ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧಕರಿಗೆ ಯಶಸ್ಸು ಸಾಧ್ಯ ಎನ್ನುತ್ತಾರೆ ಅನುಭವಿಗಳು. ಮುನ್ನುಗ್ಗಿ ಮುಂದೆ ಮುಂದೆ ನಡೆಯುವ ಛಲ ಸಾಧಕರಿಗೂ ಇರಬೇಕು. ಇಂತಹ ಒಬ್ಬ ಛಲಗಾರ ಡಾ. ಬಿ. ದೇವೇಂದ್ರಪ್ಪನವರು. ಮುಂದೆ ದಾರಿ ತೋರುವ ಗುರು ಭೌತಿಕವಾಗಿ ಇಲ್ಲದಿದ್ದರೂ, ಗುರು ದ್ರೋಣರ ಮೂರ್ತಿಯನ್ನು ಮುಂದಿಟ್ಟುಕೊಂಡು ಧನುರ್ವಿದ್ಯೆ ಅಭ್ಯಾಸ ಮಾಡಿ ಕರಗತಗೊಳಿಸಿಕೊಂಡಾತ ಏಕಲವ್ಯ. ಇದೇ ರೀತಿಯ ಸಾಧನೆ ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ್ದ ಕಲಾವಿದ ದೇವೇಂದ್ರಪ್ಪನವರದು.
1899 ಜೂನ್ 3ರಂದು ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಜನಿಸಿದ ಮಹಾನ್ ಕಲಾವಿದ ಇವರು. ತಂದೆ ಸಂಗೀತ ಮತ್ತು ಭರತನಾಟ್ಯ ಪ್ರವೀಣರಾದ ಬಿ.ಎಸ್. ರಾಮಯ್ಯನವರು, ತಾಯಿ ತುಳಸಮ್ಮ. ತಂದೆಯಿಂದಲೇ ಸಂಗೀತ ಶಿಕ್ಷಣವನ್ನು ಪಡೆದ ಇವರು ಶಾಲಾ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಸಂಗೀತದಲ್ಲಿ ಆಸಕ್ತಿ, ಶ್ರದ್ಧೆ ಇದ್ದ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿರುವ ಸಿತಾರ್, ಗೋಟುವಾದ್ಯ, ಪಿಟೀಲು, ಜಲತರಂಗ ಮುಂತಾದ ಸಂಗೀತ ಪರಿಕರಗಳನ್ನು ತಾವೇ ಸ್ವತಃ ಅಭ್ಯಾಸಮಾಡಿ ಪ್ರವೀಣರಾದರು.
ಖ್ಯಾತ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪನವರ ಸಂಗೀತವನ್ನು ಗ್ರಾಮಫೋನ್ ಗಳಲ್ಲಿ ಆಲಿಸಿ ಸಂಗೀತ ಕಲಿಯಬೇಕೆಂಬ ಉದ್ದೇಶದಿಂದ ಮೈಸೂರಿಗೆ ಬಂದರು. ಆದರೆ ಕಾರಣಾಂತರಗಳಿಂದ ಅವರಲ್ಲಿ ಸಂಗೀತ ಕಲಿಯಲು ಅವಕಾಶ ಸಿಗಲಿಲ್ಲ. ತನ್ನ ಕನಸನ್ನು ನನಸು ಮಾಡುವುದಕ್ಕಾಗಿ ಬಿಡಾರಂ ಕೃಷ್ಣಪ್ಪನವರ ಭಾವಚಿತ್ರವನ್ನು ಪಡೆದು, ಗುರುವಿನ ಸ್ಥಾನದಲ್ಲಿಟ್ಟು ಸಂಗೀತ ಸಾಧನೆ ಮಾಡತೊಡಗಿದರು. ಮುಂದೆ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಜಲತರಂಗ ಕಾರ್ಯಕ್ರಮ ನೀಡಲು ಅವಕಾಶ ಒದಗಿ ಬಂದ ಸಂದರ್ಭದಲ್ಲಿ “ಇವರು ಯಾರ ಶಿಷ್ಯ?”ಎಂಬ ಪ್ರಶ್ನೆ ಬಂದಾಗ, ಗುರು ಬಿಡಾರಂ ಕೃಷ್ಣಪ್ಪನವರ ಹೆಸರನ್ನೇ ಹೇಳಿದರು. ಇದನ್ನು ಕೇಳಿದ ಗುರುಗಳು ದೇವೇಂದ್ರಪ್ಪನವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮ ಸಂಗೀತ ಜ್ಞಾನವನ್ನು ನಿಸ್ವಾರ್ಥದಿಂದ ಧಾರೆ ಎರೆದರು. ಜಯಚಾಮರಾಜ ಒಡೆಯರ್ ಇವರ ಆಸ್ಥಾನದಲ್ಲಿ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರಾಗಿ, ‘ಮೈಸೂರಿನ ಅರಮನೆ ವಿದ್ವಾನ್’ ಎಂದೇ ಪ್ರಸಿದ್ಧರಾದರು. ನವರಾತ್ರಿ ಸಮಯದಲ್ಲಿ ಅರಮನೆಯಲ್ಲಿ ಯಶಸ್ವೀ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತಿ ದೇವೇಂದ್ರಪ್ಪನವರದು. 1953ರಲ್ಲಿ ಸಾಂಸ್ಕೃತಿಕ ನಿಯೋಗದೊಂದಿಗೆ ಚೀನಾ ಪ್ರವಾಸ ಮಾಡುವ ಅವಕಾಶ ಅವರಿಗೆ ಒದಗಿ ಬಂದಿತು. ಹೀಗೆ ಹೋದಲ್ಲೆಲ್ಲ ತಮ್ಮ ಮಧುರ ಕಂಠದ ಗಾಯನದಿಂದ ಕರ್ನಾಟಕಕ್ಕೆ ಕೀರ್ತಿ ತಂದರು. ಇವರ ಸಂಗೀತವನ್ನು ಆಲಿಸಿದ ಖ್ಯಾತ ಸಾಹಿತಿ ಅ. ನ. ಕೃ. ಇವರ ಗಾಯನ ಶೈಲಿಯನ್ನು ‘ಸಿಂಹ ವೈಖರಿ’ಎಂದರೆ, ಪ್ರೊಫೆಸರ್ ಸಾಂಬ ಮೂರ್ತಿಯವರು ‘ಗಂಡು ಹಾಡುಗಾರಿಕೆ’ ಎಂದರು. ತಮ್ಮ ಅನನ್ಯ ಗಾಯನ ಶೈಲಿಯಿಂದ ಇವರು ಶ್ರೇಷ್ಠ ಗಾಯಕರ, ಸಾಹಿತಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ದೇವೇಂದ್ರಪ್ಪನವರ ಸ್ಮರಣಾರ್ಥ ಮೈಸೂರಿನಲ್ಲಿ ಧನ್ವಂತ್ರಿ ರಸ್ತೆ ಹಾಗೂ ದಿವಾನ್ಸ್ ರಸ್ತೆ ಕೊಡುವ ವೃತ್ತಕ್ಕೆ ಇವರ ಹೆಸರನ್ನು ಇಡಲಾಗಿದೆ.
‘ಅರಿವೇ ಗುರು’ ಎಂಬಂತೆ ತಮ್ಮ ಆಸಕ್ತಿ ಮತ್ತು ಸಂಗೀತದ ಮೇಲಿರುವ ಪ್ರೀತಿಯಿಂದ ತಾವೇ ಸ್ವತಃ ಸಂಗೀತ ಸಾಧನೆ ಮಾಡಿದ ದೇವೇಂದ್ರಪ್ಪನವರಿಗೆ ಸಂದ ಗೌರವ, ಪ್ರಶಸ್ತಿ, ಪುರಸ್ಕಾರಗಳು ಹಲವಾರು. ಮಹಾರಾಜರ ವರ್ಧಂತಿ ಸಂದರ್ಭದಲ್ಲಿ ‘ಗಾನ ವಿಶಾರದ’, ಮದರಾಸಿನ ಸಂಗೀತ ಸಭೆಯಲ್ಲಿ ‘ಗಾಯಕ ರತ್ನ’, ಹೈದರಾಬಾದಿನಲ್ಲಿ ‘ರಾಗಲಾಪನ ಚತುರ’, ಬಳ್ಳಾರಿಯಲ್ಲಿ ‘ಗಾನ ಕೇಸರಿ’, ರಂಭಾಪುರಿ ಜಗದ್ಗುರುಗಳಿಂದ ‘ಗಾಯಕ ಸಾರ್ವಭೌಮ’ ಇತ್ಯಾದಿ ಬಿರುದು – ಗೌರವಗಳು ಮಾತ್ರವಲ್ಲದೆ, ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’, ‘ರಾಜ್ಯ ಸರ್ಕಾರದ ಪ್ರಶಸ್ತಿ’, ‘ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ‘ಡಾಕ್ಟರೇಟ್ ಪದವಿ’ ಮುಂತಾದ ಹಲವು ಗೌರವಗಳು ಇವರಿಗೆ ದೊರೆತಿವೆ.
ಕರ್ನಾಟಕದ ಶಾಸ್ತ್ರೀಯ ಸಂಗೀತ ಲೋಕದ ಶ್ರೇಷ್ಠರ ಪ್ರಮುಖ ಸಾಲಿನಲ್ಲಿ ಇರುವ ಮಹಾನ್ ಸಂಗೀತ ಸಾಧಕ ಡಾ. ಬಿ. ದೇವೇಂದ್ರಪ್ಪನವರು 1986 ಜೂನ್ 6ನೆಯ ತಾರೀಖಿನಂದು ದೈವಾಧೀನರಾದರು.
ಅಗಲಿದ ಆತ್ಮಕ್ಕೆ ಹೃದಯಾಂತರಾಳದ ನಮನ.
– ಅಕ್ಷರೀ