ಉಡುಪಿ : ಡಾ. ಎಚ್.ವಿ. ನಾಗರಾಜ ರಾವ್ ಇವರು 2025ನೇ ಸಾಲಿನ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ, ಕಥನಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂ.10,000/-(ಹತ್ತು ಸಾವಿರ) ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 16 ಆಗಸ್ಟ್ 2025ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅವರು ತಿಳಿಸಿರುತ್ತಾರೆ.
ಡಾ. ಎಚ್.ವಿ. ನಾಗರಾಜ ರಾವ್ ಅವರು 1942ರ ಸೆಪ್ಟೆಂಬರ್ 10ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಸೋಮೇನಹಳ್ಳಿ ಗ್ರಾಮದಲ್ಲಿ ಶ್ರೀ ವೆಂಕಟನಾರಾಯಣಪ್ಪ ಹಾಗೂ ಸತ್ಯಲಕ್ಷ್ಮಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣದ ಅನಂತರ ಅವರು ಗುಡಿಬಂಡೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಮೈಸೂರಿನ ಮಹಾರಾಜಾ ಸಂಸ್ಕೃತ ಕಾಲೇಜಿನಲ್ಲಿ ವ್ಯಾಕರಣಶಾಸ್ತ್ರ ಮತ್ತು ಅಲಂಕಾರಶಾಸ್ತ್ರದಲ್ಲಿ ಶಿಕ್ಷಣ ಪಡೆದರು. ನಂತರ ಅಮೇರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಭಾಷಾ ವಿಷಯದಲ್ಲಿ ಎಂ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ಎಚ್.ವಿ. ನಾಗರಾಜ ಇವರು ಹಲವು ಅಪರೂಪದ ಮತ್ತು ಉಪೇಕ್ಷಿಸಲ್ಪಟ್ಟ ವಿಷಯಗಳಲ್ಲಿ ಬರವಣಿಗೆ ಮಾಡಿದ್ದು, ಹೊಸ ಸಾಹಿತ್ಯ ಪ್ರಕಾರಗಳಲ್ಲೂ ಕೊಡುಗೆ ನೀಡಿರುವವರು. ಸಂಸ್ಕೃತ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅನೇಕ ಸಾಹಿತ್ಯಕ ಕೃತಿಗಳನ್ನು ರಚಿಸಿದ ಇವರು ನಾಟಕ, ಕಾದಂಬರಿ, ಪ್ರಬಂಧಗಳನ್ನು ಅನುವಾದಿಸಿದ್ದಾರೆ. ಸಂಸ್ಕೃತ ಗ್ರಂಥಗಳ ಸಂಪಾದಕರಾಗಿದ್ದು, ಸಂಸ್ಕೃತದಲ್ಲಿ ನಾಟಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ವಿದೂಲಾ ಪುತ್ರೀಯಮ್, ಸಮುದ್ಯತಾ ಮತ್ತು ದಾಂಪತ್ಯ ಕಲಹ: ಮುಖ್ಯವಾದವು. ಡಾ. ಹಾ.ಮಾ. ನಾಯಕ್ ಹಾಗೂ ಎಸ್.ಎಲ್. ಭೈರಪ್ಪ ಮೊದಲಾದ ಹಿರಿಯ ಲೇಖಕರ ಕನ್ನಡ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಹಲವಾರು ಗ್ರಂಥಗಳನ್ನು ಕನ್ನಡದಿಂದ ಸಂಸ್ಕೃತಕ್ಕೂ, ಸಂಸ್ಕೃತದಿಂದ ಕನ್ನಡಕ್ಕೂ, ಸಂಸ್ಕೃತದಿಂದ ಇಂಗ್ಲೀಷಿಗೂ ಅನುವಾದಿಸಿದ್ದಾರೆ. ಭಲ್ಲಾಟ ಶತಕಮ್, ಆನಂದಸಾಗರಸ್ತೆವ:, ವರದರಾಜಸ್ತವಃ, ಅನ್ನೋಪದೇಶ ಶತಕಮ್, ಅಸ್ಮಾಕಂಗೃಹಸ್ಯದೀಪ, ವಿಚಾರ ಲಹರಿ ಅವರ ಮುಖ್ಯ ಪ್ರಕಟಿತ ಕೃತಿಗಳು. ಮೈಸೂರಿನ ಪ್ರಾಚ್ಯ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಇವರು, ಯುನಿವರ್ಸಿಟಿ ಆಫ್ ಚಿಕಾಗೊ, ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್ ಮತ್ತು ಹಿಬ್ರೂಯುನಿವರ್ಸಿಟಿ ಆಫ್ ಜೆರುಸಲೆಂಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಗಾಗಿ ಮಹರ್ಷಿ ವೇದವ್ಯಾಸ ಪ್ರಶಸ್ತಿ, ಕಾವ್ಯಶಾಸ್ತ್ರ ವಿಶಾರದ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಮೈಸೂರಿನಿಂದ ಪ್ರಕಟವಾಗುವ ದಿನಪತ್ರಿಕೆ ‘ಸುಧರ್ಮಾ’ ಇದರ ಗೌರವ ಸಂಪಾದಕರಾಗಿದ್ದಾರೆ.