ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ದಿನಾಂಕ 6ರಿಂದ 8 ಫೆಬ್ರವರಿ 2026ರಂದು ನಡೆಯಲಿದೆ.
ದಿನಾಂಕ 06 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ‘ಆರೋಹಣಂ’ ಸಂಗೀತ ಶಾಲೆಯ ಡಾ. ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ, ವಯೊಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಡಾ. ಬಾಲಚಂದ್ರ ಆಚಾರ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 6-00 ಗಂಟೆಗೆ ಮೈಸೂರಿನ ಖ್ಯಾತ ಕಲಾ ವಿಮರ್ಶಕರಾದ ಪ್ರೊ.ಕೆ. ರಾಮಮೂರ್ತಿ ರಾವ್ ಇವರಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಅದಾನಿ ಸಂಸ್ಥೆಯ ನಿರ್ದೇಶಕ ಕಿಶೋರ್ ಆಳ್ವ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸುವರು. ತದನಂತರ ಇತ್ತೀಚೆಗೆ ‘ಪುರಂದರ ಗಾನ ನರ್ತನ’ ಎಂಬ ಶೀರ್ಷಿಕೆಯಡಿ ಸತತವಾಗಿ 6 ಗಂಟೆ 13 ನಿಮಿಷಗಳ ಕಾಲ ಪುರಂದರ ದಾಸರ ಹಾಡುಗಳಿಗೆ ಸ್ವತಃ ಹಾಡಿಕೊಂಡು ನೃತ್ಯ ಪ್ರದರ್ಶನ ನೀಡಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ವಿಶ್ವ ದಾಖಲೆ ಸಾಧಿಸಿದ ದೀಕ್ಷಾ ರಾಮಕೃಷ್ಣ ಇವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಗೌರವಿಸಲಿದ್ದಾರೆ. ಸಂಜೆ ಗಂಟೆ 6-30ಕ್ಕೆ ಚೆನ್ನೈನ ಖ್ಯಾತ ಸಂಗೀತಗಾರರಾದ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಯೊಲಿನ್ ನಲ್ಲಿ ಮಹತಿ ಕೆ. ಕಾರ್ಕಳ ಹಾಗೂ ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್ ಮಂಗಳೂರು, ಮೋರ್ಸಿಂಗ್ ನಲ್ಲಿ ಬಾಲಕೃಷ್ಣ ಹೊಸಮನೆ ಇವರು ಸಹಕರಿಸಲಿದ್ದಾರೆ.
ದಿನಾಂಕ 07 ಫೆಬ್ರವರಿ 2026ರಂದು ಶನಿವಾರ ಅಪರಾಹ್ನ 2-00 ಗಂಟೆಗೆ ಪಿಳ್ಳಾರಿ ಗೀತೆಗಳು, ಶ್ರೀ ತ್ಯಾಗರಾಜರ ‘ಘನಪಂಚ ರತ್ನ’ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ ಗಂಟೆ 4-30ರಿಂದ ಡಾ. ಸುಶೀಲ ಉಪಾಧ್ಯಾಯ ಸ್ಮರಣಾರ್ಥ ಡಾ. ಯು.ಪಿ. ಉಪಾಧ್ಯಾಯ ಇವರು ಪ್ರಾಯೋಜಿಸಿರುವ ‘ರಾಗಧನ ಪಲ್ಲವಿ ಪ್ರಶಸ್ತಿ’ಯನ್ನು ಉಡುಪಿಯ ಪ್ರತಿಭಾವಂತ ಗಾಯಕಿ ಕುಮಾರಿ ಪ್ರಜ್ಞಾ ಅಡಿಗ ಇವರಿಗೆ ಡಾ. ಗಣಪತಿ ಜೋಯಿಸ ಇವರು ಪ್ರದಾನ ಮಾಡುವರು. ಸಂಜೆ ಗಂಟೆ 5-30ಕ್ಕೆ ‘ರಾಗಧನ ಪಲ್ಲವಿ ಪ್ರಶಸ್ತಿ’ ಪುರಸ್ಕೃತ ಪ್ರಜ್ಞಾ ಅಡಿಗ ಇವರಿಂದ ಕಚೇರಿ ನಡೆಯಲಿದ್ದು, ವಯೊಲಿನ್ ನಲ್ಲಿ ಬೆಂಗಳೂರಿನ ವೈಭವ್ ರಮಣಿ ಹಾಗೂ ಮೃದಂಗದಲ್ಲಿ ಪ್ರಜ್ವಲ್ ಭಾರದ್ವಾಜ್ ಸಹಕರಿಸಲಿದ್ದಾರೆ.
ದಿನಾಂಕ 08 ಫೆಬ್ರವರಿ 2026ರಂದು ಬೆಳಿಗ್ಗೆ ಗಂಟೆ 9-00ರಿಂದ ಹಿಂದುಸ್ತಾನಿ ಗಾಯನ ಕಛೇರಿಯನ್ನು ಮಹಾರಾಷ್ಟ್ರದ ಧನಂಜಯ ಜೋಶಿ ನಡೆಸಿ ಕೊಡಲಿದ್ದಾರೆ. ತಬ್ಲಾದಲ್ಲಿ ಮಾಧವ ಆಚಾರ್ಯ ಉಡುಪಿ ಹಾಗೂ ಹಾರ್ಮೋನಿಯಮ್ ನಲ್ಲಿ ಪ್ರಸಾದ್ ಕಾಮತ್ ಸಹಕರಿಸಲಿದ್ದಾರೆ. ಬೆಳಿಗ್ಗೆ ಗಂಟೆ 11-15ರಿಂದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ವಿಷಯವಾಗಿ ಕುಮಾರಿ ಆತ್ರೇಯೀ ಕೃಷ್ಣಾ ಕಾರ್ಕಳ ಸಂಗೀತ ಪ್ರಾತ್ಯಕ್ಷಿಕೆ ನಡೆಸಿ ಕೊಡುವರು. ಅಪರಾಹ್ನ 2-00 ಗಂಟೆಗೆ ಶ್ರೀಮತಿ ಅದಿತಿ ಕೋಂಕೋಡಿ ಹಾಡುಗಾರಿಕೆ, ವಯೊಲಿನ್ ನಲ್ಲಿ ಗೌತಮ್ ಭಟ್ ಪಿ.ಜಿ. ಹಾಗೂ ಮೃದಂಗದಲ್ಲಿ ಧೀಮಂತ ಭಟ್ಟ ಹರಿಹರಪುರ ಸಹಕರಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಭರತನಾಟ್ಯ ಕಲಾವಿದೆ ಲಕ್ಷ್ಮಿ ಗುರುರಾಜ್ ಮತ್ತು ಡಾ. ಬಾಲಕೃಷ್ಣ ಮದ್ದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತದನಂತರ ಬೆಂಗಳೂರಿನ ವಿನಯ್ ಶರ್ವ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಕೇಶವ ಮೋಹನ್ ಕುಮಾರ್ ಬೆಂಗಳೂರು ವಯೊಲಿನ್ ನಲ್ಲಿ ಹಾಗೂ ಮೃದಂಗದಲ್ಲಿ ಸುನಾದಕೃಷ್ಣ ಅಮೈ, ಶರತ್ ಕೌಶಿಕ್ ಬೆಂಗಳೂರು ಘಟಂ ನಲ್ಲಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುವರು.

