ಸಿ. ಕೆ. ನಾಗರಾಜ್ ಒಬ್ಬ ಭಾರತೀಯ ಬರಹಗಾರ. ಮಾತ್ರವಲ್ಲದೆ ನಾಟಕ ರಚನಾಕಾರ, ರಂಗ ಕಲಾವಿದ, ನಿರ್ದೇಶಕ, ಪತ್ರಕರ್ತ ಮತ್ತು ಕನ್ನಡದ ಹಾಗೂ ಸಾಮಾಜಿಕ ಮಹಾನ್ ಕಾರ್ಯಕರ್ತರಾಗಿ ಹಲವು ಆಯಾಮಗಳಲ್ಲಿ ದುಡಿದವರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12 ರಂದು ಜನಿಸಿದ ಸಿ. ಕೆ. ನಾಗರಾಜ ರಾವ್ ಇವರು ಕೃಷ್ಣಮೂರ್ತಿ ರಾವ್ ಮತ್ತು ಪುಟ್ಟಮ್ಮ ದಂಪತಿಗಳ ಸುಪುತ್ರ. ತಂದೆ ಕೃಷ್ಣಮೂರ್ತಿ ರಾವ್ ಉದ್ಯೋಗ ನಿಮಿತ್ತ ಆಗಾಗ ವರ್ಗಾವಣೆಗೊಂಡು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಕಾರಣ ಇವರ ವಿದ್ಯಾಭ್ಯಾಸವು ಬೇರೆ ಬೇರೆ ಊರುಗಳಲ್ಲಿ ನಡೆಯಿತು. ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆದರೂ ಚನ್ನಪಟ್ಟಣ ಚಿತ್ರದುರ್ಗ ಮತ್ತು ಬೆಂಗಳೂರುಗಳಲ್ಲಿಯೂ ವಿದ್ಯಾಭ್ಯಾಸ ಮಾಡಬೇಕಾಯಿತು. ಇಂಟರ್ಮಿಡಿಯಟ್ ನಲ್ಲಿ ತೇರ್ಗಡೆ ಹೊಂದಿದರೂ ಬದುಕಿನ ಆರ್ಥಿಕ ಮಿತಿಯಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ‘ಮೈಸೂರು ಪ್ರೀಮಿಯರ್ ಮೆಟಲ್ ಕಾರ್ಖಾನೆ’ಯಲ್ಲಿ ಸಿಬ್ಬಂದಿ ನಿಯಂತ್ರಕರಾಗಿ ಕೆಲಸ ಮಾಡಿ ಮುಂದೆ ಇವರ ಸೋದರ ಮಾವ ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ‘ಸತ್ಯ ಶೋಧನ ಪ್ರಕಟಣಾ ಮಂದಿರ’ದಲ್ಲಿ ಐದು ವರ್ಷ ವ್ಯವಸ್ಥಾಪಕರಾಗಿ ದುಡಿದರು. ಅಲ್ಲಿಂದ ಮುಂದೆ ಇಂಡಿಯನ್ ಮ್ಯೂಚುಯಲ್ ಲೈಫ್ ಎಸೋಸಿಯೇಷನ್ ಸಂಸ್ಥೆಗೆ ಸೇರಿ ಕಾರಣಾಂತರದಿಂದ ಅಲ್ಲಿಂದಲೂ ಹೊರ ಬಂದರು. ಅಷ್ಟರಲ್ಲಿ ಮದುವೆಯಾಗಿ ಸಂಸಾರದ ಜವಾಬ್ದಾರಿ ನಿರ್ವಹಿಸಲೇ ಬೇಕಾದ್ದರಿಂದ ದುಡಿಯುವುದು ಅನಿವಾರ್ಯವಾಯಿತು. ಈಗ ಪತ್ರಿಕೋದ್ಯಮಕ್ಕೆ ಬಂದ ಇವರು ‘ಹರಿತಸ್ ‘ಎಂಬ ಕಾವ್ಯ ನಾಮದಿಂದ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಮತ್ತು ವಿಮರ್ಶೆಗಳನ್ನು ಬರೆಯತೊಡಗಿದರು. ಸ್ವಲ್ಪ ಸಮಯ ‘ವಾಣಿ’ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ‘ಕ್ವಾರ್ಟರ್ಲಿ ಜನರಲ್ ಆಫ್ ಮಿಥಿಕ್ ಸೊಸೈಟಿ’ ಎಂಬ ಪತ್ರಿಕೆಗೆ ಪಾಂಡಿತ್ಯಪೂರ್ಣ ಲೇಖನಗಳನ್ನು ಬರೆಯುತ್ತಿದ್ದದ್ದು ಮಾತ್ರವಲ್ಲದೆ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು.
ನಾಗರಾಜ್ ಇವರಿಗೆ ಬಾಲ್ಯದಿಂದಲೇ ನಾಟಕದ ಬಗ್ಗೆ ಅತೀವ ಆಸಕ್ತಿ ಇತ್ತು. ತಮ್ಮ17ರ ಹರೆಯದಲ್ಲಿ ಕೈಲಾಸಂ ಅವರ ‘ಹೋಂ ರೂಲ್’ ನಾಟಕದಲ್ಲಿ ವಿಧವೆ ಸುಬ್ಬಮ್ಮನ ಪಾತ್ರ ನಿರ್ವಹಿಸಿ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿಕೊಂಡರು. ಇವರು ನಿರ್ವಹಿಸಿದ ಪಾತ್ರ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾಟಕದಲ್ಲಿ ಮಡಿ ಹೆಂಗಸು ವಿಧವೆ ಸುಬ್ಬಮ್ಮನ ಪಾತ್ರಧಾರಿಯ ಕೌಶಲ್ಯವನ್ನು ಕುರಿತು “ಪ್ರೇಕ್ಷಕರಿಗೆ ಆನಂದವನ್ನು ಉಂಟು ಮಾಡಿತು”ಎಂದು ‘ಜನವಾಣಿ ಪತ್ರಿಕೆ’ ಬರೆದು ಮೆಚ್ಚುಗೆ ಸೂಚಿಸಿದರೆ, ‘ಪ್ರಥಮ ಸ್ಥಾನ ಸಲ್ಲಬೇಕು’ ಎಂದು ‘ತಾಯಿನಾಡು’ ಪತ್ರಿಕೆ ಬರೆಯಿತು. ಇವರು 1936ರಲ್ಲಿ ‘ದಿ ಯುನೈಟೆಡ್ ಆರ್ಟಿಸ್ಟ್ಸ್ ‘ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ‘ಆಷಾಢಭೂತಿ’, ‘ಹೋಮ್ ರೂಲ್’, ‘ರಾಜಿಕಬೂಲಿ’, ‘ಜಯಶ್ರೀ’, ‘ವಾಲ್ಮೀಕಿಯ ಭಾಗ್ಯ’, ‘ಗದಾಯುದ್ಧ’, ‘ಶಾಮಣ್ಣನ ಸಾಹಸ’ ಮುಂತಾದ ನಾಟಕಗಳಲ್ಲಿ ತಾವೂ ಅಭಿನಯಿಸಿದ್ದು ಮಾತ್ರವಲ್ಲದೆ ಹಲವಾರು ಕಲಾವಿದರನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟರು. ಇವರ ನಾಟಕಗಳು ಹೊರನಾಡಿನಲ್ಲೂ ಪ್ರದರ್ಶನವನ್ನು ಕಂಡಿವೆ ಮತ್ತು ಆಕಾಶವಾಣಿಯಲ್ಲಿಯೂ ಪ್ರಸಾರಗೊಂಡಿವೆ.
ನಾಗರಾಜ ರಾವ್ ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಮುಂತಾದ ಭಾಷೆಗಳ ಅಸಂಖ್ಯಾತ ನಾಟಕಗಳಲ್ಲಿ ಅಭಿನಯಿಸಿ ಸುಮಾರು 40 ವರ್ಷಗಳ ಕಾಲ ರಂಗಭೂಮಿಗಾಗಿ ಶ್ರಮಿಸಿದರು. ಅವರ ಎತ್ತರವಾದ ನಿಲುವು, ಕಟ್ಟು ಮಸ್ತಾದ ಶರೀರ, ಕಂಚಿನ ಕಂಠ ಇವು ನಾಟಕಕ್ಕೆ ಅಗತ್ಯವಾಗಿ ಬೇಕಿದ್ದವುಗಳು. ಭಾಷೆಯ ಮೇಲೆ ಅವರಿಗಿದ್ದ ಹಿಡಿತ, ನಾಟಕಕ್ಕೆ ಬೇಕಾದ ಧ್ವನಿಯ ಏರಿಳಿತ ಇತ್ಯಾದಿ ಉತ್ಕೃಷ್ಟವಾದ ಗುಣಧರ್ಮ ಇವರಲ್ಲಿದ್ದ ಕಾರಣ ಇವರು ರಂಗಭೂಮಿಗೆ ಬೇಡಿಕೆಯ ನಟರೆನಿಸಿದ್ದರು. ಕಲೆಯ ಬಗೆಗಿನ ಅಪಾರವಾದ ಆಸಕ್ತಿಯೇ ಇವರು ಚಲನಚಿತ್ರ ರಂಗವನ್ನು ಪ್ರವೇಶಿಸುವಂತೆ ಮಾಡಿತು. ‘ದ್ರೌಪದಿಯ ಮಾನ ಸಂರಕ್ಷಣಮು’ ಎಂಬ ಚಲನಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದ ಖ್ಯಾತಿ ಇವರದು. ‘ಸಂತಕಾನ್ಹೋಪಾತ್ರ’ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ‘ಗೌರಿ’ ಮತ್ತು ‘ಅಪರೂಪದ ಅತಿಥಿಗಳು’ ಚಿತ್ರಗಳಿಗೆ ಸಂಭಾಷಣೆ ಬರೆದ ಹೆಗ್ಗಳಿಕೆ ಇವರದು. ಸಿ. ಎನ್. ಕೃಷ್ಣಮಾಚಾರ್ ನಿರ್ದೇಶಸಿದ ‘ದೈವ ಲೀಲೆ’ ಎಂಬ ಚಿತ್ರವನ್ನು ಆರ್. ಬಿ . ಅರಸುಕುಮಾರರೊಂದಿಗೆ ಸೇರಿ ನಿರ್ಮಿಸಿ, ಅದರ ಒಂದು ಪಾತ್ರವನ್ನು ನಿರ್ವಹಿಸಿದ ಕಲಾವಿದ ಇವರು.
ನಾಗರಾಜ್ ರಾವ್ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಬರೆದ ಹಲವಾರು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಇಂಟರ್ಮೀಡಿಯಟ್ ಓದುವಾಗ ಸಣ್ಣ ಕಥಾ ಸ್ಪರ್ಧೆಗೆ ಬರೆದ ‘ಕಾಡು ಮಲ್ಲಿಗೆ’ ಮೊದಲ ಬಹುಮಾನವನ್ನು ಪಡೆದಿದೆ. ‘ಸಂಗಮ’, ‘ದೃಷ್ಟಿಮಥನ’, ‘ಸಾವಿಲ್ಲದವರು’ ಇತ್ಯಾದಿ ಕವನ ಸಂಕಲನಗಳು ಪ್ರಕಟಗೊಂಡಿವೆ. ‘ಶೂದ್ರಮುನಿ’, ‘ಸಂಪನ್ನ ಸಮಾಜ’ ಮತ್ತು ‘ಸಂಕೋಲೆ ಬಸವ’ ಇವು ಪ್ರಕಟಗೊಂಡ ಇವರ ಮೂರು ನಾಟಕಗಳು. ಹಿಂದಿ ಭಾಷೆಯಲ್ಲಿ ‘ಏಕಲವ್ಯ’ ಎಂಬ ನಾಟಕವನ್ನು ಬರೆದಿದ್ದಾರೆ. ಶರಶ್ಚಂದ್ರರ ‘ಪ್ರೇಮಯೋಗಿನಿ’, ‘ದರ್ಪಚೂರ್ಣ’, ‘ಅರಕ್ಷಣೀಯ’, ‘ಕಾಶೀನಾಥ’, ವಿಶ್ವೇಶ್ವರಿ ಮತ್ತು ಮಂತ್ರದೀಕ್ಷೆ ಎಂಬ ಆರು
ಕಾದಂಬರಿಗಳನ್ನು ಹಿಂದಿಭಾಷೆಯಿಂದ ಅನುವಾದಿಸಿದ್ದಾರೆ . ಭಕ್ತಿ ವಿಜಯದ ಸಣ್ಣ ಕಥೆಗಳನ್ನಾಧರಿಸಿದ ‘ನಂಬಿದ ಜೀವ’ ಮತ್ತು ಮಣಿಪುರದ ಇತಿಹಾಸದ ‘ಕುರಂಗನಯನಿ’ಇವು ಇವರು ರಚಿಸಿದ ಇತರ ಕಾದಂಬರಿಗಳು. ಜೈಮಿನಿ ಭಾರತವನ್ನು ಬರೆದಿರುವ ‘ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ’ ಇವರ ಮತ್ತೊಂದು ಪಾಂಡಿತ್ಯ ಪೂರ್ಣ ಸಂಶೋಧನಾ ಗ್ರಂಥ. ಈ ಗ್ರಂಥದಲ್ಲಿ ಲಕ್ಷ್ಮಿಶನ ಊರು ಸುರಪುರದ ಬಳಿಯ ದೇವಪುರ ಅಲ್ಲ, ಕಡೂರು ತಾಲೂಕಿನ ದೇವನೂರು ಎಂಬುದನ್ನು ಖಚಿತಪಡಿಸಲು ಹಲವಾರು ಸಾಕ್ಷಾಧಾರಗಳನ್ನು ಒದಗಿಸಿದ್ದಾರೆ. ‘ಪಟ್ಟಮಹಾದೇವಿ ಶಾಂತಲಾ ದೇವಿ’ ಇದು ಇವರ ಬೃಹತ್ ಸ್ವತಂತ್ರ ಕಾದಂಬರಿ. 150 ವರ್ಷಗಳ ಇತಿಹಾಸವನ್ನು ಒಳಗೊಂಡ ಹೊಯ್ಸಳ ಸಾಮ್ರಾಜ್ಯದ ಕಥೆ ಇದಾಗಿದೆ. ಶಾಂತಲೆಯ 40 ವರ್ಷಗಳ ಬದುಕಿನ ಪೂರ್ಣ ಚಿತ್ರಣ ಕೊಡುವ ಸುಮಾರು 175 ಅಧ್ಯಾಯಗಳಿರುವ 1,250 ಪುಟಗಳನ್ನು ಹೊಂದಿರುವ ಒಂದು ಮೇರು ಕೃತಿ ಇದಾಗಿದೆ. ಶಾಂತಲಾ ಕಾದಂಬರಿಯ ಮುಂದುವರೆದ ಭಾಗವಾದ ‘ವೀರಗಂಗ ವಿಷ್ಣುವರ್ಧನ’ ಮತ್ತು ಹೊಯ್ಸಳ ಸಾಮ್ರಾಜ್ಯದ ಸಂಪೂರ್ಣ ಕಥೆಯನ್ನು ಕಟ್ಟಿಕೊಡುವ ‘ದಾಯಾದ ದಾವಾನಲ’, ‘ಕುರಂಗನಯನಿ’, ‘ಶ್ರೀ ಪೃಥ್ವೀವಲ್ಲಭ’ ಕಾದಂಬರಿಗಳು ಓದುಗರಿಂದ ಅತ್ಯಂತ ಮೆಚ್ಚುಗೆ ಪಡೆದವುಗಳಾಗಿವೆ. ‘ನನ್ನ ನೆಚ್ಚಿನ ನಾಡೆ’, ‘ತಾತ ಮಾವನ ಕನಸು’, ‘ಕಾಂಬೋಡಿಯ-ಲಾವೋಸ್’, ‘ನಾಯಿ ಕೊಡೆ’, ‘ಏಕಲವ್ಯ ದರ್ಶನ’ ಮುಂತಾದವು ಸಿ. ಕೆ. ನಾಗರಾಜ್ ರಾವ್ ಇವರ ಕೃತಿಗಳು.
ನಾಟಕ, ಕಥೆ, ಕಾದಂಬರಿ ಹೇಗೆ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡಿದ ನಾಗರಾಜರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಮಿಥಿಕ್ ಸೊಸೈಟಿಯ ಕಾರ್ಯದರ್ಶಿಯಾಗಿ, ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನ ಸ್ಥಾಪಕ ಸಹಾಯಕ ಪ್ರಾಚಾರ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಹೀಗೆ ಬಹುಮುಖ ಆಯಾಮದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
‘ಪಟ್ಟಮಹಾದೇವಿ ಶಾಂತಲಾದೇವಿ’ ಎಂಬ ಐತಿಹಾಸಿಕ ಕಾದಂಬರಿಗೆ ಜ್ಞಾನಪೀಠ ಪ್ರತಿಷ್ಠಾನದ ‘ಮೂರ್ತಿ ದೇವಿ ಸಾಹಿತ್ಯ ಪುರಸ್ಕಾರ’ ಲಭಿಸಿದೆ. ಭಾರತೀಯ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಗ್ರಂಥಕ್ಕೆ ಪ್ರಶಸ್ತಿ ನೀಡುವ ಉದ್ದೇಶದಿಂದ ಭಾರತೀಯ ಜ್ಞಾನಪೀಠವು 1983 ರಿಂದ ಪ್ರಾರಂಭಿಸಿರುವ ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟವರು ನಾಗರಾಜ ರಾಯರು.
‘ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ’ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಪಟ್ಟ ಮಹಾ ದೇವಿ ಶಾಂತಲಾ ದೇವಿ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಅತ್ಯುತ್ತಮ ಸೃಜನಶೀಲ ಸಾಹಿತ್ಯ ಕೃತಿ ಪ್ರಶಸ್ತಿ’ಯನ್ನು ಮೊದಲು ಪಡೆದವರು ನಾಗರಾಜರಾಯರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಿ. ಕೆ. ನಾಗರಾಜ್ ಅವರನ್ನು ಅರಸಿ ಬಂದಿದ್ದವು. ಈ ಎಲ್ಲಾ ಪ್ರಶಸ್ತಿ ಪುರಸ್ಕಾರ ಗೌರವಗಳು ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ಮಾಡಿದ ಸಾಧನೆಗೆ ಸಂದವುಗಳು.
ಒಬ್ಬ ಸೃಜನಶೀಲ ಶ್ರೇಷ್ಠ ಬರಹಗಾರ ಸಿ. ಕೆ. ನಾಗರಾಜರಾಯರು ತಮ್ಮ 82ನೆಯ ವಯಸ್ಸಿನಲ್ಲಿ 1998ರ ಏಪ್ರಿಲ್ 10ರಂದು ಇಹವನ್ನು ತ್ಯಜಿಸಿದರು.
ಅದಮ್ಯ ಚೇತನಕ್ಕೆ ಅಂತರಾಳದ ನಮನಗಳು
-ಅಕ್ಷರೀ