ಕಾಸರಗೋಡು : ಮನಶುದ್ದಿ ಮತ್ತು ಆತ್ಮಶುದ್ಧಿಗಾಗಿ ದೇವರು ಸಂಗೀತವನ್ನು ಸೃಷ್ಟಿ ಮಾಡಿದ್ದಾನೆ ಒಳ್ಳೆಯ ಸಂಗೀತ ಹಾಡುಗಳನ್ನು ಕೇಳುವುದರಿಂದ ಒಳ್ಳೆಯ ಸಂಸ್ಕಾರ ಜೊತೆಗೆ ಮನ ಶಾಂತಿ ಸಿಗುತ್ತದೆ ಎಂದು ಖ್ಯಾತ ಛಾಯಾಚಿತ್ರಗ್ರಾಹಕ, ವಿಡಿಯೋಗ್ರಾಫರ್ ಗಣೇಶ್ ಶೆಣೈ ಕುಂಬಳೆ ಹೇಳಿದರು.
ಅವರು ಕಾಸರಗೋಡಿನ ಹೆಸರಾಂತ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಪದ್ಮಗಿರಿ ಕಲಾಕಟೀರದಲ್ಲಿ ದಿನಾಂಕ 21 ಜೂನ್ 2025ರಂದು ಜರಗಿದ ‘ಸ್ವರ ಚಿನ್ನಾರಿ – 5’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವ ವಿಖ್ಯಾತ ಗಾಯಕ ಪದ್ಮಭೂಷಣ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಅವರ ಸಂಸ್ಮರಣೆಯೊಂದಿಗೆ ಅವರು ಹಾಡಿದ ಹಾಡುಗಳನ್ನು ಹಾಡುವ ಮುಖಾಂತರ ಅವರಿಗೆ ಗೀತನಮನ ಸಲ್ಲಿಸಿರುವುದು ಅತ್ಯಂತ ಶ್ಲಾಘನೀಯ. ಇಂತಹ ಶ್ರೇಷ್ಠ ಗಾಯಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಸಮಾಜ ಸೇವಕ, ಹಿರಿಯ ನೇತಾರ ಶ್ರೀ ವಿ. ರವೀಂದ್ರನ್ ಕುಂಬಳೆ ಮಾತನಾಡಿದರು. ಮಂಗಳೂರಿನ ಖ್ಯಾತ ಛಾಯಾಗ್ರಾಹಕರಾದ ಚಂದ್ರಕಾಂತ ವೋರಾ (ಟಿಕ್ಕು), ನರೇಂದ್ರ ಕಾಮತ್, ನಂದಕಿಶೋರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕರಾದ ಬಿ. ಪಿ. ಗೋಪಾಲಕೃಷ್ಣ ಪ್ರಾರ್ಥನೆ ಹಾಡಿದರು. ಸ್ವರ ಚಿನ್ನಾರಿಯ ಸಂಚಾಲಕರಾದ ಕಾಸರಗೋಡು ಚಿನ್ನಾ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದ ಕೊನೆಯಲ್ಲಿ ಸಮಾರೋಪ ಭಾಷಣ ಗೈದ ಖ್ಯಾತ ಚಲನಚಿತ್ರ ನಟ, ಸಂಕಲನಕಾರ, ಈ ಟಿವಿಯಲ್ಲಿ ‘ಎದೆತಂಬಿ ಹಾಡುವೆನು’ ಕಾರ್ಯಕ್ರಮದ ನಿರ್ಮಾಪಕ ಕೆ. ಎಸ್. ಶ್ರೀಧರ್ ರವರು ಮಾತನಾಡಿ “ಸಂಗೀತ ಮತ್ತು ಯೋಗ ಒಂದು ಆಧ್ಯಾತ್ಮಿಕ ಶಿಸ್ತು. ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವ ಒಂದು ಸೂಕ್ಷ್ಮ ವಿಜ್ಞಾನ. ಎಸ್. ಪಿ. ಬಿ. ಅವರ ಧ್ವನಿಯಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಇದೆ. ಅವರ ಜೊತೆ ‘ಎದೆ ತುಂಬಿ ಹಾಡುವೆನು’ ಎಂಬ ಕಾರ್ಯಕ್ರಮದಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕಾರ್ಯಕ್ರಮ ನಡೆಸಿಕೊಡುವ ಸಮಯದಲ್ಲಿ ಅವರ ಶಿಸ್ತು, ಪರಿಶ್ರಮ ಮಕ್ಕಳಿಗೆ ಅವರು ಕೊಡುತ್ತಿದ್ದ ಮಾರ್ಗದರ್ಶನ ಅದೊಂದು ಅಪೂರ್ವ ಅನುಭವವೇ ಸರಿ. ಅವರ ಆಶೀರ್ವಾದ ಪಡೆದು ನಿಮ್ಮ ಪ್ರಯಾಣ ಸಾಗಲಿ” ಎಂದರು.
ಕನ್ನಡದ ಖ್ಯಾತ ಬರಹಗಾರ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ ಕರೋಕೆ ಗಾಯಕ ಗಾಯಕಿಯರಿಗೆ ಶುಭ ಹಾರೈಸಿದರು. ಸ್ವರ ಚಿನ್ನಾರಿಯ ಬಬಿತ ಆಚಾರ್ಯ, ಉಷಾ ಟೀಚರ್ ಮುಂತಾದವರು ಉಪಸ್ಥಿತರಿದ್ದರು.