ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ ಸಮಾರೂಪ ಸಮಾರಂಭ ದಿನಾಂಕ 01 ಜೂನ್ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಪ್ರೊ ಎಂ. ಬಿ ಪುರಾಣಿಕ್ ಮಾತನಾಡಿ “ಯಾವುದೇ ಸಂಸ್ಥೆಯ ಸಾಧನೆಯನ್ನ ಗುರುತಿಸಲು ಅದು ಗೈದ ಸಾಹಸಕಾರ್ಯಗಳೇ ರಹದಾರಿಯಾಗುತ್ತದೆ. ಸಾಧನಾಪಥದಲ್ಲಿ ಸಾಗುವಾಗ ಕಂಟಕ ಮಾರ್ಗವಿರುತ್ತದೆ. ಅದನ್ನು ಸಾಗುವಾಗ ಕಷ್ಟ ಎದುರಾಗುವುದು ಸಹಜ. ತೆಂಕುತಿಟ್ಟಿನಲ್ಲಿ ಮಕ್ಕಳ ಮೇಳ ಎಂಬ ಕಲ್ಪನೆಯನ್ನು ಹುಟ್ಟುಹಾಕಿ, ದೇಶಾದ್ಯಂತ ಸಂಚರಿಸಿ, ಯಕ್ಷಗಾನದ ಕಂಪನ್ನು ಪಸರಿಸಿದ ಕೀರ್ತಿ ಸರಯೂ ಸಂಸ್ಥೆಯದ್ದು. 25 ವರ್ಷಗಳಿಂದ ಅದು ಬೆಳೆದದ್ದನ್ನು ನಾವು ಹತ್ತಿರದಿಂದ ಕಂಡಿದ್ದೇವೆ. ಇನ್ನು ಇನ್ನು ಹೆಚ್ಚಿನ ಗಣನೀಯ ಸಾಧನೆಯನ್ನು ಈ ಮಕ್ಕಳ ಮೇಳದ ಚಿಣ್ಣರು ನಡೆಸಲಿ” ಎಂದು ಹಾರೈಸಿದರು.
ವಾರ್ಡ್ 17ರ ಮನಪಾ ಮಾಜಿ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ ” ನನ್ನಲ್ಲಿನ ಒಂದು ಸಾಂಸ್ಕೃತಿಕ ಸಂಸ್ಥೆ ಇಂದು ಬೆಳ್ಳಿಹಬ್ಬವನ್ನಾಚರಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ನಾನು ರಾಜಕೀಯದವನಾದರೂ ಈ ಸಂಸ್ಥೆಯ ಭಾಗವೇ ಆಗಿದ್ದೇನೆ” ಎಂದರು.
ಸರಯೂ ಮಕ್ಕಳ ಮೇಳದ ಗೌರವ ಸಂಚಾಲಕರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಸರಯೂ ಸಾಗಿ ಬಂದ ಹಾದಿಯನ್ನು ವಿವರಿಸಿ ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು. ಕಿನ್ನಿಗೋಳಿಯ ಯುಗಪುರುಷದ ಶ್ರೀ ಭುವನಾಭಿರಾಮ ಉಡುಪ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ” ಧೀಂಗಿಣ ವೀರ” ಧರ್ಮಸ್ಥಳ ಚಂದ್ರಶೇಖರ ಹಾಗೂ ಖ್ಯಾತ ಹಿಮ್ಮೇಳವಾದಕ ಅಕ್ಷಯ ರಾವ್ ವಿಟ್ಲ ಇವರನ್ನು ಅತಿಥಿ ಗಣ್ಯರು ಸನ್ಮಾನಿಸಿದರು. ಶ್ರೀ ಸದಾಶಿವ ಎಂ, ಪ್ರಭಾಕರ ರಾವ್ ಪೇಜಾವರ್, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.
ಗೌತಂ ಭಂಡಾರಿ ಹಾಗೂ ಭಾರತೀ ಪ್ರಮೋದ್ ಸನ್ಮಾನ ಪತ್ರ ವಾಚಿಸಿ, ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವ್ಯವಸಾಯಿ ಕಲಾವಿದರು ಹಾಗೂ ಸಂಸ್ಥೆಯ ಕಲಾವಿದರ ಕೂಡುವಿಕೆಯಿಂದ ‘ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.