ನುಳ್ಳಿಪ್ಪಾಡಿ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಿಂದ ಸ್ಥಾಪಿತವಾಗಿ ಕಾಸರಗೋಡು ಜಿಲ್ಲೆಯಲ್ಲದೆ ಕರ್ನಾಟಕದ ದ.ಕ. ಜಿಲ್ಲೆ, ಕೊಡಗು, ಮೈಸೂರು, ಕೋಲಾರ, ಗದಗ, ಚಿತ್ರದುರ್ಗ, ಕೊಪ್ಪಳ, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಮಿತಿ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ದಿನಾಂಕ 22 ಫೆಬ್ರುವರಿ 2026 ಭಾನುವಾರದಂದು ಕನ್ನಡ ಭವನದ ‘ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್’ ವೇದಿಕೆಯಲ್ಲಿ ನಡೆಯುವ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026’ದ ಸ್ವಾಗತ ಸಮಿತಿ ರೂಪೀಕರಣ ಹಾಗೂ ಸಮಾಲೋಚನಾ ಸಭೆಯು ದಿನಾಂಕ 01 ಫೆಬ್ರುವರಿ 2026ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆರಿಸಲ್ಪಟ್ಟ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ “ಕನ್ನಡ ತಾಯಿಯ ಈ ನಿಸ್ವಾರ್ಥ ಸೇವೆಗೆ ಸಂಪೂರ್ಣವಾಗಿ ಸಹಕರಿಸಿ. ಕನ್ನಡ ಕಾರ್ಯಕ್ರಮ ಯಾರೇ ಮಾಡಿದರೂ ಕನ್ನಡದ ಉದ್ದೀಪನದ ಕಾರ್ಯವೇ ಆಗಿರುತ್ತದೆ. ಸಂಘಟನೆಗಳ ಮುಂದಾಳುಗಳು ಪರಸ್ಪರ ಸಹಕರಿಸಬೇಕು, ಬೆಂಬಲ ನೀಡಬೇಕು ಹಾಗಾದರೆ ಮಾತ್ರ ಕನ್ನಡಿಗರಲ್ಲಿ ಐಕ್ಯತಾ ಮನೋಭಾವ ಬೆಳೆಯಬಹುದು. ಅದು ಗಡಿನಾಡಿನ ಸಮಸ್ಯೆಗಳನ್ನು ಎದುರಿಸುವಾಗ ಶಕ್ತಿ ತುಂಬಬಹುದು. ಈ ನಿಟ್ಟಿನಲ್ಲಿ ಗಾಢವಾದ ಚಿಂತನೆ, ಐಕ್ಯತೆ ಸಾಕಾರಗೊಳ್ಳಬೇಕು, ಕನ್ನಡಿಗರ ಒಗ್ಗಟ್ಟು ಬಲಪಡಿಸಬೇಕು” ಎಂದು ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಕರೆಕೊಟ್ಟರು.
ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಕರ್ನಾಟಕ ಸರಕಾರದ ಪರಮೋನ್ನತ ಪ್ರಶಸ್ತಿಯಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ವಿಜೇತರಾದ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಉದ್ಘಾಟಕರಾಗಿ, ಪರಿಷತ್ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ವಿಶೇಷ ಅತಿಥಿಯಾಗಿ, ದೀಪ ಪ್ರಜ್ವಲನೆಗೊಳಿಸಿ ಪ್ರವಚನ ನೀಡಲಿರುವ ಪರಮಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳು ಸಾ|| ಗೋನಾಳ ತಾ|| ಲಕ್ಷೇಶ್ವರ, ಆಶೀರ್ವಚನ ಹಾಗೂ ಶುಭಾಶೀರ್ವಾದ ನೀಡಲಿರುವ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಕಾಸರಗೋಡು ಜಿಲ್ಲೆಯ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಖ್ಯಾತ, ಪ್ರಖ್ಯಾತ ಸಾಹಿತಿ, ಕವಿಗಳನ್ನು ಆದರದಿಂದ ಬರಮಾಡಿಕೊಳ್ಳಲು ಕಾಸರಗೋಡು ಕನ್ನಡದ ಆತಿಥ್ಯವನ್ನು ಖಾತ್ರಿಪಡಿಕೊಳ್ಳಲು ಸ್ವಾಗತ ಸಮಿತಿ ಪ್ರತಿಜ್ಞಾ ಬದ್ಧವಾಯಿತು.
ಬೆಳಿಗ್ಗೆ 7-00ರಿಂದ 51 ಮಂದಿ ಭಜಕರಿಂದ ನಾಮಾವಳಿ ಭಜನೆ, 8-30ಕ್ಕೆ ಮೆರವಣಿಗೆ, ರಾಷ್ಟ್ರ ಧ್ವಜಾರೋಹಣ, ಕನ್ನಡ ಧ್ವಜಾರೋಹಣ, ಪುಸ್ತಕ ಮಳಿಗೆ ಉದ್ಘಾಟನೆ, ವಿಶೇಷವಾಗಿ ‘ಸಮ್ಮೇಳನ ನಗರಿ’ಯಲ್ಲಿ ನೇತ್ರಾಲಯ ಕಾಸರಗೋಢು ವತಿಯಿಂದ ಕಣ್ಣು ತಪಾಸಣಾ ಶಿಬಿರ, ಪುಸ್ತಕ ಬಿಡುಗಡೆ, ಪ್ರಾಚ್ಯ ವಸ್ತು ಪ್ರದರ್ಶನ, ಪುರಾತನ ಹಾಗೂ ದೇಶ ವಿದೇಶಗಳ ನಾಣ್ಯ-ಕರೆನ್ಸಿ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಇತ್ಯಾದಿಗಳನ್ನು ಏರ್ಪಡಿಸಲು ಸ್ವಾಗತ ಸಮಿತಿ ತೀರ್ಮಾನಿಸಿತು. ಸಮ್ಮಾಳನದಲ್ಲಿ ಉದ್ಘಾಟನೆ, ಯುವ ಕವಿಗೋಷ್ಠಿ-ಕನ್ನಡ ಸಾಂಸ್ಕೃತಿಕ ನೃತ್ಯ ವೈಭವ, ಕುಣಿತ ಭಜನೆ, ಚುಟುಕು ಅಂತರ್ರಾಜ್ಯ ಕವಿಗೋಷ್ಠಿ, ವಿವಿಧ ಪ್ರಶಸ್ತಿಗಳಾದ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’, ‘ಚುಟುಕು ಸಿರಿರತ್ನ ಪ್ರಶಸ್ತಿ’, ‘ಕನ್ನಡ ಪಯಸ್ವಿನಿ ಪ್ರಶಸ್ತಿ’, ‘ಕವಿ ಕಾವ್ಯ ಕಠೀರವ ಪ್ರಶಸ್ತಿ’ಗಳನ್ನು ಕರ್ನಾಟಕ, ಕೇರಳದ ಸುಮಾರು 75 ಮಂದಿಗೆ ನೀಡಿ ಗೌರವಿಸಲು ಸಮಿತಿ ಅಂಗೀಕಾರ ನೀಡಿತು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅಧ್ಯಕ್ಷರಾಗಿ ಕನ್ನಡ ಭವನ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರಾದ ಡಾ. ಕೆ. ವಾಮನ್ ರಾವ್ ಬೇಕಲ್, ಪ್ರಶಸ್ತಿ ವಿಭಾಗದ ಅಧ್ಯಕ್ಷರಾಗಿ ಪ್ರದೀಪ್ ಬೇಕಲ್, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾಗಿ ವಸಂತ್ ಕೆರೆಮನೆ, ಅತಿಥಿ ಸತ್ಕಾರ ಅಧ್ಯಕ್ಷರಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸಮ್ಮೇಳನ ಸಾಹಿತ್ಯ, ಕವಿಗೋಷ್ಠಿ, ನಿರ್ವಹಣೆ ವಿಭಾಗ ಅಧ್ಯಕ್ಷರಾಗಿ ವಿರಾಜ್ ಅಡೂರು, ಆಹಾರ ಸಮಿತಿ ಅಧ್ಯಕ್ಷರಾಗಿ ಮೋಹನ್ದಾಸ್ ಕೊರಕೋಡು, ಉಚಿತ ನೇತ್ರ ತಪಾಸಣಾ ಶಿಬಿರ ಸಂಚಾಲಕರಾಗಿ ಶಶಿಕಾಂತ ಶೆಟ್ಟಿ (ನೇತಾಜಿ), ಸುಬ್ಬಣ್ಣ ಶೆಟ್ಟಿ (ನೇತಾಜಿ), ಮೆರವಣಿಗೆ ಸಂಚಾಲಕರಾಗಿ ಶಂಕರ ಜೆ.ಪಿ. ನಗರ, ವಾಹನ ವ್ಯವಸ್ಥೆ ಲೋಕೇಶ್ ಶೆಟ್ಟಿ, ಅತಿಥಿ ವಸತಿ ಸೌಕರ್ಯ ಆರ್ಥಿಕ ಸಮಿತಿ ಸಂಚಾಲಕರಾಗಿ ಸಂಧ್ಯಾರಾಣಿ ಟೀಚರ್, ಸ್ವಾಗತ ಸಮಿತಿ ಕಾರ್ಯದರ್ಶಿಯಾಗಿ ರಾಜೇಶ್ ಕೋಟೆಕಣಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಕನ್ನಡ ಭವನದ ಗೌರವಾಧ್ಯಕ್ಷರಾದ ಪ್ರದೀಪ್ ಬೇಕಲ್ ಸ್ವಾಗತಿಸಿ, ವಾಮನ್ ರಾವ್ ಬೇಕಲ್ ಕಾರ್ಯಕ್ರಮ ನಿರೂಪಿಸಿ, ರಾಜೇಶ್ ಕೋಟೆಕಣಿ ವಂದಿಸಿದರು.
