ಆರ್. ಕೆ. ಸೂರ್ಯನಾರಾಯಣ ಇವರೊಬ್ಬ ಶ್ರೇಷ್ಠ ವೀಣಾ ವಿದ್ವಾಂಸ. ಇವರು ಜನಿಸಿದ್ದೆ ಸಂಗೀತಕ್ಕೆ ಹೆಸರುವಾಸಿಯಾದ ರುದ್ರಪಟ್ಟಣಂ ಮನೆತನದಲ್ಲಿ. ತಂದೆ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್ ಆರ್. ಎಸ್. ಕೇಶವ ಮೂರ್ತಿ ಮತ್ತು ತಾಯಿ ವೆಂಕಟ ಲಕ್ಷ್ಮಮ್ಮ. 14 ಜೂನ್ 1937ರಲ್ಲಿ ಇವರ ಜನನವಾಯಿತು. ತಂದೆಯೇ ಸ್ವತಃ ಶಿಕ್ಷಕರಾಗಿ ಇವರನ್ನು ಉತ್ತಮ ವೈಣಿಕರನ್ನಾಗಿ ಮಾಡಿದರು. ಇವರು ಮೊತ್ತಮೊದಲು ವೀಣಾ ಕಚೇರಿ ನಡೆಸಿದ್ದು 1944 ರಲ್ಲಿ, ತಮ್ಮ ಏಳನೆಯ ವಯಸ್ಸಿನಲ್ಲಿ. ಅದೂ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಇವರ ಸನ್ನಿಧಾನದಲ್ಲಿ. ಈ ಕಚೇರಿಯಲ್ಲಿ ಅವರ ಅಸಾಧಾರಣ ಪ್ರತಿಭೆಯು ಅನಾವರಣಗೊಂಡಿತು. ಇವರು ಹೊಸತನ ತರಬೇಕೆಂಬ ಪ್ರಯೋಗಾತ್ಮಕ ದೃಷ್ಟಿಯಿಂದ 24 ತಂತಿಗಳಿರುವ ವೀಣೆಯನ್ನು ಆವಿಷ್ಕಾರ ಮಾಡಿ ದೇಶ ವಿದೇಶಗಳ ಜನರು ಈ ವೀಣೆಯ ತುಂಬು ಮಧುರ ನಾದವನ್ನು ಕಿವಿ ತುಂಬಿಸಿಕೊಳ್ಳುವಂತೆ ಮಾಡಿದರು.
ಇವರ ಅಪ್ರತಿಮ ಕಲಾ ಪ್ರೌಢಿಮೆಗೆ ಜನತೆ ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದೆ. ಮೇಳ ರಾಗಮಾಲಿಕೆಯು ಸೇರಿದಂತೆ ಹಲವಾರು ಕೃತಿ, ವರ್ಣಗಳ ರಚನೆ ಮಾಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ, ನೃತ್ಯ, ತಾಳ, ವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರವಿತ್ತು ಗೌರವಿಸುತ್ತಿದ್ದರು.
ವಿಶ್ವ ಪ್ರಸಿದ್ಧರಾದ ಇವರು ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ, ಆಕಾಶವಾಣಿ ದೂರದರ್ಶನ ಕಾರ್ಯಕ್ರಮಗಳಲ್ಲಿ, ದೇಶದ ಪ್ರತಿಷ್ಠಿತ ಸಂಘ – ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ವೀಣಾ ವಾದನದ ಕಾರ್ಯಕ್ರಮಗಳನ್ನು ನೀಡಿದ್ದರು. ಇವರ ಅಪ್ರತಿಮ ಪ್ರತಿಭಾ ವೈಖರಿಗೆ ಜನರು ತಲೆ ತೂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರವಿತ್ತು ಗೌರವಿಸುತ್ತಿದ್ದರು. ‘ಮಲಯ ಮಾರುತ’, ‘ರಾಮಾನುಜಾಚಾರ್ಯ’ ಮುಂತಾದ ಹಲವಾರು ಚಿತ್ರಗಳಲ್ಲಿ ಆರ್. ಕೆ. ಸೂರ್ಯನಾರಾಯಣ್ ಅವರು ಸಂಗೀತಗಾರರ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಇವರ ಸಂಗೀತ ಸಾಧನೆ ಮತ್ತು ಸೇವೆಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 1988 – 89ನೇ ಸಾಲಿನ ‘ಕರ್ನಾಟಕ ಕಲಾ ತಿಲಕ ಪ್ರಶಸ್ತಿ’ ಮತ್ತು ‘ರಾಜ್ಯೋತ್ಸವ ಪ್ರಶಸ್ತಿ’ಯ ಗೌರವಗಳನ್ನು ಇವರು ಸ್ವೀಕರಿಸಿದ್ದಾರೆ. ‘ನಾದ ಜ್ಯೋತಿ’, ‘ಕಲಾಪೂರ್ಣ’, ‘ವೀಣಾ ವಾದನ ಗಂಧರ್ವ’, ‘ವೀಣಾ ಚಕ್ರವರ್ತಿ’, ಇತ್ಯಾದಿ ಹಲವಾರು ಬಿರುದುಗಳು ಇವರನ್ನು ಅಲಂಕರಿಸಿವೆ.
ತಮ್ಮ ಜೀವಿತಾವಧಿಯಲ್ಲಿ ಅಪಾರ ಶಿಷ್ಯವರರ್ಗವನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಆರ್. ಕೆ. ಸೂರ್ಯನಾರಾಯಣ ಇವರು 2003 ಡಿಸೆಂಬರ್ 25ರಂದು ಇಹವನ್ನು ತೊರೆದು ನಾದ ಶಾರದೆಯಲ್ಲಿ ಐಕ್ಯರಾದರು.
ಪವಿತ್ರಾತ್ಮಕ್ಕೆ ಅಂತಾರಾಳದ ನಮನ.
– ಅಕ್ಷರೀ