ಮಂಗಳೂರು : ಭರತಾಂಜಲಿ ಕೊಟ್ಟಾರ ಆಯೋಜಿಸಿದ ಎಂ. ಆರ್. ಪಿ. ಎಲ್. ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ವಿ. ಎನ್. ಎಸ್. ವೆಂಕಟರಮಣ ಮತ್ತು ಪದ್ಮ ರಂಜಿನಿ ದಂಪತಿಗಳ ಸುಪುತ್ರಿ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್, ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರಕ್ಷಿಲ ಜೈನ್ ಇವರುಗಳ ಶಿಷ್ಯೆ ವಿ. ಹರಿಣಿ ಇವರ ರಂಗಪ್ರವೇಶ ಕಾರ್ಯಕ್ರಮ ದಿನಾಂಕ 14 ಜೂನ್ 2025 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಮ್. ಆರ್. ಪಿ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಜಾರ್ ಮಾತನಾಡಿ “ನೃತ್ಯ ಕಲಾವಿದರು ಸಮಾಜಕ್ಕೆ ನೃತ್ಯದ ಮೂಲಕ ತಮ್ಮ ಸಂದೇಶವನ್ನು ತಲುಪಿಸುತ್ತಾರೆ ನೃತ್ಯವು ಕೇವಲ ಒಂದು ಕಲೆಯಲ್ಲ ಅದು ಸಮಾಜದ ಪ್ರತಿಬಿಂಬವಾಗಿದೆ” ಎಂದು ನುಡಿದರು.
ಎಂ. ಆರ್. ಪಿ. ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಮುಂಡ್ಕೂರು ಶಾಮ್ ಪ್ರಸಾದ್ ಕಾಮತ್ ಮಾತನಾಡಿ “ನೃತ್ಯ ಕಲಾವಿದರು ತಮ್ಮ ಕಲೆಯ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಾರೆ. ಎಂ. ಆರ್. ಪಿ. ಎಲ್. ಸಂಸ್ಥೆಯಲ್ಲಿ ತುಂಬಾ ಮಕ್ಕಳು ನೃತ್ಯಕಲೆಯ ಅಭ್ಯಾಸವನ್ನು ಮಾಡಿರುವರು ಆದರೆ ಹರಿಣಿಯು ರಂಗಪ್ರವೇಶವನ್ನು ಮಾಡಿದ ಮೊದಲಿಗಳು ಈ ನಿಟ್ಟಿನಲ್ಲಿ ಆಕೆಗೆ ಹಾಗು ಅವಳನ್ನು ಪ್ರಬುದ್ಧವಾಗಿ ಕಲಾಕ್ಷೇತ್ರಕ್ಕೆ ನೀಡಿದ ಗುರುಗಳಾದ ಪ್ರತಿಮಾ ಶ್ರೀಧರ್ ದಂಪತಿಗಳು ಅಭಿನಂದನಾರ್ಹರು” ಎಂದರು.
ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಹೆಮ್ಮೆಯಿಂದ ಮಾತನಾಡಿ “ನೃತ್ಯ ಕ್ಷೇತ್ರದ ಎಲ್ಲಾ ಆಯಾಮಗಳನ್ನು ಮೈಗೂಡಿಸಿಕೊಂಡು ಭಾವಪೂರ್ಣ ಅಭಿನಯದೊಂದಿಗೆ ಶುದ್ಧ ಅಡವುಗಳನ್ನು ಜೋಡಿಸಿಕೊಂಡು ನೀಡಿದ ಕಾರ್ಯಕ್ರಮ ಮನಸ್ಸಿಗೆ ಮುದ ನೀಡಿತು. ಕಲಾವಿದೆಗೆ ಮತ್ತು ಭರತಾಂಜಲಿ ಸಂಸ್ಥೆಗೆ ಒಳ್ಳೆಯದಾಗಲಿ” ಎಂದು ಆಶೀರ್ವದಿಸಿದರು. ಪುತ್ತೂರಿನ ವಿಶ್ವಕಲಾ ನಿಕೇತನದ ಗುರುಗಳಾದ ಕಲಾಶ್ರೀ ನಯನ ವಿ. ರೈ ಅಭಿನಂದನೆಯ ಮಾತುಗಳನ್ನಾಡಿದರು.
ಡಿ. ಪಿ. ಎಸ್. ಶಾಲೆಯ ನಿವೃತ್ತ ಇಂಗ್ಲಿಷ್ ಶಿಕ್ಷಕಿ ಉಷಾ ವರದರಾಜನ್ ಶುಭ ಹಾರೈಸಿದರು. ಕಲಾವಿದೆ ಹರಿಣಿ ನೃತ್ಯ ವಿದ್ಯೆ ಕಲಿಸಿದ ಗುರುಗಳಿಗೆ ಗುರು ನಮನವನ್ನು ಸಲ್ಲಿಸಿ, ಗುರುಗಳು ಕಲಿಸಿದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ಮಾತನಾಡಿ “ಹರಿಣಿ ಶಿಕ್ಷಣದ ಜೊತೆಗೆ ನೃತ್ಯ ವಿದ್ಯೆಯನ್ನು ಸಹ ಶ್ರದ್ಧೆಯಿಂದ ಕಲಿತು..ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರೈಸಿ ಅಂತಿಮ ಹಂತದ ಪರೀಕ್ಷೆಯ ತಯಾರಿ ಮಾಡುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿರುವಳು ಮುಂದಿನ ದಿನಗಳಲ್ಲಿ ಹರಿಣಿಯು ಕಲಾಕ್ಷೇತ್ರದಲ್ಲಿ ಇನ್ನಷ್ಟು ವ್ಯವಸಾಯ ಮಾಡುವಲ್ಲಿ ನಟರಾಜನು ಹರಸಲಿ” ಎಂದು ಹಾರೈಸಿದರು.
ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ಹಾಡುಗಾರಿಕೆ ಸ್ವರಾಗ್ ಮಾಗೆ, ಮೃದಂಗ ವಿದ್ವಾನ್ ಸುರೇಶ್ ಬಾಬು ಕಣ್ಣೂರು, ವಯೋಲಿನ್ ವಿದ್ವಾನ್ ಶ್ರೀಧರ ಆಚಾರ್ಯ ಉಡುಪಿ, ಮೋರ್ಚಿಂಗ್ ವಾದನದಲ್ಲಿ ವಿದ್ವಾನ್ ಬಾಲಕೃಷ್ಣ ವಿಟ್ಲ ಸಹಕರಿಸಿದ್ದರು. ಗುರು ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರೂಪಿಸಿ, ಕಲಾವಿದೆಯ ತಾಯಿ ಪದ್ಮರಂಜಿನಿ ವಂದಿಸಿದರು. ವಿದುಷಿ ಪ್ರಕ್ಷಿಲಾ ಜೈನ್, ವಿದುಷಿ ಅನ್ನಪೂರ್ಣ ರಿತೇಶ್,ವಿದುಷಿ ಮಾನಸ ಕುಲಾಲ್, ವಿದುಷಿ ಮಾನಸ ಕಾರಂತ್, ಮೊದಲಾದವರು ಉಪಸ್ಥಿತರಿದ್ದರು.