Subscribe to Updates

    Get the latest creative news from FooBar about art, design and business.

    What's Hot

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | ನಗುವಿನ ಸವಿ ಹಂಚಿದ ಮನೋರಮಾ ಅಮ್ಮನಿಗೆ ನುಡಿ ನಮನ
    Article

    ವಿಶೇಷ ಲೇಖನ | ನಗುವಿನ ಸವಿ ಹಂಚಿದ ಮನೋರಮಾ ಅಮ್ಮನಿಗೆ ನುಡಿ ನಮನ

    October 7, 2024Updated:January 7, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮನೋರಮಾ ಎಂಬ ಹೆಸರು ಅನ್ವರ್ಥಗೊಂಡಿರುವುದು ನಮ್ಮ ಹಿರಿಯ ಲೇಖಕಿ, ಚಿಂತನಶೀಲೆ ಮನೋರಮಾ ಎಂ. ಭಟ್ಟರಲ್ಲಿ, ಅವರನ್ನು ಭೇಟಿಯಾದ ಎಲ್ಲರೂ ಅವರ ವ್ಯಕ್ತಿತ್ವದಿಂದ ಮನಸೂರೆಗೊಂಡವರೇ. ಮೊನ್ನೆ ಮೊನ್ನೆಯವರೆಗೆ ಅಂದರೆ ಸೆ. 7ರ ಗಣೇಶ ಚತುರ್ಥಿಯ ದಿನದವರೆಗೆ ಸಿಹಿಯನ್ನು ಇಷ್ಟಪಡುತ್ತಾ ತಿಂದು, ಸಿಹಿಯಾದ ನಗೆಯೊಂದಿಗೆ ಇದ್ದವರು. ಒಂದಿಷ್ಟು ಸುಸ್ತು ಎಂದು ಒತ್ತಾಯಕ್ಕೆ ಆಸ್ಪತ್ರೆ ಸೇರಿದವರು ಅಲ್ಲಿಂದಲೇ ನಮಗೆ ಹೇಳದೇ ತಿರುಗಿ ಬಾರದ ಊರಿಗೆ ಪಯಣಿಸಿದರು.
    ಇದೇ ಜುಲೈ 15ರಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು, ತಮ್ಮೆಲ್ಲ ನಿತ್ಯಕರ್ಮಗಳನ್ನು ತಾವೇ ಮಾಡಿಕೊಳ್ಳುತ್ತಾ ದೇಹ, ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿದ್ದವರು, ಮಾತ್ರವಲ್ಲ ಜೀವನ ಪ್ರೀತಿ, ಜೀವನೋತ್ಸಾಹದ ಮಾತುಗಳಿಂದ, ನಿತ್ಯವೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಅದರ ಬಗ್ಗೆ ವಿಮರ್ಶೆ ಮಾಡುತ್ತಾ ಅಂದಿನ ಕಾರ್ಯಕ್ರಮಗಳನ್ನು ನೀಡಿದವರು ಪರಿಚಿತರಾಗಿದ್ದರೆ ಅವರಿಗೇ ಆಗಲೇ ಫೋನ್ ಮಾಡಿ ತನ್ನ ಸಂತೋಷವನ್ನು ಹಂಚಿಕೊಂಡು ಅವರಿಗೆ ಉತ್ಸಾಹ ತುಂಬುತ್ತಿದ್ದರು. ಅಪರಿಚಿತರಾದರೆ ಅವರ ಬಗ್ಗೆ ಯಾರಿಂದಲಾದರೂ ಫೋನ್ ನಂಬರ್ ಪಡೆದು ಫೋನ್ ಮಾಡಿ ಅವರಿಗೆ ಅಭಿನಂದನೆ ತಿಳಿಸುವುದು ಅವರ ಏಕಾಂಗಿ ಜೀವನದ ದಿನಗಳ ಬಹುಮುಖ್ಯ ಕೆಲಸ. ತಾನು ಒಂಟಿಯಲ್ಲ ಎನ್ನುವುದನ್ನು ಹಳಬರ ಜತೆಗಿನ ಸಂಪರ್ಕವನ್ನು ನಿರಂತರವಾಗಿಸುತ್ತಾ, ಹೊಸಬರ ಪರಿಚಯ ಮಾಡಿಕೊಳ್ಳುತ್ತಾ ಅಕ್ಕರೆಯ ಅಮ್ಮನಾಗಿ ತಾನಿರುವ ‘ಅವತಾರ್’ ವಿಶ್ರಾಂತಿ ಧಾಮಕ್ಕೆ ಕರೆಸಿಕೊಳ್ಳುವ ಆಯಸ್ಕಾಂತದ ಶಕ್ತಿ ಅವರ ಮಾತಿನಲ್ಲಿರುತ್ತಿತ್ತು. ಬಂದವರನ್ನು ಸುಮ್ಮನೆ ಕಳುಹಿದರೆ ತನ್ನಲಿದ್ದ ಪುಸ್ತಕದ ಪ್ರತಿಯೊಂದಿಗೆ ಹೆಣೆದು ಮುಗಿಸಿದ್ದ ಉಣ್ಣೆಯ ಶಾಲು ಇದ್ದರೆ ಅದನ್ನು ಅವರಿಗೆ ತೊಡಿಸಿ ನೀಡಿ ಸಂತೋಷಪಡುತ್ತಿದ್ದರು. ಅದು ಅವರ ಉಚಿತ ಕಾಣಿಕೆ. ಆದರೆ ಒತ್ತಾಯದಲ್ಲಿ ಕೆಲವೇ ಕೆಲವರು ಒಂದಿಷ್ಟು ಮೊತ್ತವನ್ನು ನೀಡಿದಾಗ ಉಣ್ಣೆಯ ನೂಲಿನದು ಕೊಡಿ ಎಂದು ಹೇಳಿ ಅಷ್ಟೇ ಪಡೆದಿರಬಹುದು. ಕಳೆದ ಸುಮಾರು ಐದೂವರೆ ವರ್ಷಗಳಿಂದ ಅವರು ಹೆಣೆದ ಶಾಲುಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು.
    ಮಂಗಳೂರಿನ ಉರ್ವಾಸ್ಟೋರ್ ಬಳಿಯ ‘ಸೌಗಂಧಿಕ’ ಮನೆಯಲ್ಲಿ ಮಂಗಳೂರಿನ ಖ್ಯಾತ ವಕೀಲರಾಗಿದ್ದ ಪತಿ ಮುಳಿಯ ಮಹಾಬಲ ಭಟ್ಟರನ್ನು 1999ರಲ್ಲಿ ಅಗಲಿದ ಬಳಿಕ ಒಂಟಿಯಾಗಿ ಸುಮಾರು ಇಪ್ಪತ್ತು ವರ್ಷದಷ್ಟು ಕಾಲ ಸುತ್ತಮುತ್ತಲಿರುವ ಮಂದಿಯನ್ನು ಬೇರೆ ಬೇರೆ ಕಾರಣಗಳೊಂದಿಗೆ ತನ್ನವರನ್ನಾಗಿಸಿ ಮಾತನಾಡಿಸುತ್ತಾ ಇದ್ದ ಸರಸ ಮಾತುಗಾರ್ತಿ ಮನೋರಮಾ ಅವರನ್ನು ಅವರ ಅಂಗಳದಲ್ಲಿ ಅರಳಿದ ವೈವಿಧ್ಯಮಯವಾದ ಹೂಗಳು ಮಾತನಾಡಿಸುತ್ತಿತ್ತು. ಜತೆಗೆ ಬರವಣಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ‘ಸಾಹಿತ್ಯ ಸದನ’ದ ಸ್ವಚ್ಛತೆಯ ಹೊಣೆಗಾರಿಕೆಯೊಂದಿಗೆ ಬಂದವರಿಗೆಲ್ಲ ಅವರದ್ದೇ ಆದ ವಿಶಿಷ್ಟ ಶುಂಠಿ ಜ್ಯೂಸ್‌ನ ಆತಿಥ್ಯ ಇವೆಲ್ಲವುಗಳೊಂದಿಗೆ ನಿತ್ಯವೂ ತನ್ನನ್ನು ಕ್ರಿಯಾಶೀಲರಾಗಿಸಿಕೊಂಡುದುದು ನಮಗೆಲ್ಲ ಮಾದರಿ, ಉರ್ವಾಸ್ಟೋರ್ ಪೊಲೀಸ್ ಠಾಣೆಯ ಆರಕ್ಷಕರೆಲ್ಲರು ಈ ಅಮ್ಮನ ದೈನಂದಿನ ಭೇಟಿಗೆ ಕಾಯುತ್ತಿದ್ದುದು ಕೂಡ ಸತ್ಯ.
    ಆರು ಮಕ್ಕಳುಳ್ಳ ತುಂಬಿದ ಕುಟುಂಬದಲ್ಲಿ 5ನೆಯವಳಾಗಿ ಮೂರು ಮಂದಿ ಅಣ್ಣಂದಿರ ಪ್ರೀತಿಯ ತಂಗಿಯಾಗಿ, ಅಕ್ಕನೋರ್ವಳ ಅಕ್ಕರೆಯ ತಂಗಿಯಾಗಿ, ಒಬ್ಬ ತಂಗಿಗೆ ಪ್ರೀತಿಯ ಅಕ್ಕನಾಗಿ ಇದ್ದ ಮನೋರಮಾ ಬಾಲ್ಯದಿಂದಲೇ ಇದ್ದ ಬಹಳ ಚುರುಕಿನ ಮಾತ್ರವಲ್ಲ ಅಣ್ಣಂದಿರಿಗೆ ಸಮನಾಗಿ ಗಂಡು ಮಕ್ಕಳಂತೆಯೇ ಬೆಳೆದವರು. ಇದಕ್ಕೆ ಕಾರಣ ಅವರ ತಂದೆ ಪುತ್ತೂರಿನ ಸಂಸ್ಕೃತ ಮಹೋಪಾಧ್ಯಾಯರಾಗಿದ್ದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು. ಹೆಣ್ಣುಮಕ್ಕಳೂ ವಿದ್ಯೆಯನ್ನು ಕಲಿಯಬೇಕೆಂದು ಬಯಸಿದವರು. ಮನೋರಮಾರವರು ಬಾಲ್ಯದಲ್ಲಿ ಸಂಗೀತ ಕಲಿತವರು. ಕಛೇರಿ ನೀಡದಿದ್ದರೂ ಕೊನೆಯವರೆಗೂ ರಾಗ, ತಾಳ, ಜ್ಞಾನವುಳ್ಳವರು. ನಮ್ಮಿಬ್ಬರ ಮಾತುಕತೆಯ ವಿಷಯಗಳೇ ಸಾಹಿತ್ಯ ಮತ್ತು ಸಂಗೀತ.
    ಮನೋರಮಾರವರನ್ನು ಮೆಚ್ಚಿ ಮದುವೆಯಾದವರು ಕನ್ನಡ ಸಾಹಿತ್ಯ ಕ್ಷೇತ್ರದ ನಾಡೋಜನೆಂದೇ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರ ಮಗ ವಕೀಲರಾದ ಮುಳಿಯ ಮಹಾಬಲ ಭಟ್ಟರು. ಸಾಹಿತ್ಯಾಸ್ತಕರು, ಯಕ್ಷಗಾನ ಅರ್ಥಧಾರಿಗಳಾಗಿದ್ದವರು. ಹೀಗೆ ಅನುರೂಪ ದಾಂಪತ್ಯದ ಈ ದಂಪತಿಗೆ ಈರ್ವರು ಪುತ್ರರು. ಎರಡೂ ಕುಟುಂಬಗಳ ಹಿರಿಯರು, ಕಿರಿಯರು ಎಲ್ಲರೂ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳನ್ನು ತಮ್ಮ ನೆಮ್ಮದಿಯ ಬದುಕುಗಳಿಗೆ ಉಸಿರಾಗಿಸಿಕೊಂಡವರು.
    ಈ ಎಲ್ಲ ಹಿನ್ನೆಲೆಯೊಂದಿಗೆ ಪುತ್ತೂರಿನ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಉಸಿರಾಡಿದ ಮನೋರಮಾ 1987ರಲ್ಲಿ ಪುತ್ತೂರಿನಲ್ಲಿ ಮಹಿಳಾ ವಿಚಾರಗೋಷ್ಠಿಯೊಂದನ್ನು ಏರ್ಪಡಿಸಿ ಅಲ್ಲಿಯೇ ತಾತ್ಕಾಲಿಕವಾಗಿ ಲೇಖಕಿಯರ ಸಂಘವೊಂದು ಸ್ಥಾಪನೆಯಾಗುವುದಕ್ಕೆ ಕಾರಣರಾದವರು. ಮುಂದೆ ಅವಿಭಜಿತ ದ.ಕ. ಜಿಲ್ಲೆ, ಕಾಸರಗೋಡು ಸಹಿತವಾದ ವ್ಯಾಪ್ತಿಯ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’ ಸ್ಥಾಪನೆಯಾದಾಗ ಸ್ಥಾಪಕ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಕ.ಲೇ.ವಾ.ಸಂಘಕ್ಕೆ ಸ್ವಂತ ಜಾಗಕ್ಕಾಗಿ ಆಗ ಸಂಘದ ಉಪಾಧ್ಯಕ್ಷೆಯಾಗಿದ್ದ ಮನೋರಮಾ ಮತ್ತು ಅಧ್ಯಕ್ಷರಾಗಿದ್ದ ಸಾರಾ ಅಬೂಬಕ್ಕರ್ ಮತ್ತು ಲೀಲಾವತಿ ಎಸ್. ರಾವ್ ಅವರೊಂದಿಗೆ ತನ್ನ ವಯಸ್ಸನ್ನೂ ಮರೆತೂ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಲುಗಳನ್ನು ಹತ್ತಿ ಇಳಿದು ಸ್ವಂತ ಜಾಗವನ್ನು ಸಾಧ್ಯವಾಗಿಸಿದವರು. ‘ಸಾಹಿತ್ಯ ಸದನ’ದ ಕನಸನ್ನು ನನಸು ಮಾಡಿದವರಲ್ಲಿ ಮುಖ್ಯರು.
    ವಿಧವೆಯಾದ ಹೆಣ್ಣು ತಲೆ ಬೋಳಿಸುವ ಕಾಲವನ್ನು ಬಾಲ್ಯದಲ್ಲಿ ನೋಡಿದ್ದ ಆ ಬಗೆಗೆ ಕಾನೂನಾತ್ಮಕವಾದ ಹೋರಾಟಗಳ ಇತಿಹಾಸ, ಸಾಹಿತ್ಯಗಳನ್ನು ತಿಳಿದ ಮನೋರಮಾ ಆಧುನಿಕ ಕಾಲದ ವಿಧವೆಯ ಅಮಂಗಳೆಯ ರೂಪವನ್ನು ಪ್ರಶ್ನಿಸಿದವರು. ‘ಹೆಣ್ಣಿಗೇಕೆ ಈ ಶಿಕ್ಷೆ’ ಎಂಬ ಅವರ ಲೇಖನ ಪತ್ರಿಕೆಗಳಿಗೆ ಮಾತ್ರವಲ್ಲದೆ ನೇರವಾಗಿ ಮಠಾಧಿಪತಿಗಳಿಗೆ, ಸ್ವಾಮೀಜಿಗಳಿಗೆ, ನ್ಯಾಯಾಧೀಶರುಗಳಿಗೆ, ವಕೀಲರುಗಳಿಗೆ ಕಳುಹಿಸಿ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಹೋರಾಟಗಾರ್ತಿ, ತಾನು ಸ್ವತಃ ಮಂಗಳೆಯಾಗಿಯೇ ಬದುಕಿ ಇತರರಿಗೆ ಮಾದರಿಯಾದುದು ಇಂದು ಇತಿಹಾಸ.
    ಮಂಗಳೂರು ಆಕಾಶವಾಣಿಯಲ್ಲಿ ನಾಟಕ ಕಲಾವಿದೆಯಾಗಿ, ರಂಗ ಕಲಾವಿದೆಯಾಗಿ, ಅಭಿನಯಿಸಿರುವ ಇವರು ಸಿನೆಮಾದಲ್ಲೂ ನಟಿಸಿದ್ದಾರೆ ಎನ್ನುವುದು ಅವರ ಜೀವನೋತ್ಸಾಹಕ್ಕೆ ಸಾಕ್ಷಿ ಕಥೆಗಾರ್ತಿಯಾಗಿ, ಆಶು ಕವಯತ್ರಿಯಾಗಿ, ರೇಡಿಯೋ ನಾಟಕಗಳ ಸಂಕಲನ, ಪುಸ್ತಕ ಪ್ರಕಟನೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಹೆಸರಲ್ಲಿ ‘ಮುಳಿಯ ಪ್ರಶಸ್ತಿ’ಗಳನ್ನು ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ನಿರ್ವಹಿಸಿದ್ದಾರೆ. ಉಡುಪಿಯಲ್ಲಿ ನಡೆದ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಭಾಗವಹಿಸಿ, ಭಾಷಣ ಮಾಡಿದ್ದು ಅವರ ಇಚ್ಛಾಶಕ್ತಿ, ಬದ್ಧತೆಗೆ ಸಾಕ್ಷಿ.
    ಹತ್ತು ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದ ಮನೋರಮಾ ಅವರು ಕಿನ್ನಿಗೋಳಿಯಲ್ಲಿ ಸೆಪ್ಟೆಂಬರ್ 1ರಂದು ನಡೆದ ‘ಅನಂತ ಪ್ರಕಾಶ’ ಪತ್ರಿಕೆಯ 29ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ನಗುನಗುತ್ತಾ ಭಾಷಣ ಮಾಡಿದುದು ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಕೇವಲ ನಾಲ್ಕು ದಿನಗಳ ವಯೋಸಹಜ ಕಾರಣಗಳಿಂದ ಸೆಪ್ಟೆಂಬರ್ 15ರಂದು ನಮ್ಮನ್ನಗಲಿದ ಮನೋರಮಾ ಅವರು ತಮ್ಮ ತುಂಬು ಜೀವನವನ್ನು ಸಾರ್ಥಕಗೊಳಿಸಿಕೊಂಡವರು.
    ಅವರ ಬದುಕಿನ ಭಗವದ್ಗೀತೆಯಂತೆ ಇದ್ದ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ‘ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುತ ನಗಿಸುವುದು ಅತಿಶಯದ ಧರ್ಮ’ ಎಂಬಂತೆ ಬದುಕಿದರು. ‘ನಗುತ ನಲಿಸುವ ವರವಮಿಗೆ ಬೇಡಿಕೊಳ್ಳಿರೋ’ ಎಂದು ನಮಗೆ ಸಾರುತ್ತಾ ಸಾಗಿದರು. ಜಾತಿ, ಧರ್ಮ ಭೇದವಿಲ್ಲದ, ಗಂಡು ಹೆಣ್ಣುಗಳೆಂಬ ಭಿನ್ನತೆ ಇಲ್ಲದ ಅನಕ್ಷರಸ್ಥರಿಂದ ಹಿಡಿದು ವಿದ್ಯಾವಂತರವರೆಗೆ ಹಲವು ಊರುಗಳಲ್ಲಿ ಹಬ್ಬಿರುವ ಅವರ ಮಾನಸ ಮಕ್ಕಳ ಪರವಾಗಿ ಮನೋರಮಾ ಅಮ್ಮನಿಗೆ ಪ್ರೀತಿಯ ಗೌರವದ ನುಡಿನಮನಗಳು.
    ಚಂದ್ರಕಲಾ ನಂದಾವರ

    Share. Facebook Twitter Pinterest LinkedIn Tumblr WhatsApp Email
    Previous Articleಪಾಂಗೋಡು ದೇವಾಲಯದಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ಮತ್ತು ವಿವಿಧ ಪ್ರಶಸ್ತಿ ಪ್ರದಾನ
    Next Article ಕದ್ರಿ ನೃತ್ಯ ವಿದ್ಯಾನಿಲಯದ ಸಭಾಂಗಣದಲ್ಲಿ ‘ಸಂಗೀತೋತ್ಸವ ಮತ್ತು ನೃತ್ಯೋತ್ಸವ’ ಕಾರ್ಯಕ್ರಮ | ಅಕ್ಟೋಬರ್ 10 ಮತ್ತು 11
    roovari

    Add Comment Cancel Reply


    Related Posts

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025

    ಕ.ಸಾ.ಪ.ದಿಂದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ

    June 2, 2025

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.