಸನ ವಧೆ, ದಶಾವತಾರ’ ಮುಂತಾದ ಪ್ರಸಂಗಗಳನ್ನು ಪ್ರಸ್ತುತಿಪಡಿಸಬಲ್ಲ ಕೆಲವೇ ಭಾಗವತರಲ್ಲಿ ಕುರಿಯರೂ ಓರ್ವರು. ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನದಲ್ಲೂ ಕುರಿಯರು ಸಿದ್ಧಹಸ್ತರು.

    ಕುರಿಯ ಗಣಪತಿ ಶಾಸ್ತ್ರಿಗಳು ಕ್ರಿಕೆಟ್ ಕ್ರೀಡೆಯ ಪ್ರೇಮಿ. ಕುರಿಯರ ಶ್ರೀಮತಿ ಶಾಮಲಾರವರು ಕ್ರಿಕೆಟ್ ನ ಹಿಂದಿ ಕಾಮೆಂಟ್ರಿಯನ್ನು ಸುಂದರವಾಗಿ ಹೇಳುತ್ತಾರೆ. ಶಾಸ್ತ್ರಿಗಳು ಬಿಡುವಾದಾಗ ತಮ್ಮ ಮಡದಿಯಲ್ಲಿ ಹಿಂದಿ ಕಾಮೆಂಟರಿ ಹೇಳಲು ದುಂಬಾಲು ಬೀಳುವುದುಂಟು. ಯಕ್ಷಗಾನವನ್ನು ಕ್ರಿಕೆಟ್ ಗೆ ಕುರಿಯರು ಹೋಲಿಸುವುದು ಹೀಗೆ, ‘ಯಕ್ಷಗಾನ ಪ್ರದರ್ಶನ ಎಂದರೆ ಕ್ರಿಕೆಟ್ ಟೀಂ ಇದ್ದ ಹಾಗೆ. ಕ್ರಿಕೆಟ್ ನಲ್ಲಿ ಬೌಲರ್, ಬ್ಯಾಟ್ಸ ಮೆನ್, ಫೀಲ್ಡರ್ ಗಳು ಉತ್ತಮವಾಗಿ ನಿರ್ವಹಿಸಿದರೆ ಮಾತ್ರ ತಂಡ ಗೆಲ್ಲುವುದು. ಅದೇ ರೀತಿ, ಯಕ್ಷಗಾನದಲ್ಲೂ ನಾನು ಎಂಬ ಮನೋಭಾವ ಬಿಟ್ಟು, ನಾವು ಎಂಬ ಸಮಷ್ಟಿ ದೃಷ್ಟಿ ಹೊಂದಿ ಹಿಮ್ಮೇಳ, ಮುಮ್ಮೇಳದ ಸಾಂಗತ್ಯ ಹೊಂದಿದಾಗ ಯಕ್ಷಗಾನ ಪ್ರದರ್ಶನ ಗೆಲ್ಲುತ್ತದೆ”.

    ಕುರಿಯರು ಕುರಿಯದ ಅವಿಭಕ್ತ ಕುಟುಂಬದಲ್ಲಿ ಸುಖಿಯಾಗಿ ನಿವೃತ್ತ ಜೀವನ ಕಳೆಯುತ್ತಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದಾಗಿ ಭಾಗವತಿಕೆಯಿಂದ ನಿವೃತ್ತರಾದರೂ ಯಕ್ಷಗಾನದ ಒಲವು ಕಳೆದುಕೊಳ್ಳದೇ, ಆಸಕ್ತರಿಗೆ ಯಕ್ಷಗಾನದ ಮಾಹಿತಿ ಕೊಡುವ ಅಪೂರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಕಟೀಲು, ಮಚ್ಚಾರು, ಮಂಗಳೂರು, ಬಾಯಾರು ಕೈಕಂಬ, ಮುಂಬೈ, ಬೆಂಗಳೂರು, ಸುಪ್ರಸಿದ್ಧ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತರ ‘ಯಕ್ಷಮಿತ್ರರು ನಮ್ಮ ವೇದಿಕೆ ವಾಟ್ಸಾಪ್ ಬಳಗ’, ‘ಯಕ್ಷಸಂಗಮ – 2017 ಪ್ರಶಸ್ತಿ’ ಸಹಿತ ನೂರಾರು ಕಡೆಗಳಲ್ಲಿ ಸಂಮಾನ, ಪ್ರಶಸ್ತಿಯನ್ನು ಶಾಸ್ತ್ರಿಯವರು ಸ್ವೀಕರಿಸಿದ್ದಾರೆ. ಭಾಗವತರಾದ ಪಟ್ಲ ಸತೀಶ ಶೆಟ್ಟರಿಗೆ ಶಾಸ್ತ್ರಿಗಳ ಮೇಲೆ ಅಪಾರ ಗೌರವ. ಅಂತೆಯೇ, ಶಾಸ್ತ್ರಿಯವರಿಗೂ ಪಟ್ಲರ ಮೇಲೆ ಅತೀವ ಮೆಚ್ಚುಗೆಯಿದೆ. ‘ಇಂದಿನ ಭಾಗವತರಲ್ಲಿ ಪಟ್ಲ ಭಾಗವತರು ಸುಶ್ರಾವ್ಯ ಕಂಠ ಹೊಂದಿದ್ದು, ಎಲ್ಲಾ ಯಕ್ಷಗಾನ ಪ್ರಸಂಗಗಳ ನಡೆ ಅರಿತಿದ್ದು, ಸಮರ್ಥ ನಿರ್ದೇಶಕರೂ ಮಾತ್ರವಲ್ಲದೆ ಸಜ್ಜನಿಕೆಯ ಗುಣ ಹೊಂದಿದವರು’ ಎಂದು ಹಿಂದೊಮ್ಮೆ ನನ್ನಲ್ಲಿ ಹೇಳಿದ್ದು ನೆನಪಾಗುತ್ತಿದೆ. ಶಾಸ್ತ್ರಿಯವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ದಶಮಾನೋತ್ಸವ ಸಂಭ್ರಮದಲ್ಲಿ ‘ಪಟ್ಲ ಪ್ರಶಸ್ತಿ – 2025’ ನೀಡುತ್ತಿರುವುದು ಕಲೋಚಿತ ಹಾಗೂ ಕಾಲೋಚಿತವೂ ಹೌದು.

    ಎಂ. ಶಾಂತರಾಮ ಕುಡ್ವ, ಮೂಡಬಿದಿರೆ

    award baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಹಾಸನದ ಸಾಹಿತ್ಯ ಸಂಘಟನೆಯಿಂದ 330ನೇ ಮನೆ ಮನೆ ಕವಿಗೋಷ್ಠಿ | ಜೂನ್ 01
    Next Article ಮಂಗಳೂರು ಪುರಭವನದಲ್ಲಿ ‘ಬಾಲಗಾನ ಯಶೋಯಾನ’ | ಜೂನ್ 03
    roovari

    Add Comment Cancel Reply


    Related Posts

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಮೈಸೂರಿನಲ್ಲಿ ಸಿತಾರ್ ವಾದನ, ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವ | ಮೇ 31

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.