ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 08 ಜೂನ್ 2025ರಂದು ಡಾ. ವೆಂಕಟ ಗಿರೀಶ್ ಹಾಗೂ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ‘ಶತ ಸಂಭ್ರಮ’ ಹಾಗೂ ಆಶುಕವಿ ಪೊಟ್ಟಿಪ್ಪಲ ನಾರಾಯಣ ಭಟ್ಟರ ‘ನುಡಿ ನಮನ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎಲ್ಲರೂ ಭಾವಪೂರ್ಣರೂ ಕವಿ ಮನದವರೂ ಆಗಿರುತ್ತಾರೆ. ಆದರೆ ಅದಕ್ಕೆ ಚೌಕಟ್ಟು ಹಾಗೂ ಅವಕಾಶ ದೊರಕಿದಾಗ ಕವಿಗಳಾಗುತ್ತಾರೆ ಹಾಗೂ ಪ್ರಶಸ್ತಿಗಳು ಖರೀದಿ ಯೋಗ್ಯವಲ್ಲ” ಎಂದು ಹೇಳಿದರು. ಪುತ್ತೂರಿನ ದೇವಸ್ಥಾನದ ವ್ಯವಸ್ಥಾಪಕ ಈಶ್ವರ ಭಟ್ಟರು ದೀಪ ಪ್ರಜ್ವಲನೆ ಗೈದು ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ ನಾಯಕ್ ಉದ್ಘಾಟಿಸಿದ ಸಮಾರಂಭವು ಡಾ. ವೆಂಕಟ ಗಿರೀಶ್ ರ ಸಭಾಧ್ಯಕ್ಷತೆಯಲ್ಲಿ ಮುಂದುವರಿಯಿತು. ಪೆರ್ಲದ ಉದ್ಯಮಿ ಪ್ರಸಾದ್ ಪೆರ್ಲ ಕೀರ್ತಿಶೇಷ ನಾರಾಯಣ ಭಟ್ಟರ ಗುಣಗಾನ ಮಾಡಿದರು. ಶಿವಮಣಿ ಕಲಾಸಂಘದ ಶಿವಮಣಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ಗಂಗಾಧರ ಗಾಂಧಿ, ರಾಣಿ ಪುಷ್ಪಲತಾದೇವಿ ಶಾಂತಾ ಪುತ್ತೂರು ಇವರಿಗೆ ಪೊಟ್ಟಿಪ್ಪಲ ನಾರಾಯಣ್ ಭಟ್ ಆಶುಕವಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೂ ಡಾ. ಲಕ್ಷ್ಮಣ ಮೂರ್ತಿಯವರು ಬರೆದ ‘ರಾಣಿ ಅಬ್ಬಕ್ಕದೇವಿಯ ಜತೆ ಪಯಣ’ ಆರನೇ ಮರುಮುದ್ರಣದ ಲೋಕಾರ್ಪಣೆ ಮಾಡಲಾಯಿತು. ಲಕ್ಷ್ಮಣ ಮೂರ್ತಿ ಕೃತಿ ಪರಿಚಯ ಮಾಡಿದರು. ಕಾಸರಗೋಡು ಕ.ಸಾ.ಪ. ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಮತ್ತಿತರರಿದ್ದರು. ಸಾಹಿತಿ ಡಾ. ಸುರೇಶ್ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪೊಟ್ಟಿಪ್ಪಲ ಕೀರ್ತಿಶೇಷ ಆಶುಕವಿ ಶ್ರೀ ನಾರಾಯಣ ಭಟ್ ಇವರ ಕುರಿತಾದ ಚುಟುಕು, ಹನಿಗವನ ವಾಚನ ಹಾಗೂ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯವರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಪ್ರಸ್ತುತಗೊಂಡಿತು.