ರಂಗಕರ್ಮಿಗಳಿಗೆ ಹಾಗೂ ನಾಟಕ ಪ್ರಿಯರಿಗೆ ಸಿ.ಜಿ.ಕೆ. ಚಿರಪರಿಚಿತ ಹೆಸರು. ಸಿ. ಜಿ. ಕೃಷ್ಣಸ್ವಾಮಿ ಎಂದರೆ ಸ್ವಲ್ಪ ಯೋಚಿಸಿ ತಿಳಿದುಕೊಳ್ಳಬೇಕಾಗುತ್ತದೆ. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. 90ರ ದಶಕರಲ್ಲಿ ತೀರಾ ತಳಮಟ್ಟಕ್ಕಿಳಿದ ರಂಗಭೂಮಿಯನ್ನು ‘ರಂಗ ನಿರಂತರ’ದ ಮೂಲಕ ಪುನಶ್ಚೇತನಗೊಳಿಸುವುದರೊಂದಿಗೆ, ‘ಸಮುದಾಯ ತಂಡ’ ಕಟ್ಟಿ ಬೆಳೆಸಿದವರೂ ಇವರೇ.
1950 ಜೂನ್ 27ರಂದು ಜನಿಸಿದ ಇವರ ತಂದೆ ಗೋವಿಂದ ನಾಯ್ಕ, ತಾಯಿ ತಿಮ್ಮಾಜಮ್ಮ. ಶಾಲಾ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿದ ಇವರು ನ್ಯಾಷನಲ್ ಕಾಲೇಜು ಬೆಂಗಳೂರಿನಲ್ಲಿ ಕಾಲೇಜ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸ್ನಾತಕೋತ್ತರ ಪದವಿಯನ್ನು ಸೆಂಟ್ರಲ್ ಕಾಲೇಜು ಬೆಂಗಳೂರಿನಲ್ಲಿ ಪಡೆದರು. ಮೂರು ವರ್ಷದ ಮಗುವಿದ್ದಾಗ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳು ದುರ್ಬಲಗೊಂಡವು. ರಂಗಭೂಮಿಗೆ ಪಾದಾರ್ಪಣೆ ಮಾಡುವಾಗ, ರಂಗಭೂಮಿಯ ಯಾವುದೇ ಸಾಂಪ್ರದಾಯಿಕ ತರಬೇತಿಯನ್ನು ಪಡೆಯದ ಹಳ್ಳಿಗಾಡಿನ ಹಿಂದುಳಿದ ಜಾತಿಯ ಒಬ್ಬ ಬಾಲಕನಾಗಿದ್ದರು. ಆದರೆ ಮಾಡಿದ ಸಾಧನೆಯಿಂದ ಇವರು ಹಲವಾರು ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ.
ಸಿ.ಜಿ.ಕೆ.ಯವರು ರಂಗಭೂಮಿಯಲ್ಲಿ ನಿರ್ದೇಶಕರಾಗಿ, ರಂಗಸಂಘಟಕರಾಗಿ, ಧ್ವನಿ ಬೆಳಕಿನ ತಂತ್ರಜ್ಞರಾಗಿ, ರಂಗ ವಿನ್ಯಾಸಕರಾಗಿ ದುಡಿದವರು. ಎಲ್ಲಾ ರೀತಿಯ ರಂಗ ಚಟುವಟಿಕೆಗಳಲ್ಲಿ ಭಾಗವಹಿಸಿದ ಇವರು ಆರಂಭದಲ್ಲಿ ಅಭಿನಯವನ್ನೂ ಮಾಡಿದ್ದಾರೆ. ಸಾವಿರಾರು ಶಿಷ್ಯ ವರ್ಗವನ್ನು ಹುಟ್ಟುಹಾಕಿ, ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಸಾರ್ಥಕ ಭಾವ ಪಡೆದವರು. ನೇರ ನಡೆ-ನುಡಿಯ ಯಾರ ಮುಲಾಜಿಗೂ ಒಳಗಾಗದ ನಡವಳಿಕೆ ಸಿ.ಜಿ.ಕೆ.ಯವರದು. ತಮ್ಮ ಅಪೂರ್ವ ರಂಗಸಾಧನೆ ಮತ್ತು ಶತ್ರುಗಳಾಗಿದ್ದರೂ ಅವರಲ್ಲಿಯ ಪ್ರತಿಭೆಯನ್ನು ಗೌರವಿಸುತ್ತಿದ್ದ ರೀತಿ ಅವರ ಕಾರ್ಯವೈಖರಿಗೆ ಸಾಕ್ಷಿ.
ಸಿ.ಜಿ.ಕೆ.ಯವರಿಗೆ ಅದ್ಭುತವಾದ ನೆನಪು ಶಕ್ತಿ ಇತ್ತು. ಎಂದೋ ಒಂದು ಸಲ ನೋಡಿದ ಜಾಗವನ್ನು ಮತ್ತು ವ್ಯಕ್ತಿಗಳನ್ನು ಎಂದಿಗೂ ಅವರು ಮರೆಯುತ್ತಿರಲಿಲ್ಲ. ಒಂದು ಬಹುದೊಡ್ಡ ಗೆಳೆಯರ ಬಳಗವನ್ನೇ ಅವರು ಹೊಂದಿದ್ದರು. ಎಷ್ಟು ಜನರ ದೂರವಾಣಿ ಸಂಖ್ಯೆಗಳೂ ಅವರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ನಿಂತಿದ್ದವು.
ಸಿ.ಜಿ.ಕೆ.ಯವರ ಎರಡನೆಯ ಮಗ ಕಿರಣನ ರಕ್ತದಲ್ಲಿ ರಂಗ ಕಲೆ ಹರಿಯುತ್ತಿದೆ. ಎಳವೆಯಲ್ಲಿ ತಂದೆಯ ಜೊತೆಗೆ ನಾಟಕ ನೋಡಲು ಹೋದಾಗ ಅಲ್ಲಿ ಎಲ್ಲರೊಡನೆ ಬೆರೆಯುತ್ತಿದ್ದ. ಏಳನೇ ತರಗತಿಯ ಬಾಲಕನಿರುವಾಗಲೇ ಲೈಟಿಂಗ್ ನವರ ಸಾಮಿಪ್ಯದಲ್ಲಿ ಡಿಮ್ಮರ್ ನೊಂದಿಗೆ ಬೆಳಕಿನಾಟ ಆರಂಭಿಸಿ ಅದರಲ್ಲಿ ಆಸಕ್ತಿ ವಹಿಸಿದವನು. ಈಗ ಕೆಲವು ವರ್ಷಗಳ ಹಿಂದೆ ‘ಮೈಕೋ ನಾಟಕ ಸಂಘ’ದಿಂದ ಅತ್ಯುತ್ತಮ ಬೆಳಕಿನ ಸಂಯೋಜನೆಗಾಗಿ ಪ್ರಶಸ್ತಿ ಪಡೆಯುವಷ್ಟು ಪ್ರಭುದ್ಧರಾಗಿದ್ದಾರೆ. “ಏನೇ ಮಾಡಿದರೂ ಅದು ಪರ್ಫೆಕ್ಟ್ ಆಗಿರಬೇಕು. ರಂಗದ ಎಲ್ಲಾ ವಿಷಯಗಳು ನಿನಗೆ ಗೊತ್ತಿರಬೇಕು. ಆದರೆ ಒಂದು ವಿಷಯದಲ್ಲಿ ಸ್ಪೆಷಲ್ ಆಗು”. ತಾನು ಸ್ವತಂತ್ರ ವ್ಯಕ್ತಿಯಾಗಿ ಬೆಳೆಯಲು ಅಪ್ಪನ ಈ ಮಾತುಗಳು ಅನುವು ಮಾಡಿಕೊಟ್ಟಿವೆ ಎಂದು ಶ್ರೀಯುತ ಕಿರಣ್ ಸ್ಮರಿಸಿಕೊಳ್ಳುತ್ತಾರೆ.
ಸಿ.ಜಿ.ಕೆ.ಯವರ ರಂಗಪ್ರಯೋಗದಲ್ಲಿ ಹೊಸತನ ಎನ್ನುವುದು ಪ್ರಯೋಗದಿಂದ ಪ್ರಯೋಗಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ವೇದಿಕೆ ಮತ್ತು ವೇಷಭೂಷಣ ಎಲ್ಲವನ್ನೂ ಮುಂದಿನ ಪ್ರಯೋಗದಲ್ಲಿ ಭಿನ್ನವಾಗಿ ಮಾಡುವ ಪ್ರಯತ್ನ ಅವರಲ್ಲಿ ಇತ್ತು. ಹಲವಾರು ನಾಟಕಗಳು, ಬೀದಿ ನಾಟಕಗಳನ್ನು ರಚಿಸಿದ ಖ್ಯಾತಿ ಇವರದು. ‘ಬೆಲ್ಚಿ’, ‘ಭಾರತ ದರ್ಶನ’, ‘ಸೈಕ್ಲೋನ್’, ‘ಪಂಚತಾರಾ’, ‘ಮೇ ಡೇ’, ‘ಅಲ್ಲೇ ಇದ್ದೋರು’, ‘ದೌಡ್ ಗಾಂಧಿ’, ‘ದೇವರ ಮುಂದೆ ಕಾದು ಕುಂತ ಬಸವ’ ಇವುಗಳು ಇವರ ರಚನೆಯ ಬೀದಿ ನಾಟಕಗಳು. ‘ಕಳ್ಳಿಯಲ್ಲಿ ಕೆಂಪು ಹೂವು’ ಇದು ಕೇಶವ ರೆಡ್ಡಿ ಹಂದ್ರಾಳ ಅವರ ಸಣ್ಣ ಕಥೆಯ ನಾಟಕ ರೂಪ. ‘ಅಬೋಲಿನ’ ಯಶವಂತ ಚಿತ್ತಾಲರ ಕಥೆಯ ನಾಟಕ ರೂಪ. ‘ಒಡಲಾಳ’ ಇದು ದೇವನೂರು ಮಹಾದೇವ ಅವರ ನಿಲ್ಗತೆಯ ನಾಟಕ ರೂಪ. ಮಾತ್ರವಲ್ಲದೆ ‘ಯಯಾತಿ’, ‘ಮಹಾ ಚೈತ್ರ’ ‘ಸುಲ್ತಾನ್ ಟಿಪ್ಪು’, ‘ಶೇಕ್ಸ್ ಪಿಯರ್ ನ ಸ್ವಪ್ನ ನೌಕೆ’, ‘ಜೂಲಿಯಸ್ ಸೀಸರ್’, ‘ತುಘಲಕ್’, ‘ಕುಸುಮಬಾಲೆ’, ‘ವೈಶಂಪಾಯನ ತೀರ’ ‘ಅಂಬೇಡ್ಕರ್’, ‘ರುಡಾಲಿ’, ‘ಚಕೋರಿ’, ‘ಒಥೆಲೋ’, ‘ಶೋಕ ಚಕ್ರ’, ‘ದಂಡೆ’ ಈ ನಾಟಕಗಳೂ ಯಶಸ್ವೀ ಪ್ರಯೋಗಗಳನ್ನು ಕಂಡಿವೆ. ‘ಭುಜಂಗಯ್ಯನ ದಶಾವತಾರಗಳು’ ಈ ಚಲನಚಿತ್ರದ ಸಹ ನಿರ್ದೇಶಕರು ಇವರಾಗಿದ್ದು, ಸಂಭಾಷಣೆ ರಚನೆ ಇವರದೇ ಆಗಿದೆ. ‘ವೀರಪ್ಪನ್’ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ, ರಚನೆ ಹಾಗೂ ‘ಸಾಂಗ್ಲಿಯಾನ’ ಚಿತ್ರಕ್ಕೆ ಸಂಭಾಷಣೆ, ರಚನೆಯನ್ನು ಇವರೇ ಮಾಡಿದ್ದಾರೆ. ಚಲನಚಿತ್ರ ರಂಗದ ಜೊತೆಗಿನ ಇವರ ನಂಟಿಗೆ ಇದು ಸಾಕ್ಷಿಯಾಗಿದೆ.
ಇವರ ಕಾರ್ಯ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ‘ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಸರಕಾರದ ಪ್ರಥಮ ‘ಅಂಬೇಡ್ಕರ್ ಪ್ರಶಸ್ತಿ’, ‘ಶಿವರಾಮ ಕಾರಂತ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಈ ಎಲ್ಲಾ ಪ್ರಶಸ್ತಿಗಳು ಇವರ ಕೃತಿಗಳಿಗೆ ಹಾಗೂ ಕಾರ್ಯ ಸಾಧನೆಗೆ ಸಂದ ಗೌರವವಾಗಿದೆ. ಈ ಅಪ್ರತಿಮ ಸಾಧಕ 11 ಜನವರಿ 2006ರಂದು ಇಹದ ರಂಗಕ್ಕೆ ಅಂತಿಮ ಪರದೆಯನ್ನು ಎಳೆದರು. ಸಿ.ಜಿ.ಕೆ.ಯವರ ಜನ್ಮದಿನವಾದ ಇಂದು ಅವರ ಸ್ಮರಣೆಯೊಂದಿಗೆ ಅದಮ್ಯ ಪ್ರತಿಭೆಯ ಚೇತನಕ್ಕೆ ಅಂತರಾಳದ ನಮನ.
– ಅಕ್ಷರೀ