ಕಾಸರಗೋಡು : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಎಡನೀರು ಸ್ವಾಮೀಜೀಸ್ ಪ್ರೌಢ ಶಾಲೆಯಲ್ಲಿ ದಿನಾಂಕ 02 ಆಗಸ್ಟ್ 2025ರಂದು ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 4ನೇ ಶಿಬಿರ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಪ್ರೊ. ಅನಂತ ಪದ್ಮನಾಭ ರಾವ್ ಮಾತನಾಡಿ “ಮಕ್ಕಳು ತಮ್ಮ ಹಿರಿಯರ ಮಾತಿಗೆ ಬೆಲೆ ಕೊಡಬೇಕು. ಅವರ ಶ್ರಮದಿಂದ ಈ ಸಾಹಿತ್ಯ ಬಂದಿದೆ. ಅವರ ಸಾಹಿತ್ಯ ಕೃಷಿಯನ್ನು ನಾವು ಬೆಳೆಸಬೇಕು. ಕನ್ನಡ ಭಾಷೆಯ ಮಕ್ಕಳು ಕನ್ನಡ ಸಾಹಿತ್ಯದ ರಕ್ಷಕರಾಗಬೇಕು” ಎಂದು ಹೇಳಿದರು.
ಶಿಬಿರವನ್ನು ಉದ್ಘಾಟಿಸಿದ ಎಡನೀರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯರು ಮಾತನಾಡಿ “ನಮ್ಮ ಹಿರಿಯರು ಕಾಸರಗೋಡಿನಲ್ಲಿ ದೊಡ್ಡ ಮಟ್ಟದಲ್ಲಿ ಕನ್ನಡ ಸೇವೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ಕಲರವ ಹೆಚ್ಚಬೇಕು. ಕನ್ನಡಿಗರು ಜಿಲ್ಲೆಯಲ್ಲಿ ಕನ್ನಡ ರಕ್ಷಣೆಯನ್ನು ಜವಾಬ್ದಾರಿಯಾಗಿ ಸ್ವೀಕರಿಸಬೇಕು” ಎಂದು ಹೇಳಿದರು.
ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಅಧ್ಯಕ್ಷರಾದ ನಾರಾಯಣನ್ ಮಾತನಾಡಿ “ಹಿಂದೆ ಕಾಸರಗೋಡಿನ ಶಾಲೆಗಳಲ್ಲಿ ಪ್ರತೀ ವಾರವೂ ನಿಗದಿತ ದಿನದಂದು ಅರ್ಧ ಗಂಟೆ ಸಾಹಿತ್ಯ ಸಂವಾದ, ಗೋಷ್ಠಿ, ವಿಮರ್ಶೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದುವು. ಇದು ಈಗ ಸ್ಥಗಿತವಾಗಿದೆ. ಅದು ಮತ್ತೆ ಪ್ರತೀ ಶಾಲೆಯಲ್ಲಿ ಆರಂಭವಾಗಬೇಕು” ಎಂದು ಹೇಳಿದರು.
ಸಭೆಯಲ್ಲಿ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ಕೆ. ವಾಮನ್ ರಾವ್ ಬೇಕಲ್, ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಪರಿಷತ್ತಿನ ನಿರ್ದೇಶಕ ಕೆ.ಎನ್. ವೆಂಟ್ರಮಣ ಹೊಳ್ಳ, ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ರಾಜೇಂದ್ರ ಕಲ್ಲೂರಾಯರಿಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ-2025 ಪ್ರದಾನ ಮಾಡಿ ಗೌರವಿಸಲಾಯಿತು. ವಿರಾಜ್ ಅಡೂರು ಇವರು ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಶಿಕ್ಷಕ ವೆಂಕಟಕೃಷ್ಣ ಸ್ವಾಗತಿಸಿ, ಸಾಹಿತಿ ವಿಜಯರಾಜ ಪುಣಿಂಚಿತ್ತಾಯ ವಂದಿಸಿ, ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ನಿರೂಪಿಸಿದರು. ನಂತರ ನಡೆದ ಶಿಬಿರದ ಚುಟುಕು ರಚನಾ ತರಬೇತಿಯಲ್ಲಿ ವಿ.ಬಿ. ಕುಳಮರ್ವ ಹಾಗೂ ವ್ಯಂಗ್ಯಚಿತ್ರ ರಚನಾ ತರಬೇತಿಯಲ್ಲಿ ವಿರಾಜ್ ಅಡೂರು ಮಾರ್ಗದರ್ಶನ ನೀಡಿದರು. ಕಮ್ಮಟದಲ್ಲಿ ಶಿಬಿರಾರ್ಥಿಗಳು ರಚಿಸಿದ ‘ಕಾರ್ಟೂನ್ ಪ್ರಪಂಚ’ ಹಾಗೂ ‘ಚುಟುಕು ಸಿರಿಗಂಧ’ ಎಂಬ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ಶಿಬಿರದಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.