ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 22 ಫೆಬ್ರವರಿ 2026ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ಸುನೀತಾ ವಿ. “ನಾಟಕ ಸೇರಿದಂತೆ ರಂಗಭೂಮಿಯು ಸಮಾಜದ ಪ್ರತಿಬಿಂಬ. ಎಲ್ಲ ಆಗುಹೋಗುಗಳಿಗೆ ಹಿಡಿವ ಕನ್ನಡಿ. ಸಿನಿಮಾಗಳು ಯಾವ ಸಂದೇಶವನ್ನು ಸಾರುತ್ತಿವೆ ಎಂದು ನೋಡಿದರೆ ಸಂದೇಶಗಳೇ ಕಾಣುತ್ತಿಲ್ಲ. ರೌಡಿಸಂ, ಹೊಡೆದಾಟಗಳೇ ಕಾಣುತ್ತವೆ. ಆದರೆ, ನಾಟಕಗಳು ಆ ರೀತಿಯಲ್ಲಿಲ್ಲ. ಇಂದಿಗೂ ಸಮಾಜದ ಸಮಸ್ಯೆಗಳನ್ನು, ಪಿಡುಗುಗಳನ್ನು ಪ್ರತಿಬಿಂಬಿಸುತ್ತಾ ಚಿಂತನೆಗೆ ಹಚ್ಚುತ್ತವೆ. ಅಲ್ಲದೆ, ಸಿನಿಮಾ ನಟರು ಅನೇಕ ರೀಟೇಕ್ಗ ಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಆದರೆ, ರಂಗಭೂಮಿಯ ಕಲಾವಿದ ರಂಗದ ಮೇಲೆ ನಟಿಸಬೇಕು. ತಪ್ಪಾದರೆ ಅಲ್ಲಿ ರೀಟೇಕ್ ಇರುವುದಿಲ್ಲ. ಎಲ್ಲ ತಯಾರಿಗಳನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಹಾಗಾಗಿ ಶ್ರೇಷ್ಠ ನಟರು ರಂಗಭೂಮಿಯಿಂದ ಹೊರಹೊಮ್ಮುತ್ತಾರೆ” ಎಂದು ವಿಶ್ಲೇಷಿಸಿ “ಈ ಸಾಮಾಜಿಕ ಜಾಲತಾಣದ ಮತ್ತು ಸಿನಿಮೀಯ ಜಗತ್ತಿನಲ್ಲಿ ಪೀಳಿಗೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿದಾಗ ಆತಂಕವಾಗುತ್ತದೆ. ಇಂಥ ಜಾಗತಿಕ ಸನ್ನಿವೇಶದಲ್ಲಿ ರಂಗಚಟುವಟಿಕೆಯ ಮೂಲಕ ಯುವಸಮುದಾಯವನ್ನು ಸರಿಯಾದ ದಿಕ್ಕಿನಲ್ಲಿ ಸುಮನಸಾ ಒಯ್ಯುತ್ತಿದೆ” ಎಂದು ಶ್ಲಾಘಿಸಿದರು.
ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯು. ಮೋಹನ್ ಉಪಾಧ್ಯಾಯ ಮಾತನಾಡಿ, “ರಂಗಭೂಮಿಯ ಮೂಲ ಭೂಮಿಕೆಯನ್ನು ಬಿಡದೇ ಕಾಲಕ್ಕೆ ತಕ್ಕಂತೆ ನಾಟಕಗಳನ್ನು ರೂಪಿಸಬೇಕು” ಎಂದು ಸಲಹೆ ನೀಡಿದರು. ರಂಗಕರ್ಮಿ ಕೃಷ್ಣ ವಿ. ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆಯ ಉದ್ಯಮಿ ಸದಾನಂದ ಸಾಲ್ಯಾನ್, ಮಹಾಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಸುರೇಶ್ ಬಿ. ಕರ್ಕೇರ, ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ ಅಮೀನ್, ತಾಂಗದಗಡಿ ವೀರಮಾರುತಿ ವ್ಯಾಯಮ ಶಾಲೆಯ ಅಧ್ಯಕ್ಷ ಮನೋಜ್ ಕುಮಾರ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್. ಭಟ್ ಸ್ವಾಗತಿಸಿ, ನಿರ್ದೇಶಕ ದಿವಾಕರ ಕಟೀಲ್ ವಂದಿಸಿ, ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಮನಸಾ ಕೊಡವೂರು ಉಡುಪಿ ತಂಡದ ಕಲಾವಿದರಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ಯೇಸ’ ತುಳು ನಾಟಕ ಪ್ರದರ್ಶನಗೊಂಡಿತು.
