Subscribe to Updates

    Get the latest creative news from FooBar about art, design and business.

    What's Hot

    ಎಂ. ಲಕ್ಷ್ಮೀನಾರಾಯಣ ಭಟ್ ಇವರಿಗೆ ನುಡಿನಮನ

    June 11, 2025

    ಜನ ಮೆಚ್ಚುಗೆಗೆ ಪಾತ್ರವಾದ ‘ಚಿಣ್ಣರ ಗಾನ ಸುಧೆ’

    June 11, 2025

    ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಥೆ – ‘ತೊರೆದು ಹೋಗುವ ಮುನ್ನ’
    Kannada

    ಕಥೆ – ‘ತೊರೆದು ಹೋಗುವ ಮುನ್ನ’

    June 10, 2025No Comments10 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮನಸ್ಸು” ಸೇವಾಶ್ರಮ! ಭಾವಲೋಕಕ್ಕೆ ಸುಸ್ವಾಗತ
    ಕಾರು ನಿಲ್ಲಿಸಿ ಗೇಟಿನ ಮೇಲೆ ತೂಗು ಹಾಕಿದ್ದ ಫಲಕವನ್ನೊಮ್ಮೆ ಓದಿದ ಸಾಗರ್.
    “ಹ್ಮ್……ಎಷ್ಟು ಚೆಂದದ ಹೆಸರು, ಮನಸ್ಸು…..ಹಾ ಮನಸ್ಸು” ಪುನರುಚ್ಛರಿಸಿದವನು ಕಾರನ್ನು ಗೇಟಿನ ಹೊರಗಡೆಯಿದ್ದ ದೇವದಾರು ಮರದ ಕೆಳಗೆ ನಿಲ್ಲಿಸಿ ಮೊಬೈಲ್ ತೆಗೆದು ಕರೆ ಮಾಡಿದ.
    “ಮಹೋದಯ, ಬಂದಿದ್ದೇನೆ…..ಗೇಟಿನ ಹೊರಗಿರುವೆ” ಎಂದಾಗ “ಸರಿ, ಒಳಗೆ ಬನ್ನಿ” ಅತ್ತ ಕಡೆಯಿಂದ ಹೇಳಿದ್ದೇ ಗೇಟಿನ ಬಳಿ ಬಂದು ನಿಂತ.
    “ಕೌನ್ ಹೋ ತುಮ್?” ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ “ಮಹೋದಯ್ ಬುಲಾಯ” ಎಂದು ಹೇಳಿದಾಗ “ಠೀಕ್ ಹೈ ಸಾಬ್” ಗೇಟು ತೆರೆದು ಒಳಬಿಟ್ಟ.
    ಗೇಟು ದಾಟಿ ಒಳಬಂದವನ ಮನಸ್ಸೂ ಚಿಟ್ಟೆಯ ಲಾರ್ವದಂತೆ ಮೆಲ್ಲಮೆಲ್ಲನೆ ತೆವಳಲಾರಂಭಿಸಿತು ಮಹೋದಯರ ಕೊಠಡಿ ಕಡೆಗೆ. ನಡೆಯುತ್ತಿದ್ದವನೊಮ್ಮೆ ಸುತ್ತಲೂ ಕಣ್ಣಾಡಿಸಿದ. ಐದಾರು ವರ್ಷದ ಪುಟ್ಟ ಮಗುವಿನಿಂದ ಹಿಡಿದು ಎಂಬತ್ತರ ಹರೆಯದವರೆಗಿನ ಬದುಕಿನ ಎಲ್ಲಾ ಮುಖ್ಯಘಟ್ಟಗಳೂ ಒಂದೇ ಬಿಂದುವಿನಲ್ಲಿ ಸಂಧಿಸಿದಂತೆ ಕಂಡಿತು. ಎಲ್ಲರೂ ತಂತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿ ವಿಹರಿಸುವವರು ಹೊರಗಿನ ಆಗುಹೋಗುಗಳ ಕುರಿತು ಚಿಂತೆಯಿಲ್ಲ. ಎಷ್ಟು ಚೆಂದದ ಬದುಕು!
    ಫಾ| ಪ್ರಕಾಶ್ ಸೆಲ್ವಾರಿಸ್
    ಸೇವಾಲಯ ಮುಖ್ಯಸ್ಥರು
    ಬಾಗಿಲಿನಲ್ಲಿದ್ದ ಫಲಕವನ್ನೋದಿ ಸಂದಿನಿಂದ ಕೋಣೆಯೊಳಗೊಮ್ಮೆ ಇಣುಕಿದ. ಯಾರೋ ಮಾತನಾಡುತ್ತಿರುವುದನ್ನು ಗಮನಿಸಿದವನು ತನ್ನ ಸರದಿಗಾಗಿ ಹೊರಗಿದ್ದ ಕಲ್ಲು ಬೆಂಚಿನಲ್ಲಿ ಕಾಯುತ್ತಾ ಕುಳಿತ.
    ಆಶ್ರಮ ಸಾಗರ್ ಗೆ ಹೊಸತಲ್ಲ. ಡಾ.ಸಾಗರ್ ಆಗಿ ಬಹಳಷ್ಟು ಸಲ ಇಲ್ಲಿಗೆ ಬಂದಿದ್ದ. ಹಲವು ಮನಸುಗಳ ಖಾಯಿಲೆಯನ್ನೂ ಗುಣಪಡಿಸಿದ್ದ. ಊರಿನಲ್ಲಿ ಡಾ.ಸಾಗರ್ ಮನೋವ್ಯಾಧಿ ಗುಣಪಡಿಸುವ ಫೇಮಸ್ ಡಾಕ್ಟರ್. ಆದರೆ ತನ್ನದೇ ಮನಸ್ಸನ್ನು? ಉತ್ತರ ಕಂಡುಕೊಳ್ಳಲಾಗದೆ ಸೋತು ಆಶ್ರಮಕ್ಕೆ ಬಂದಿದ್ದಾನೆ. ನಗಬೇಕೆನ್ನಿಸಿತು. ಆದರೆ ನಗುವೂ ಆ ಕ್ಷಣಕ್ಕೆ ಸಾಗರನನ್ನು ಸೋಲಿಸಿತ್ತು. ಹೇಗಿದ್ದ ಸಾಗರ್ ಹೇಗಾದ! ಎಂದುಕೊಳ್ಳುವಷ್ಟರಲ್ಲಿ ಮೊಬೈಲ್ ಇಡೀ ಪರಿಸರವನ್ನೇ ಹಾಳುಮಾಡಿ ಬಿಡುವಂತೆ ರಿಂಗಣಿಸತೊಡಗಿದಾಗ ಸ್ಕ್ರೀನ್ ಮೇಲೆ ಕಂಡ ಹೆಸರು ಜಿಗುಪ್ಸೆ ಹುಟ್ಟಿಸಿತು.
    ಒಂದು, ಎರಡು, ಮೂರು, ನಾಲ್ಕು ಮತ್ತೆ ಮತ್ತೆ ಕರೆ ಬಂದಾಗ ಒಲ್ಲದ ಮನಸ್ಸಿನಿಂದ ಹಲೋ ಎಂದಿದ್ದಷ್ಟೇ. “ಅಲ್ವೋ ಸಾಗರ್, ಏನಿದು ನಿನ್ನ ಹುಚ್ಚಾಟ? ಸ್ಮಿತಾ ಹೇಳಿದ್ಳು ನೀನು ಆಶ್ರಮಕ್ಕೆ ಹೊರಟಿದ್ದೀ ಅಂಥ! ಈ ಕರ್ಮಕ್ಕೆ ನಿಂಗೆ ಹೆಂಡ್ತಿ, ಮಕ್ಳು ಯಾಕೆ ಬೇಕಿತ್ತು? ಮೊದ್ಲೇ ಸೇರಬೇಕಿತ್ತು” ಅತ್ತ ಕಡೆಯಿಂದ ಸ್ಮಿತಾಳ ಅಪ್ಪ ಎಂದರೆ ಮಾವ ಸಿಡುಕತೊಡಗಿದ್ದರು.
    “ಮಾವ, ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಬಹಳಷ್ಟು ಯೋಚ್ನೆ ಮಾಡೀನೇ ಬಂದಿದೀನಿ. ನಿಮ್ಮ ಮಗ್ಳಿಗೆ ನಾನ್ಯಾಕೆ ಬೇಕು ಹೇಳಿ?” ಕೇಳಿದ.
    “ಏನೋ ಇದು ನಿನ್ನ ಉದ್ಧಟತನ? ಆ ಪುಟ್ಟ ಮಕ್ಳನ್ನೂ ಅವ್ಳನ್ನೂ ಬಿಟ್ಟು ನಿಂಗೆ ಇರೋಕೆ ಆಗುತ್ತಾ!”
    “ಪ್ರಯತ್ನಿಸುವೆ ಮಾವ. ಇಷ್ಟು ದಿನ ಇದೇ ಸೆಂಟಿಮೆಂಟ್ಸ್ ನನ್ನನ್ನು ಸೋಲೋ ಹಾಗೆ ಮಾಡಿದ್ದು. ಆದರೆ ಈ ಸಲ ಹಾಗಾಗಲ್ಲ. ನಿಮ್ಮ ಮಗ್ಳಿಗೂ ಹೇಳಿಬಿಡಿ, ಅವ್ಳಿಗಿಷ್ಟದ ಬದುಕು ಆಯ್ಕೆ ಮಾಡೋದಿಕ್ಕೆ ಪೂರ್ತಿ ಸ್ವಾತಂತ್ರ‍್ಯ ಕೊಟ್ಟಿದ್ದೇನೆ ಅಂಥ” ಸಾಗರ ಶಾಂತ ಸ್ವರದಲ್ಲೇ ಹೇಳಿದರೂ ಮಾವನ ಧ್ವನಿ ಮಾತ್ರ ಏರಿತು.
    “ಇದೇ ನಿನ್ನ ಕೊನೆಯ ನಿರ್ಧಾರಾನ! ಒಂದು ಮಾತು ನೆನಪಿಟ್ಕೋ…..ಈಗ ನೀನು ಬಿಟ್ಟು ಹೋಗಿದ್ದೇ ಹೌದಾದ್ರೆ ನನ್ನ ಮಗ್ಳ ಕಡೆಗೆ, ನಿನ್ನ ಮಕ್ಳ ಕಡೆಗೆ ಯಾವತ್ತೂ ತಿರುಗಿ ನೋಡ್ಬೇಡ, ಮುಖ್ಯವಾಗಿ ಇನ್ನೊಂದು ವಿಷ್ಯ…..ನನ್ನ ಆಸ್ತಿ ಕಡೆಗೂ……” ಏನೋ ಹೇಳಲು ಹೊರಟವರ ಮಾತನ್ನು ಅರ್ಧಕ್ಕೇ ನಿಲ್ಲಿಸಿ “ನಿಮ್ಮ ಮಗ್ಳನ್ನೂ ನನ್ನ ಮಕ್ಳನ್ನೂ ನೋಡದೆ ಇರೋದು ನಂಗೆ ಹೊಸ ವಿಷ್ಯಾನಾ? ನಾನು ಬಡವ ಮಾವ, ನಿಮ್ಮಷ್ಟು ಸಂಪತ್ತಿಲ್ಲ. ಇದೇ ಕಾರಣಕ್ಕೆ ತಾನೇ ನಿಮ್ಮ ಮಗ್ಳು ನನ್ನ ಮಕ್ಳನ್ನು ರ‍್ಕೊಂಡು ನಿಮ್ಮ ಮನೆ ಸೇರಿದ್ದು? ಆಸೆಯಿಂದ ನಾನು ನೋಡೋಕೆ ಬರೋವಾಗೆಲ್ಲ ಫಾರಿನ್ ಟ್ರಿಪ್ ನಲ್ಲಿ ಇರ್ತಿದ್ದಿದ್ದು? ನಿಮ್ಮ ಆಸ್ತಿ ಮೈ ಫೂಟ್……” ತನಗರಿವಿಲ್ಲದೇ ಸ್ವರ ಏರಿದೆಯೆಂದು ಗಮನಕ್ಕೆ ಬಂದಿದ್ದೇ ಅಕ್ಕಪಕ್ಕ ನಡೆದಾಡುತ್ತಿದ್ದವರು ತನ್ನತ್ತ ನೋಡುತ್ತಿದ್ದಾರೆಂದು ತಿಳಿದಾಗಲೇ.
    ಮನಸ್ಸನ್ನು ಮತ್ತೆ ಹತೋಟಿಗೆ ತಂದುಕೊಂಡು “ಮಾವ ನನ್ನ ಹೆಂಡ್ತಿ ಐ ಮೀನ್ ನಿಮ್ಮ ಮಗ್ಳಿಗೆ ಬೇಕಾದ ಹಾಗೆ ನಾನಿಲ್ಲ. ಇದು ಅವ್ಳೇ ಹೇಳಿರೋ ಮಾತು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡದೆಯೇ ವರ್ಷಗಳೇ ಕಳೆಯಿತು. ಹೊರಗೆ ಸಂಸಾರಿಯ ಸೋಗಿನಲ್ಲಿ ಸನ್ಯಾಸ ಜೀವನ ನಡೆಸುವ ಕರ್ಮ ಯಾಕೆ ಬೇಕು? ಆಶ್ರಮದಲ್ಲೇ ಸನ್ಯಾಸಿಯಾಗಿ ಇಲ್ಲಿರೋ ನೊಂದ ಮನಸುಗಳ ಆರೈಕೆಯಲ್ಲಿ ನೆಮ್ಮದಿ ಹುಡುಕುತ್ತೇನೆ ಬಿಟ್ಬಿಡಿ. ನಿಮ್ಮ ಮಗಳೇ ಒಪ್ಪಿಗೆ ಕೊಟ್ಟ ಮೇಲೆ ನಿಮ್ಮ ಪರ್ಮೀಷನ್ ಕೇಳೋ ಅಗತ್ಯ ಇಲ್ಲವೆನಿಸುತ್ತದೆ” ಎಂದು ಕರೆ ತುಂಡರಿಸಿ ಮೊಬೈಲ್ ಸ್ವಿಚ್ ಆಫ್ ಮಾಡುವಾಗ ಬೇಡವೆಂದರೂ ಹತ್ತು ರ‍್ಷದ ಕೆಳಗಿನ ಆ ದಿನ ಕಣ್ಮುಂದೆ ಬಂತು.

    “ಎಕ್ಸ್ ಕ್ಯೂಸ್ ಮೀ…..ಪ್ಲೀಸ್ ಗಿವ್ ಮೀ ಯುವರ್ ಮೊಬೈಲ್ ಫಾರ್ ವನ್ ಎಮರ್ಜೆನ್ಸಿ ಕಾಲ್” ಧ್ವನಿಗೆ ಕುಳಿತ ಚೇರಿನಿಂದ ಹಿಂದೆ ತಿರುಗಿ ನೋಡಿದರೆ ಕೂಲಿಂಗ್ ಗ್ಲಾಸ್ ಧರಿಸಿದ್ದ ಬಾಬ್ ಕಟ್ ಹುಡುಗಿಯ ಸುಂದರ ಮುಖ. ಕಾನ್ಫರೆನ್ಸಿಗಾಗಿ ಬಾಂಬೆಗೆ ಹೊರಟಿದ್ದ ಸಾಗರ್ ಫ್ಲೈಟ್ ಡಿಲೇ ಎಂಬ ಮೆಸೇಜ್ ಬಂದ ಕಾರಣ ಹೇಗಪ್ಪಾ ಹೊತ್ತು ಕಳೆಯೋದು ಎಂಬ ಚಿಂತೆಯಲ್ಲಿ ಏರ್ ಪೋರ್ಟ್ ನ ಲಾಂಜ್ ನಲ್ಲಿ ಮೂಲೆಯಲ್ಲಿ ಕುಳಿತಿದ್ದ. ಇಲ್ಲಿ….! ಅದೂ ಪಕ್ಕದಲ್ಲಿ ಹುಡುಗಿಯೊಬ್ಬಳು ಬಂದು ಕುಳಿತು ಹೆಲ್ಪ್ ಕೇಳಿದಳೆಂದರೆ ತುಂಟ ಸಾಗರ್ ಮನಸ್ಸು ಸುಮ್ಮನಿದ್ದೀತೇ?
    “ಶ್ಯೂರ್….ಶ್ಯೂರ್…..” ಎಂದವನೇ ಮೊಬೈಲ್ ತೆಗೆದು ಕೊಟ್ಟ. ಅಲ್ಲೇ ಕುಳಿತು ಒಂದರ್ಧ ಗಂಟೆ ಮಾತನಾಡಿದವಳು ಮತ್ತೆ ಮೊಬೈಲ್ ಕೈಗಿತ್ತಾಗ “ಇಸ್ ಇಟ್ ಎಮರ್ಜೆನ್ಸಿ ಕಾಲ್? ಮೋರ್ ದೆನ್ ಹಾಫ್ ಆನ್ ಹವರ್” ವಾಚ್ ನೋಡಿಕೊಂಡು ಹೇಳಿದಾಗ ವ್ಯಂಗ್ಯ ಅರ್ಥವಾದವಳಂತೆ “ಮಿಸ್ಟರ್….ತಪ್ಪು ತಿಳ್ಕೋಬೇಡಿ” ಕನ್ನಡ ಕೇಳಿ ಮನದಲ್ಲೇ ಮಂಡಿಗೆ ತಿಂದ.
    “ಓಹ್, ನಮ್ಮ ಭಾಷೆಯವ್ರೇ….ಎಲ್ಲೋ ಇಂಗ್ಲಿಷ್ ಗೆ ಹುಟ್ಟಿದವ್ರು ಅಂದ್ಕೊಂಡೆ ನಿಮ್ಮನ್ನು ನೋಡಿ” ಮತ್ತೆ ರೇಗಿಸಿದ. “ಏನ್ರೀ ನೀವು! ನನ್ನ ಟೆನ್ಷನ್ ನಂಗಾದ್ರೆ ನೀವು ಕಾಲೆಳಿತಿದ್ದೀರಾ?” ಜೋರಾಗಿಯೇ ಹೇಳಿದಳು. “ಸುಮ್ನೆ ಜೋಕ್ ಮಾಡ್ದೆ ಮಿಸ್, ಹೇಳಿ ಏನು ನಿಮ್ಮ ಟೆನ್ಷನ್? ಕಾಲ್ ಕೂಡಾ ಭಯದಲ್ಲೇ ಮಾಡಿದ ಹಾಗಿತ್ತು” ಎಂದಾಗ “ಅದೆಲ್ಲ ಗಮನಿಸಿದ್ರಾ? ಹಿಂದಿನ ಸೀಟಿನಿಂದ ಎದ್ದು ಪಕ್ಕದಲ್ಲಿ ಬಂದು ಕುಳಿತವಳ ಪರ್ ಫ್ಯೂಮ್ ಘಮ ಎದೆಯೊಳಗೆ ಚಿಟ್ಟೆ ಬಿಟ್ಟಂತೆ ಆಗಿತ್ತು.
    “ಹ್ಮ್ ಹೌದು…..ಏನಾಯ್ತು?” ಕೇಳಿದ.
    “ಮಿಸ್ಟರ್, ನಾನು ಬಾಂಬೇಲಿ ಓದ್ತಿರೋದು. ನಾಳೆಯಿಂದ ಎಕ್ಸಾಂ ಇದೆ. ಯಾವಾಗ್ಲೂ ನನ್ಜೊತೆ ಅಮ್ಮ ಅಥವಾ ಅಪ್ಪ ಇರೋರು ಎಕ್ಸಾಂ ಟೈಮಲ್ಲಿ. ಫಸ್ಟ್ ಟೈಮ್ ಒಬ್ಳೇ ಇದೀನಿ ಈ ಸಿಚುವೇಷನ್ನಿನಲ್ಲಿ” ಹೇಳಿದವಳ ಕಣ್ತುಂಬಾ ನೀರು.
    “ಇಷ್ಟೇನಾ ಬಿಡಿ….ಎಷ್ಟು ದಿನ ಇದೆ ಎಕ್ಸಾಂ?”
    “ಹತ್ತು ದಿನ….ಡ್ಯಾಡ್ ಬ್ಯುಸಿನೆಸ್ ಟೂರ್ ಗೆ ಹೋಗಿದ್ದಾರೆ, ಮಾಮ್ ಲೇಡೀಸ್ ಕ್ಲಬ್ ಆನುವಲ್ ಡೇ ಬ್ಯುಸಿ” ಎಂದಳು.
    ತಾನು ಹದಿನೈದು ದಿನ ಬಾಂಬೇಲಿ ಇರೋದು ನೆನಪಾಗಿ “ನಾನಿದ್ದೇನೆ, ಚಿಂತೆ ಬಿಡಿ” ಥಟ್ಟನೆ ಹೇಳಿದ.
    “ವ್ಹಾಟ್ ಡು ಯು ಮೀನ್?” ಕೇಳಿದಾಗಲೇ ತಾನು ಏನೆಂದೆ ಎಂಬುದು ನೆನಪಾಗಿದ್ದು ಸಾಗರ್ ಗೆ.
    “ತಪ್ಪು ತಿಳಿಬೇಡಿ ಮಿಸ್. ನಾನೂ ಹದಿನೈದು ದಿನ ಬಾಂಬೇಲಿ ಇದೀನಿ. ಸೆಮಿನಾರ್ ಅಂಥ ಹೊರಟಿದ್ದೇನೆ. ಹಾಗೇ ಲಾಂಗ್ ಲೀವ್ ಹಾಕಿ ಈ ಸಲ ಬಾಂಬೆ ಸುತ್ತುವ ಯೋಚ್ನೆ. ಹೇಗೂ ಫ್ರೀ ಇರ್ತಿನಿ, ಏನಾದ್ರೂ ಸಹಾಯ ಬೇಕಿದ್ರೆ ಕೇಳ್ಬಹುದು ಅಂತಷ್ಟೇ…..” ತಡವರಿಸಿಕೊಂಡೇ ಹೇಳಿದ.
    “ಥ್ಯಾಂಕ್ಸ್…‌ನಿಮ್ಮ ಹೆಸರು?”
    “ಸಾಗರ್…..ಡಾ.ಸಾಗರ್” ಹೆಮ್ಮೆಯಿಂದ ಹೇಳಿದ.
    “ಓಹ್…..ನೀವು ಡಾಕ್ಟರ್?” ಕೇಳಿದಾಗ “ಯೆಸ್ ಮಿಸ್….ಸೈಕ್ರಿಯರ‍್ಟಿಸ್ಟ್” ಎಂದ.
    “ಹಾಗೆ ನಿಮ್ಗೆ ನನ್ನ ಟೆನ್ಷನ್ ಅರ್ಥವಾಗಿದ್ದು” ಅವನ ಉದ್ಯೋಗ ತಿಳಿದ ಮೇಲೆ ಇರಬೇಕೇನೋ! ಅವಳ ಮಾತಿನಲ್ಲಿ ಸ್ನೇಹ‌ ಮುಂದುವರಿಸುವಂತಹ ಬೇಡಿಕೆಯಿದೆ ಎಂದು ಮನೋರೋಗ ತಜ್ಞ ಡಾ.ಸಾಗರ್ ಗೆ ಅರ್ಥವಾಗಿತ್ತು.
    “ಅಲ್ಲ ಮಿಸ್, ನನ್ನ ಹೆಸರು ಕೇಳಿ ನಿಮ್ಮ‌ ಹೆಸರು ಹೇಳ್ಲೇ ಇಲ್ಲ” ಕೇಳಿದಾಗ “ಸ್ಸಾರಿ, ಸ್ಮಿತಾ ದೇವ್ ಅಂಥ ನನ್ನ ಹೆಸರು, ಬಾಂಬೇಲಿ ಎಮ್.ಬಿ.ಎ ಮಾಡ್ತಿದ್ದೇನೆ” ಎಂದಳು.

    “ದೇವ್….! ಆರ್ ಯೂ ಮಿಸೆಸ್?” ಸ್ವಲ್ಪ ನಿರಾಸೆಯಿಂದ ಕೇಳಿದಾಗ “ನೋ….ನೋ….ದೇವ್ ಮಿಶ್ರಾ ಮೈ ಫಾದರ್” ಮಾತು ಕೇಳಿ ಮತ್ತೆ ಹೊಸತನ.
    “ಅದೇನು ಬೆಂಗ್ಳೂರು ಬಿಟ್ಟು ಬಾಂಬೇಲಿ ಎಮ್.ಬಿ.ಎ?” ಕೇಳಿದ.
    “ಹಾಗೇನಿಲ್ಲ. ಡ್ಯಾಡ್ ಇಂಡಸ್ಟ್ರಿಯಲಿಸ್ಟ್, ಬಾಂಬೇಲೂ ಇಂಡಸ್ಟ್ರೀ….ಓನ್ ಫ್ಲ್ಯಾಟ್ ಎಲ್ಲಾ ಇದೆ. ಅವ್ರ ಬ್ಯುಸಿನೆಸ್ ನೋಡೋ ತರಹ ನಾನು ಓದ್ಬೇಕು ಅನ್ನೋದು ಅವ್ರಾಸೆ” ತುಟಿಗೆ ಮುತ್ತಿಕ್ಕುತ್ತಿದ್ದ ತುಂಡು ಕೂದಲನ್ನು ಹಿಂದೆ ಸರಿಸಿ ಹೇಳಿದಳು ಪೋರಿ.
    “ಭಲೇ ಆಸ್ತಿವಂತರ ಮನೆಯ ಚೆಲುವೆ…..ಇವ್ಳ ಕತ್ತಿಗೆ ಮುತ್ತಿಕ್ಕುವ ಭಾಗ್ಯವಂತ ನಾನೇ ಆಗ್ಬರ‍್ದೇ?” ಮನದಲ್ಲಿ ಎಂದುಕೊಂಡಿದ್ದು ಕನಸೋ ಎಂಬಂತೆ ನನಸಾಗಿತ್ತು ಸಾಗರ್ ಗೆ.
    ಬಾಂಬೆ ಏರ್ ಪೋರ್ಟ್ ಬಿಟ್ಟು ಹೊರಬರುವಾಗ “ಮೊಬೈಲ್ ನಂಬರ್ ಶೇರ್ ಮಾಡ್ಬಹುದಲ್ಲ! ಇಲ್ಲಿ ನಂಗೂ ಪರಿಚಯದವ್ರು ಯಾರಿಲ್ಲ, ನಿಮ್ಗೂ ಒಬ್ರೇ ಎಂಬ ಭಯ ಇರೋವಾಗ ಹೀಗೆ ಮಾತಾಡೋಕೆ ಆದ್ರೂ….” ಸಾಗರ್ ಹೀಗೆ ಹುಡ್ಗೀರ ನಂಬರ್ ತೆಗೆದುಕೊಳ್ಳೋದು ಇದು ಹೊಸತಲ್ಲವಾದರೂ ಇವಳಲ್ಲೇನೋ ವಿಶೇಷ ಇದೆ ಎಂದುಕೊಂಡು ಮೊದಲ ಸಲ ಮನಸಾರೆ ನಂಬರ್ ಕೇಳಿದ. ಆಕೆಯೂ ಹಿಂದೇಟು ಹಾಕದೆ ನಂಬರ್ ಕೊಟ್ಟಾಗ ಸ್ವರ್ಗಕ್ಕೆ ಕಿಚ್ಚು ಎಂಬಂತೆ ಖುಷಿ ಅವನಿಗೆ.
    ನಂತರ ಬಾಂಬೇಲಿ ಇದ್ದಷ್ಟು ದಿನ ಅವಳಿಗೆ ಎಕ್ಸಾಂ ಗೆ ಧೈರ್ಯ ತುಂಬೋ ನೆಪದಲ್ಲಿ ಪ್ರತಿದಿನ ಕರೆ ಮಾಡುತ್ತಿದ್ದವನಿಗೆ ಅಲ್ಲಿರುವ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಅವಳಿಗೆ ಇನ್ನೆರಡು ಪೇಪರ್ ಬಾಕಿಯಿದೆ ಎನ್ನೋವಾಗ ಮತ್ತೆ ಬೆಂಗ್ಳೂರಿಗೆ ಹೊರಡುವ ದಿನ ಬಂದಿತ್ತು ಸಾಗರ್ ಗೆ. “ಸ್ಮಿತಾ ಇನ್ನೆರಡು ದಿನದಲ್ಲಿ ಹೊರಡ್ತಿದೀನಿ ಊರಿಗೆ” ಅವನೆಂದಾಗ “ಬೇಡ….” ಒಂದೇ ಮಾತಲ್ಲಿ ಮುಗಿಸಿದಳು ಆಕೆ.
    “ಇಲ್ಲ ಹೊರಡ್ಬೇಕು”
    “ಟಿಕೆಟ್ ರಿಸರ್ವ್ ಆಗಿದ್ಯಾ?”
    “ಇಲ್ಲ ಮಾಡ್ಬೇಕು ಇನ್ನು”
    “ಬೇಡ ಪ್ಲೀಸ್, ಇನ್ನೆರಡು ಪೇಪರ್ ಇದೆ. ಅದು ಮುಗ್ಸಿ ನಾನೂ ಜೊತೆಗೆ ಬರ್ತೀನಿ. ಅಲ್ಲಿ ತನ್ಕ ಇರಿ ಬಾಂಬೇಲಿ. ಬೇಕಿದ್ರೆ ನಮ್ಮ ಫ್ಲ್ಯಾಟ್ ನಲ್ಲಿ ಉಳ್ಕೋಬಹುದು”
    ಅವಳ‌ ಮಾತಿಗೆ ಮನಸಲ್ಲೇ ಮಂಡಿಗೆ ತಿಂದ ಸಾಗರ್ “ಇಷ್ಟು ಹೇಳ್ತಿದೀರಿ ಅಂದ್ಮೇಲೆ ಓಕೆ, ಇಲ್ಲೇ ಹೋಟೆಲ್ ರೂಮಲ್ಲಿ ಉಳ್ಕೋತೀನಿ, ಲಾಸ್ಟ್ ಪೇಪರ್ ಮುಗ್ಸಿ ಒಂದು ಡಿನ್ನರ್ ಮಾಡ್ಕೊಂಡು ಹೊರಟು ಬಿಡೋಣ” ಮಾತಿಗೆ ಅಸ್ತು ಎಂದ ಹುಡುಗಿ ತನ್ನವಳು ಎಂಬ ಭಾವ ಅದಾಗಲೇ ಸಾಗರ್ ನೊಳಗೆ ಆವರಿಸಿಕೊಂಡಿತ್ತು.
    ಬೆಂಗ್ಳೂರಿಗೆ ಬಂದ ಮೇಲೆ ಭೇಟಿ ಸ್ನೇಹದಿಂದ ಪ್ರೀತಿಯಾಗಿದ್ದು ತಿಳಿಯಲು ಹೆಚ್ಚು ಕಾಲ ಹಿಡಿಯಲಿಲ್ಲ. ಆದರೆ ಒಂದಂತಸ್ತಿನ ಮನೆಯವನು ಬಹುಮಹಡಿ ಕಟ್ಟಡದತ್ತ ತಲೆಯೆತ್ತಿ ನೋಡಿದರೆ ಬದುಕು ಹಸನಾದೀತೇ ಎಂಬ ಅಳುಕು ಎದೆಯೊಳಗೆ.
    “ನಾನು ನಿನ್ನಪ್ಪ ಅಮ್ಮನಿಗೆ ಹಿಡಿಸುವೆನೇ?” ಕೇಳಿದಾಗ “ನನ್ನಿಷ್ಟಾನ ಮಾಮ್ ಡ್ಯಾಡ್ ಬೇಡ ಎಂದವರಲ್ಲ” ಎಂದ ಸ್ಮಿತಾ ಅಂದೇ ಮನೆಯಲ್ಲಿ ಪ್ರಸ್ತಾಪ ಮಾಡಿ ಮದುವೆಗೆ ಒಪ್ಪಿಸಿದ್ದಳು. ಆಕೆಯ ಮನೆಯಲ್ಲಿ ಹೇಳುವಂತಹ ವಿರೋಧ ಇರಲಿಲ್ಲವಾದರೂ ಇದ್ದದ್ದೊಂದೇ ಷರತ್ತು. “ಒಬ್ಬಳೇ ಮಗಳಾದುದರಿಂದ ಮನೆ ಅಳಿಯನಾದರೆ ಮಾತ್ರ….!”
    ಸಾಗರನೂ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದರಿಂದ ಇದೇನೂ ಕಷ್ಟವಲ್ಲ ಎನ್ನಿಸಿ ಮೊದಲ ಬಾರಿ ಆಯ್ಕೆಯಲ್ಲಿ ಮುಗ್ಗರಿಸಿ ಬಿದ್ದಿದ್ದ.
    ಹೊಸತರಲ್ಲಿ ಕತ್ತೆಯೂ ಕುದುರೆ ಎಂಬಂತೆ ಮನೆ ಅಳಿಯನ ಪಟ್ಟ ಸುಖವಾಗಿತ್ತು. ಆದರೆ ತಾನೇರಿದ ಪಟ್ಟ ಜೀತಕ್ಕಿಂತ ಕಡೆಯಾದುದೆಂದು ಅರಿವಾಗುವ ಹೊತ್ತಿಗೆ ಇಬ್ಬರು ಮಕ್ಕಳ ಅಪ್ಪನಾಗಿದ್ದ. ತಾನಿಷ್ಟ ಪಟ್ಟ ತನ್ನ ವೈದ್ಯ ವೃತ್ತಿಗೆ ಅದೆಂದೋ ಎಳ್ಳುನೀರು ಬಿಡಿಸಿದ್ದ ಮಾವ ಕಂಪೆನಿಯ ಮ್ಯಾನೇಜರ್ ಮಾಡಿಬಿಟ್ಟಿದ್ದರು. ಕುಳಿತಲ್ಲಿ, ನಿಂತಲ್ಲಿ ಕೇಳುವ ಲೆಕ್ಕ, ಹಾಕುತ್ತಿದ್ದ ಲೆಕ್ಕಾಚಾರದಿಂದ ರೋಸಿ ಹೋಗಿ ಮತ್ತೆ ವೈದ್ಯ ವೃತ್ತಿ ಮಾಡುತ್ತೇನೆಂದರೂ ಬಿಡದ ಮಡದಿ, ಅರ್ಥವಿಲ್ಲದ ಬದುಕಿನೊಂದಿಗೆ ಹೊಂದಾಣಿಕೆ! ಯಾವುದೋ ಬ್ಯುಸಿನೆಸ್, ಎಲ್ಲೋ ಮೀಟಿಂಗ್, ಯಾವಾಗಲೋ ಮರಳಿ ಸೇರುತ್ತಿದ್ದ ಮನೆ. ಇಷ್ಟೇ ಆಗಿದ್ದಾಗಲೂ ಸಹಿಸಿದವನ ತಾಳ್ಮೆ ಕಟ್ಟೆಯೊಡೆದಿದ್ದು ಮಾತ್ರ ಸ್ಮಿತಾಳ ಮಿತಿಮೀರಿದ ಟೂರ್ ಗಳಿಂದ. ಮಕ್ಕಳನ್ನು ಬೋರ್ಡಿಂಗ್ ಸ್ಕೂಲ್ ನೆಪದಲ್ಲಿ ಊಟಿಯಲ್ಲಿ ಬಿಟ್ಟಿದ್ದರಿಂದ ಎಷ್ಟೋ ಬಾರಿ ಫಾರಿನ್ ಟೂರ್ ಎಂದು ತಿಂಗಳುಗಟ್ಟಲೆ ಹೊರಗಿರುತ್ತಿದ್ದವಳ ಮುಖದರ್ಶನವೂ ಇಲ್ಲದಿರುತ್ತಿದ್ದಾಗ ಕುದ್ದುಹೋಗುತ್ತಿದ್ದ.
    ತನ್ನದಲ್ಲದ ತಾನಿಷ್ಟ ಪಟ್ಟ ವೃತ್ತಿ, ತನ್ನದಾಗಿರುವ ಇಷ್ಟಪಡದ ಜೀವನ ಇವೆಲ್ಲದರ ಒಳಗೆ ಸಿಲುಕಿ ಒದ್ದಾಡುತ್ತಿದ್ದವನನ್ನು ಕೈ ಬೀಸಿ ಕರೆದಿದ್ದು “ಮನಸ್ಸು”
    ಯಾವುದೋ ಕಾರ್ಯಕ್ರಮದ ಉದ್ಘಾಟನೆಗೆಂದು ಆಶ್ರಮಕ್ಕೆ ಬಂದವನು ಅಲ್ಲಿನ ಪರಿಸರಕ್ಕೆ ಮಾರುಹೋಗಿದ್ದ. ಹೀಗೆ ಆಗಾಗ ಬಂದು ಹೋಗುತ್ತಿದ್ದವನಿಗೆ ಫಾ.ಪ್ರಕಾಶ್ ಆತ್ಮೀಯರಾದಾಗ ತನ್ನೊಳಗಿನ ತುಮುಲ ಅರಿವಿಲ್ಲದೆಯೇ ಈಚೆ ಬಂದಿತು.
    “ಫಾದರ್, ನೀವು ಒಪ್ಪೋದಾದರೆ ನಾನು ಇಲ್ಲೇ…” ಮಾತು ಅರ್ಧಕ್ಕೇ ನಿಲ್ಲಿಸಿದರು ಫಾದರ್.
    “ನೋ ನೋ ಸಾಗರ್. ಇನ್ನೂ ಎಳೆಯ ವಯಸ್ಸು ನಿಮ್ಮದು. ಸಂಸಾರ ಗಟ್ಟಿಯಿದ್ದಾಗ ಇಲ್ಲಿ ಬಂದು ಯಾಕೆ ಇರ್ತೀರಿ” ಫಾದರ್ ಕೇಳಿದರು.
    “ಇಲ್ಲ ಫಾದರ್. ಹೊರನೋಟಕ್ಕೆ ಗಟ್ಟಿಯಿದೆ ಅಷ್ಟೇ. ಒಳಗೆ ಬರೀ ಗೆದ್ದಲು. ನನಗೂ ಹಂಗಿನ ಬದುಕು ಸಾಕಾಗಿದೆ. ಎಲ್ಲವನ್ನೂ ತೊರೆದು ನಾನು ನಾನಾಗಿರಬೇಕು” ಎಂದವನ ಕಣ್ಣುಗಳು ಏನು ಹೇಳಿತೋ! “ಸರಿ ನಿಮ್ಮಿಷ್ಟ” ಎಂದು ಎದ್ದು ಹೋದರು.
    ಆ ದಿನವೂ ಮನೆಗೆ ಬಂದಾಗ ಸ್ಮಿತಾ ಇರಲಿಲ್ಲ. ಫಾರಿನ್ ಟ್ರಿಪ್ ಹೋಗಿ ವಾರವಾಗಿತ್ತು.
    “ಐ ವಾಂಟ್ ಟು ಟಾಕ್ ವಿತ್ ಯೂ” ಮೆಸೇಜ್ ಹಾಕಿದ ಸ್ವಲ್ಪ ಹೊತ್ತಿನಲ್ಲಿ “ಬ್ಯುಸಿ ವಿತ್ ಫ್ರೆಂಡ್ಸ್” ರಿಪ್ಲೈ ಬಂತು. ರಾತ್ರಿಯಿಡೀ ಕಾದವನು ಬೆಳಗ್ಗೆದ್ದು ವಾಟ್ಸಾಪ್ ಕಾಲ್ ಮಾಡಿದರೆ ಯಾವುದೋ ನಶೆಯಲ್ಲಿ ಮಾತು.
    “ಏನದು ಮಾತಾಡೋದು? ಮನೆಯಲ್ಲಿ ಎಲ್ಲವೂ ಇದೆಯಲ್ಲ” ಎಂದಳು.
    “ಎಲ್ಲವೂ ಇದೆ, ಆದರೆ ಇರಬೇಕಾದ ನಿನ್ನನ್ನು ಬಿಟ್ಟು” ಎಂದವನಿಗೆ “ನಾನೇನು ಮೂರು ಹೊತ್ತು ಅಲ್ಲೇ ಬಿದ್ದಿರಬೇಕಾ?” ಅವಳ ಈ ಧಾಟಿ ಸಾಗರ್ ಗೆ ಹೊಸತಲ್ಲ.
    “ಬೇಡ. ನಾನೂ ಇಲ್ಲಿರಲಾರೆ. ಆಶ್ರಮ ಸರ‍್ತಿದೀನಿ” ಅವನ ಮಾತಿಗೆ ಆ ಕಡೆಯಿಂದ ಜೋರಾದ ನಗು.
    “ನಗ್ಬೇಡ ಸ್ಮಿತಾ, ನಿಜಾನೇ ಹೇಳ್ತಿದೀನಿ” ಮತ್ತೆ ಹೇಳಿದವನಲ್ಲಿ “ಉಪ್ಪರಿಗೆಯಲ್ಲಿಟ್ಟರೂ ತಿಪ್ಪೆ ಬುದ್ಧಿ ಬಿಡುತ್ತಾ ಹೇಳು? ಹೋಗು ಅಲ್ಲೇ ಇರು” ಮತ್ತದೇ ವ್ಯಂಗ್ಯಕ್ಕೆ “ಇದು ನಿನ್ನ ಕಡೇ ಮಾತು?” ಕೇಳಿದ.
    “ನಿಂಗಿಷ್ಟ ಇಲ್ಲದಿದ್ರೆ ನಾನ್ಯಾಕೆ ಜೊತೆಗಿರು ಅಂಥ ಒತ್ತಾಯ ಮಾಡ್ಲಿ? ಯುವರ್ ಲೈಫ್, ಯುವರ್ ಚಾಯ್ಸ್” ಹೇಳಿ ಕರೆ ತುಂಡರಿಸಿದವಳ ಮೇಲೆ ಇದ್ದ ಸ್ವಲ್ಪ ಪ್ರೀತಿಯೂ ಸತ್ತು ಜಿಗುಪ್ಸೆ ಹುಟ್ಟಿದ್ದೇ ಆಶ್ರಮದಲ್ಲಿ ಬಂದಿಳಿದಿದ್ದ.

    “ಓಕೆ ಫಾದರ್. ಮುಂದಿನ ತಿಂಗಳು ಬರ್ತೀವಿ. ಥ್ಯಾಂಕ್ಯೂ ಸೋ ಮಚ್” ಎನ್ನುವ ಮಾತು ಕಿವಿಗೆ ಬಿದ್ದಾಗ ವಾಸ್ತವಕ್ಕೆ ಬಂದು ಅತ್ತ ಕಡೆ ನೋಡಿದ. ದುಂಡು ಮುಖ, ಹೆಗಲಿಗಿಂತ ಸ್ವಲ್ಪ ಕೆಳತನಕ ಬಿಟ್ಟ ಸಡಿಲ ಕೂದಲು, ಜೀನ್ಸ್ ಪ್ಯಾಂಟ್ ಮೇಲೆ ತಿಳಿಹಳದಿ ಬಣ್ಣದ ಟಾಪ್ ಧರಿಸಿದ್ದ ಮಹಿಳೆ ಫಾದರ್ ಜೊತೆ ಮಾತನಾಡುತ್ತಾ ಹೊರಬರುವುದನ್ನು ನೋಡಿದ. ಅವರಿಬ್ಬರ ಹಿಂದೆ ಬಂದ ಹದಿನಾರರ ಬಾಲೆಯರು, ನೋಡಿದರೆ ಅವಳಿಜವಳಿಯಂತಿದ್ದರು! ಥೇಟ್ ಮುಂದಿದ್ದ ಮಹಿಳೆಯನ್ನೇ ಹೋಲುತ್ತಿದ್ದುದು ಕಂಡು ಮಕ್ಕಳಿರಬೇಕು ಎಂದುಕೊಳ್ಳುವಷ್ಟರಲ್ಲಿ ಅವನ ಬಳಿ ಬಂದಿದ್ದರು.
    “ಮಿ.ಸಾಗರ್ ಬಂದ್ರಾ! ಐದು ನಿಮಿಷ ಈಗ ಬರ್ತೀನಿ” ಫಾದರ್ ಹೇಳಿದಾಗ ಮುಂದೆ ನಡೆದಿದ್ದಾಕೆ ತಿರುಗಿ “ಸಾಗರ್?” ಕೇಳಿದಳು. ಹತ್ತಿರದಿಂದ ಆಕೆಯ ಮುಖ ನೋಡಿದ್ದೇ ಪರಿಚಿತ ಮುಖವೆನಿಸಿತು. “ಹೌದು” ಎಂದಾಗ “ನೀವು….ನೀವು ಮಂಗ್ಳೂರಿನವ್ರಾ?” ಅಚ್ಚರಿಯಿಂದ ಸಾಗರ್ ತಲೆಯಾಡಿಸಿದ.
    “ಮೇರಿ ಕಾನ್ವೆಂಟ್ ಸ್ಕೂಲ್?” ಮತ್ತೆ ಕೇಳಿದಳು.
    “ಯೆಸ್”
    “ನಾನು….ನಾನು ಫ್ಲೇವಿಯಾ….ಸಿಸ್ಟರ್ ಫ್ಲೇವಿಯಾ …..” ಮಾತು ಕೇಳಿ ಆವಾಕ್ಕಾದ ಸಾಗರ್.
    “ನೀನು……! ಮತ್ತೆ ಇವ್ರಿಬ್ರು?”
    “ಹ್ಞಾಂ….ಇವ್ರಿಬ್ರು ನನ್ನ ಅವಳಿ ಮಕ್ಳು. ಜೆನ್ನಿ ಆಂಡ್ ಜೆನಿತಾ. ನೋಡು ನಿನ್ನ ದೆಸೆಯಿಂದ ನಾನಿವತ್ತು ಸಂಸಾರಿಯಾಗಿ ನೆಮ್ಮದಿಯಿಂದ ಬದುಕು ಕಟ್ಟಿದ್ದೇನೆ. ಇರೋದು ಮಸ್ಕತ್ ನಲ್ಲಿ. ಒಂದು ತಿಂಗ್ಳಾಯ್ತು ಬಂದು. ಮದರ್ ಇನ್ ಲಾ ಇಲ್ಲೇ ಇರೋದು. ಸ್ವಲ್ಪ ಮೆಂಟಲೀ ಡಿಸಾರ್ಡರ್. ಅದಕ್ಕೆ ಇಲ್ಲಿ ಸೇರಿಸಿ ಟ್ರೀಟ್ಮೆಂಟ್ ಕೊಡಿಸ್ತಿರೋದು. ಖುಷಿಯಾಯ್ತು ನಿನ್ನನ್ನು ನೋಡಿ. ಮೊಬೈಲ್ ನಂಬರ್ ಕೊಡೋ” ಒಂದೇ ಉಸಿರಿನಲ್ಲಿ ಹೇಳಿದವಳಲ್ಲಿ “ಸರಿ, ಸೇವ್ ಮಾಡ್ಕೋ ನಂಬರ್” ಎಂದು ನಂಬರ್ ಹೇಳಿದ.
    “ಲೇಟಾಯ್ತು ಕಣೋ, ಮಕ್ಳದ್ದೇನೋ ಶಾಪಿಂಗ್ ಇದೆಯಂತೆ. ಕಾರ್ ನಲ್ಲಿ ಕೂತಿದಾನೆ ವಿಲ್ಸನ್, ಓಹ್ ಸ್ಸಾರೀ ಮೈ ಹಸ್ಬೆಂಡ್” ಎಂದು ಅವಸರದಲ್ಲೇ ಹೋದವಳನ್ನು ನೋಡಿದ ಫಾದರ್ “ಗುಡ್ ಲೇಡಿ, ನಿಮ್ಗೆ ಹೇಗೆ ಗೊತ್ತು?” ಕೇಳಿದಾಗ “ನನ್ನ ಕ್ಲಾಸ್ ಮೇಟ್” ಸಾಗರ್ ನ ಉತ್ತರ ಕೇಳಿ ಫಾ.ಪ್ರಕಾಶ್ ಚಕಿತರಾಗಿ “ಓಹ್ ಗುಡ್ ಗುಡ್. ಬನ್ನಿ ಒಳಗೆ” ಹೇಳಿದವರು ಮತ್ತೆ ಕೋಣೆಯೊಳಗೆ ಹೋದಾಗ ಸಾಗರ್ ಫ್ಲೇವಿಯಾ ನಡೆದ ದಿಕ್ಕನ್ನೇ ನೋಡುತ್ತಾ ನಿಂತ.
    “ನೋಡೋ ಸಾಗರ್, ಬರ್ತಿದಾಳೆ ನಮ್ಮ ಸನ್ಯಾಸಿನಿ. ಇಂತಹ ಫಿಗರ್ ಗಳು ಸನ್ಯಾಸ ಸ್ವೀಕರಿಸಿದ್ರೆ ನಮ್ಮಂತಹ ಹುಡುಗರ ಪಾಡೇನು ಅಂಥ!” ದಿಲೀಪ್ ಹೇಳಿದಾಗ ಆ ಕಡೆ ನೋಡಿದ ಸಾಗರ್.
    ದುಂಡು ಮುಖದ ಮುದ್ದಾದ ಹುಡುಗಿ ಎನ್ನಬಹುದಿತ್ತೇನೋ! ಆದರೆ ಕತ್ತಿನಲ್ಲಿರುವ ಶಿಲುಬೆ ಸರ ಬಿಟ್ಟರೆ ಹಣೆ, ಕೈ ಕಾಲು ಎಲ್ಲವೂ ಬೋಳು. ತಿಳಿ ಕಂದು ಬಣ್ಣದ ಸೀರೆಯುಟ್ಟ ಹುಡುಗಿ ನಿರಾಭರಣ ಸುಂದರಿ. “ಯಾರವ್ಳು?” ಸಾಗರ್ ಕೇಳಿದ.
    “ಅವ್ಳ ಹೆಸರು ಫ್ಲೇವಿಯಾ ಅಂಥ. ಲೇಟಾಗಿ ಎಡ್ಮಿಷನ್ ಆಯ್ತಂತೆ. ಸಿಸ್ಟರ್ ಆಗ್ಬೇಕು ಅಂತಿದಾಳೆ, ಸೋ ಕಾನ್ವೆಂಟಿನಿಂದ ಬರ್ತಿದಾಳೆ” ದಿಲೀಪ್ ಹೇಳುವಷ್ಟರಲ್ಲಿ ಆಕೆ ಬಳಿ ಬಂದಾಗಿತ್ತು.
    “ಹಾಯ್……” ವಿಶ್ ಮಾಡಿದವನಿಗೆ ಕೈ ಮುಗಿದು ಹೋದವಳನ್ನು ಕಂಡಾಗ ರೇಗಿತು. “ಏನೋ ಇದು….ಈ ವಯಸ್ಸಿಗೆ ತೀರಾ ವೈರಾಗ್ಯ ಬಂದಿರೋ ತರಹ…..” ಹೇಳಿದಾಗ “ಇಂತವ್ರೆಲ್ಲ ಬೇಕು ಕಣೋ…..ನಮ್ಮ ಬೆಟ್ಟಿಂಗ್ ಗೆ” ನಕ್ಕ ದಿಲೀಪ.
    ಇವನ ಬೆಟ್ಟಿಂಗ್ ಹುಚ್ಚು ಸಾಗರ್ ಗೆ ಹೊಸತಲ್ಲ. ಸಣ್ಣ ಸಣ್ಣ ಆಗುಹೋಗುಗಳಿಗೂ ಬೆಟ್ಟಿಂಗ್ ಕಟ್ಟುವವನು ಸಾಗರ್ ಎದುರು ಸೋತಿದ್ದೇ ಜಾಸ್ತಿ.
    “ಈ ಸನ್ಯಾಸ ಮುಖ ಕಂಡಾಗ ಅದೇನು ಬೆಟ್ ನೆನಪಾಯ್ತೋ ನಿಂಗೆ! ಫಿಗರ್ ಒಳ್ಳೇದಿದೆ, ಆದ್ರೆ ಸಹವಾಸ ಬೇಡ ಕಣೋ” ಸಾಗರ್ ಹೇಳಿದ.
    “ಇಲ್ಲೇ ಇರೋದು ಮಜಾ. ಸನ್ಯಾಸಿ ಆಗ್ತೀನಿ ಅಂಥ ಹೊರಟವ್ಳನ್ನು ಸಂಸಾರಿಯಾಗೋ ಹಾಗೆ ಮಾಡು ನೋಡೋಣ” ಗೆದ್ರೆ ನೀನು ಹೇಳ್ದ‌ ಹಾಗೆ ಕೇಳ್ತೀನಿ” ದಿಲೀಪನೆಂದಾಗ “ನಿಜ್ವಾಗ್ಲೂ” ಕೇಳಿದ ಸಾಗರ್. “ಇಟ್ಸ್ ಮೈ ಪ್ರಾಮಿಸ್” ಅವನ ಮಾತಿಗೆ “ಹಾಗಿದ್ರೆ ನೀನಾ ನಾನಾ ನೋಡೇ ಬಿಡೋಣ, ಡಿಗ್ರಿ ಮುಗಿಯೋ ಅಷ್ಟರಲ್ಲಿ ಇವ್ಳು ನಾರ್ಮಲ್ ಹುಡ್ಗಿ ತರಹ ಆಗೇ ಆಗ್ತಾಳೆ, ಹಾಗೆ ಮಾಡಿಲ್ಲಾಂದ್ರೆ ನಾನು ನಮ್ಮಪ್ಪನ ಮಗ ಅಲ್ಲ” ಕಾಲಿನಲ್ಲಿ ನೆಲ ಒದ್ದು ಹೋದವನ ಆವೇಶ ಬರೀ ಮಾತಾಗಿರಲಿಲ್ಲ.
    ಕಾಲೇಜಿನ ಮೂರು ವರ್ಷ ಮುಗಿಯುವಷ್ಟರಲ್ಲಿ ಅದ್ಹೇಗೋ ಫ್ಲೇವಿಯಾ ಸ್ನೇಹ ಸಂಪಾದಿಸಿಕೊಂಡವನು ಹಂತ ಹಂತವಾಗಿ ಆಕೆಯನ್ನು ಬದಲಾಯಿಸುತ್ತಾ ಹೋದ. ಅಂತಿಮ ಪದವಿಯ ವರ್ಷ ಒಮ್ಮೆ ಬಳಿ ಬಂದವಳು “ಸಾಗರ್, ಎಲ್ಲಾದ್ರೂ ಪಿ.ಜಿ ಇದ್ರೆ ಹೇಳು” ಎಂದಾಗ “ಯಾಕೆ?” ಕೇಳಿದ.
    “ನಾನು ಕಾನ್ವೆಂಟ್ ಬಿಡ್ಬೇಕು ಅಂತಿದೀನಿ” ಹೇಳಿದವಳಲ್ಲಿ “ಮತ್ತೆ ನಿನ್ನ ದೀಕ್ಷೆ…..! ಸನ್ಯಾಸ?” ನಕ್ಕ.
    “ಇಲ್ಲ ಸಾಗರ್, ನಾನು ನಾನಾಗಿ ದೀಕ್ಷೆ ಪಡೆಯಲು ಬಂದವಳಲ್ಲ. ನಂಗಿರೋದು ಅಮ್ಮ ಮಾತ್ರ. ನಿಂಗೊತ್ತಲ್ವ ಸಿಂಗಲ್ ಪೇರೆಂಟ್ ಆಗಿ ಹೆಣ್ಮಗ್ಳನ್ನು ಸಾಕೋದು ಕಷ್ಟ ಅಂಥ, ಜೊತೆಗೆ ಬಡತನ. ಅದಕ್ಕೆ ಅಮ್ಮ ಇಲ್ಲಿ ತಂದು ಸೇರಿಸಿದ್ರು. ಆದ್ರೆ ಲಾಸ್ಟ್ ಇಯರ್ ಅಮ್ಮಾನೂ ತೀರ‍್ಕೊಂಡ್ಳು. ಇದ್ದ ಮನೇನಾ ದೂರದ ಸಂಬಂಧಿಯೊಬ್ರು ಒಳ್ಳೇ ರೇಟಿಗೆ ಕೊಂಡ್ಕೊಂಡಿದಾರೆ. ಈಗ ನಾನೂ ಮೇಜರ್ ಕಣೋ. ನಂಗೂ ಆಸೆಗಳಿವೆ. ಹೇಗೂ ಕಲಿತಿದ್ದಾಯ್ತು. ಏನಾದ್ರೂ ಉದ್ಯೋಗ ಮಾಡೋಣ ಅಂಥ. ಈ ಸನ್ಯಾಸ ಬದುಕು ನಂಗೆ ಒಗ್ಗುತ್ತಿಲ್ಲ. ಇಷ್ಟ ಪಡದಿರೋದನ್ನು ಬಲವಂತವಾಗಿ ಒಪ್ಕೋಬಾರದು. ನಂಗೂ ಬಣ್ಣ ಬಣ್ಣದ ಡ್ರೆಸ್ಸಸ್ ಹಾಕೋಬೇಕು, ಬೇರೆ ಹುಡ್ಗೀರಂತೆ ಇರ್ಬೇಕು” ಕಂಬನಿ ತುಂಬಿಕೊಂಡು ಹೇಳಿದಾಗ ಸಾಗರ್ ಗೆ ಅಯ್ಯೋ ಪಾಪ ಎನ್ನಿಸಿತು. ಆಕೆ ಆಪ್ತ ಗೆಳತಿಯಾಗಿದ್ದರೂ ಒಂದು ದಿನಾನೂ ಬೇರೆ ದೃಷ್ಟಿಯಲ್ಲಿ ನೋಡದಿರದ ಸಾಗರ್ ಗೆ ಮೊದಲ ಸಲ ಈಕೆಯನ್ನು ಸನ್ಯಾಸದಿಂದ ಹೊರತಂದು ತಪ್ಪು ಮಾಡಿದೆ ಎನ್ನಿಸಿತು.
    “ಆದ್ರೆ ಫ್ಲೇವಿಯಾ, ಹೊರಜಗತ್ತು ನೀನಂದುಕೊಂಡಷ್ಟು ಸರಿಯಿಲ್ಲ” ಯಾವುದೋ ಯೋಚನೆಯಲ್ಲಿ ಹೇಳಿದ.
    “ಮತ್ಯಾಕೆ ನನ್ನನ್ನು ಸನ್ಯಾಸದಿಂದ ವಿಮುಖಳನ್ನಾಗಿಸಿದೆ? ಹೊರ ಪ್ರಪಂಚದ ಕುರಿತು ಆಸೆ ಹುಟ್ಟಿಸಿದೆ?” ಅವಳು ಕೇಳಿದ ಪ್ರಶ್ನೆಗೆ “ಕೇವಲ ಬೆಟ್ಟಿಂಗ್ ಗಾಗಿ” ಎಂದು ಹೇಗೆ ಉತ್ತರ ಕೊಟ್ಟಾನು ಸಾಗರ್?
    “ಅದು….ಅದೂ….ಹೋಗ್ಲಿ ಬಿಡು. ನಿಂಗೆ ಅಲ್ಲಿರೋಕೆ ಇಷ್ಟ ಇಲ್ಲಾಂದ್ರೆ ಬೇರೆ ವ್ಯವಸ್ಥೆ ಮಾಡ್ತೀನಿ. ಆದ್ರೆ ಪಿ. ಜಿ. ಬೇಡ” ಎಂದವನು ಅಪ್ಪನ ಸ್ನೇಹಿತರನ್ನು ಹಿಡಿದು ಫ್ಲೇವಿಯಾಳಿಗೆ ಅವರ ಕಂಪೆನಿಯಲ್ಲಿ ಸಣ್ಣ ಕೆಲಸ ಕೊಡಿಸಿದ್ದ. ನಂತರ ಸಾಗರನ ಅಪ್ಪ ಅಮ್ಮನೂ ಹೋದ ನಂತರ ಕಲಿಯಲೆಂದು ವಿದೇಶಕ್ಕೆ ಹಾರಿ ಹೋದವನು ಊರಿಗೆ ಅಪರೂಪದ ನೆಂಟನಾದ.
    ಇದೆಲ್ಲ ಕಳೆದು ವರ್ಷಗಳೇ ಆಗಿವೆ. ಇವತ್ತು ಮತ್ತೆ ನೋಡಿದ ಫ್ಲೇವಿಯಾಳಲ್ಲಿ ಎಷ್ಟೊಂದು ಬದಲಾವಣೆ. ಅವಳು….ಅವಳ ಸಂಸಾರ….ಅವಳಿ ಮಕ್ಕಳು. ಸನ್ಯಾಸದಿಂದ ಹೊರಬಂದ ಎಷ್ಟು ಸುಂದರ ಬದುಕು. ಒಂದು ವೇಳೆ ಹುಡುಗಾಟಕ್ಕೆ ಅಂದು ನಾನು ಬೆಟ್ ಕಟ್ಟದಿದ್ದರೆ ಇವತ್ತು ಹೇಗಿರುತ್ತಿದ್ದಳು ಫ್ಲೇವಿಯಾ? ಅದೇ ಖಾಲಿ ಹಣೆ, ಬೋಳಾದ ಕೈ ಕಾಲು, ಹೊದ್ದು ಕೊಂಡ ಸೀರೆಯೊಳಗೆ ವಿರಕ್ತಳಾಗಿರುತ್ತಿದ್ದಳು. ಇಂದಿನ ಫ್ಲೇವಿಯಾ! ಮಾಡರ್ನ್ ಮಹಿಳೆ. ತನ್ನದೇ ಸೂರು ಕಟ್ಟಿಕೊಂಡವಳು. ಹುಡುಗಾಟದ ದಿನಗಳಲ್ಲಿ ಮಾಡಿದ ಕಾರ್ಯದಿಂದ ಆಕೆಯ ಬದುಕು ಹಾಳಾಗಲಿಲ್ಲ ಎಂದುಕೊಂಡವನಿಗೆ ಕೂಡಲೇ ತನ್ನ ಬದುಕಿನ ಗತಿಯ ನೆನಪಾಯಿತು.
    ನಾನು…..! ಅವಳನ್ನು ಸನ್ಯಾಸದಿಂದ ವಿಮುಖಳನ್ನಾಗಿಸಿದವನು ಹೇಗಿದ್ದೇನೆ ಇವತ್ತು? ಬಂದು ನಿಂತಿರುವುದಾದರೂ ಎಲ್ಲಿ! ಸನ್ಯಾಸಿಯಾಗಿದ್ದವಳನ್ನು ಸಂಸಾರಿಯನ್ನಾಗಿಸಿದವನು ಇಂದು ಸನ್ಯಾಸಿಯಾಗಹೊರಟಿದ್ದೇನೆ. ಆವತ್ತು ಅವಳಿಗೆ ಬದುಕಿನ ಬಗ್ಗೆ ಕಟ್ಟಿಕೊಟ್ಟ ಚಿತ್ರಗಳೆಲ್ಲವೂ ಇಂದು ನನ್ನ ಪಾಲಿಗೆ ಚದುರಿ ಹೋದವುಗಳು. ಅವಳಾದರೋ ಸನ್ಯಾಸ‌ ತೊರೆದು ಸುಖಿ, ನಾನು ಸಂಸಾರ ತೊರೆದು ಸುಖಿಯಾಗಲು ಹೊರಟವನು. ಬದುಕಿಗೆ ಎಷ್ಟೊಂದು ಭಿನ್ನ ಮುಖಗಳು. ನೀನಿನ್ನು ಸನ್ಯಾಸಿಯಾಗು ಎಂದರೆ ಬಹುಶ: ಫ್ಲೇವಿಯಾ ಮತ್ತೆ ಅಲ್ಲಿಗೆ ಹೋಗಲಾರಳು. ನಾನೂ ಹಾಗೆಯೇ…..ಮತ್ತೆ ಸಂಸಾರಿಯಾಗು ಎಂದರೆ ಮರಳಲಾರೆ. ಹಾಗಿದ್ದರೆ ತೊರೆದು ಹೋಗುವುದು ಎಂದರೇನು? ಇದ್ದಲ್ಲೇ ಸಾಯುವುದೇ! ಅಥವಾ ಸತ್ತು ಹುಟ್ಟುವುದೇ?” ಮನದೊಳಗೆ ಹುಟ್ಟಿದ ಸಾವಿರದ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಹೇಗೆಂದು ಆಲ್ಲೇ ಕುಸಿದ ಸಾಗರನಿಗೆ ಕಂಡಿದ್ದು “ಮನಸ್ಸು” ಎಂಬ ಸೇವಾಶ್ರಮದ ಫಲಕ ಮಾತ್ರ!

      ಅಕ್ಷತಾ ರಾಜ್ ಪೆರ್ಲ
    ಆಕಾಶವಾಣಿ ಉದ್ಘೋಷಕಿ

    baikady kannada roovari story
    Share. Facebook Twitter Pinterest LinkedIn Tumblr WhatsApp Email
    Previous Articleಕಲಾರಸಿಕರ ರಂಜಿಸಿದ ‘ಯುವ ನೃತ್ಯೋತ್ಸವ-2025’
    Next Article ನೃತ್ಯ ಶಂಕರ ಸರಣಿಯ ‘ಶತ ಸಂಭ್ರಮ’
    roovari

    Add Comment Cancel Reply


    Related Posts

    ಎಂ. ಲಕ್ಷ್ಮೀನಾರಾಯಣ ಭಟ್ ಇವರಿಗೆ ನುಡಿನಮನ

    June 11, 2025

    ಜನ ಮೆಚ್ಚುಗೆಗೆ ಪಾತ್ರವಾದ ‘ಚಿಣ್ಣರ ಗಾನ ಸುಧೆ’

    June 11, 2025

    ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 11, 2025

    ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಸೆಪ್ಟೆಂಬರ್ 15 ಕೊನೆಯ ದಿನಾಂಕ

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.