ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸಿರುವ ಡಾ. ವಿಜಯಶ್ರೀ ಸಬರದ ಇವರು 1957 ಫೆಬ್ರವರಿ 01ರಂದು ಬೀದರ್ ನಲ್ಲಿ ಗುಣವಂತ ರಾವ್ ಪಾಟೀಲ್ ಮತ್ತು ಸಂಗಮ್ಮನವರ ಪುತ್ರಿಯಾಗಿ ಜನಿಸಿದರು.
ಕನ್ನಡದ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಮಹಿಳಾ ಶೋಷಣೆಯ ಬಗ್ಗೆ ತಮ್ಮ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯಾಭಿಮಾನಿಗಳ ಚಿತ್ತದಲ್ಲಿ ಹೊಸದೊಂದು ಆಯಾಮ ಸೃಷ್ಟಿಸಿದ್ದಾರೆ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್ ನಲ್ಲಿ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಅನುಪಮಾ ನಿರಂಜನರ ಕಾದಂಬರಿಗಳು – ಒಂದು ಅಧ್ಯಯನ’ ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದರು.
ಬೀದರಿನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಇವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಕಾರ್ಯ ಬಾಹುಳ್ಯದ ನಡುವೆ ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಸದಸ್ಯರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಕೌನ್ಸಿಲ್ ಸದಸ್ಯರಾಗಿ, ಗುಲಬರ್ಗಾ ಹಾಗೂ ಇತರ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಯ ಚಯರ್ ಮೆನ್ ಆಗಿ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಆಗಿ ವಿದ್ಯಾ ವಿಷಯಕ ಪರಿಷತ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಎಂಟು ವಿದ್ಯಾರ್ಥಿಗಳು ಎಂ.ಪಿಲ್ ಹಾಗೂ ಇಬ್ಬರು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.
ಶ್ರೀಮತಿ ವಿಜಯಶ್ರೀಯವರು ಬರೆದ ಕವನ ಸಂಕಲನಗಳು – ‘ಜ್ವಲಂತ’, ‘ಲಕ್ಷ್ಮಣರೇಖೆ ದಾಟಿದವರು’, ‘ಮುಗಿಲಮಲ್ಲಿಗೆ’. ಹಾಗೆಯೇ ನಾಟಕಗಳು – ‘ಉರಿಲಿಂಗ’, ‘ಹೂವಿನ ತೇರನೇರಿ ಹೂವಾದವರು’, ‘ಎರಡು ನಾಟಕಗಳು’. ‘ಸಾಹಿತ್ಯ ಮತ್ತು ಮಹಿಳೆ’, ‘ತ್ರಿವೇಣಿಯವರ ಕಾದಂಬರಿಗಳು’, ‘ಅಕ್ಕಮಹಾದೇವಿ’, ‘ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ’, ‘ವಚನವಾಹಿನಿ’, ‘ಮೋಳಿಗೆಯ ಮಾರಯ್ಯ’, ‘ಶಿವಶರಣೆಯರು ಪ್ರಸ್ತುತ ಸಂದರ್ಭ’, ‘ಜನಪದ ಮತ್ತು ಮಹಿಳೆ’ ಎಂಬ ವಿಮರ್ಶಾ ಕೃತಿಗಳು. ಸಂಪಾದಿತ ಕೃತಿಗಳು – ‘ಗುರು ಶಿಷ್ಯರ ತತ್ವಪದಗಳು’, ‘ಅಕ್ಕ’, ‘ವಿಚಾರ ಸಾಹಿತ್ಯ’, ‘ವಿಮರ್ಶಾ ಲೇಖನಗಳು’, ‘ಮಹಿಳೆ ಶೋಷಣೆ ಸವಾಲುಗಳು’, ‘ಅಕ್ಕನ ಅನನ್ಯತೆ’, ‘ಹುಸನಾಸಾಬನ ತತ್ತ್ವ ಪದಗಳು’, ‘ವೈಚಾರಿಕ ಲೇಖನಗಳ ಸಂಗ್ರಹ’, ‘ಆಧುನಿಕ ಕವಿತಗಳು’.
ಇವರ ‘ಸಾಹಿತ್ಯ ಸಂವಹನ’ ಕೃತಿಗೆ ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ. ‘ಜನಪದ ಮತ್ತು ಮಹಿಳೆ’ ವಿಮರ್ಶಾ ಗ್ರಂಥಕ್ಕೆ ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ, ‘ಎರಡು ನಾಟಕಗಳು’ – ನಾಟಕಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಸಿಂಧೂರ ದತ್ತಿ ಪ್ರಶಸ್ತಿ’ ಮತ್ತು ‘ಎಂ.ಟಿ. ರಂಗನಾಥನ್ ಸ್ಮರಣಾರ್ಥಕ’ ನಾಟಕ ಪ್ರಶಸ್ತಿ. ‘ಮುಗಿಲ ಮಲ್ಲಿಗೆ’ – ಕವನ ಸಂಕಲನಕ್ಕೆ ‘ನೂರೊಂದೇಶ್ವರ ಪ್ರಶಸ್ತಿ’ ದೊರೆತಿದೆ.
ಶ್ರೀಮತಿ ವಿಜಯಶ್ರೀ ಶಿವಶರಣರ ಕಾಲದಿಂದ ಇಂದಿನವರೆಗೆ ಶ್ರೀ ಮೌಲ್ಯದ ಕುರಿತು ತಮ್ಮ ಲೇಖನಗಳಲ್ಲಿ ಜಾಗೃತಿ ಮೂಡುವಂತೆ ಮಾಡಿದ್ದು, ಗಮನಾರ್ಹವಾಗಿದೆ. ಇನ್ನೂ ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸರ್ವೋತ್ತಮ ಸಾಧನೆ ಮಾಡಲೆಂಬುದೇ ಅವರ ಜನ್ಮದಿನದಂದು ನನ್ನ ಶುಭ ಹಾರೈಕೆಗಳು.
ಸುಮನಾ ಜಿ. ಗಾಂವ್ಕರ್,
ನಿವೃತ್ತ ಕನ್ನಡ ಉಪನ್ಯಾಸಕರು