ಕುಂದಾಪುರ : ಕನ್ನಡ ಜಾನಪದ ಪರಿಷತ್ ಉಡುಪಿ ಮತ್ತು ಕುಂದಾಪುರ ಘಟಕದ ವತಿಯಿಂದ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಡ್ಲೂರಿನ ರಾಮ್ ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರ ಕನ್ನಡದ ಗಾದೆ ಮತ್ತು ಒಗಟುಗಳ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ಪರಿಷತ್ ಉಡುಪಿ ಘಟಕದ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಇವರು ಮಾತನಾಡಿ “ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ, ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿದ್ದ ಜಾನಪದ ಪರಿಷತ್ ಕುಂದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್, ಸದಸ್ಯ ಶ್ರೀಧರ ಪುರಾಣಿಕ್, ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ್ ವಿಷ್ಣು ಭಟ್ ಶುಭ ಹಾರೈಸಿದರು. ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ಹಳನಾಡು, ಅಜಯ್ ಕುಮಾರ್ ಶೆಟ್ಟಿ, ಅಣ್ಣಪ್ಪ ಎಂ. ಗೌಡ, ರಜನಿ ಹೆಗಡೆ, ರತ್ನ, ಲಕ್ಷ್ಮೀ ಶೆಟ್ಟಿ, ಅಶ್ವಿನಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ಜಾನಪದ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.