ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ‘ಡಾ.ಪಿ ದಯಾನಂದ ಪೈ ಎಸ್. ಬಿ. ಎಫ್. ಯುವ ಮಹೋತ್ಸವ್-2025’ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 09 ಫೆಬ್ರವರಿ 2025ರ ಭಾನುವಾರ ಮಂಗಳೂರಿನ ಡಾನ್ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.
ಉಸ್ತಾದ್ ರಫೀಕ್ ಖಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಎಂ. ಆರ್. ಪಿ. ಎಲ್. ಇದರ ಕೃಷ್ಣ ಹೆಗ್ಡೆ, ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಸ್ವಾಗತಿಸಿ, ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಪನ್ಯಾಸಕಿ ಧೃತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ ಜಿ. ಶೆಣೈ, ಡಾ.ರಮೇಶ್ ಕೆ.ಜಿ, ಉಪನ್ಯಾಸಕಿ ಉಜ್ವಲ್ ಪ್ರದೀಪ್ ಮೊದಲಾದವರು ಸಹಕರಿಸಿದರು.
ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ “ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ‘ಡಾ. ಪಿ. ದಯಾನಂದ ಪೈ ಎಸ್. ಬಿ. ಎಫ್. ಯುವ ಮಹೋತ್ಸವ’ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸ್ಪರ್ಧಾಳುಗಳಿಗೆ ಹಿರಿಯ ಕಲಾವಿದರಿಂದ ಸಂಗೀತ ಪ್ರಾತ್ಯಕ್ಷಿಕೆಯನ್ನೂ ನೀಡಲಾಗಿದೆ. ಯುವ ಕಲಾವಿದರ ಕೈಯಲ್ಲಿ ಶಾಸ್ತ್ರೀಯ ಸಂಗೀತ ಭದ್ರವಾಗಿದೆ.” ಎಂದರು.
ಸಮಾರಂಭದಲ್ಲಿ ಸ್ಪರ್ಧೆಯ ತೀರ್ಪುಗಾರರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂಡಿತ್ ರೋನು ಮಜುಂದಾರ್, ಅಂತಾರಾಷ್ಟ್ರೀಯ ಕಲಾವಿದರಾದ ಪಂಡಿತ್ ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂಡಿತ್ ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ.ಶಶಾಂಕ್ ಮಕ್ತೇದಾರ್ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್ ಇವರುಗಳನ್ನು ಗೌರವಿಸಲಾಯಿತು.
ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದ 18 ರಿಂದ 30 ವರ್ಷದೊಳಗಿನ 24 ಕಲಾವಿದರ ಸ್ಪರ್ಧೆಯ ಹಾಡುಗಾರಿಕೆ ವಿಭಾಗದಲ್ಲಿ ಇಶಾನ್ ಘೋಷ್ ಕೋಲ್ಕತಾ ಪ್ರಥಮ, ವಿಭಾ ಹೆಗ್ಡೆ ಯಲ್ಲಾಪುರ ದ್ವಿತೀಯ ಮತ್ತು ಮಿತ್ರಾ ಭಟ್ಟಾಚಾರ್ಯ ಕೋಲ್ಕತಾ ತೃತೀಯ ಬಹುಮಾನ ಪಡೆದರು. ವಾದ್ಯ ವಿಭಾಗದಲ್ಲಿ ಮಾಧವ್ ಕಲ್ರಾ ನವದೆಹಲಿ ಪ್ರಥಮ, ಆದಿತ್ಯ ಅಭಿಜಿತ್ ದೇಶಪಾಂಡೆ, ಪುಣೆ ದ್ವಿತೀಯ ಮತ್ತು ಕಾರ್ತಿಕ್ ಭಟ್ ಪಾಣೆಮಂಗಳೂರು ತೃತೀಯ ಬಹುಮಾನ ಗಳಿಸಿದರು. ಪ್ರಥಮ ಸ್ಥಾನಿಗೆ ರೂಪಾಯಿ 60 ಸಾವಿರ, ದ್ವಿತೀಯ ರೂಪಾಯಿ 40 ಸಾವಿರ ಹಾಗೂ ತೃತೀಯ ಸ್ಥಾನಿಗೆ ರೂಪಾಯಿ 20 ಸಾವಿರ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ವಿಜೇತ ಇಶಾನ್ ಘೋಷ್ ಕೋಲ್ಕತಾ ಹಾಗೂ ಮಾಧವ್ ಕಲ್ರಾ ನವದೆಹಲಿ ಅವರಿಗೆ ‘ಸ್ವರ ಭಾರತಿ’ ಬಿರುದು ಪ್ರದಾನ ಮಾಡಲಾಯಿತು. ಬಹುಮಾನ ವಿಜೇತ ಕಲಾವಿದರು ಪ್ರತಿಭಾ ಪ್ರದರ್ಶನ ನೀಡಿದರು.
ಪಂಡಿತ್ ರೋನು ಮಜುಂದಾರ್, ಹುಬ್ಬಳ್ಳಿಯ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಇವರ ಬಾನ್ಸುರಿ-ಗಾಯನ-ಸಿತಾರ್ ಜುಗಲ್ಬಂದಿ ಕಛೇರಿ ಸಂಗೀತಾಸಕ್ತರ ಗಮನ ಸೆಳೆಯಿತು. ಮುಂಬೈಯ ಪಂ.ಯಶವಂತ್ ವೈಷ್ಣವ್ ತಬ್ಲಾ ಹಾಗೂ ಪ್ರೊ. ನರೇಂದ್ರ ಎಲ್. ನಾಯಕ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.