ಮಂಗಳೂರು : ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮದ 2025ನೇ ಸಾಲಿನ ‘ಯಕ್ಷ ಪಕ್ಷ’ ರಜತ ಸಂಭ್ರಮ ಅಷ್ಟಾಹ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 23 ಮೇ 2025ರಂದು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದಲ್ಲಿ ನಡೆಯಿತು.
ಈ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಶಿಕ್ಷಕ ಶ್ರೀ ಸದಾಶಿವರು “ಯಕ್ಷಗಾನದಲ್ಲಿ ಇಂದು ಸ್ತ್ರೀ-ಪುರುಷ ಎಂಬ ಬೇಧವಿಲ್ಲದೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿಣ್ಣರೂ ಸಮ ಪ್ರಮಾಣದಲ್ಲಿ ಭಾಗವಹಿಸಿ ಕಲಾರಂಗವನ್ನು ಬೆಳಗುತ್ತಿದ್ದಾರೆ. ಪ್ರೇಕ್ಷಕರೂ ಅದನ್ನು ಅಷ್ಟೇ ಪ್ರಮಾಣದಲ್ಲಿ ಸ್ವೀಕರಿಸಿದ್ದಾರೆ. ಆ ಮೂಲಕವಾಗಿ ಮಕ್ಕಳೂ ಸಂಸ್ಕಾರಯುತರಾಗುತ್ತಾರೆ. ಸರಯೂ ತನ್ನ ರಜತ ಸಂಭ್ರಮದಲ್ಲಿ ವಿವಿಧ ಮಕ್ಕಳ ತಂಡಗಳನ್ನು ಆಹ್ವಾನಿಸಿ ಅವಕಾಶವಿತ್ತಿದ್ದು, ಉಳಿದ ತಂಡಗಳಿಗೆ ಮಾದರಿಯಾಗಿದೆ” ಎ೦ದು ಹೇಳಿದರು.
ಯಕ್ಷ ಪೂರ್ಣಿಮಾ ಯಕ್ಷಕಲಾ ಕೇಂದ್ರ ತಂಡ ಸುರತ್ಕಲ್ ತಂಡವನ್ನು ಗೌರವಿಸಲಾಯಿತು. ತಂಡದ ನಿರ್ದೇಶಕಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪೂರ್ಣಿಮಾ ಯತೀಶ್ ರೈಯವರನ್ನು ಕಲಾ ಗೌರವ ನೀಡಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಮದ್ಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಆನಂದ ದೇವಾಡಿಗ, ವನಜಾಕ್ಷಮ್ಮ, ಆನ೦ದ ದೇವಾಡಿಗ, ಆನಂದ ಶೆಟ್ಟಿ ಹಾಗೂ ಸರಯೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ‘ಸುದರ್ಶನ ಗರ್ವಭಂಗ – ಭಾರ್ಗವ ವಿಜಯ’ ಎಂಬ ಪ್ರಸಂಗದ ಯಕ್ಷಗಾನವು ಯಕ್ಷ ಪೂರ್ಣಿಮಾ ಯಕ್ಷಕಲಾ ತರಬೇತಿ ಕೇಂದ್ರದವರಿಂದ ಪ್ರದರ್ಶನಗೊಂಡಿತು.