ನಾನು ಚೌಕಿಯಲ್ಲಿ ಮುಖಕ್ಕೆ ಸಪೇತು ಹಚ್ಚಿ ಕೊಳ್ಳುವಾಗ ಯಾರ ಹತ್ತಿರವೂ ಮಾತಾಡುವುದಿಲ್ಲ. ಆ ಹೊತ್ತಿನಲ್ಲಿ ನಾನು ಅಂದಿನ ನನ್ನ ಪಾತ್ರದ ಬಗ್ಗೆ ಚಿಂತನೆ ಮಾಡುತ್ತಾ ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿ ಇರುತ್ತೇನೆ. ಯಾರಾದರೂ ನನ್ನ ಅಭಿಮಾನಿಗಳು ಮಿತ್ರರು ನನ್ನನ್ನು ಮಾತಾಡಿಸಲು ಬಂದರೆ ನಿಷ್ಠುರವಾಗಿ, ‘ನನ್ನ ವೇಷ ಮುಗಿದ ಮೇಲೆ ಬನ್ನಿ. ಮಾತಾಡುವ’ ಅಂದುಬಿಡುತ್ತೇನೆ. ಚೌಕಿಯಲ್ಲಿ ಇತರ ಕಲಾವಿದರು ಎಷ್ಟೇ ಗೌಜಿ ಗದ್ದಲ ಮಾಡಿದರೂ ನನ್ನ ಧ್ಯಾನಕ್ಕೆ ಭಂಗ ಬರುವುದಿಲ್ಲ. ಎಲ್ಲರಿಗೂ ವಿಷಯ ಗೊತ್ತಿರುವುದರಿಂದ ಅವರೂ ನನ್ನ ತಂಟೆಗೆ ಬರುವುದಿಲ್ಲ ಮಾತ್ರವಲ್ಲ ನಾನು ಅಲ್ಲಿ ವೇಷಮಾಡಿಕೊಳ್ಳುತ್ತಿದ್ದೇನೆ ಎಂದು ಗೊತ್ತಾದರೆ ನನಗೆ ತೊಂದರೆ ಆಗದಂತೆ ಮೆಲ್ಲಗೇ ಮಾತಾಡುತ್ತಾರೆ.
ಇವತ್ತು ಕುಂದಾಪುರದ ಗಾಂಧಿ ಮೈದಾನದಲ್ಲಿ ನಮ್ಮ ಮೇಳದ ಆಟ. ಪಟ್ಟಾಭಿಷೇಕ. ನನ್ನದು ದಶರಥನ ಪಾತ್ರ. ನನಗೇನೂ ಇದು ಮೊದಲಲ್ಲ. ನನ್ನ ಅತೀ ಮೆಚ್ಚುಗೆಯ ಪಾತ್ರವೂ ಹೌದು. ನನ್ನ ನಲವತ್ತು ವರ್ಷದ ಕಲಾಸೇವೆಯ ಜೀವನದಲ್ಲಿ ಸಾವಿರಾರು ದಶರಥ ಮಾಡಿರಬಹುದು. ಆದರೆ ನನಗೆ ಪ್ರತೀ ಪ್ರದರ್ಶನವೂ ಹೊಸದು. ನನ್ನ ಈ ಒಂದೇ ಪಾತ್ರವನ್ನು ಹತ್ತಾರು ಬಾರಿ ನೋಡಿದವರಿದ್ದಾರೆ. ಇವತ್ತೂ ಬಂದಿರಬಹುದು. ಆಟ ಮುಗಿದ ಮೇಲೆ ನನ್ನ ಹಿಂದೆಯೇ ಚೌಕಿಗೆ ಓಡಿಬಂದು, ಕೈಮುಗಿದು “ಯಾವತ್ತಿಗಿಂತಲೂ ಇವತ್ತು ಬಾರಿ ಚಂದ ಆಯ್ತು ಅಯ್ಯ. ಆಟದಲ್ ನಾನಂತೂ ಪೂರ್ತಿ ಮುಳುಗಿ ಹೋದೆ. ಆಟ ಮುಗದ್ದೇ ಗೊತ್ತಾಯಿಲ್ಯೆ” ಎಂದು ಹೊಗಳಿ ವಿನಯದಿಂದ ನಮಸ್ಕರಿಸಿ ಹೋಗುತ್ತಾರೆ.. ನನಗೆ ಇವರಿಗೆಲ್ಲ ಕುಷಿ ನೀಡಿದ ಸಾರ್ಥಕ ಭಾವ.
ದಶರಥನಿಗೆ ಅವನ ನಾಲ್ಕು ಮಕ್ಕಳಲ್ಲಿ ಹಿರಿಯವನಾದ ರಾಮ ಎಂದರೆ ಕೊಂಚವೂ ಅಗಲಿರಲಾರದಷ್ಟು ಪ್ರೀತಿ. ರಾಮನಿಗೆ ತಂದೆಯಮೇಲೆ ಅಷ್ಟೆ ಗೌರವ, ಪ್ರೀತಿ. ಎಲ್ಲರೂ ಎಲ್ಲರಿಗೂ ಬೇಕು. ಮುಚ್ಚುಮರೆ ಇಲ್ಲ. ಅನ್ಯೋನ್ಯತೆಯ ಕೂಡು ಪರಿವಾರ.
ನನ್ನ ತಲೆಯ ಕೂದಲನ್ನು ಹಿಂದೆ ಮಾಡಿಕೊಂಡು ಕಪ್ಪು ಬಟ್ಟೆಯ ಟೇಪನ್ನು ಬಿಗಿಯಾಗಿ ಕಟ್ಟಿ, ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನು ಎದುರಿಗೆ ಇಟ್ಟುಕೊಂಡು ಕನ್ನಡಿಯ ಮುಂದೆ ಬೆಳಕಿಗೆ ಎದುರಾಗಿ ಕುಳಿತು ಒಮ್ಮೆ ದೀರ್ಘವಾಗಿ ಉಸಿರಾಡಿ ಚೌಕಿಯ ಗಣಪತಿಗೆ ನಮಿಸಿ ಅಂಗೈಗೆ ಸಪೇತು ಹಾಕಿ ಸರಿಯಾಗಿ ತಿಕ್ಕಿಕೊಂಡು ಬಣ್ಣ ಹಚ್ಚಿಕೊಳ್ಳಲು ಸಿದ್ಧನಾದೆ.
ನನಗೂ ಒಬ್ಬ ಮಗ. ಅವನ ಹೆಸರು ಕೃಷ್ಣ. ನನ್ನ ಪ್ರೀತಿಯ ಮಗ. ಅವನಿಗೂ ನನ್ನ ಮೇಲೆ ಅಷ್ಟೇ ಗೌರವ. ಇಂತಹಾ ಮಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಅನ್ನಿಸುತ್ತದೆ. ನನ್ನ ಮನಸ್ಸನ್ನು ಅರಿತು ನಡೆಯುತ್ತಾನೆ. ಚಿಕ್ಕಂದಿನಿಂದಲೂ ಹಾಗೆ. ಈಗಲೂ.
ನನ್ನ ಅಪ್ಪಯ್ಯ ಪಕ್ಷವಾತವಾಗಿ ಹಾಸಿಗೆ ಹಿಡಿದಾಗ ಅವರ ಸೇವೆಯನ್ನು ನಾನೇ ಮಾಡುತ್ತಿದ್ದೆ. ಅದು ನನ್ನ ಕರ್ತವ್ಯ. ಇವಳಿಗೆ ಸ್ವಲ್ಪ ಅಲರ್ಜಿ ಇರುವುದರಿಂದ ನಾನೇ ಪ್ರತೀದಿನ ಬೆಳಿಗ್ಗೆ ಮನೆಗೆ ಬಂದು ಅವರ ಹೇಲು ಉಚ್ಚೆ ತೆಗೆದು, ಮೈಯನ್ನು ಒರೆಸಿ ಕ್ಲೀನ್ ಮಾಡಿ ಆಟಕ್ಕೆ ಹೋಗುತ್ತಿದ್ದೆ.
ಪ್ರತೀದಿನ ಮನೆಗೆ ಬರಲು ಅನುಕೂಲವಾಗುವಂತೆ ಒಂದು ಸ್ಕೂಟರ್ ಸಾಲ ಮಾಡಿ ತೆಗೆದುಕೊಂಡಿದ್ದೆ. ನನ್ನ ಪಾತ್ರ ಮುಗಿದು ವೇಷ ಕಳಚಿದ ಕೂಡಲೆ ಹೊರಟು ಮನೆಗೆ ಬಂದರೆ ಸಂಜೆ ಆದಷ್ಟು ಬೇಗ ಆಟದ ಚೌಕಿಯನ್ನು ಸೇರಿಕೊಳ್ಳಬೇಕಿತ್ತು. ನಾನು ಬರುವುದು ತಡವಾದರೆ, ರಜೆ ಮಾಡಿದರೆ ಪ್ರೇಕ್ಷಕರು ಯಜಮಾನರಲ್ಲಿ ಬಂದು ಗಲಾಟೆ ಮಾಡುತ್ತಿದ್ದರು. ನಾನು ಮನೆಗೆ ಬರಲೇ ಆಗದ ಸಂದರ್ಭದಲ್ಲಿ ಆ ಕೆಲಸವನ್ನು ಮಗ ನಿಷ್ಠೆಯಿಂದ ಮಾಡುತ್ತಿದ್ದ. ಹತ್ತು ವರ್ಷದ ಹಿಂದೆ ಅವರು ತೀರಿಕೊಂಡರು. ಅದಾದ ಸ್ವಲ್ಪ ದಿನದಲ್ಲಿಯೇ ನನ್ನ ಹೆಂಡತಿಯೂ ನಮ್ಮನ್ನು ಬಿಟ್ಟು ಹೋದಳು.
ಚೆನ್ನಾಗಿ ಓದಿ ಪದವಿ ಪಡೆದ ಮೇಲೆ ಕೃಷ್ಣನಿಗೆ ಸಾಲಿಗ್ರಾಮದ ಕರ್ನಾಟಕ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ಊರಿನ ಹತ್ತಿರವೇ ಆದ್ದರಿಂದ ಒಳ್ಳೇಯದೇ ಆಯಿತು. ಬೆಳಿಗ್ಗೆ ಹೋಗಿ ಸಂಜೆ ಬರಬಹುದು. ಅವನಿಗೆ ನಮ್ಮ ದೂರದ ಸಂಬಂಧದಲ್ಲಿಯೆ ಒಬ್ಬ ಹುಡುಗಿಯನ್ನು ತಂದು ಮದುವೆಯನ್ನು ಮಾಡಿದೆ. ಸೊಸೆಯೂ ತುಂಬ ಒಳ್ಳೆಯವಳು. ನಮ್ಮನ್ನೆಲ್ಲ ಅನುಸರಿಸಿಕೊಂಡು ಹೋಗುತ್ತಿದ್ದಾಳೆ. ಯಾವ ಕೊರತೆಯೂ ಇಲ್ಲ. ಸಂತೃಪ್ತ ಬಾಳು. ನಾನು ಹೇಗೂ ಹೊರಗೆ ಇರುವವ. ಮಗನಿಗೆ ಸೊಸೆಗೆ ಸಂಸಾರದ ಪೂರ್ಣ ಜವಾಬ್ಧಾರಿಯನ್ನು ಬಿಟ್ಟುಕೊಟ್ಟೆ. ಆದರೆ ಆಮೇಲೂ ಮಗ ಮತ್ತು ಸೊಸೆ ಯಾವುದೇ ಹೊಸದಾದ, ಪ್ರಮುಖವಾದ ನಿರ್ಧಾರವನ್ನು ನನ್ನನ್ನು ಕೇಳದೇ ಚರ್ಚಿಸದೇ ಮಾಡುತ್ತಿರಲಿಲ್ಲ. ನಾನು ಏಕೆ ಏನು ಎಂದು ಕೇಳುತ್ತಿರಲಿಲ್ಲ.
ಇನ್ನು ಸಾಕು ಈ ದುಡಿಮೆ, ದಣಿವು ಅಂತ ದೇಹ ಮನಸ್ಸುಗಳು ಹೇಳಿದರೂ ನನ್ನ ರಕ್ತದ ಬಿಂದು ಬಿಂದುವಿನಲ್ಲಿ ಇರುವ ಈ ಕಲೆಯ ವ್ಯಾಮೋಹ ನನ್ನನ್ನು ಬಿಡುವುದಿಲ್ಲ. ಆದಷ್ಟು ದಿನ ಮುಂದುವರಿಯುವ ಯೋಚನೆ.ಆದರೆ ಇವತ್ತೇಕೋ ತುಂಬ ದಣಿವು. ಕಣ್ಣು ಮಂಜುಮಂಜಾದಂತೆ ಅನಿಸುತ್ತದೆ.
ದಶರಥ ಒಂದು ಸಾವಿರ ವರ್ಷ ರಾಜ್ಯ ಅಡಳಿತ ಮಾಡಿದ್ದನಂತೆ. ಅವನು ಯೌವನದಲ್ಲಿ ಮದುವೆಯಾಗಿದ್ದಾನೆ ಎಂದುಕೊಂಡರೂ ಅವನ ಮೂವರು ಹೆಂಡತಿಯರಿಗೆ ಮಕ್ಕಳು ಹುಟ್ಟುವಾಗ ಎಲ್ಲರೂ ವಯೋ ವೃದ್ಧರಾಗಿದ್ದಿರಬಹುದು.
ಅಂಗೈಯಲ್ಲಿ ತಿಕ್ಕಿ ಪಳಪಳ ಹೊಳೆಯುವಂತೆ ಮಾಡಿ, ಮುಖಕ್ಕೆ ದಪ್ಪನೆಯ ಸಪೇತು ಲೇಪಿಸಿಕೊಂಡು ಅದರ ಮೇಲೆ ಪೌಡರನ್ನು ಹಚ್ಚಿ ನೀರಿನಿಂದ ಒಮ್ಮೆ ಒರೆಸಿ ಮುಖವನ್ನು ಶುಭ್ರವಾಗಿ ಮಾಡಿಕೊಂಡೆ. ಕಪ್ಪು ಬಣ್ಣವನ್ನು ಒಂದು ಕಡ್ಡಿಯಲ್ಲಿ ತೆಗೆದುಕೊಂಡು ಹುಬ್ಬನ್ನು ಬರೆದುಕೊಳ್ಳುತ್ತಿರುವಾಗ ಸ್ವಲ್ಪ ಹೆಚ್ಚು ಕಮ್ಮಿ ಆದಂತೆ ಅನ್ನಿಸಿ ಕನ್ನಡಿಯನ್ನು ಎತ್ತಿ ಹಿಡಿದು ಮುಖವನ್ನು ಆ ಕಡೆ ಈ ಕಡೆ ತಿರುಗಿಸಿ ನೋಡಿ ಹುಬ್ಬನ್ನು ತೀಡಿ ಸರಿಮಾಡಿಕೊಂಡೆ. ಇನ್ನು ಕಣ್ಣಿನ ಸುತ್ತ ಕಪ್ಪು ಹಾಕಿಕೊಳ್ಳಬೇಕು.
ಹಿರಿಯರಾಣಿ ಕೌಸಲ್ಯಾ. ಪಟ್ಟ ಮಹಿಷಿ. ಸ್ಥಾನದಿಂದಲೂ ಗುಣದಿಂದಲೂ ದೊಡ್ಡವಳು. ಎರಡನೆಯ ರಾಣಿ ಸೌಮಿತ್ರೆ ಮುದ್ದಾದವಳಿರಬೇಕು. ದಶರಥನಿಗೆ ಪ್ರೀತಿಪಾತ್ರಳು. ಮೂರನೆಯವಳು ಕೈಕೇಯಿ. ದಶರಥನ ಮೋಹದ ರಾಣಿ. ಕೇಕಯ ರಾಜ್ಯದಿಂದ ಕೈಕೇಯಿಗೆ ಹುಟ್ಟುವ ಮಗನಿಗೇ ರಾಜ್ಯ ಕೊಡುತ್ತೇನೆ ಎಂದು ಅವಳ ಅಪ್ಪನಿಗೆ ಹೇಳಿ ಕರೆತಂದನಂತೆ. ದಶರಥನೇ ಹೇಳಿದನೋ ಕೇಕಯ ರಾಜನೇ ಶರತ್ತು ಹಾಕಿದನೋ ಗೊತ್ತಿಲ್ಲ. ಅದಲ್ಲದಿದ್ದರೆ ಮುದುಕ ದಶರಥನಿಗೆ ಮೊದಲ ಎರಡು ಪತ್ನಿಯರಲ್ಲೂ ಮಕ್ಕಳಿಲ್ಲ. ಇವಳಿಗೆ ಆಗುತ್ತದೆ ಎಂದು ಹೇಗೆ ನಂಬಿದನೋ. ಇರಲಿ
ಹಣೆಗೆ ಕಪ್ಪು ನಾಮವನ್ನು ಮೂಗಿನಿಂದ ಮುಂದಲೆಯವರೆಗೆ ಹಾಕಿಕೊಳ್ಳುವಾಗ ತುಂಬಾ ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಓರೆಯಾಗಿ ಬಿಡುತ್ತದೆ.
ಮನಸ್ಸು ಯಾಕೋ ನಿಯಂತ್ರಣಕ್ಕೆ ಬರುತ್ತಿಲ್ಲ.
ದಶರಥ ಬೇಟೆಗೆ ಹೋದ. ಕಾಡಿನಲ್ಲಿ ಕುರುಡು ತಂದೆ ತಾಯಿಯರನ್ನು ಹೊತ್ತು ತೀರ್ಥಯಾತ್ರೆಗೆ ಹೋಗುವ ಶ್ರವಣಕುಮಾರ, ಕಾಡಿನ ಕೊಳವೊಂದರಲ್ಲಿ ನೀರು ಕುಡಿಯುವಾಗ ಆಗುವ ಶಬ್ದವನ್ನು ಆಲಿಸಿ ನೀರು ಕುಡಿಯಲು ಬಂದ ಪ್ರಾಣಿ ಎಂದು ಬಾಣವನ್ನು ಬಿಟ್ಟು ಕೊಲ್ಲುತ್ತಾನೆ. ಅದರಿಂದ ಕ್ರುದ್ಧರಾದ ಶ್ರವಣನ ತಂದೆತಾಯಿಯರಿಂದ ‘ಮಕ್ಕಳು ಹತ್ತಿರ ಇಲ್ಲದಿರುವಾಗ ಮರಣ ಬರಲಿ’ ಎಂಬ ಶಾಪಕ್ಕೆ ತುತ್ತಾಗುತ್ತಾನೆ.
ಮತ್ತೆ ಪುತ್ರ ಕಾಮೇಷ್ಟಿಯಾಗ. ದೇವ ನಿರ್ಮಿತ ಪಾಯಸ ಪ್ರದಾನ. ದಶರಥನು ತುಂಬಿದ ಪಾಯಸದ ಪಾತ್ರೆಯಲ್ಲಿ ಹಿರಿಯ ಪಟ್ಟ ಮಹಿಷಿ ಕೌಸಲ್ಯೆಗೆ ಅರ್ಧ ಭಾಗವನ್ನು ಕೊಡುತ್ತಾನೆ. ಮತ್ತೆ ಅರ್ಧಭಾಗ ಮಾಡಿ ಸುಮಿತ್ರೆಗೆ. ಆದರೆ ತನ್ನ ಪ್ರಿಯ ರಾಣಿ ಕೈಕೇಯಿಗೆ ಉಳಿದ ಕಾಲಂಶ ಪಾಯಸದಲ್ಲಿ ಮತ್ತೆ ಅರ್ಧ ಮಾಡಿ ಕೊಟ್ಟು ಉಳಿದದ್ದನ್ನು ಸುಮಿತ್ರೆಗೇ ಕೊಡುತ್ತಾನೆ. ಆಗ ಕೈಕೆಯಿಯೂ ವಿನಯದಿಂದಲೇ ಸ್ವೀಕರಿಸುತ್ತಾಳೆ. ಆಕ್ಷೇಪಿಸುವುದಿಲ್ಲ. ಗಂಡನ, ಚಕ್ರವರ್ತಿಯ ಆಶಯ. ಆಜ್ಞೆ ಸ್ವೀಕೃತ. ಮುಂದೆ ಕೌಸಲ್ಯೆಯಲ್ಲಿ ರಾಮ, ಕೈಕೆಯಿಯಲ್ಲಿ ಭರತ, ಸುಮಿತ್ರೆಯಲ್ಲಿ ಲಕ್ಷ್ಮಣ ಮತ್ತು ಶತ್ರುಘ್ನರ ಜನನ.
ಕೈಕೆಯಿಗೆ ತನ್ನ ಮಗ ಭರತನಿಗಿಂತಲೂ ರಾಮನೆಂದರೆ ಪ್ರಾಣವಂತೆ. ಹೆಚ್ಚು ಪ್ರೀತಿಯಂತೆ. ಮಡಿಲಲ್ಲಿ ಭರತ ಇದ್ದರೂ ರಾಮನನ್ನು ಕಂಡರೆ ಭರತನನ್ನು ಇಳಿಸಿ ರಾಮನನ್ನು ಎತ್ತಿಕೊಳ್ಳುತ್ತಿದ್ದಳಂತೆ. ಭರತನಿಗೆ ಹಾಲು ಕುಡಿಸುವಾಗ ರಾಮ ಬಂದರೆ ಅವನನ್ನು ಹತ್ತಿರ ಕರೆದು ಮತ್ತೊಂದು ಮೊಲೆಯ ಹಾಲನ್ನು ರಾಮನಿಗೆ ಕೊಡುತ್ತಿದ್ದಳಂತೆ. ಅಷ್ಟು ಪ್ರೀತಿ. ಒಟ್ಟಾರೆ ತುಂಬು ಪ್ರೀತಿಯ ಸಂಸಾರ. ನೋವೇ ಇಲ್ಲದ ಸಂತಸದ ದಿನಗಳು.
ಇವತ್ತು ನನ್ನ ವೇಷ ಏಕೋ ಸ್ವಲ್ಪ ತಡವಾಗುತ್ತಿದೆ. ಬೇಗಬೇಗ ಮಾಡಿಕೊಳ್ಳಬೇಕು.
ಈಗಿನ ಕಾಲದಲ್ಲಿ ಮಕ್ಕಳು ತಂದೆಯ ಒಟ್ಟಿಗೆ ಇರಲು ಇಷ್ಟಪಡುವುದಿಲ್ಲ. ಅಣ್ಣ ತಮ್ಮಂದಿರಲ್ಲಿ ಸಾಮರಸ್ಯ ಇರುವುದಿಲ್ಲ. ಮದುವೆಯಾಗಿ ಒಂದೆರಡು ವರ್ಷದಲ್ಲೇ ತಂದೆಯ ಹತ್ತಿರ ಹೋಗಿ ಪಾಲು ಕೇಳುತ್ತಾರೆ. ದೂರದಲ್ಲಿ ಒಳ್ಳೆಯ ಉದ್ಯೋಗ ಸಿಕ್ಕಿದರಂತೂ ಹೊರಗೆ ಹೋಗಲೇ ಬೇಕು. ವಿದ್ಯೆ ಬುದ್ಧಿ ಕಲಿಸಿ, ಪ್ರೀತಿಯ ಧಾರೆ ಎರೆದು ಬೆಳೆಸಿದ ಎಷ್ಟೋ ಮಕ್ಕಳು ಹೊರದೇಶಕ್ಕೆ ಹೋಗಿ ತಂದೆತಾಯಿಯರನ್ನು ಮರೆಯುವ ಸಂಸಾರಗಳೇ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇವರಿಗೆ ಮಕ್ಕಳಿದ್ದಲ್ಲಿ ಹೋಗಿ ಇರಲಿಕ್ಕಾಗುವುದಿಲ್ಲ. ಅವರಿಗೆ ಬರಲಿಕ್ಕಾಗುವುದಿಲ್ಲ. ಕೊನೆಗೆ ಹುಟ್ಟಿಸಿದ ಅಪ್ಪ ಸತ್ತಾಗ ಬಂದು ಚಿತೆಗೆ ಕೊಳ್ಳಿ ಇಟ್ಟು ಸಂಸ್ಕಾರ ಮಾಡಲು ಬರುವುದಕ್ಕೂ ಅವರು ತಯಾರಿರುವುದಿಲ್ಲ. ಯಾಕೆಂದರೆ ಅವರು ಅವರಿರುವ ಜಾಗದ ಜನರ ಪದ್ಧತಿ ಸಂಸ್ಕಾರಗಳಿಗೆ ಒಗ್ಗಿಕೊಂಡಿರುತ್ತಾರೆ. ಜೊತೆಯಲ್ಲಿ ಇರದ ತಂದೆತಾಯಿಗಳ ಸಂಬಂಧಗಳು ಅವರ ಭಾವನೆಗಳು ಗೌಣವಾಗಿ ಬಿಡುತ್ತದೆ.
ಮುಖದ ಕೆಲಸ ಆಯ್ತು. ಇನ್ನು ದೊಗಲೆ ಇಜಾರ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳಬೇಕು. ಅದರ ಮೇಲುಭಾಗದಲ್ಲಿ ಬೆಳ್ಳಿ ಕಾಲು ಕಡಗ ಕಟ್ಟಿಕೊಳ್ಳಬೇಕು. ಕಸೆ ಸೀರೆಯನ್ನು ಉಟ್ಟು ಸೊಂಟಕ್ಕೆ ದಟ್ಟಿಯನ್ನು ಬಿಗಿದು ಕಟ್ಟಿಕೊಳ್ಳಬೇಕು.
ದೇವೇಂದ್ರನ ಆಮಂತ್ರಣದಂತೆ ದಶರಥ ಮುದ್ದಿನ ಮಡದಿ ಕೈಕೇಯಿಯನ್ನು ಕೂಡಿಕೊಂಡು ಸೇನಾಸಮೇತನಾಗಿ ದೇವ ಲೋಕಕ್ಕೆ ಹೋಗಿ ಶಂಬರನಲ್ಲಿ ಖಾಡಾಖಾಡಿಯಾಗಿ ಯುದ್ಧ ಮಾಡುತ್ತಾನೆ. ಯುದ್ಧದ ಮಧ್ಯದಲ್ಲಿ ಸೋಲುವ ಪರಿಸ್ಥಿತಿ ಎದುರಾದಾಗ ಕೈಕೇಯಿಯಿಂದ ಸಹಾಯ ಸಿಗುತ್ತದೆ. ರಥದ ಗಾಲಿಯ ಕೀಲು ಉದುರಿದ್ದಂತೆ. ವಜ್ರದ ಬೆರಳಂತೆ, ಮುಂದೆ ಸಾರಥಿಯಾಗಿದ್ದವಳು ಹೇಗೆ ಗಾಲಿಗೆ ಸಿಕ್ಕಿಸಿದ್ದೋ ? ಇರಲಿ.
ಅಂತೂ ಯುದ್ಧದಲ್ಲಿ ಶಂಬರ ಹತನಾಗುತ್ತಾನೆ. ದಶರಥ ಪ್ರಸನ್ನನಾಗಿ ಕೈಕೇಯಿಗೆ ಎರಡು ವರ ಕೊಡುತ್ತಾನೆ. ಅವಳು ಈಗ ಬೇಡ ನಿಮ್ಮಲ್ಲೇ ನ್ಯಾಸವಾಗಿರಲಿ ಅನ್ನುತ್ತಾಳೆ.
ನಂತರ ಸೀತಾ ಸ್ವಯಂವರವಾಗಿ ಜರಗಿತು ಪಟ್ಟಾಭಿಷೇಕದ ಘಟನೆ. ಅಷ್ಟರವರೆಗೂ ತೀರಾ ಅನ್ನೋನ್ಯವಾಗಿದ್ದ ಸಂಸಾರದಲ್ಲಿ ಬಿರುಕು ಕಾಣಿಸುತ್ತದೆ. ಎಷ್ಟೋ ವರ್ಷಗಳಿಂದ ಉಪಯೋಗಿಸದೇ ಪಾಳು ಬಿದ್ದು ದೂಳು ಬಲೆಗಳಿಂದ ಆವೃತವಾಗಿದ್ದ ಶೋಕಾಗಾರ ಪುನಃ ತೆರೆದುಕೊಳ್ಳುತ್ತದೆ. ರಾಮನನ್ನು ತನ್ನ ಮಗ ಭರತನಷ್ಟೇ ಪ್ರೀತಿಸಿ ಬೆಳೆಸಿದ್ದ ಕೈಕೆಯಿ, ದಶರಥನ ಮುದ್ದಿನ ಮಡದಿಯಾದ ಕೈಕೆಯಿ ಎಂತಹಾ ಮಂಥರೆಯ ಮಾಟ ಮೋಸ ಇದ್ದರೂ ಅಷ್ಟು ಸುಲಭದಲ್ಲಿ ಒಂದು ಕ್ಷಣದಲ್ಲಿ ಬದಲಾಗುವುದು ಸಾಧ್ಯವೇ? ಆದರೂ ಈ ಕವಿಗಳು ಕೈಕೆಯಿಯನ್ನು ಇಷ್ಟು ಕೆಟ್ಟದಾಗಿ ಚಿತ್ರಿಸಬಾರದಿತ್ತು. ಎಷ್ಟೋ ರಾಮಾಯಣ ಇದೆಯಂತೆ. ಇದಕ್ಕೆ ಏನಾದರೂ ಮಾಡಬೇಕು ಅಂತ ಅನ್ನಿಸಿ ಎಷ್ಟೋ ಪುಸ್ತಕಗಳನ್ನು ಓದಿದೆ. ಶ್ರೇಷ್ಠ ಸಂಸ್ಕ್ರತ ಕವಿ ಭಾಸನ ಪ್ರತಿಮಾ ನಾಟಕದಲ್ಲಿ ಒಂದು ಹೊಸ ವಿಷಯ ಸಿಕ್ಕಿತು.
ರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾದಾಗ ಸುದ್ದಿ ತಿಳಿದ ಕೇಕಯದ ರಾಜನಿಂದ ಬಂದ ಪತ್ರದಲ್ಲಿ ‘ಹಿಂದೆ ಕೊಟ್ಟ ಮಾತನ್ನು’ ನೆನಪಿಸಲಾಗಿತ್ತು. ಅದರ ಬಗ್ಗೆ ಕೈಕೇಯಿಯ ಹತ್ತಿರವೇ ದಶರಥ, “ಏನು ಮಾಡುವುದು? ಹೀಗಾಗಿದೆ ಕೊಟ್ಟ ಮಾತಿನಂತೆ ಮಾಡಿದರೆ ರಾಮನಿಗೆ ಅನ್ಯಾಯವಾಗದೇ? ಎಂದು ಅಲವತ್ತು ಕೊಂಡು ಚರ್ಚಿಸಲು ಬಂದಾಗ ಅವಳು, ದೀರ್ಘವಾಗಿ ಯೋಚನೆಮಾಡಿ, ‘ಅಣ್ಣ ಇರುವಾಗ ತಮ್ಮನಿಗೆ ಹೇಗೆ ಪಟ್ಟ? ಕೊಟ್ಟ ಆ ಮಾತು ಬಿಟ್ಟುಬಿಡಿ’ ಅನ್ನುತ್ತಾಳೆ.
ಆದರೆ ಮಾತು ಕೊಟ್ಟದ್ದರಿಂದ ಅದಕ್ಕೆ ತಪ್ಪಿದರೆ ಮುಂದೆ ಬರುವ ಅಪವಾದಕ್ಕೆ ಏನು ಮಾಡುವುದು? ಎಂದು ದಶರಥ ಆತಂಕ ವ್ಯಕ್ತಪಡಿಸಿದಾಗ ಹಾಗಾದರೆ ಹೀಗೆ ಮಾಡುವ ಮಾತಿನ ಪ್ರಕಾರ ಮೊದಲು ಭರತನಿಗೆ ಪಟ್ಟ ಕಟ್ಟುವ. ಅವನು ಹೇಗೂ ಅದಕ್ಕೆ ಒಪ್ಪುವುದಿಲ್ಲ. ಪರಿಸ್ಥಿತಿಯನ್ನು ತಿಳಿಸಿ ಒಪ್ಪಿಸುವ. ಅಲ್ಪ ಸಮಯದ ನಂತರ ಅವನೇ ಅದನ್ನು ರಾಮನಿಗೆ ಬಿಟ್ಟು ಕೊಡಲಿ. ಆಯಿತಲ್ಲ.
ಆದರೆ ಭರತನ ಪಟ್ಟಾಭಿಷೇಕದ ಸಮಯದಲ್ಲಿ ಪ್ರಜಾಪ್ರಿಯ ಸರ್ವಮಾನ್ಯ ರಾಮ ಇಲ್ಲಿದ್ದರೆ ಭರತನಿಗೆ ಪ್ರಜೆಗಳಿಂದ ಕೇಡಾಗಬಹುದು. ದಂಗೆಯಾಗಬಹುದು. ಆದ್ದರಿಂದ ಸ್ವಲ್ಪ ಸಮಯದವರೆಗೆ ಅವನು ರಾಜ್ಯದಿಂದ ಹೊರಗಿರಲಿ. ಎಷ್ಟು ಕಾಲ ಎಂದರೆ ಈ ಆತಂಕದ ಉದ್ವೇಗದ ಸ್ಥಿತಿ ತಣ್ಣಗಾಗುವವರೆಗೆ ಅಂದರೆ ಸುಮಾರು ತನಗೂ ರಾಮನನ್ನು ಬಿಟ್ಟು ಇರುವುದು ಕಷ್ಟ ಎಂಬ ಭಯದಿಂದ ಹದಿನಾಲ್ಕು ದಿವಸ ಅನ್ನುವಾಗ ಬಾಯಿತಪ್ಪಿ ಹದಿನಾಲ್ಕು ವರ್ಷ ಅನ್ನುತ್ತಾಳಂತೆ. ದಶರಥ ಮೂರ್ಛಿತನಾಗುತ್ತಾನೆ. ರಾಮನಿಗೆ ಸುದ್ದಿ ಹೋಗಿ ಅವನು ಬಂದಾಗ ವಿಷಯ ತಿಳಿದುಬರುತ್ತದೆ, ತನ್ನ ಅವತಾರದ ಉದ್ದೇಶವನ್ನು ನೆನಪಿಸಿಕೊಂಡ ರಾಮ, ಹದಿನಾಲ್ಕು ವರ್ಷ ಎಂದು ಅದನ್ನೆ ಗಟ್ಟಿಮಾಡಿ, ತಂದೆಯವರು ಹಿಂದೆ ಕೊಟ್ಟ ವಚನದ ಪರಿಪಾಲನೆಗಾಗಿ ವ್ರತಬದ್ಧನಾಗಿ ಸೂರ್ಯವಂಶದ ಕುಲತಿಲಕನಾಗಿ ಧರ್ಮ ಸಂಸ್ಥಾಪನೆಗಾಗಿ ದುಷ್ಟ ನಿಗ್ರಹದ ಸಂಕಲ್ಪಿತನಾಗಿ ಕೂಡಲೇ ಕಾಡಿಗೆ ಹೋದ ಅಂತ ಇತ್ತು.
ನಾನು ಈ ಬಗ್ಗೆ ನಮ್ಮ ಮೇಳದ ದಾಸ ಭಾಗವತರಲ್ಲಿ ಮತ್ತು ಕೈಕೇಯಿಯ ಪಾತ್ರ ಮಾಡುವ ವೈಕುಂಠ ನಾಯ್ಕರಲ್ಲಿ ಹೋಗಿ ಒಟ್ಟಿಗೇ ಕುಳಿತು ಚರ್ಚಿಸಿ ಪ್ರಸಂಗದ ಪದ್ಯ ಬದಲಿಸದೇ ಕೆಲವು ಪದ್ಯಗಳನ್ನು ಕೈಬಿಟ್ಟು ಹೀಗೆ ಒಂದು ಪ್ರಯೋಗ ಮಾಡುವ ಆಗದಾ? ಅಂದೆ. ಅವರೂ ಒಪ್ಪಿದರು.
ಆದ್ದರಿಂದ ನಮ್ಮ ಕೈಕೇಯಿ ರಾಮ ಕಾಡಿಗೆ ಹೋಗುವ ಮೊದಲೇ ನನ್ನ ಬಾಯ್ತಪ್ಪಿನಿಂದ ಹೀಗಾಗಿದೆ. ನೀನು ಕಾಡಿಗೆ ಹೋಗಬಾರದು. ನಿನ್ನ ಬಿಟ್ಟು ನಾನೂ ಬದುಕಲಾರೆ. ಗಂಡನ ಇಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಡ ಎಂದು ಕಾಲು ಹಿಡಿದು ಕೇಳಿಕೊಳ್ಳುತ್ತಾಳೆ.
ದುಷ್ಟ ಪಾತ್ರವಿಲ್ಲದೇ ಕರುಣರಸದ ಈ ಕೊನೆಯ ಭಾಗ ಮೊದಲ ಪ್ರಯೋಗದಲ್ಲೆ ಯಶಸ್ವಿಯಾಯಿತು. ಯಾರೋ ಒಬ್ಬಿಬ್ಬರು ಅದನ್ನು ಪೂರ್ತಿಯಾಗಿ ನೋಡದೇ ಆಕ್ಷೇಪಿಸಿದರು. ನಾವು ಅದು ನಮ್ಮ ಪ್ರಯೋಗದ ಸ್ವಾತಂತ್ರ್ಯ ಎಂದು ನಿರ್ಲಕ್ಷಿಸಿ ಸುಮ್ಮನಾದೆವು.
ಕೈಗೆ ತೊಡುವ ಆಭರಣ, ಭುಜಕೀರ್ತಿ, ಎದೆಕಟ್ಟು ಮಣಿಸರ, ಡಾಬು ವೀರಗಾಸೆ ಎಲ್ಲವನ್ನೂ ತೊಟ್ಟುಕೊಂಡ ಹಾಗಾಯಿತು. ಇನ್ನು ತಲೆಗೆ ಕಿರೀಟ ಕಟ್ಟಿಕೊಂಡು ಹಣ್ಣು ಗಡ್ಡ ಮೀಸೆ ಹಚ್ಚಿಕೊಂಡರೆ ಆಯಿತು.
ಇವತ್ತು ಮಧ್ಯಾಹ್ನ ಮನೆಗೆ ಹೋದಾಗ ಎಲ್ಲರೂ ದಿಗ್ಭ್ರಾಂತರಾಗಿ ಅಳುತ್ತಾ ಕುಳಿತಿದ್ದರು. ದೊಡ್ಡ ಸಿಡಿಲೇ ನಮ್ಮ ಚಿಕ್ಕ ಚೊಕ್ಕ ನೆಮ್ಮದಿಯ ಸಂಸಾರದ ಮೇಲೆ ಎರಗಿತ್ತು. ಮಗ ಹೇಳಿದ. ಅವನಿಗೆ ದೂರದ ಬೆಂಗಳೂರಿಗೆ ವರ್ಗಾವಣೆ ಆಗಿದೆಯಂತೆ. ಹೋಗದಿದ್ದರೆ ರಾಜೀನಾಮೆ ಕೊಡಿ ಅಂತ ಮೇಲಧಿಕಾರಿಗಳು ತಿಳಿಸಿದ್ದಾರೆ.
ನನಗೆ ದಿಗಿಲಾಯಿತು.
“ನೀವೇನ್ ಹೆದ್ರಕಂಬ್ದ ಬ್ಯಾಡ ಅಪ್ಪಯ್ಯ. ನಾನ್ ನಿಮ್ಮನ್ ಬಿಟ್ ಹೋಗುದೇ ಇಲ್ಲ. ನಂಗ್ ಆ ಕೆಲ್ಸವೇ ಬ್ಯಾಡ. ರಾಜೀನಾಮೆ ಬಿಸಾಕಿ ಇಲ್ಲೆಲ್ಲಾದರೂ ಒಂದ್ ಅಂಗ್ಡಿ ಗಿಂಗ್ಡಿ ಮಾಡ್ಕಂಡ್ ಇರ್ತೆ” ಅಂತ ಅಳುತ್ತಾ ಹೇಳಿದ.
“ಇಕಾ ಗಣ್ಪಾ, ಇಲ್ ಬಾರಾ, ನಂಗೆ ಬೆನ್ ವಸ್ತ್ರವೊಂದ್ ಕಟ್ಟಿ ಹೋಗಾ”.
ನನ್ನ ಧ್ವನಿಯನ್ನು ಕೇಳುತ್ತಲೇ ಗಣಪತಿ ಪೆಟ್ಟಿಗೆಯ ಹೊರೆಯ ಗಣ್ಪ ಓಡೋಡಿ ಬಂದು, ನನ್ನ ಮುಖವನ್ನು ಒಮ್ಮೆ ದಿಟ್ಟಿಸಿ
“ಅಯ್ಯಾ, ಎಂತಾ ಆಯ್ತೇ? ಮುಖಯೆಲ್ಲ ಕಪ್ಕಟ್ಟಿ ಹೋಯಿತ್ತಲೆ. ಏನೂ ಗೆಲ ಇಲ್ಯಪ್ಪ. ಹುಷಾರಿಲ್ಯಾ? ಮಾತ್ರಿ ಗೀತ್ರಿ ತಕಂತ್ರಯಾ? ತಂದ್ ಕೊಡುದಾ?”
ಎಂದು ನಾನು ಬೇಡ ಎಂದು ತಲೆಯನ್ನು ಅಡ್ಡಕ್ಕೆ ತಿರುಗಿಸುವ ಮೊದಲೇ ಬೆನ್ನು ವಸ್ತ್ರವನ್ನು ಎರಡು ಭಾಗಮಾಡಿ ಮಡಚಿ ಮಧ್ಯದ ಪುಚ್ಛವನ್ನು ಕಿರೀಟದ ಹಿಂಬದಿಗೆ ಸಿಕ್ಕಿಸಿ, ಅದರ ಎರಡೂ ಬದಿಯ ತುದಿಗಳನ್ನು ಚೆನ್ನಾಗಿ ನೆರಿಗೆ ಮಾಡಿ ಮಡಚಿ ನನ್ನ ಕಸೆ ಸೀರೆಯ ಮೇಲಿನ ಎಡಬಲದ ಸೊಂಟಪಟ್ಟಿಯ ಒಳಗೆ ಸಿಕ್ಕಿಸಿದ. ಸೊಂಟದ ಹಿಂಬದಿಗೊಂದು ತಟ್ಟಿ,
“ರೆಡಿ ಅಯ್ಯ. ಹೈ ಕ್ಲಾಸ್ ಆಯ್ತ” ಎಂದು ಅವನ ಮುಂದಿನ ಕೆಲಸಕ್ಕೆ ಹೋಗಿಬಿಟ್ಟ.
ಚೌಕಿಯ ಗಣಪತಿಗೆ ಭಕ್ತಿಯಿಂದ ವಂದಿಸಿ ಚೌಕಿಯಲ್ಲಿದ್ದ ಕಲಾವಿದರಲ್ಲಿ ರಂಗಸ್ಥಳಕ್ಕೆ ಹೋಗಲು ಅನುಮತಿ ಕೇಳಿ, ನಿಧಾನವಾಗಿ ನಡೆದು ರಂಗಸ್ಥಳದ ಹಿಂದೆ ಹಾಕಿದ ಬೆಂಚಿನ ಮೇಲೆ ಕುಳಿತೆ.
ನಾನು ಮಾಡುವ ಪಾತ್ರದ ಒಳಗೆ ಹೋಗಲು ಈ ಜಾಗ ತುಂಬಾ ಅನುಕೂಲ. ಭಾಗವತರ ಪದ್ಯ, ಮದ್ದಳೆ ಚಂಡೆಗಳ ಸದ್ದು ಪೌರಾಣಿಕ ಆವರಣಕ್ಕೆ ನಮ್ಮನ್ನು ಕೊಂಡುಹೋಗುತ್ತದೆ.
ದಶರಥನ ಪಾತ್ರದ ದೃಶ್ಯಗಳು ಪದ್ಯಗಳನ್ನೆಲ್ಲ ಒಮ್ಮೆ ಮನಸ್ಸಿಗೆ ತಂದುಕೊಂಡೆ.
“ಬೇಡ ಮಗೂ, ನೀನ್ ರಾಜಿನಾಮೆ ಕೊಡೂದ್ ಬ್ಯಾಡ.. ನಂಗೂ ವಯಸ್ಸಾಯ್ತಲ. ಅರವತ್ತು ದಾಟಿದ್ ಮೇಲೆ ಮೊದ್ಲಿನ ಹುಮ್ಮಸ್ ಎಲ್ ಇರತ್?. ನಂಗೆ ನೀನಲ್ಲದೇ ಬೇರೆ ಮಕ್ಳು ಇಲ್ಲ. ನಾನೇ ಮೇಳ ಕೈದ್ ಮಾಡಿ ನಿನ್ ಸಂಗ್ತಿಗ್ ಬತ್ತೆ”
ಎಂದು ಹೇಳಬೇಕನಿಸಿದರೂ ಹೇಳಲಿಕ್ಕೆ ಬಾಯಿ ಬರಲಿಲ್ಲ.
ಸುಮ್ಮನೇ ಮಗನ ತಲೆಯನ್ನು ಹಿಡಿದು ಎಳೆದು ನನ್ನ ಎದೆಗೆ ಒತ್ತಿಕೊಂಡು ಅವನ ಕೂದಲುಗಳ ಮಧ್ಯ ಬೆರಳಾಡಿಸುತ್ತಾ, ನೇವರಿಸಿ,
“ಗಡಿಬಿಡಿ ಮಾಡಿ ದುಡ್ಕುದ್ ಬ್ಯಾಡ ಮಗಾ. ನನ್ ಜೀವ್ನ ಮುಗಿತಾ ಬಂತಲ. ಅಬ್ಬಬ್ಬ ಅಂದ್ರೆ ಇನ್ ಎಷ್ಟ್ ವರ್ಷ? ಆಗ್ಲೋ ಈಗ್ಲೋ ಹೊಳೆಗೆ ಬೀಳಲಿಕ್ ರೆಡಿಯಾದ ದಡದ ಮುದಿ ಮರ. ನೀನ್ ಈಗ ಹೋದ್ರ್ ಏನು? ಅಲ್ಲೇ ಖಾಯಂ ಆತ್ತಾ? ಮತ್ತೆ ಟ್ರಾನ್ಸಪರ್ ತಕಂಡ್ ಬಪ್ಕಾತಿಲ್ಯಾ? ನೋಡುವ ಎಂತ ಮಾಡುಕಾತ್ ಕಾಂಬ” ಅಂದೆ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ.
ನಾನು ಮೇಳ ಬಿಟ್ರೂ ಮೇಳ ನನ್ನನ್ನು ಬಿಡಲಿಕ್ಕಿಲ್ಲ ಎಂದುಕೊಂಡಾಗ ಸಣ್ಣಗೆ ನಗು ಬಂತು. ನನಗೆ ಮೇಳ ಬಿಟ್ಟು ಬದುಕು ಬದುಕುವುದೂ ಕಷ್ಟ. ಅದು ನನ್ನ ಜೀವ.
ಆಗ ಭಾಗವತರು ಒಮ್ಮೆ ಎಡಕೈಯಿಂದ ಪರದೆ ಸರಿಸಿ ನಾನು ರೆಡಿಯಾಗಿದ್ದೇನೆಯಾ ಎಂದು ಇಣುಕಿ ನೋಡಿಕೊಂಡು,
ವೀರ ದಶರಥ ನೃಪತಿ ರಘುಕುಲ
ವಾರಿಧಿಗೆ ಪ್ರತಿಚಂದ್ರನು….
ಎಂದು ನನ್ನ ಪ್ರವೇಶದ ಪದವನ್ನು ಹಾಡಿದರು.
ನಾನು ಗಡಿಬಿಡಿಯಲ್ಲಿ ಎದ್ದೆನೋ! ಗೊತ್ತಿಲ್ಲ ಒಮ್ಮೆಲೇ ಆಯಾಸ ಆದಂತಾಗಿ ಮೈ ಬೆವರಿದ ಅನುಭವವಾಯಿತು. ಎದೆಯಲ್ಲಿ ಉರಿ. ಸ್ವಲ್ಪ ಸುಧಾರಿಸಿಕೊಂಡು ರಂಗವನ್ನು ಪ್ರವೇಶಮಾಡಿದೆ.
ಮುಂದೆ ನನ್ನನ್ನೇ ನಾನು ಮರೆತೆ. ಅಭಿನಯಿಸಿದೆ. ಅಲ್ಲ ದಶರಥ ಪಾತ್ರವನ್ನು ಅನುಭವಿಸಿದೆ. ಪಟ್ಟಾಭಿಷೇಕ ಸಿದ್ಧತೆ. ಮಂಥರೆಯು ಮರೆಯಲ್ಲಿ ಕೇಳಿ ಕೈಕೇಯಿಗೆ ಹೇಳಿ ಹಿಂದೆ ಕೊಟ್ಟು ನ್ಯಾಸವಾಗಿಟ್ಟ ವರ ಪಡೆಯಲು ಹೇಳುವುದು. ಪಟ್ಟಾಭಿಷೇಕ ಸಿದ್ಧತೆ. ರಾಮನು ಕೈಕೇಯಿ ಬರಲಿಲ್ಲ ಯಾಕೆ ಅಂದಾಗ ಲಕ್ಷ್ಮಣನನ್ನು ಕಳಿಸುವುದು. ಅಲ್ಲಿ ಕೈಕೆಯಿ ಕೈಕೇಯಿಯ,
ತೊಟ್ಟ ತೊಡುಗೆಗಳೆಲ್ಲವನು ತೆಗೆ
ದಿಟ್ಟು ಕಡೆಗಾ ಮಾನಿನಿ
ಇಟ್ಟ ಕಸ್ತುರಿ ತಿಲಕವನು ಕೈ
ಗೊಟ್ಟು ಕೆದರಿ
ಈ ಪದ್ಯವನ್ನು ಹಾರಿಸಿಬಿಟ್ಟು ರಾಣಿಯ ವೇಷದಲ್ಲೇ ಬಂದ ಕೈಕೇಯಿ, ಲಕ್ಷ್ಮಣನಿಗೆ ದಶರಥನ ಹತ್ತಿರವೇ ಮಾತಾಡಬೇಕು. ಕರೆಸು ಅನ್ನುತ್ತಾಳೆ. ಕೊನೆಗೆ ದಶರಥನೇ ಬಂದಾಗ ಅವಳು ವಿನಯದಿಂದಲೇ ನಮಸ್ಕರಿಸಿ ದಶರಥನನ್ನು ಅನುನಯಿಸಿ, ತಂದೆಗೆ ಕೊಟ್ಟ ಮಾತು ಹಿಂದೆ ನ್ಯಾಸವಾಗಿ ಇಟ್ಟ ವರಗಳ ವಿಷಯ ಪ್ರಸ್ತಾವಿಸಿ, ಸೂರ್ಯ ವಂಶದ ಏಳಿಗೆಗಾಗಿ, ಆ ವಚನದ ಪರಿಪಾಲನೆಗಾಗಿ ಮೊದಲು ಭರತನಿಗೆ ಪಟ್ಟ ಕಟ್ಟಿ, ರಾಮನನ್ನು ಸ್ವಲ್ಪ ಕಾಲ ಮರೆಯಲ್ಲಿಟ್ಟು ನಂತರ ಅದನ್ನು ರಾಮನಿಗೆ ನೀಡಲು ವಿನಂತಿಸುತ್ತಾಳೆ. ಅದನ್ನು ಕೇಳಿ ಆಘಾತಗೊಂಡ ದಶರಥ ಎದೆಯೊಡೆದು ಬೊಬ್ಬಿಡುತ್ತಾ “ಹಾ ರಾಮ” ಎಂದು ಕೂಗುತ್ತಾ ಕೆಳಗೆ ಬಿದ್ದಕೂಡಲೇ, ಗಾಬರಿಯಾದ ಕೈಕೇಯಿ ತನ್ನ ತಪ್ಪಿನ ಅರಿವಾಗಿ ಕೂಡಲೇ ರಾಮನನ್ನು ಕರೆಸಿ, ವಿಷಯವನ್ನು ಆದ್ಯಂತವಾಗಿ ತಿಳಿಸಿ,
“ಈಗ ನೀನೇ ನಮ್ಮನ್ನು ಉಳಿಸಬೇಕು. ಇವರ ದುಃಖ ನೋಡಲಾರೆ. ತಪ್ಪು ನನ್ನದೇ. ನಾನು ಪಾಪಿ ನಮ್ಮೊಡನೆಯೇ ಇದ್ದು ಹೇಗಾದರೂ ಮಾಡಿ ಇದನ್ನು ಸರಿಮಾಡು. ನನ್ನ ತಾಳಿಯ ಭಾಗ್ಯ ಉಳಿಸು. ನನ್ನಿಂದ ತಪ್ಪಾಯಿತು” ಎಂದು ಗೋಳಿಟ್ಟು ಬೇಡುತ್ತಾಳೆ.
ಆದರೆ ರಾಮ ಸ್ಥಿತಪ್ರಜ್ಞ. ಮರ್ಯಾದಾ ಪುರುಷೋತ್ತಮ. ಹಿಂದೆ ಅಪ್ಪ ಕೊಟ್ಟ ನ್ಯಾಸದ ವರ. ಕೈಕೇಯಿಯ ತಂದೆಯ ಬೇಡಿಕೆ. ಕೊಟ್ಟ ಮಾತು ಮಾತೆ. ಅದು ಹುಸಿಯಾಗಬಾರದು. ನಾನು ಈಗ ಆಡಿದ ಮಾತಿನಂತೆ ರಾಜ್ಯವನ್ನು ಬಿಟ್ಟು ಹೋದರೆ ಅಪ್ಪಯ್ಯನನ್ನು ನೋಡಿಕೊಳ್ಳಲು ಬೇರೆ ಮಕ್ಕಳಿದ್ದಾರೆ. ಹೋಗದಿದ್ದರೆ ನಮ್ಮ ಸೂರ್ಯವಂಶದ ಧವಳ ಕೀರ್ತಿಗೆ, ಕುಲ ಪರಂಪರೆಗೆ ಎಂದೂ ಅಳಿಸಲಾಗದ ಕಳಂಕ ಬರುತ್ತದೆ ಎಂದು ನಿರ್ಧರಿಸಿ, ಅಯೋಧ್ಯೆಯನ್ನು ಬಿಟ್ಟು ಹೊರಡಲು ದಶರಥನ ಕಾಲಿಗೆ ಎರಗಿ ಅನುಮತಿಯನ್ನು ಬೇಡುತ್ತಾನೆ. ಆಗ ನಾನು ರಾಮನನ್ನು ಕೂಗಿ ಕರೆದು ಬಾಚಿ ತಬ್ಬಿತಬ್ಬಿ ಅಪ್ಪಿಕೊಂಡು ಬಿಟ್ಟು ಹೋಗದಂತೆ ತಡೆಯಬೇಕು.
ನನಗೆ ಎದೆನೋವು ತೀವ್ರವಾಗುತ್ತಿದೆ. ಮೈ ಒಮ್ಮೆಲೆ ಬೆವರುತ್ತಿದೆ. ಕೈಕಾಲುಗಳಿಗೆ ಶಕ್ತಿಯೇ ಇಲ್ಲ. ಆದರೆ ಇದೇ ಪ್ರಸಂಗದ ಜೀವಾಳ. ರಾಮನನ್ನು ಕೂಗಿ ಕರೆಯಲು ಬಾಯಿ ತೆರೆದೆ. ಸ್ವರವೇ ಬರುತ್ತಿಲ್ಲ. ನಾನು ಉದಾಸೀನ ಮಾಡುವಂತೆಯೇ ಇಲ್ಲ. ನನ್ನ ಈ ದೃಶ್ಯದ ಭಾಗವನ್ನು ನೋಡಲೇ ಇಂದು ಸಾವಿರಾರು ಜನ ಬಂದಿದ್ದಾರೆ. ಭಾಗವತರ ಪದ್ಯ ಮುಗಿಯುತ್ತಲೇ ನನ್ನ ಶಕ್ತಿಯನ್ನೆಲ್ಲ ಒಟ್ಟು ಗೂಡಿಸಿ,
ರಾಮ ರಾಮ ಎನ್ನುತ್ತಾ ರಾಮನನ್ನು ಕರೆದೆ. ನೀನಿಲ್ಲದೇ ಅರೆಕ್ಷಣವೂ ನಾನು ಬದುಕಲಾರೆ. ನನ್ನ ಕೊನೆಯ ಈ ಕಾಲದಲ್ಲಿ ನೀನು ನನ್ನನ್ನು ಬಿಟ್ಟು ಹೋಗಬಾರದು. ಎಂದು ಬೇಡಿದೆ. ಗೋಳಾಡಿದೆ. ಅಂಗಲಾಚಿದೆ.
ಅರೆ ಇದೇನು?
ತಟ್ಟನೆ ನನ್ನ ಸ್ವರವೇ ಉಡುಗಿಹೋದ ಹಾಗಾಯಿತು. ನನ್ನ ಶರೀರವೇ ಕೆಳಗೆ ಕುಸಿಯುತ್ತಿರುವ ಹಾಗೆ ಅನ್ನಿಸಿ “ರಾಮ ರಾಮ” ಎನ್ನಲೂ ಶಕ್ತಿ ಸಾಲದಾಯ್ತು, ಕಣ್ಣುಗಳನ್ನು ಹೊರಳಿಸುತ್ತಾ, ಒಮ್ಮೆಲೇ ಮಗನ ನೆನಪಾಗಿ “ಕೃಷ್ಣಾ….. ಎಂದು ಕೂಗುತ್ತಾ, ಕುಳಿತ ಸಿಂಹಾಸನದಿಂದ ದೊಪ್ಪನೆ ಕೆಳಗೆ ಉರುಳಿ ಬಿದ್ದುಬಿಟ್ಟೆ.
ಒಮ್ಮೆಲೆ ಎಲ್ಲ ಸ್ತಬ್ಧ.
ದಾಸ ಭಾಗವತರು ತಾಳ ಕೆಳಗಿಟ್ಟು ಗಾಬರಿಯಿಂದ ಬರುತ್ತಾ ,”ಹ್ವಾಯ್, ಶೀನಯ್ಯರೇ ಎಂತ ಆಯ್ತು?” ಎಂದದ್ದು ಕೇಳಿಸುತ್ತಿತ್ತು.
ದಿನೇಶ ಉಪ್ಪೂರ
ಉಡುಪಿ