ಪ್ರೊ. ವೆಂಕಟರಮಣ ಭಟ್ ಸಾಹಿತ್ಯ ಲೋಕದಲ್ಲಿ ವಿ. ಬಿ. ಮೊಳೆಯಾರ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರು ಮನೆತನದಲ್ಲಿ 1936ರ ಜೂನ್ 26ರಂದು ಜನಿಸಿದ ಇವರ ತಂದೆ ಶಂಕರನಾರಾಯಣ ಭಟ್ಟ ಹಾಗೂ ತಾಯಿ ಪರಮೇಶ್ವರಿ. ಸಂಸ್ಕೃತ ಹಾಗೂ ಕನ್ನಡ ಭಾಷಾ ವಿದ್ವಾಂಸರಾದ ತಂದೆ ಶಂಕರನಾರಾಯಣ ಭಟ್ಟರಿಂದ ಪ್ರಭಾವಿತರಾಗಿ ಬೆಳೆದ ಮೊಳೆಯಾರ ಅವರು ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದರು. ಛಂದೋಬದ್ಧವಾದ ಕವಿತೆಗಳನ್ನು ರಚಿಸಿದ್ದರು.
ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿ ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ. ಎ. ಆನರ್ಸ್ ಮತ್ತು ಎಂ. ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಮದರಾಸಿನಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಕಾವ್ಯ ಬರಹ, ಚಿಂತನ ಬರಹಗಳು, ನಗೆ ಬರಹಗಳು, ನಾಟಕ ರಚನೆ, ವ್ಯಕ್ತಿ ಚಿತ್ರ ರಚನೆಗಳು ಹೀಗೆ ಸಾಹಿತ್ಯ ಕೃಷಿ ಮಾಡಿರುವ ವಿ. ಬಿ. ಮೊಳೆಯಾರರದ್ದು ಚಟುವಟಿಕೆಯಿಂದ ಸದಾ ಕಾರ್ಯ ಪ್ರವೃತ್ತಗಾಗಿದ್ದ ವ್ಯಕ್ತಿತ್ವ. ‘ಪುಸ್ತಕ ಪ್ರಕಾಶನದ ಗೌರವ ಪ್ರಶಸ್ತಿ’, ‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸೇರಿದಂತೆ ಹಲವಾರು ಗೌರವ ಸಮ್ಮಾನಗಳಿಗೆ ವಿ. ಬಿ. ಮೊಳೆಯಾರ ಭಾಜನರಾಗಿದ್ದಾರೆ.
ಶ್ರೀಮತಿ ಮಾಧರಿ ಶ್ರೀರಾಮ್
ಅಧ್ಯಾಪಕಿ, ಮಂಗಳೂರು