ಉಡುಪಿ : ಪ್ರೊ. ಕು.ಶಿ. ಹರಿದಾಸ ಭಟ್ ಜನ್ಮಶತಮಾನೋತ್ಸವದ ನೆನಪಿಗಾಗಿ ಕೊಡಮಾಡುವ ಪ್ರೊ.ಕು.ಶಿ ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಡಿ.ಕೆ ರಾಜೇಂದ್ರ ಹಾಗೂ 2025ನೇ ಸಾಲಿನ ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಾ. ವಿಜಯಶ್ರೀ ಸಬರದ ಆಯ್ಕೆಯಾಗಿದ್ದಾರೆ.
ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ. ಕು. ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ-2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ: 21 06 2025ರಂದು ಎಂ. ಜಿ. ಎಂ ಕಾಲೇಜಿನ ಆವರಣದಲ್ಲಿ ನಡೆಯಲಿರುವುದು.
ಡಾ. ಡಿ. ಕೆ. ರಾಜೇಂದ್ರ
ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ 13 ಏಪ್ರಿಲ್ 1942 ರಂದು ದಂಡಿನ ಶಿವರದಲ್ಲಿ ಜನಿಸಿದರು. ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. ಎಂ. ಎ. ಪದವೀಧರರಾದ ಇವರು ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ಪಡೆದಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ರಾಜೇಂದ್ರ ಅವರು ನಂತರ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಕಾರ್ಯ ನಿರ್ವಹಿಸಿದರು. ಬರವಣಿಗೆಯ ಕ್ಷೇತ್ರದಲ್ಲಿ ಪ್ರಬಂಧ ಸಾಹಿತ್ಯ, ವಿಚಾರ ಸಾಹಿತ್ಯ, ವಿಮರ್ಶೆ, ವ್ಯಕ್ತಿ ಚಿತ್ರಣ, ಮಕ್ಕಳ ಸಾಹಿತ್ಯ, ಜಾನಪದ ಸಂಗ್ರಹ, ಗ್ರಂಥ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಜಾನಪದಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ‘ಜಾನಪದ ಸಮೀಕ್ಷೆ’, ಜಾನಪದ ಸಂಚಯ’, ‘ಜಾನಪದ ಸಮಾಲೋಕ’, ‘ಮುರಾವು’, ‘ಜಾನಪದ: ಕೆಲವು ಗ್ರಹಿಕೆಗಳು’, ‘ಜಾನಪದ ಮತ್ತು ಶಿಷ್ಟಪದ’, ಕರಪಾಲದವರು, ಜನಪದ ನಂಬಿಕೆಗಳು ಮುಖ್ಯವಾದವುಗಳು. ‘ಕರಪಾಲಮೇಳ’, ‘ನಮ್ಮ ಸುತ್ತಿನ ನಂಬಿಕೆಗಳು’, ‘ಶಿಶು ಪ್ರಾಸಗಳು’ ಇವರ ಸಂಪಾದಿತ ಕೃತಿಗಳು, ಅಲ್ಲದೆ ಇವರು ‘ಕರ್ನಾಟಕದ ಗೊಂಬೆ ಆಟಗಳು’’, ಮೈಲಾರಲಿಂಗ, ‘ಮೂಡಲಪಾಯ, ‘ಯಕ್ಷಗಾನ ಬಯಲಾಟ ಮುಂತಾದ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ‘ವಿಷಯ ವಿಶ್ವಕೋಶ: ಜಾನಪದ ಸಂಪುಟ’, ‘ಕಾವ್ಯಗಂಗೋತ್ರಿ’, ‘ಕಾವ್ಯ ಸಂಗಮ’, ‘ಅಮೃತವರ್ಷ’, ಇತ್ಯಾದಿ ಹಲವಾರು ಕೃತಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯ, ಅಧ್ಯಕ್ಷ ಹಾಗೂ ಸಂಚಾಲಕರಾಗಿದ್ದಾರೆ. ಶಿಷ್ಟ ಹಾಗೂ ಜಾನಪದ ಕ್ಷೇತ್ರಗಳೆರಡರಲ್ಲೂ ಸಾಹಿತ್ಯ ಕೃಷಿ ಮಾಡಿರುವ ಅವರಿಗೆ ಹಲವಾರು ಪುಸ್ತಕ ಬಹುಮಾನ ಅಲ್ಲದೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಡಾಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ’ಸಾಹಿತ್ಯ ಶ್ರೀ’ ಪ್ರಶಸ್ತಿ, ಕುವೆಂಪು ವಿಶ್ವಮಾನವ ಪ್ರಶಸ್ತಿ, ಸಿಂಗಾರಿಗೌಡ ಸಾಹಿತ್ಯ ಪ್ರಶಸ್ತಿ, ಎಚ್. ಎಲ್. ನಾಗೇಗೌಡ ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಾ. ವಿಜಯಶ್ರೀ ಸಬರದ:
ಲೇಖಕಿ ಡಾ. ವಿಜಯಶ್ರೀ ಸಬರದ 10 ಫೆಬ್ರವರಿ 1957ರಲ್ಲಿ ಜನಿಸಿದರು. ಇವರ ತಂದೆ ಗುಣವಂತರಾವ ಪಾಟೀಲ ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಬೀದರ್ನಲ್ಲಿ ಪಡೆದ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ., ‘ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ಪಡೆದರು.
ಬೀದರ್ನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು. ‘ಜಾನಪದ ಮತ್ತು ಮಹಿಳೆ’, ‘ಲೋಕ ಜಾನಪದ’, ‘ಸಬರದ ಮತ್ತು ಜಾನಪದ’ (ವಿಮರ್ಶಾ ಕೃತಿಗಳು), ‘ಗುರುಶಿಷ್ಯರ ತತ್ವಪದಗಳು’, ‘ಕೊಹಿನೂರ ಹಸನಾಸಾಬರ ತತ್ವಪದಗಳು’, ‘ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು’, ‘ಧರಿನಾಡಿನ ತತ್ವಪದಗಳು’ (ಸಂಪಾದಿತ ಕೃತಿಗಳು), ಅನೇಕ ಸ್ಮರಣ ಸಂಚಿಕೆಗಳಲ್ಲಿ ಇವರ 20ಕ್ಕೂ ಹೆಚ್ಚು ಜಾನಪದ ಸಂಬಂಧಿ ಲೇಖನಗಳು ಪ್ರಕಟಗೊಂಡಿವೆ. ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ೧೫ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಸಂಸ್ಥೆಗಳಲ್ಲಿ ಸಂಚಾಲಕರಾಗಿ, ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 6 ಎಂ.ಫಿಲ್ ಮತ್ತು 5ಮಂದಿ ಪಿ. ಎಚ್. ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಗಿರಿಜಾದತ್ತಿ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಬಸವ ಪುರಸ್ಕಾರ, ಅದಲ್ಲದೆ ಅವರಿಗೆ ಅನೇಕ ಪುಸ್ತಕ ಬಹುಮಾನಗಳು ಲಭಿಸಿವೆ.