ಕೊಪ್ಪಳ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ನಗರಸಭೆ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ. ಫ. ಗು. ಹಳಕಟ್ಟಿ ಜನ್ಮದಿನ ‘ವಚನ ಸಂರಕ್ಷಣಾ ದಿನಾಚರಣೆ’ಯು ದಿನಾಂಕ 02 ಜುಲೈ 2025ರ ಬುಧವಾರದಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಮಾತನಾಡಿ “ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳಿಗೆ ಬಹಳ ವಿಶೇಷ ಸ್ಥಾನವಿದ್ದು, ಡಾ. ಫ.ಗು. ಹಳಕಟ್ಟಿಯವರು ವಚನಗಳ ರಕ್ಷಣೆಗೆ ಶ್ರಮಿಸಿದವರಾಗಿದ್ದರು. ಇಂದಿನ ಜನ ಸಮುದಾಯಕ್ಕೆ ನಟ, ನಟಿಯರು ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದರೆ, ನಿಜವಾಗಲು ಆದರ್ಶವಾಗಬೇಕಿರುವುದು ಡಾ. ಫ. ಗು. ಹಳಕಟ್ಟಿ ಅವರಂತಹ ಮಹನೀಯರು. ಹಳಕಟ್ಟಿಯವರು ವಚನಗಳ ಸಂಗ್ರಹಣೆ ಮಾಡದೇ ಹೋಗಿದ್ದರೆ, ನಮಗೆ ವಚನ ಸಾಹಿತ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಮ್ಮ ಭಾರತದ ಸಂವಿಧಾನದಲ್ಲಿರುವ ಎಲ್ಲಾ ಆಶಯಗಳನ್ನು ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ ಮಾತನಾಡಿ “ಬಸವಾದಿ ಶರಣರ ವಚನಗಳನ್ನು ಡಾ. ಫ. ಗು. ಹಳಕಟ್ಟಿಯವರು ಸಂರಕ್ಷಿಸಿ, ಪ್ರಕಟಿಸದೇ ಹೋಗಿದ್ದರೆ ಕನ್ನಡ ಭಾಷೆ ಬಡವಾಗಿರುತ್ತಿತ್ತು. ಕನ್ನಡದ ವಚನ ಸಾಹಿತ್ಯ ಜಗತ್ತಿನ ಸಾಹಿತ್ಯಕ್ಕೂ ಆಕರವಾಗಿರುವ ಸಾಮರ್ಥ್ಯ ಹೊಂದಿದೆ. ಫಕೀರಪ್ಪರ ತಂದೆ ಗುರುಬಸಪ್ಪ ಹಳಕಟ್ಟಿ ಕಾನೂನು ಪದವಿ ಪಡೆದು ವೃತ್ತಿಯಿಂದ ವಕೀಲರಾಗಿ, ಸಾಹಿತಿ, ಸಹಕಾರಿಗಳಾಗಿ, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಮಾಜಕ್ಕಾಗಿ ತನು-ಮನ ಧನವನ್ನು ನೀಡಿ ವಚನ ಸಾಹಿತ್ಯವನ್ನು ಉಳಿಸಿದ್ದಾರೆ. ಅವರು ತಮ್ಮ ಬದುಕನ್ನು ವಚನಗಳ ಜೋಡಣೆಗೆ ಮುಡಿಪಾಗಿಟ್ಟರು, ಬಸವಣ್ಣನವರ ಆಶಯಗಳನ್ನು ಉಳಿಸುವುದಕ್ಕಾಗಿ ಶ್ರಮಿಸಿದ ಹಳಕಟ್ಟಿ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯುತ್ತಾರೆ. ಸಮಸಮಾಜ ನಿರ್ಮಾಣ ಸಾಧ್ಯವಾಗಿಸುವ ವಚನಗಳ ರಕ್ಷಣೆಗೆ ಶ್ರಮಿಸಿದ ಹಳಕಟ್ಟಿಯವರು ನಮ್ಮ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ವಚನಸಾಹಿತ್ಯ ಅಮೂಲ್ಯವಾಗಿದೆಯೆಂದರೆ ಅದರಲ್ಲಿರುವ ಸುಲಭ ಸಾಧ್ಯವಾದ ಆಧ್ಯಾತ್ಮಿಕತೆ, ನೇರವಾದ ಭಾಷೆ ಮತ್ತು ಆಳವಾದ ಭಾವನೆಗಳು, ಆಚರಣೆಗಳ ವಿಮರ್ಶೆ, ಸರ್ವಕಾಲಿಕ ಪ್ರಸ್ತುತತೆ, ಸತ್ಯವಚನಗಳು ನಿತ್ಯವಾದವು, ಸರಳ, ಶಕ್ತಿ ಸಾಮರ್ಥ್ಯದಿಂದಾಗಿವೆ, ಮಾತೃಭಾಷೆಯ ಬಲವಿದೆ, ಸಾಹಿತ್ಯದ ಪ್ರಜಾಪ್ರಭುತ್ವೀಕರಣ, ಹೊಸ ರೂಪದ ಸಾಹಿತ್ಯ ವಿಕಾಸ, ವ್ಯಷ್ಟಿ-ಸಮಷ್ಟಿಗಳ ವಿಕಾಸ ಇದೆ. ಲಿಂಗಾಯತ ಸಮುದಾಯಕ್ಕೆ ಅಸ್ತಿತ್ವ, ಘನತೆ, ಒಂದು ಸ್ವತಂತ್ರ ಧರ್ಮದ ಅರ್ಹತೆ ಹೊಂದಿದೆಯೆಂದರೆ ಅದಕ್ಕೆ ಡಾ ಫ. ಗು. ಹಳಕಟ್ಟಿಯವರೇ ಕಾರಣ” ಎಂದು ಹೇಳಿದರು. ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎನ್. ಹೊರಪೇಟಿ ಕಾರ್ಯಕ್ರಮ ನಿರೂಪಿಸಿದರು.
ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ಫ. ಗು. ಹಳಕಟ್ಟಿ ವೃತ್ತದಲ್ಲಿ ಧ್ವಜಾರೋಹಣ ಹಾಗೂ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮದ ನಡೆಯಿತು.