ಕನ್ನಡ, ಸಂಸ್ಕೃತ, ಹಿಂದಿ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಸಾಹಿತಿ ಹಾಗೂ ಹಿರಿಯ ವಿದ್ವಾಂಸರಾದ ಹೀ. ಚಿ. ಚಿಶಾಂತವೀರಯ್ಯನವರು ಸಾಹಿತ್ಯ ಲೋಕಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಚಿಕ್ಕಯ್ಯ, ತಾಯಿ ಚಿಕ್ಕಮ್ಮ. ತಿಪಟೂರು ತಾಲೂಕಿನ ಹೀಚನೂರಿನ ದೇವರಹಟ್ಟಿ ಮನೆತನದಲ್ಲಿ 1934 ಜೂನ್ 11ರಂದು ಇವರ ಜನನವಾಯಿತು. ಹೀಚನೂರು ಮತ್ತು ತಿಪಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ನಂತರ ದಾವಣಗೆರೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿದರು. ಬಿ. ಎ. (ಆನರ್ಸ್) ಎಂ. ಎ. ಮತ್ತು ಬಿ. ಎಡ್. ಪದವಿ ಪಡೆದು, ತಿಪಟೂರು ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ ಇವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ “ಕನ್ನಡ ನಿಘಂಟು” ರಚನಾ ಕಾರ್ಯದಲ್ಲಿ ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ ಕೊನೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದುದು ವಿಷೇಶ. ಆ ಕಾಲದಲ್ಲಿದ್ದ ಬಹಳಷ್ಟು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ನೂರಾರು ಲೇಖನಗಳು ಪ್ರಕಟಗೊಂಡಿವೆ. ಕನ್ನಡ ನಾಡು ನುಡಿಯ ಬಗ್ಗೆ ಎಲ್ಲರನ್ನು ಜಾಗೃತಗೊಳಿಸಲು ಎಲ್ಲೆಡೆ ಸಂಚಾರ ಕೈಗೊಂಡದ್ದು ಭಾಷೆಯ ಬಗ್ಗೆ ಇವರಿಗಿದ್ದ ಪ್ರೀತಿಯ ಸಂಕೇತವಾಗಿದೆ. ಅನೇಕ ಪ್ರತಿಷ್ಠಿತ ವೇದಿಕೆಗಳ ಧಾರ್ಮಿಕ ಸಭೆಯಲ್ಲಿ, ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಘೋಷ್ಠಿಗಳಲ್ಲಿ, ಸಮ್ಮೇಳನ – ಸಮಾವೇಶಗಳಲ್ಲಿ ಸಂಶೋಧನಾತ್ಮಕ ಉಪನ್ಯಾಸ ಪ್ರಬಂಧಗಳನ್ನು ಮಂಡಿಸಿದ ಖ್ಯಾತಿ ಇವರದು. 60ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ ಶಾಂತವೀರಯ್ಯನವರು ‘ವಿನೋದ ದಾಸ’ ಎಂಬ ಕಾವ್ಯನಾಮದಿಂದ ಹಲವಾರು ನಗೆ ಬರಹಗಳನ್ನೂ ಬರೆದಿದ್ದಾರೆ. ‘ಕನ್ನಡ ನಿಘಂಟು’, ‘ಸಾವಿರದ ಕೋಶ’, ‘ಹರಿಭಕ್ತಿಸಾರ’, ‘ಗಾದೆಗಳ ಸಾರ’, ‘ಒಗಟಿನಾಗರ’, ‘ಶಾಸನ ಪರಿಚಯ’ ಮತ್ತು ‘ಶರಣ ಸಂಪದ’ ಮುಂತಾದವು ಇವರ ಸಂಪಾದಿತ ಕೃತಿಗಳಾಗಿವೆ. ‘ನಿಟ್ಟೂರು ಶಾಂತಿನಾಥ’, ‘ಬಿ. ಪುಟ್ಟಸ್ವಾಮಯ್ಯ’, ‘ಉಕ್ಕಡಗಾತ್ರಿ ಕರಿಬಸವೇಶ್ವರರು’, ‘ಐ. ಜಿ. ಪಿ. ವೀರಭದ್ರಯ್ಯ’, ‘ಕೆ. ಎಸ್. ರಾಜಪ್ಪ’ ಮುಂತಾದವು ಇವರ ವ್ಯಕ್ತಿ ಚಿತ್ರಗಳು.
ಜನಪದ ಗೀತೆ ಮತ್ತು ಅನೇಕ ಜನಪದ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ‘ರಾಜ್ಯೋತ್ಸವ ಪ್ರಶಸ್ತಿ’, ‘ಕಿಟ್ಟಲ್ ಪ್ರಶಸ್ತಿ’, ‘ಕನ್ನಡ ರತ್ನ ಪ್ರಶಸ್ತಿ’, ‘ಸಾಹಿತ್ಯ ಶ್ರೀ ಪ್ರಶಸ್ತಿ’, ‘ಜಂಗಮ ವಿಶ್ವಕೋಶ’ ಮತ್ತು ‘ನಡೆದಾಡುವ ನಿಘಂಟು’ ಮುಂತಾದ ಪ್ರಶಸ್ತಿ, ಬಿರುದು, ಸನ್ಮಾನ, ಗೌರವಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಅವರು ಮಾಡಿದ ಸಾಧನೆಗೆ ಸಂದ ಗೌರವವಾಗಿದೆ.
ಮಹಾನ್ ವಿದ್ವಾಂಸರಾದ ಹೀ. ಚಿ. ಶಾಂತವೀರಯ್ಯನವರು ಜೀವನಪೂರ್ತಿ ಸಾಹಿತ್ಯ ಶಾರದೆಯ ಸೇವೆ ಮಾಡಿ 2020ರ ಸೆಪ್ಟೆಂಬರ್ 27ರಂದು ಇಹವನ್ನು ತ್ಯಜಿಸಿದರು.
ಅಗಲಿದ ಅದಮ್ಯ ಚೇತನಕ್ಕೆ ಅನಂತ ನಮನ.
– ಅಕ್ಷರೀ.