ಮಡಿಕೇರಿ : ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎನ್. ಹಿಂದೂ ದೇವಾಲಯದಲ್ಲಿ ದಿನಾಂಕ 31 ಮೇ 2025ರಂದು ನಡೆದ ಗುರುವಂದನಾ ಸಂಸ್ಕೃತಿ ಸಿಂಚನ ಕಾರ್ಯಕ್ರಮದಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈ ಇವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಗುರುಗಳಾದ ಶ್ರೀ ಶ್ರೀ ಶ್ರೀ ಪ್ರೋಫೆಸರ್ ಸ್ವಾಮಿ ಚೈತನ್ಯಾನಂದ ಸರಸ್ವತಿಯವರ ಸಮ್ಮುಖದಲ್ಲಿ ಕಲಾವಿದೆ ಬಿ.ಕೆ. ಗಣೇಶ್ ರೈ ಹಾಗೂ ಮಂಜುಳಾ ಗಣೇಶ್ ರೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರಾದ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ಜಗದ್ಗುರು ದುರುದುಂಡೇಶ್ವರ ಮಠದ ಶ್ರೀ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಗೋವಾ ರಾಜ್ಯದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಶ್ರೀ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ ಸ್ವಾಮೀಜಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು.
ಖ್ಯಾತ ಕಲಾವಿದ ಗಣೇಶ್ ರೈ ಮೂಲತ: ಮಡಿಕೇರಿಯವರಾದ ಗಣೇಶ್ ರೈಯವರು ಮೈಸೂರಿನಲ್ಲಿ ಚಿತ್ರಶಿಲ್ಪ ಕಲೆಯಲ್ಲಿ ತರಬೇತಿ ಪಡೆದಿರುವ ಕಲಾವಿದರು. ಮಡಿಕೇರಿ ಪುರಭವನದ ಎದುರಿನಲ್ಲಿರುವ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ವಿಗ್ರಹವನ್ನು ನಿರ್ಮಿಸಿದವರು. ತಲಕಾವೇರಿಯಲ್ಲಿ ಪ್ರಥಮ ಬಾರಿಗೆ ಕಾವೇರಿ ಮಾತೆಯ ಚಿತ್ರವನ್ನು ಶಿವಕಾಶಿಯಲ್ಲಿ ಮುದ್ರಿಸಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಇವರಿಂದ ಬಿಡುಗಡೆ ಮಾಡಿಸಿದ್ದರು. ಇತ್ತೀಚೆಗೆ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಕಾವೇರಿ ಮಾತೆಯ ಚಿತ್ರವನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಮಡಿಕೇರಿ ಗಣಪತಿ ಉತ್ಸವ ಮತ್ತು ದಸರಾ ಉತ್ಸವಕ್ಕೆ ಹಲವಾರು ವಿವಿಧ ಭಂಗಿಯಲ್ಲಿ ಪೇಪರ್ ಪಲ್ಪ್ ದೇವತಾ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಬಹುಮುಖ ಪ್ರತಿಭೆಯ ಗಣೇಶ್ ರೈಯವರು ಲೇಖಕರಾಗಿದ್ದು, ಇತ್ತೀಚೆಗೆ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮಗಳ ನಿರೂಪಕರಾಗಿಯೂ ಜನಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಹಾಗೂ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕದ ಉಪಾಧ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ಸ್ವತ: ರಕ್ತದಾನಿಯಾಗಿರುವ ಗಲ್ಫ್ ನಾಡಿನಲ್ಲಿ ರಕ್ತದಾನ ಶಿಬಿರದ ಆಯೋಜನೆಯನ್ನು ಮಾಡಿರುವ ಇವರಿಗೆ ಯು.ಎ.ಇ. ಸರ್ಕಾರ ಪ್ರಶಂಸಾ ಪತ್ರವನ್ನು ನೀಡಿದೆ. ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಮತ್ತು ವಿರಾಜಪೇಟೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಇವರು ವಿದೇಶದ ಗಲ್ಫ್ ನಾಡಿನಲ್ಲಿ ಬಹುರಾಷ್ಟ್ರೀಯ ಜಾಹೀರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗಣೇಶ ರೈ ಕೆಲಿಯಾಡೋ ಸ್ಕೋಪ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಭಾರತ ಮತ್ತು ಗಲ್ಫ್ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಎರಡು ದೇಶಗಳ ಬಾಂಧವ್ಯಕ್ಕೆ ಸಂಬಂಧಿಸಿದ ನೂರಾರು ವೀಡಿಯೊಗಳು ವಿಶ್ವವ್ಯಾಪಿಯಾಗಿದೆ. ಗಣೇಶ್ ರೈಯವರ ಬಹುಮುಖ ಪ್ರತಿಭೆಗೆ ದುಬಾಯಿ ಸರ್ಕಾರ ಹತ್ತು ವರ್ಷಗಳ ಕಲ್ಚರಲ್ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಸ್ವೀಕರಿಸಿರುವ ಗಣೇಶ್ ರೈಯವರು ತಮ್ಮ ಶಿಲ್ಪಕಲೆ, ಲೇಖನ, ಸಮಾಜಸೇವೆಯ ಪಯಣದಲ್ಲಿ ಆಶೀರ್ವಾದ, ಪ್ರೋತ್ಸಾಹ, ಬೆಂಬಲ ನೀಡಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.