ಅಂಕೋಲಾ : ಅಂಕೋಲಾ ತಾಲ್ಲೂಕಿನ ಬೇಲೇಕೇರಿಯ ಶ್ರೀ ಜೈನಬೀರ ದೇವಾಲಯದ ಸನಿಹದಲ್ಲಿ ಎಪ್ರಿಲ್ 21ರ ಸೋಮವಾರದಂದು ರಾತ್ರಿ 10:00 ಗಂಟೆಗೆ ಉಪನ್ಯಾಸಕರಾದ ಹರೀಶ ಬೀರಣ್ಣ ನಾಯಕರವರ ಸಂಯೋಜನೆಯಲ್ಲಿ ಬೇಲೇಕೇರಿ ಊರ ನಾಗರಿಕರ ಪ್ರಾಯೋಜಕತ್ವದಲ್ಲಿ ದಕ್ಷಿಣೋತ್ತರದ ಹೆಸರಾಂತ ಕಲಾವಿದರಿಂದ “ಶ್ರೀ ಶನೀಶ್ವರ ಮಹಾತ್ಮೆ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಕಥಾನಕವು ಬಯಲಾಟವಾಗಿ ಪ್ರದರ್ಶನಗೊಳ್ಳಲಿದೆ.
“ರಸರಾಗ ಚಕ್ರವರ್ತಿ” ಜಿ. ಆರ್. ಕಾಳಿಂಗ ನಾವಡರನ್ನು ನೆನಪಿಸುವ ತುಂಬು ಕಂಠಸಿರಿಯ ಭಾಗವತದ್ವಯರಾದ ವಿನಯ ಶೆಟ್ಟಿ ಮತ್ತು ಗಣಪತಿ ಕೋಡ್ಕಣಿಯವರ ಸುಮಧುರವಾದ ಹಾಡುಗಾರಿಕೆಗೆ ಮದ್ದಳೆಯಲ್ಲಿ ನರಸಿಂಹ ಹೆಗಡೆ ಮುರೂರು ಹಾಗೂ ಚಂಡೆಯಲ್ಲಿ ಗಜಾನನ ಹೆಗಡೆ ಕೋಣಾರೆಯವರು ಸಾಥ್ ನೀಡಲಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ “ಕಣ್ಣೆದುರುಗಿನ ಬೃಹಸ್ಪತಿ” ಡಾ. ಜಿ.ಎಲ್. ಹೆಗಡೆಯವರು ಪ್ರಪ್ರಥಮವಾಗಿ ಬೃಹಸ್ಪತಿಯ ವೇಷದಲ್ಲಿಯೂ, ವಿಕ್ರಮನ ಪಾತ್ರಕ್ಕೆ ಹೆಸರಾದ ”ಪದವಿಗಳ ಸರದಾರ”, “ರಂಗ ವಿಕ್ರಮ” ಎಂಬ ಅಭಿದಾನಗಳಿಂದ ಸುವಿಖ್ಯಾತರಾದ ಮಂಜುನಾಥ ಗಾಂವಕರ್ ಬರ್ಗಿಯವರು ವಿಕ್ರಮಾದಿತ್ಯ ಮಹಾರಾಜನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿರುವರು.
ಲಾಲಿತ್ಯಮಯ ನೃತ್ಯದ ಲಯಬ್ರಹ್ಮ ಬಿ. ಎಸ್. ಗೌಡರು ವಿಷ್ಣುವಾಗಿ, “ರಂಗಸಮರ್ಥ” ಹಿಚ್ಕಡದ ಡಾ. ಎಂ. ಆರ್.ನಾಯಕರು ಈಶ್ವರನಾಗಿ, ತೂಕದ ಪಾತ್ರದಾರಿಯಾದ ದೇವರಾಯ ಹಿಲ್ಲೂರು ಇವರು ಚಂದ್ರಸೇನನಾಗಿ, ಅಂಕೋಲಾಕ್ಕೆ ಹೊಸ ಮುಖಗಳಾದ ಚಿದಾನಂದ ಭಂಡಾರಿ ಕಾಪಾಲಿಕ, ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆಯವರ ನಂದಿ ಶೆಟ್ಟಿ, ಖ್ಯಾತ ಕಿರುಚಿತ್ರನಟಿ, “ವೀರ ಚಂದ್ರಹಾಸ” ಸಿನಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿರುವ ನಾಗಶ್ರೀ ಜಿ.ಎಸ್.ರವರ ಒನಪು-ವಯ್ಯಾರದ ಆಲೋಲಿಕೆ, ಪದ್ಮಾವತಿಯಾಗಿ ಹಿರಿದಾದ ಯಕ್ಷ ಕುಟುಂಬದ ಹಿನ್ನೆಲೆಯ “ರಂಗ ಸುಂದರಿ” ಅಶ್ವಿನಿ ಕೊಂಡದಕುಳಿ, ರಾಜ ಹಾಸ್ಯದ ನಡೆಯ ಭರವಸೆಯ ಯುವ ಕಲಾವಿದ ಸುಬ್ರಹ್ಮಣ್ಯ ಜಮಗೋಡರವರ ಕುದುರೆ ವ್ಯಾಪಾರಿ, “ಬೇಲೇಕೇರಿಯ ಕುಡಿ” ಚೆಂದದ ನೆನಪು ನಾಡವರ ಅಪರೂಪದ ದೇವಿಯ ಜೊತೆಯಲ್ಲಿ ಬೀರಣ್ಣ ಮಾಸ್ತರ್ ಅಡಿಗೋಣ, ನಾರಾಯಣ ನಾಯ್ಕ ಬಾವಿಕೇರಿ,ದೇವಾನಂದ,ಭರತ ಪುರಲಕ್ಕಿಬೇಣ,ಮಂಜುನಾಥ ಸರಳೇಬೈಲ್, ಕೆಂಚನಮನೆಯ ಹಿತ ಹಾಗೂ ಹಾರ್ದಿಕ ಮೊದಲಾದವರು ಪಾತ್ರಗಳಲ್ಲಿ ಮಿಂಚಲಿದ್ದಾರೆ.
ಬೇಲೇಕೇರಿಯ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ರಾಮಾನಂದ ಮಾಸ್ತರರು ಬಹುಜನರ ಒತ್ತಾಸೆಯ ಮೇರೆಗೆ ಶನಿಯ ಪಾತ್ರದಲ್ಲಿ ವಿಜ್ರಂಬಿಸಲಿರುವರು.
ಮಂಜುನಾಥ ಗೌಡರವರ ವಿದ್ಯುದ್ದೀಪಾಲಂಕೃತದೊಂದಿಗಿನ ನಾಗರಾಜ ನಾಯ್ಕ ಹೆಗ್ಗರಣೆಯವರ ಭವ್ಯರಂಗ ಸಜ್ಜಿಕೆಯಲ್ಲಿ, ಮುರೂರಿನ ರಾಮ ಹೆಗಡೆಯವರ ಪ್ರಸಾದನ ವ್ಯವಸ್ಥೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ಅಪರೂಪದ ಬಯಲಾಟವು ದಾಖಲೆಯಾಗಿ ಯಕ್ಷಕಲಾರಸಿಕರನ್ನು ಮನತಣಿಸಲಿದ್ದು, ಪ್ರೇಕ್ಷಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸಂಘಟಕರು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
ಬೇಲೇಕೇರಿಯಲ್ಲಿ ಉಪನ್ಯಾಸಕ ಹರೀಶ ನಾಯಕರ ಸಂಯೋಜನೆಯಲ್ಲಿ ಅಪರೂಪದ “ಶನೀಶ್ವರ ಮಹಾತ್ಮೆ” ಯಕ್ಷಗಾನ | ಎಪ್ರಿಲ್ 21
No Comments2 Mins Read