ಮಂಗಳೂರು: ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಎಂಡ್ ಟ್ರೈನಿಂಗ್(ಸಿ. ಸಿ. ಆರ್. ಟಿ.) ವಿಭಾಗದವರು ವರ್ಷಪ್ರತಿ ಸಂದರ್ಶನದ ಮೂಲಕ ಆಯ್ಕೆ ಮಾಡುವ ಪ್ರತಿಷ್ಠಿತ ಕಲ್ಚರಲ್ ಟ್ಯಾಲೆಂಟ್ ಸರ್ಚ್ ಸ್ಕೀಮ್ (ಸಿ. ಟಿ. ಎಸ್. ಎಸ್.) ಇದರ ಜ್ಯೂನಿಯರ್ ವಿಭಾಗದ ಶಿಷ್ಯವೇತನಕ್ಕಾಗಿ ಮಂಗಳೂರಿನ ಅರಳು ಪ್ರತಿಭೆಗಳಾದ ಶುಕೀ ರಾವ್ ಹಾಗೂ ಶಿವಾನಿ ಇವರುಗಳು ಭರತನಾಟ್ಯ ವಿಷಯದಲ್ಲಿ ಅಧ್ಯಯನಕ್ಕಾಗಿ ಆಯ್ಕೆಯಾಗಿದ್ದಾರೆ. ಇವರೀರ್ವರು ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿ ಇದರ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶ್ ಇವರಲ್ಲಿ ಕಳೆದ ಎಂಟು ವರುಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು ಕೆನರಾ ಹೈಸ್ಕೂಲ್ ಸಿ. ಬಿ. ಎಸ್. ಇ. ಹಾಗೂ ಎಸ್. ಡಿ. ಎಂ. ಸ್ಕೂಲಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ.