ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ಆಯೋಜಿಸಿದ ‘ಸನಾತನ ಗುರುಪರಂಪರ’ ಕಾರ್ಯಕ್ರಮವು 20 ಜುಲೈ 2024ರ ಶನಿವಾರದಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ‘ಗುರು ನಮನ’ ಸ್ವೀಕರಿಸಿ ಮಾತನಾಡಿದ ಹಿರಿಯ ನೃತ್ಯಗುರು ಹಾಗೂ ವಿದ್ವಾಂಸರಾದ ಪ್ರತಿಭಾ ಎಲ್. ಸಾಮಗ ಹಿರಿಯರ ಪರಂಪರೆಯನ್ನು ಅನುಸರಿಸಿಕೊಂಡು ಬರುವ ಸನಾತನ ನಾಟ್ಯಾಲಯದ ನಡೆ ನಿಜಕ್ಕೂ ಶ್ಲಾಘನೀಯ. ಮಂಗಳೂರಿನಲ್ಲಿ ಹುಟ್ಟಿ ಉಡುಪಿಗೆ ಹೋದ ನನಗೆ ಇಲ್ಲಿನ ಗೌರವ ತವರು ಮನೆ ಸನ್ಮಾನದಂತಿದೆ. ಹೊಸ ತಲೆಮಾರಿನ ಪುಕ್ಕಳು ಪ್ರತಿಭಾವಂತರಿದ್ದಾರೆ. ಅವರು ಸಾಧನೆಯ ಪಥದಲ್ಲಿ ನಡೆಯುವಂತಾಗಲಿ.” ಎಂದು ಹೇಳಿದರು.



ಉಡುಪಿಯ ‘ಸಮೂಹ’ ಇದರ ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಕೀರ್ತಿಶೇಷ ಪ್ರೊ. ಉದ್ಯಾವರ ಮಾಧವ ಆಚಾರ್ಯ ಇವರ ‘ಗುರು ಸಂಸ್ಮರಣೆ’ಯನ್ನು ಧಾರ್ಮಿಕ ಚಿಂತಕರಾದ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ನಡೆಸಿಕೊಟ್ಟರು. ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಹಿರಿಯ ಶಿಷ್ಯೆ, ನಾಟ್ಯ ವಿದುಷಿಯರಾದ ಸಂಜನಾ ಭರತ್, ವೈಶ್ಯ ಶೆಟ್ಟಿ, ಕಾವ್ಯಶ್ರೀ, ದೀಪ್ತಿ ಐ., ಅಂಕಿತ ಬದಿಯಡ್ಕ ಮತ್ತು ಸಾಹಿತ್ಯ ಸುರೇಶ್ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ ನಡೆಯಿತು.



ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಹಾಗೂ ಭ್ರಮರಿ ಶಿವಪ್ರಕಾಶ್ ಉಪಸ್ಥಿತರಿದ್ದರು.