ಮಂಗಳೂರು : ಕರಾವಳಿಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವರ್ಷದ ವಾರ್ಷಿಕೋತ್ಸವ ದಿನಾಂಕ 07 ಜುಲೈ 2025ರಂದು ನಡೆಯಲಿದ್ದು, ಸಮಾರಂಭದಲ್ಲಿ ಹಿರಿಯ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ‘ರಂಗ ಭಾಸ್ಕರ ಪ್ರಶಸ್ತಿ’ ಪ್ರದಾನ ನಡೆಯಲಿದೆ.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಸಂಜೆ ಗಂಟೆ 5-30ಕ್ಕೆ ಕಾರ್ಯಕ್ರಮ ನಡೆಯಲಿದ್ದು, 2008ರಲ್ಲಿ ಪ್ರಾರಂಭವಾದ ರಂಗ ಸಂಗಾತಿ ಸಂಸ್ಥೆಯು ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಇವರ ನೆನಪಿನಲ್ಲಿ ರಂಗ ಭಾಸ್ಕರ ಪ್ರಶಸ್ತಿಯನ್ನು ನೀಡುತ್ತಿದೆ. ಈಗಾಗಲೇ 10 ಮಂದಿ ಸಾಧಕರಿಗೆ ರಂಗ ಭಾಸ್ಕರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ಲಕ್ಷ್ಮಣ ಕುಮಾರ್ ಮಲ್ಲೂರು, 1962ರಲ್ಲಿ ಬಾಲ ನಟನಾಗಿ ರಂಗ ಪ್ರವೇಶ ಮಾಡಿ 65 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕನಾಗಿಯೂ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. 30ಕ್ಕೂ ಹೆಚ್ಚು ಕನ್ನಡ, ತುಳು ಸಿನೆಮಾಗಳಲ್ಲಿ ಅಭಿನಯದ ಜತೆಗೆ ಧಾರವಾಹಿ, ಕಿರುಚಿತ್ರ, ಜಾಹೀರಾತುಗಳಲ್ಲಿಯೂ ತಮ್ಮ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಹರಿಕೃಷ್ಣ ಪುನರೂರು ಇವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಭಾಗವತ ಪಟ್ಲ ಸತೀಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹೆಗ್ಗೋಡಿನ ಜನಮನದಾಟ ತಂಡದಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾ ಮೃಗ’ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ರವರ ‘ಎದೆಯ ಹಣತೆ’ ನಾಟಕಗಳು ಪ್ರದರ್ಶನಗೊಳ್ಳಲಿವೆ.