ಮಂಗಳೂರು : ಮುದ್ದು ಮೂಡುಬೆಳ್ಳೆಯವರ ‘ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02-11-2023ರ ಗುರುವಾರ ದಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು “ಮುದ್ದು ಮೂಡುಬೆಳ್ಳೆ ತುಳು ಕನ್ನಡ ಸಾಹಿತ್ಯದಲ್ಲಿ ಕವಿ, ಲೇಖಕ ಮತ್ತು ಸಂಶೋಧಕರಾಗಿ ಅಪ್ರತಿಮ ಕೊಡುಗೆ ನೀಡಿರುವುದು ಸ್ಮರಣೀಯ. ಕೃತಿಯಲ್ಲಿ ವಾದ್ಯಗಳ ಪರಿಚಯದ ಜತೆಗೆ ಜನಪದ ಸಂಸ್ಕೃತಿ ಅನಾವರಣಗೊಂಡಿದೆ. ಕೃತಿಯು ಉನ್ನತ ಅಧ್ಯಯನಕ್ಕೆ ಪೂರಕ ಮಾರ್ಗದರ್ಶಿ” ಎಂದು ತಿಳಿಸಿದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳೈರು ಮಾತನಾಡಿ ” ಮುದ್ದು ಮೂಡುಬೆಳ್ಳೆಯವರು ತುಳು ಸಾಹಿತ್ಯದ ಬಗ್ಗೆ ಅಪಾರ ಮಮತೆ ಹಾಗೂ ಕಾಳಜಿ ಇಟ್ಟುಕೊಂಡವರಾಗಿದ್ದಾರೆ. ಕೃಷಿ ಸಮುದಾಯ ಮತ್ತು ಆರಾಧಕರು ಸಹಿತ ಹತ್ತು ಹಲವು ವರ್ಗಗಳ ಪರಿಚಯವನ್ನು ಕೃತಿಯ ಮೂಲಕ ಮಾಡಲಾಗಿದೆ. ವಿವಿಧ ಸಮುದಾಯಗಳ ಬಗ್ಗೆ ಅಧ್ಯಯನ ಕೈಗೊಳ್ಳುವವರಿಗೆ ಮಹತ್ವದ ಕೃತಿಯಾಗಿದೆ” ಎಂದು ಹೇಳಿದರು.
ಲೇಖಕ ಮುದ್ದು ಮೂಡುಬೆಳ್ಳೆ ಮಾತನಾಡಿ “ಸುಮಾರು 30 ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದ್ದು ನಿರಂತರ ಅಧ್ಯಯನದ ಬಳಿಕ ಕೃತಿ ಪ್ರಕಟಿಸಲಾಗಿದೆ. ಅನೇಕ ಜನರ ಸಹಕಾರದಿಂದ ಕೃತಿ ಪ್ರಕಟಗೊಂಡಿದೆ” ಎಂದು ತಿಳಿಸಿದರು. ಪ್ರಕಾಶಕ ಕಲ್ಲೂರು ನಾಗೇಶ್, ಸಾಧು ಪೂಜಾರಿ ಉಪಸ್ಥಿತರಿದ್ದರು.
ಪುಸ್ತಕದ ಪ್ರತಿಗಳು ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಇದರ ಕಲ್ಲೂರು ನಾಗೇಶ್ ಮತ್ತು ಲೇಖಕ ಮುದ್ದು ಮೂಡುಬೆಳ್ಳೆಯವರ ಬಳಿ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ -9482975125, 9731784976. ಪುಸ್ತಕದ ಬೆಲೆ ರೂಪಾಯಿ 100/-


