ಪೆರಿಯ : ಬೇಕಲ್ನ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಐದನೇ ದೀಪಾವಳಿ ಸಂಗೀತ ಉತ್ಸವದ ಸಮಾರೋಪ ಸಮಾರಂಭವು ದಿನಾಂಕ 01 ನವೆಂಬರ್ 2025ರಂದು ಜರುಗಲಿದೆ. ಬೆಳಿಗ್ಗೆ, ಎಲ್ಲಾ ಸಂಗೀತಗಾರರು ಸಂಗೀತ ಜಗತ್ತಿನ ಮೂವರು ಶ್ರೇಷ್ಠರಾದ ತ್ಯಾಗರಾಜ ಸ್ವಾಮಿ, ಮುತ್ತು ಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಇವರ ಸ್ಮರಣಾರ್ಥ ಮೂರು ಸಂಯೋಜನೆಗಳನ್ನು ಹಾಡಲಿದ್ದಾರೆ, ನಂತರ ವೈಷ್ಣವಿ ಆನಂದ್, ಕಲಾಂಬಿಕಾ ಸಹೋದರಿಯರು ಮತ್ತು ಮೂಜಿಕುಲಂ ಹರಿಕೃಷ್ಣನ್ ಮತ್ತು ರಾಘವ್ ಕೃಷ್ಣನ್ ಇವರಿಂದ ಮ್ಯಾಂಡೋಲಿನ್ ನುಡಿಸುವ ಸಂಗೀತ ಕಚೇರಿ ನಡೆಯಲಿದೆ.
ಸಂಗೀತೋತ್ಸವದ ಸಮಾರೋಪ ದಿನದಂದು, ಗೋಶಾಲೆಯ ನಂದಿ ಮಂಟಪದಲ್ಲಿ ಖ್ಯಾತ ನೃತ್ಯಗಾರ್ತಿ ಪದ್ಮವಿಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಡೋಲು ಮಾಂತ್ರಿಕ ಶಿವಮಣಿ ‘ಶಿವ ತರಂಗಂ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸರಣಿ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಗುತ್ತಿದ್ದು, ಈ ವರ್ಷದ ಗೋಶಾಲ ಪರಂಪರಾ ‘ವಿಭೂಷಣ’ ಪ್ರಶಸ್ತಿ ಟಿ.ವಿ. ಗೋಪಾಲಕೃಷ್ಣನ್ ಇವರಿಗೆ, ಪರಂಪರಾ ‘ಶ್ರೀ’ ಪ್ರಶಸ್ತಿ ಡ್ರಮ್ ಶಿವಮಣಿ ಇವರಿಗೆ, ಪರಂಪರಾ ‘ಗುರುರತ್ನ’ ಪ್ರಶಸ್ತಿ ಅನಂತ ಪದ್ಮನಾಭನ್ ಇವರಿಗೆ, ಪರಂಪರಾ ‘ಬಾಲ ಪ್ರತಿಭಾ’ ಪ್ರಶಸ್ತಿಯನ್ನು ಸಿಂಗಾಪುರದ ರಾಘವಕೃಷ್ಣ ಇವರಿಗೆ ಪ್ರದಾನ ಮಾಡಲಾಗುವುದು.
