ಮಂಗಳೂರು : ಅ. ಭಾ. ಸಾ. ಪ. ದ.ಕ. ಜಿಲ್ಲಾ ಸಮಿತಿ ಮತ್ತು ವಿವಿ ಕಾಲೇಜು ಮಂಗಳೂರು ಇದರ ‘ಮಂಗಳಗಂಗೆ’ ವಾರ್ಷಿಕ ಸಂಚಿಕೆ ವತಿಯಿಂದ ನಡೆದ ಸೃಜನೇತರ ಬರವಣಿಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ದಿನಾಂಕ 20 ಅಕ್ಟೋಬರ್ 2025ರಂದು ವಿ.ವಿ. ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರು ಮಾತನಾಡಿ “ಲೇಖನಗಳಿಗೆ ಜನಮಾನಸದ ಮೇಲೆ ಪ್ರಭಾವ ಬೀರುವ ಶಕ್ತಿ ಇದೆ. ಸುತ್ತಲಿನ ಪರಿಸರವೇ ವಸ್ತು ವಿಷಯವಾಗಿ, ಬದುಕಿನ ವಾಸ್ತವಿಕತೆ ಅರಿತು ಬರೆಯಬೇಕು. ಸಾಹಿತ್ಯ ಸಮಾಜಕ್ಕೆ ದಿಕ್ಸೂಚಿ ನೀಡಬೇಕು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿ. ವಿ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಮಾತನಾಡಿ “ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಹಿತ್ಯದ ದ ಓದು ಹಾಗೂ ಬರವಣಿಗೆಯಲ್ಲಿ ಆಸಕ್ತಿ ವಹಿಸಬೇಕು” ಎಂದರು. ಅ. ಭಾ. ಸಾ. ಪ. ದ.ಕ. ಜಿಲ್ಲಾಧ್ಯಕ್ಷ ಪಿ. ಬಿ. ಹರೀಶ್ ರೈ, ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ಮುಖ್ಯ ಅತಿಥಿಗಳಾಗಿದ್ದರು. ಜತೆ ಕಾರ್ಯದರ್ಶಿ ಶ್ರೀಲಕ್ಷ್ಮೀ ಮಠದಮೂಲೆ, ಸಮಿತಿ ಸದಸ್ಯ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.
ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ನುಡಿಚಿತ್ರ ಬರಹ ಸ್ಪರ್ಧೆಯಲ್ಲಿ ಪೂರ್ಣಿಮಾ. ಕೆ. ಎಂ. (ಪ್ರಥಮ), ಪ್ರಿಯಾ (ದ್ವಿತೀಯ), ಮಹಮ್ಮದ್ ಶಹೀದ್ (ತೃತೀಯ), ಕಾವೇರಿ ಮತ್ತು ಮಾನ್ಯ ನಾಯಕ್ (ಪ್ರೋತ್ಸಾಹಕ) ಬಹುಮಾನ ಪಡೆದರು.
ಮಂಗಳಗಂಗೆ ಸಂಚಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಡಾ. ಮಾಧವ ಎಂ. ಕೆ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿದುಷಿ ಸುಮಂಗಳಾ ರತ್ನಾಕರ್ ನಿರೂಪಿಸಿ, ಅ. ಭಾ. ಸಾ. ಪ. ಜಿಲ್ಲಾ ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ವಂದಿಸಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಬೆಂಗಳೂರು ಉತ್ತರ ವಿ. ವಿ. ಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಹಿರಿಯ ಲೇಖಕ ಡಾ. ಚ.ನ. ಶಂಕರ ರಾವ್, ಪತ್ರಕರ್ತ ಆರ್.ಸಿ. ಭಟ್, ಉಪನ್ಯಾಸಕ ಗುರುಪ್ರಸಾದ್ ಟಿ.ಎನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.