ಬೆಳ್ತಂಗಡಿ : ಕರುಂಬಿತ್ತಿಲ್ ವಿದ್ವಾನ್ ವಿಠಲ ರಾಮಮೂರ್ತಿ ಇವರ ಮನೆಯಲ್ಲಿ ಆರು ದಿನಗಳ ಕಾಲ ನಡೆದ ‘ಕರುಂಬಿತ್ತಿಲ್ ಸಂಗೀತ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 25 ಮೇ 2025ರಂದು ಸಂಪನ್ನಗೊಂಡಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಿದ್ದ ಗಾಯಕ ವಿದ್ಯಾಭೂಷಣ ಇವರು ಮಾತನಾಡಿ “ಸಂಗೀತದ ವಿದ್ಯಾರ್ಥಿಗಳು ಜತೆಯಾಗಿ ಸೇರಿ ಗುರುಕುಲ ಮಾದರಿಯಲ್ಲಿ ಕಲಿಯುವುದರಿಂದ ತಮ್ಮ ಕಲಿಕೆಯನ್ನು ಇನ್ನಷ್ಟು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ. ಗುರುಗಳು ಕಲಿಸಿದ ಪಾಠ, ವಿದ್ಯಾರ್ಥಿಗಳ ಶ್ರಮ, ಅವರ ಸಮರ್ಪಣಾ ಮನೋಭಾವ ಮತ್ತು ದೇವಾನುಗ್ರಹದೊಂದಿಗೆ ವಿದ್ಯೆಯೆನ್ನುವುದು ಒಬ್ಬ ವ್ಯಕ್ತಿಗೆ ಒಲಿದು ಬರುತ್ತದೆ. ಆದ್ದರಿಂದ ಅವರಿಗೆ ವಿದ್ಯೆಯನ್ನು ಹೇಳಿಕೊಡುವುದಷ್ಟೇ ಅಲ್ಲದೆ ಪೂರಕವಾದ ಮತ್ತು ಪ್ರೇರಕವಾದ ವಾತಾವರಣವನ್ನು ಒದಗಿಸಿಕೊಡುವ ಕೆಲಸವನ್ನು ಗುರುಗಳಾದ ವಿಠಲ ರಾಮಮೂರ್ತಿಯವರು ನಿರಂತರವಾಗಿ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕರುಂಬಿತ್ತಿಲ್ ಸಂಗೀತ ಶಿಬಿರದ ಆಯೋಜಕರಾದ ವಿದ್ವಾನ್ ವಿಠಲ ರಾಮಮೂರ್ತಿ ಮಾತನಾಡಿ “ಸಣ್ಣ ಮಟ್ಟಿನಲ್ಲಿ ಆರಂಭವಾದ ಕರುಂಬಿತ್ತಿಲ್ ಸಂಗೀತ ಶಿಬಿರ ಇಂದು ಹಂತ ಹಂತವಾಗಿ ಬೆಳೆದು 25 ವರ್ಷಗಳನ್ನು ಪೂರೈಸಿದೆ. ಶಿಬಿರ ನಿಡ್ಲೆಯ ಗ್ರಾಮೀಣ ಭಾಗದ ಮನೆಯಲ್ಲಿ ನಡೆಯುವುದಾದರೂ ಇಡೀ ಊರಿನ ಸಂಗೀತ ಪ್ರೇಮಿಗಳು ಇಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಿರುವುದು ಅತೀವ ಸಂತೋಷವನ್ನು ನೀಡುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡ ಅನೇಕ ವಿದ್ಯಾರ್ಥಿಗಳು ಇಂದು ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದಾರೆ. ಮುಂದೆ ಈ ಶಿಬಿರ ಇನ್ನಷ್ಟು ಸಂಗೀತ ಕಲಾವಿದರನ್ನು ಈ ನಾಡಿಗೆ ಪರಿಚಯಿಸುವಂತಾಗಲಿ. 25ನೇ ವರ್ಷದ ಸಂಗೀತ ಶಿಬಿರದ ಯಶಸ್ಸು ಮುಂದಿನ ತಲೆಮಾರಿನಲ್ಲಿ ಮಕ್ಕಳು ಸಂಗೀತದ ಯಾನವನ್ನು ಮುಂದುವರೆಸುತ್ತಾರೆ ಎಂಬ ನಂಬಿಕೆ ಮೂಡಿಸಿದೆ. ಈ ನಿರಂತರ ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲರಿಗೂ ಈ ಶಿಬಿರದ ಯಶಸ್ಸು ಸಲ್ಲಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಕಲಿತ ಕೃತಿಗಳನ್ನು ಶಿಬಿರಾರ್ಥಿಗಳು ಪ್ರಸ್ತುತಪಡಿಸಿದರು. ಅಲ್ಲದೆ ಮೃದಂಗ ವಾದನದ ಪ್ರಸ್ತುತಿಯೂ ನಡೆಯಿತು. ವಿದುಷಿ ಕೃಷ್ಣವೇಣಿ ಅಮ್ಮ, ವಿದ್ವಾನ್ ಉಡುಪಿ ಗೋಪಾಲಕೃಷ್ಣನ್, ವಿದ್ವಾನ್ ಶ್ರೀಮುಷ್ಣಂ ರಾಜಾರಾವ್, ವಿದ್ವಾನ್ ನಾಗೈ ಮುರಳೀಧರನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಎಂ.ಆರ್. ಶಿಬಿರಕ್ಕೆ ಶುಭ ಹಾರೈಸಿದರು.
ದಿನವಿಡೀ ಸುರಿಯುವ ಮಳೆಯಲ್ಲಿ ಸಂಗೀತ ಆಲಿಸುವ ವಿಭಿನ್ನ ಅನುಭವ ಸಂಗೀತ ಪ್ರೇಮಿಗಳಿಗೆ ಸಿಕ್ಕಿತು. ಸಮಾರೋಪ ಕಛೇರಿಯನ್ನು ಪ್ರಸ್ತುತಪಡಿಸಿದ ವಿದ್ಯಾಭೂಷಣರ ಹಾಡುಗಳಿಗೆ ಚಪ್ಪಾಳೆಯ ಸುರಿಮಳೆಯಾಯಿತು. ನಾನು ಹಾಡುತ್ತಿರುವ ರಾಗಕ್ಕೆ ಅಮೃತವರ್ಷಿಣಿಯ ಪ್ರತಿರಾಗವು ಕೇಳಿಸುತ್ತಿದೆ.. ಎನ್ನುತ್ತಾ ಮಳೆಯನ್ನು ಶ್ಲಾಘಿಸಿ ಹಾಡುಗಾರಿಕೆಯನ್ನು ಅವರು ಧೋಗುಡುವ ಮಳೆಯ ನಡುವೆಯೇ ಮುಂದುವರೆಸಿದರು. ಅದ್ಭುತವಾದ ಅನುಭವವನ್ನು ಶಿಬಿರಾರ್ಥಿಗಳೆಲ್ಲರೂ ಆನಂದಿಸಿದರು.
ಆರು ದಿನಗಳ ಕಾಲ ನಡೆದ ಶಿಬಿರದಲ್ಲಿ ಶ್ರೀಲಂಕಾ, ಅಮೇರಿಕ, ಹೈದರಾಬಾದ್, ಹೊಸದಿಲ್ಲಿ, ವಿಶಾಖಪಟ್ಟಣಂ, ಚೆನ್ನೈ, ಕೇರಳ, ಮುಂಬಯಿ ಸೇರಿದಂತೆ ಹಲವಾರು ಪ್ರದೇಶಗಳಿಂದ ಸುಮಾರು 350ಕ್ಕೂ ಅಧಿಕ ಸಂಗೀತ ವಿದ್ಯಾರ್ಥಿಗಳು ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡರು.