ಮಡಿಕೇರಿ : ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ದಸರಾ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಯು ದಿನಾಂಕ 26 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯಲಿದೆ.
ಈ ಬಾರಿಯ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ, ಕುಂದಾಪ್ರ ಕನ್ನಡ ಹೀಗೆ 13 ಭಾಷೆಯ ಕವನಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ, ಮರಾಠಿ 103 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ. ಕನ್ನಡ ಭಾಷೆಯ ಚುಟುಕು ಕವನ 4 ಕವಿಗಳು ವಾಚಿಸಲಿದ್ದಾರೆ. ಬೆಳೆಯ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಕವನಗೋಷ್ಠಿ (6ರಿಂದ 13 ) ಏರ್ಪಡಿಸಲಾಗಿದೆ. 14 ಬಾಲ ಪ್ರತಿಭೆಗಳು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲಿದ್ದಾರೆ. ಕನ್ನಡದಲ್ಲಿ 6 ಮತ್ತು ಇಂಗ್ಲೀಷಿನಲ್ಲಿ 5 ಬಾಲ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಕವಿಗೋಷ್ಠಿಗೆ ಆಗಮಿಸುವ ಎಲ್ಲಾ ಕವಿಗಳಿಗೂ ಗೌರವದಿಂದ ವೇದಿಕೆಗೆ ಆಹ್ವಾನಿಸಿ ಕವನ ವಾಚನದ ನಂತರ ಅವರಿಗೆ ಗೌರವ ಸಮರ್ಪಣೆ, ಸಂಭಾವನೆ ಮತ್ತು ಕೊಡಗಿನ ಲೇಖಕರ ಒಂದು ಪುಸ್ತಕವನ್ನು ಕೂಡ ನೀಡಲಾಗುವುದು. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಬೆಳಗಾವಿ, ಮೈಸೂರು, ಕುಂದಾಪುರ ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ತಮ್ಮ ಕವನವನ್ನು ಕಳುಹಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಕುಲ್ಲಚಂಡ ಪ್ರಮೋದ್ ಗಣಪತಿಯವರು ಶ್ರೀ ಕಾವೇರಿ ದಸರಾ ಸಮಿತಿ ನಾಡಿನ ಸಾಹಿತ್ಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ 10 ದಿನಗಳ ಕಾಲ ಪ್ರತಿದಿನವೂ ದೇವಿಯ ಪ್ರತಿಷ್ಠಾಪನೆಯೊಂದಿಗೆ ಶಾಸ್ತ್ರೋಕ್ತವಾದ ಪೂಜಾ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಸಾಹಿತ್ಯ ಕಲೆ ಇವುಗಳ ಪ್ರೋತ್ಸಾಹಕ್ಕಾಗಿ ಹಲವಾರು ವರ್ಷಗಳಿಂದ ಬಹು ಭಾಷಾ ಕವಿಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಜೊತೆಗೂಡಿ ನಡೆಸುತ್ತಿದೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಸೇರಿ ಉತ್ತಮ ರೀತಿಯ ಕವನ ವಾಚನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಬಾರಿ 103ಕ್ಕೂ ಹೆಚ್ಚು ಕವಿಗಳು ಭಾಗವಹಿಸುತ್ತಿರುವುದು ಸಂತಸದ ವಿಚಾರ” ಎಂದರು.
ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಕೋಳೆರ ದಯ ಚಂಗಪ್ಪ ಕಾರ್ಯಕ್ರಮದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಳೆರ ದಯ ಚಂಗಪ್ಪನವರು ಮಾತನಾಡಲಿದ್ದಾರೆ. ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯುವ ಈ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಹಿರಿಯ ಸಾಹಿತಿ ಮತ್ತು ನಿವೃತ್ತ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಇವರು ವಹಿಸಲಿದ್ದು, ಕವಿಗೋಷ್ಠಿಯ ಉದ್ಘಾಟನೆಯನ್ನು ಕಿಗ್ಗಟನಾಡು ಹಿರಿಯ ನಾಗರಿಕ ವೇದಿಕೆಯ ಸ್ಥಾಪಕರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್, ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುಲ್ಲೆಂಗಡ ಮುಧೋಷ್ ಪೂವಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷರು ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರೂ ಆದ ಕುಲ್ಲಚಂಡ ಪ್ರಮೋದ್ ಗಣಪತಿ, ಕವಿಗೋಷ್ಠಿ ಸಮಿತಿ ಸಂಚಾಲಕಿ ಶ್ರೀಮತಿ ಎಸ್.ಎಂ. ರಜಿನಿ, ಗೌರವ ಕಾರ್ಯದರ್ಶಿ ಶ್ರೀಮತಿ ಶೀಲಾ ಬೋಪಣ್ಣ, ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾದೇವಯ್ಯ ಸಂಯೋಜಕರಾದ ಚಂದನ್ ಕಾಮತ್ ಉಪಸ್ಥಿತರಿರುತ್ತಾರೆ.
ಬಹುಭಾಷಾ ಕವಿಗೋಷ್ಠಿಯ ಸಂಚಾಲಕಿ ಶ್ರೀಮತಿ ಎಸ್.ಎಂ. ರಜನಿ ಕಾರ್ಯಕ್ರಮದ ಕುರಿತು ಮಾತನಾಡುತ್ತಾ “ಗೋಣಿಕೊಪ್ಪಲು ದಸರಾ ಕವಿ ಗೋಷ್ಠಿಗೆ ಅಹ್ವಾನಿಸಿದಾಗ ಇಷ್ಟು ಬಾರಿಗಿಂತಲೂ ಹೆಚ್ಚು ಕವನಗಳನ್ನು ಕವಿಗಳು ಕಳುಹಿಸಿ ಕೊಟ್ಟಿರುತ್ತಾರೆ. ಈ ಬಾರಿ 130 ಕವನಗಳು ಅಂಚೆ, ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಬಂದಿದ್ದು ಆಯ್ಕೆ ಸಮಿತಿಯು 103 ಕವಿಗಳ ಕವಿತೆಗಳನ್ನು, ನಾಲ್ಕು ಚುಟುಕು ಕವನಗಳನ್ನು ಆರಿಸಲಾಗಿದೆ. ಈ ಬಾರಿ ವಿಶೇಷವಾಗಿ ಮಕ್ಕಳ ಕವಿಗೋಷ್ಠಿಯನ್ನು ಆಯೋಜಿಸಿದ್ದು ಕನ್ನಡದಲ್ಲಿ 6 ಮತ್ತು ಇಂಗ್ಲೀಷಿನಲ್ಲಿ 6 ಕವನಗಳು ಮತ್ತು 2 ಚುಟುಕು ಕವನ ವಾಚಿಸಲಿದ್ದಾರೆ. ಕನ್ನಡ ಭಾಷೆಯ 49 ಕವನಗಳು ಬಂದಿದ್ದು, ಕನ್ನಡ ಉಪಭಾಷೆಗಳಾದ ಕೊಡವ ಭಾಷೆಯ 11 ಕವನಗಳು, ಅರೆ ಭಾಷೆಯ 6 ಕವನಗಳು, ಎರವ ಭಾಷೆಯ 3 ಕವನಗಳು, ತುಳು ಭಾಷೆಯ 4 ಕವನಗಳು, ಕುಂಬಾರ ಭಾಷೆಯ 2 ಕವನಗಳು, ಕೊಂಕಣಿ ಭಾಷೆಯ 1 ಕವನ, ಕುಂದಾಪ್ರ ಕನ್ನಡ ಕವನ ಅಲ್ಲದೆ ಹಿಂದಿ ಭಾಷೆಯ 3 ಕವನಗಳು, ಮರಾಠಿ ಭಾಷೆಯ 2 ಕವನಗಳು ತಮಿಳು ಭಾಷೆಯ 1 ಕವನಗಳು ಮತ್ತು ಮಲಯಾಳಂ ಭಾಷೆಯ 1 ಕವನಗಳು ಹಾಗೂ ಇಂಗ್ಲೀಷ್ ಭಾಷೆಯ 6 ಕವನಗಳ ವಾಚನವನ್ನು ಕವಿಗಳು ಮಾಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿ ಟಿ.ಆರ್. ವಿನೋದ್, ನಿರ್ದೇಶಕರುಗಳಾದ ಚಂದನಾ ಮಂಜುನಾಥ್, ಚಂದನ್ ಕಾಮತ್ ಉಪಸ್ಥಿತರಿದ್ದರು.