ಡಾ. ಎ. ಎನ್. ಮೂರ್ತಿರಾವ್ ಎಂದೇ ಪ್ರಸಿದ್ಧರಾದವರು ಕನ್ನಡದ ಖ್ಯಾತ ವಿಮರ್ಶಕ, ಸಾಹಿತಿ ಹಾಗೂ ಶ್ರೇಷ್ಠ ಪ್ರಬಂಧಕಾರ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾಯರು. 103 ವರ್ಷಗಳ ತುಂಬ ಜೀವನ ನಡೆಸಿ ಶತಾಯುಷಿ ಎಂದು ಕರೆಸಿಕೊಂಡವರು.
16 ಜೂನ್ 1900ರಲ್ಲಿ ಎಂ. ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ದಿನಗಳು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆಯಿತು. 1913ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ. ಎ. ಮತ್ತು ಎಂ.ಎ. ಪದವಿಯನ್ನು ಪಡೆದರು.
1924ರಲ್ಲಿ ಮಹಾರಾಜ ಕಾಲೇಜಿನ ಟ್ಯೂಟರ್ ಆಗಿ ಸೇರುವ ಮೂಲಕ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಅಲ್ಲಿಂದ ಮುಂದೆ ಶಿವಮೊಗ್ಗದ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1943ರಲ್ಲಿ ಆಕಾಶವಾಣಿಯ ನಿರ್ದೇಶಕರಾದರು. ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿ ಅನನ್ಯ ಸೇವೆ ಸಲ್ಲಿಸಿದ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ದುಡಿದು 1955ರಲ್ಲಿ ನಿವೃತ್ತರಾದರು. 1955ರಲ್ಲಿ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದುದು ಮಾತ್ರವಲ್ಲದೆ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಖ್ಯಾತಿ ಇವರದು.
ಅವರ ಪಾಂಡಿತ್ಯ, ವೇಗದ ನಡಿಗೆ, ಶ್ರದ್ಧೆ, ಸಾಹಿತ್ಯಾಸಕ್ತಿ, ಜೀವನೋತ್ಸಾಹ ನೂರು ವರ್ಷಕ್ಕೆ ಪಾದಾರ್ಪಣೆ ಮಾಡಿದರೂ ಯಾವುದೇ ವ್ಯತ್ಯಾಸಗಳು ಆಗಲಿಲ್ಲ. ‘ಆಷಾಢಭೂತಿ’ ನಾಟಕ, ‘ಹಗಲು ಕನಸುಗಳು’ ಮತ್ತು ‘ಅಲೆಯುವ ಮನ’ ಹಾಗೂ ‘ಷೇಕ್ಸ್ ಪಿಯರ್’ ಪುಸ್ತಕ ಇವರ ಪಾಂಡಿತ್ಯಕ್ಕೆ ಸಾಕ್ಷಿಗಳಾಗಿವೆ.
ಸಾಕಷ್ಟು ವಿದೇಶ ಪ್ರವಾಸ ಮಾಡಿ ತಮ್ಮ ಅನುಭವದಿಂದ ಬರೆದ ಕೃತಿ ‘ಅಪರವಯಸ್ಕನ ಅಮೆರಿಕ ಯಾತ್ರೆ’ ಮತ್ತು ‘ಸಂಜೆಗಣ್ಣಿನ ಹಿನ್ನೋಟ’. ಈ ಕೃತಿಯ ರಚನೆಗೆ ಇವರು ‘ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ’, ‘ಚಿತ್ರಗಳು ಮತ್ತು ಪತ್ರಗಳು’ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ’ ಗಳಿಗೆ ಪಾತ್ರರಾಗಿದ್ದಾರೆ.
1977ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ‘ಡಾಕ್ಟರೇಟ್’ ದೊರೆಯಿತು. ಇವರ ಸಮಗ್ರ ಸಾಹಿತ್ಯಕ್ಕೆ ‘ಮಾಸ್ತಿ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ನಾಡೋಜ’ ಪ್ರಶಸ್ತಿ , ಗೌರವ ‘ಡಿ. ಲೀಟ್’ ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ’ ಪಂಪ ಪ್ರಶಸ್ತಿ’, ಇತ್ಯಾದಿ ಇವರ ಸಾಹಿತ್ಯ ಸೇವೆಗೆ ಸಂದ ಗೌರವಗಳು.
ಇವರ ರಚನೆಯ ಬರಹಗಳಲ್ಲಿ ‘ಹಗಲು ಕನಸುಗಳು’, ‘ಅಲೆಯುವ ಮನ’, ‘ಬಿ. ಎಂ. ಶ್ರೀಕಂಠಯ್ಯ’ (ವಿಮರ್ಶಾತ್ಮಕ ಜೀವನ ಚರಿತ್ರೆ). ‘ಪೂರ್ವಸೂರಿಗಳೊಡನೆ’, ‘ಶೇಕ್ಸ್ ಪಿಯರ್’, ‘ಆಶಾಢಭೂತಿ’ ಹಾಗೂ ‘ಚಂಡಮಾರುತ’ ನಾಟಕಗಳು. ‘ಮಾಸ್ತಿಯವರ ಕಥೆಗಳು’ ಇದೊಂದು ವಿಮರ್ಶಾ ಕೃತಿಯಾಗಿದೆ. ‘ಆಶಾಢಭೂತಿ’ಯನ್ನು ಆಧರಿಸಿ ಎಮ್. ವಿ. ಕೃಷ್ಣಸ್ವಾಮಿಯವರು ‘ಸುಬ್ಬಾಶಾಸ್ತ್ರೀ’ ಎಂಬ ಸಿನಿಮಾವನ್ನೂ ನಿರ್ಮಿಸಿದ್ದಾರೆ.
‘ಸಾಕ್ರೆಟಿಸನ ಕೊನೆಯ ದಿನಗಳು’, ‘ಹವಳ ದ್ವೀಪ’, ಇವರ ಅನುವಾದಿತ ಕೃತಿಗಳು. ‘ಯೋಧನ ಪುನರಾಗಮನ’, ‘ಪಾಶ್ಚಾತ್ಯ ಸಣ್ಣ ಕಥೆಗಳು’, ‘ಅಮೆರಿಕನ್ ಸಾಹಿತ್ಯ ಚರಿತ್ರೆ’, ‘ಇಂಡಿಯಾ ಇಂದು ಮತ್ತು ನಾಳೆ’, ‘ಚಂಡಮಾರುತ’, ‘ಬೂರ್ಜಾ ಆಗಿದ್ದವನು ಮಹನೀಯನಾದದ್ದು’, ಇವೆಲ್ಲವೂ ಇವರ ಅನುವಾದಿತ ಕೃತಿಗಳು.
‘ಹಗಲುಗನಸುಗಳು’, ‘ಮಿನುಗು ಮಿಂಚು’, ‘ಅಲೆಯುವ ಮನ’, ‘ಜನತಾ ಜನಾರ್ದನ’, ‘ಸಮಗ್ರ ಲಲಿತ ಪ್ರಬಂಧಗಳು’ ಇವು ಇವರ ಲೇಖನಿಯಿಂದ ಬಂದ ಲಲಿತ ಪ್ರಬಂಧಗಳು.
ಡಾ. ರಾಧಾಕೃಷ್ಣನ್ ಅವರ ಶಿಷ್ಯರಾದ ಎ. ಎನ್. ಮೂರ್ತಿ ರಾವ್ ಇವರು ಇಂಗ್ಲಿಷ್, ಕನ್ನಡ, ಭಾಷೆಗಳಲ್ಲಿ ಪರಿಣತರಾಗಿದ್ದರು. ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಬಹಳಷ್ಟು ಪಾಂಡಿತ್ಯವಿರುವ ಇವರು ಫ್ರೆಂಚ್ ಭಾಷೆಯನ್ನೂ ತಿಳಿದಿದ್ದರು. ಇಂಗ್ಲಿಷ್ ನಲ್ಲಿ ಹಲವಾರು ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ‘ದಿ ರಿಟರ್ನ್ ಟು ದಿ ಸಾಯಿಲ್’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ. ವಿಶ್ವೇಶ್ವರಯ್ಯ, ಬಿ. ಎಂ. ಶ್ರೀಕಂಠಯ್ಯ ಅವರನ್ನು ಕುರಿತು ಇಂಗ್ಲಿಷ್ನಲ್ಲಿ ಸ್ವತಂತ್ರವಾಗಿ ಬರೆದಿರುವ ಹೆಗ್ಗಳಿಕೆ ಇವರದು.
1984ರಲ್ಲಿ ಕೈವಾರದಲ್ಲಿ ನಡೆದ ಅಖಿಲ ಭಾರತ 56ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದಾರೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಪಂಪ ಪ್ರಶಸ್ತಿ’ ‘ಮಾಸ್ತಿ ಪ್ರಶಸ್ತಿ’, ಭಾರತೀಯ ವಿದ್ಯಾಭವನದ ಫೆಲ್ಲೋಶಿಪ್ ಇತ್ಯಾದಿ ಅನೇಕ ಪ್ರಶಸ್ತಿ, ಗೌರವ ಹಾಗೂ ಪುರಸ್ಕಾರಗಳು ಇವರ ಜೀವಿತಾವಧಿಯಲ್ಲಿ ಇವರು ಮಾಡಿದ ಸಾಹಿತ್ಯ ಸೇವೆಗೆ ಸಂದ ಗೌರವ.
ಎ. ಎನ್. ಮೂರ್ತಿರಾವ್ ಒಬ್ಬ ಅಪೂರ್ವ ಸಾಹಿತ್ಯ ಸಾಧಕ. 103 ವರ್ಷಗಳ ತುಂಬು ಜೀವನದಲ್ಲಿ ಅನನ್ಯ ಸಾಹಿತ್ಯ ಸೇವೆಯನ್ನು ಮಾಡಿ 23 ಆಗಸ್ಟ್ 2003 ರಲ್ಲಿ ಪರಲೋಕ ಸೇರಿದರು.
ದಿವ್ಯ ಚೇತನಕ್ಕೆ ಅನಂತ ಪ್ರಣಾಮ
– ಅಕ್ಷರೀ