ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ದಿನಾಂಕ 09 ಜೂನ್ 2025ರಂದು ಮಡಿಕೇರಿಯ ಹೊಟೇಲ್ ರೆಡ್ಬ್ರಿಕ್ಸ್ ನ ‘ಸತ್ಕಾರ’ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಾ ಭಾಸ್ತಿಯವರನ್ನು ಸನ್ಮಾನಿಸಿದ ಹಾಸನ ಜಿಲ್ಲೆಯವರಾದ ಕವಿ ಮತ್ತು ಅನುವಾದಕಿ ಜ.ನಾ. ತೇಜಶ್ರೀ ಮಾತನಾಡಿ “ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರು ತಮ್ಮ ‘ಹಾರ್ಟ್ ಲ್ಯಾಂಪ್’ ಅನುವಾದ ಕೃತಿಯ ಮೂಲಕ, ಸಾಂಪ್ರದಾಯಿಕವಾದ ಅನುವಾದದ ಚೌಕಟ್ಟುಗಳನ್ನು ಮೀರಿ, ಸೃಜನಾತ್ಮಕವಾದ ಅನುವಾದದ ಹೊಸ ಪಥವನ್ನು ಸೃಷ್ಟಿಸಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿ ‘ಎದೆಯ ಹಣತೆ’ಯನ್ನು ಹಾರ್ಟ್ ಲ್ಯಾಂಪ್ ಆಗಿ ಅನುವಾದಿಸಿದ ದೀಪಾ ಭಾಸ್ತಿಯವರು, ಕನ್ನಡದಿಂದ ಇಂಗ್ಲೀಷ್ಗೆ ಮಾಡಿರುವ ಅನುವಾದದಲ್ಲಿ ‘ಕನ್ನಡದ ಭಾಷಾ ಸೌಂದರ್ಯವನ್ನು, ಚೆಲುವನ್ನು’ ಹಾಗೆಯೇ ಕಾಯ್ದುಕೊಂಡಿದ್ದಾರೆ. ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಗಳು ಇಲ್ಲಿಯವರೆಗೆ, ಆಯಾ ಭಾಷೆಗಳಲ್ಲಿನ ವಿಚಾರಗಳನ್ನು, ‘ಇಟಾಲಿಕ್ಸ್’ ಇಲ್ಲವೇ ಶಬ್ಧದ ಅರ್ಥವನ್ನು ನೀಡುವ ಮೂಲಕ ಇಂಗ್ಲೀಷ್ ಓದುವ ಮಂದಿಗೆ ಅರ್ಥೈಸುವ ಪ್ರಯತ್ನವನ್ನು ಮಾಡುತ್ತಿರುವಂತೆ ಕಾಣುತಿತ್ತು. ದೀಪಾ ಭಾಸ್ತಿಯವರು ಇಂತಹ ಅನುವಾದದ ಕಟ್ಟು ಪಾಡುಗಳನ್ನು ಬೀಡಾ ಬೀಸಾಗಿ ಮುರಿದು ಮುನ್ನುಗಿದ್ದಾರೆ. ಇವರ ಅನುವಾದಿತ ಹಾರ್ಟ್ ಲ್ಯಾಂಪ್ ಕೃತಿ ‘ಕನ್ನಡ ಕಂಪ’ನ್ನು ಗಾಢವಾಗಿ ಆವರಿಸಿಕೊಂಡಿದೆ. ಇಂತಹ ಅನುವಾದ ಕೃತಿ, ಅನುವಾದದ ಹೊಸ ಹಾದಿಯನ್ನು ಸೃಷ್ಟಿಸಿದೆ” ಎಂದು ಮನದುಂಬಿ ನುಡಿದರು.
ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್ “ಬಾನು ಮುಷ್ತಾಕ್ ಅವರ ಕೃತಿಯನ್ನು ‘ಹಾರ್ಟ್ ಲ್ಯಾಂಪ್’ ಆಗಿ ಇಂಗ್ಲೀಷ್ಗೆ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ಪಡೆದ ದೀಪಾ ಭಾಸ್ತಿಯವರು ಅನುವಾದ ಸಾಹಿತ್ಯದ ಮಿನುಗುತಾರೆಯಾಗಿ, ನಾಳಿನ ಭರವಸೆಯ ಬೆಳಕಾಗಿ ಮೂಡಿಬಂದಿದ್ದಾರೆ. ಇಂತಹ ಭರವಸೆಯ ಬೆಳಕನ್ನು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ವಿವಿಧ ಪ್ರದೇಶಗಳ ಪ್ರತ್ಯೇಕ ಸಮುದಾಯಗಳಿಗೆ ಸೇರಿದವರು. ಬಾನು ಮುಷ್ತಾಕ್ ಅವರ ಕೃತಿಗಳಲ್ಲಿನ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯ ಸೂಕ್ಷ್ಮಗಳನ್ನು ಅರಿತು, ಅವರ ಮನಸ್ಥಿತಿಗಳ ಅಧ್ಯಯನದ ಮೂಲಕ ದೀಪಾ ಭಾಸ್ತಿ ಪರಕಾಯ ಪ್ರವೇಶ ಮಾಡುವ ಮೂಲಕ ಸಾಹಿತ್ಯದ ಪುನರ್ ಸೃಷ್ಟಿಯನ್ನೇ ಮಾಡಿರುತ್ತಾರೆ. ಅನುದಾದ ಸಾಹಿತ್ಯವೆನ್ನುವುದು ದೇಶ, ಭಾಷೆಯ ಮಿತಿಗಳನ್ನು ಮೀರಿ ಎರಡು ಭಾಷೆಗಳ ನಡುವೆ ಸಂವಹನವನ್ನು ಸೃಷ್ಟಿಸುವ ಕ್ರಿಯೆ. ಇಂತಹ ಸಾಧ್ಯತೆಯ ಕನ್ನಡ ಕೃತಿಯನ್ನು ಇಂಗ್ಲೀಷ್ಗೆ ಅನುವಾದ ಮಾಡಿ, ಬೂಕರ್ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ದೀಪಾ ಭಾಸ್ತಿ ಅವರು ಮಾಡಿದ್ದಾರೆ. ಹಾರ್ಟ್ ಲ್ಯಾಂಪ್ ಇಂಗ್ಲೀಷ್ ಅನುವಾದ ಕೃತಿ ಯಾವುದೇ ಒಂದು ಕಥಾ ಸಂಕಲನಕ್ಕೆ ದೊರೆತ ಮೊಟ್ಟ ಮೊದಲ ಬೂಕರ್ ಪ್ರಶಸ್ತಿಯೇ ಆಗಿದೆ. ಈ ಒಂದು ಬೂಕರ್ ಪ್ರಶಸ್ತಿ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ದಾಖಲು ಮಾಡಿದೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪಾ ಭಾಸ್ತಿ ಅವರು, “ಕನ್ನಡ ಮತ್ತು ವಸಾಹತುಶಾಹಿ ಭಾಷೆಯಾದ ಇಂಗ್ಲೀಷ್ ನಡುವಿನ ಸಂಬಂಧಗಳನ್ನು ಬೆಳೆಸಿಕೊಳ್ಳುವ ಬಗೆ ಮತ್ತು ಕನ್ನಡದ ಮೂಲ ನೆಲೆಯನ್ನು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರತಿಬಿಂಬಿಸುವ ಮೂಲಕ, ಕನ್ನಡ ಭಾಷೆಯ ಬಗ್ಗೆಯೂ ಇಂಗ್ಲೀಷ್ ಭಾಷಾ ಓದುಗರಿಗೆ ತಿಳಿಸುವ ಪ್ರಯತ್ನವಾಗಿ, ಕನ್ನಡದ ಪದಗಳನ್ನು ಯಥಾವತ್ತಾಗಿ ಅನುವಾದದಲ್ಲಿ ಬಳಸಿಕೊಂಡಿದ್ದೇನೆ. ಅನುವಾದಗಳ ಸಂದರ್ಭ ಇಲ್ಲಿನ ಪದಗಳನ್ನು ಇಂಗ್ಲೀಷ್ನಲ್ಲಿ ಅರ್ಥೈಸುವ ಗೊಜಲುಗಳಿಗೆ ಬದಲಾಗಿ, ಇಲ್ಲಿರುವ ಪದಗಳನ್ನು ಬಳಸಿರುವುದಾಗಿ ತಿಳಸಿದರಲ್ಲದೆ, ಇಂಗ್ಲೀಷ್ನ ‘ಸುಪೀರಿಯರ್’ ಮನಸ್ಥಿತಿಯನ್ನು ಕಳೆಯಲು ಸಾಕಷ್ಟು ಅನುವಾದ ಕೃತಿಗಳ ಅಗತ್ಯತೆ ಇದೆ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, “ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿಯವರಿಗೆ ಮುಂದಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ದೊರಕಿಸಿಕೊಡುವ ಕಾರ್ಯವಾಗಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಮಾತನಾಡಿ “ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ತಮ್ಮ ಅನುವಾದ ಕೃತಿಯ ಮೂಲಕ ದೀಪಾ ಭಾಸ್ತಿಯವರು ಮಾಡಿದ್ದಾರೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, “ಎರಡೂವರೆ ಸಾವಿರ ವರ್ಷದ ಶ್ರೀಮಂತ ಭಾಷಾ ಸಂಸ್ಕೃತಿಯನ್ನು ಕನ್ನಡ ಹೊಂದಿದ್ದು, 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆಯಾದರೂ, ಕನ್ನಡದ ಮಹತ್ವದ ಕೃತಿಗಳು ಅನುವಾದವಾಗಿಲ್ಲವೆಂದು ನುಡಿದರಲ್ಲದೆ, ಭಾನು ಮುಷ್ತಾಕ್ ಅವರ ಕನ್ನಡದ ಕೃತಿಯ ಅನುವಾದದ ಮೂಲಕ ಬೂಕರ್ ಪ್ರಶಸ್ತಿ ಬಂದಿರುವುದು ಇದೇ ಮೊದಲು” ಎಂದು ತಿಳಿಸಿದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಇದೇ ಸಂದರ್ಭ ದೀಪಾ ಭಾಸ್ತಿ ಅವರಿಗೆ ನೀಡಿದ್ದು ವಿಶೇಷ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ. ಪದ್ಮಾಶೇಖರ್ ಮತ್ತು ಜ.ನಾ. ತೇಜಶ್ರೀ ಇವರನ್ನು ಜಿಲ್ಲಾ ಕ.ಸಾ.ಪ.ದಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ಸ್ವಾಗತಿಸಿ, ಗೌರವ ಸಮರ್ಪಣೆಯ ಅಭಿನಂದನಾ ಪತ್ರವನ್ನು ಸಾಹಿತಿ ಸುಬ್ರಾಯ ಸಂಪಾಜೆ ವಾಚಿಸಿದರು. ಅತಿಥಿಗಳನ್ನು ಡಾ. ಕಾವೇರಿ ಪ್ರಕಾಶ್, ಶಿಕ್ಷಕಿ ಕೆ.ಜಿ. ರಮ್ಯಾ ಸಭೆಗೆ ಪರಿಚಯಿಸಿದರು. ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.