ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದಿನಾಂಕ 29 ಏಪ್ರಿಲ್ 2025ರಂದು ವಿಚಾರಗೋಷ್ಠಿ ಮತ್ತು ಪಡೀಲು ಶಂಕರಭಟ್ಟ ಸಂಸ್ಮರಣಾ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀ ನಿವಾಸ ಪೂಜಾರಿ “ಕಾರಂತರು ಒಂದು ತುಂಬಿದ ಕೊಡವಿದ್ದಂತೆ. ಅವರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಕಾರಂತರಲ್ಲಿ ಹಾಸ್ಯ ಪ್ರಜ್ಞೆಯೂ ಇತ್ತು. ಅವರು ಬಹಳ ನೇರವಾಗಿ ಮಾತನಾಡುವ ವ್ಯಕ್ತಿ. ಕಾರಂತರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಅವಶ್ಯ” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ “ಕಾರಂತರು ಬಹುಮುಖಿ ವ್ಯಕ್ತಿತ್ವದ ವ್ಯಕ್ತಿ. ಕಾರಂತರ ಬರಹ ನಮಗೆ ಚೈತನ್ಯವಿದ್ದಂತೆ. ಅವರ ಸ್ವಭಾವ ಬಹಳ ವಿಶಿಷ್ಟವಾದದ್ದು. ಕಾರಂತರು ಮಕ್ಕಳ ಶಿಕ್ಷಣವು ಅತ್ಯಂತ ಮುಕ್ತವಾಗಿ ಇರಬೇಕೆಂದು ಬಯಸಿದ್ದರು. ಕಟು ವಾಸ್ತವತಾವಾದಿಯಾಗಿ ಕೃತಿಗಳನ್ನು ರಚಿಸಿದ್ದರು. ಅವರೊಬ್ಬ ಸಾಮಾಜಿಕ ಮನೋಧರ್ಮವುಳ್ಳ ವ್ಯಕ್ತಿ” ಎಂದರು.
ಬಳಿಕ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲುರಾಯ “ಕಾರಂತರ ಬದುಕು, ಬರಹಗಳು ನಮಗೆಲ್ಲ ಉತ್ತಮ ಸಂದೇಶ ನೀಡುತ್ತದೆ. ಅವರು ಭಾರತೀಯ ಪರಂಪರೆಯಲ್ಲಿ ಸಾರ್ವಜನಿಕ ಬದುಕು ಹೇಗಿರಬೇಕೆಂದು ತಿಳಿಸಿದ ಶ್ರೇಷ್ಠ ವ್ಯಕ್ತಿ. ಅವರ ಬದುಕು ವಿದ್ಯಾರ್ಥಿಗಳಿಗೆ ಪ್ರೇರಣೆ” ಎಂದರು.
ಪಡೀಲು ಶಂಕರಭಟ್ಟ ಸಂಸ್ಮರಣಾ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು. ಪ್ರಥಮ ಬಹುಮಾನವನ್ನು ಕೆ.ಎಲ್.ಇ. ಸೊಸೈಟಿಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ರಾಣಿಬೆನ್ನೂರು ಇಲ್ಲಿಯ ಪ್ರಥಮ ಬಿ.ಎ. ವಿದ್ಯಾರ್ಥಿನಿ ಅನುಷಾ ಎಸ್. ಕೋಗಳೆ ಹಾಗೂ ದ್ವಿತೀಯ ಬಹುಮಾನವನ್ನು ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ ಇಲ್ಲಿಯ ಪದ್ಮಶ್ರೀ ಎಸ್.ಪಿ. ಮತ್ತು ತೃತೀಯ ಬಹುಮಾನವನ್ನು ಚಾಣಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿಯ ಕುಸುಮ ಸಿ.ಎಂ. ಇವರುಗಳು ಪಡೆದರು.
ಬಳಿಕ ‘ಚೋಮನ ದುಡಿ’ ಚಿತ್ರದಲ್ಲಿ ನಟರಾಗಿ ಭಾಗವಹಿಸಿದ ಕಲಾವಿದರೊಂದಿಗೆ ಸಂವಾದ ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ., ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ಧನ್ಯವಾದ ಸಲ್ಲಿಸಿ, ಪ್ರಥಮ ಬಿ.ಎ. ವಿದ್ಯಾರ್ಥಿನಿ ಚೈತನ್ಯ ನಿರ್ವಹಿಸಿದರು.