ಉಪ್ಪುಂದ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವ -2025ರ ಅಂಗವಾಗಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ದಿನಾಂಕ 07 ಜೂನ್ 2025ರಂದು ಪ್ರತಿಷ್ಠಾನದ ಗುರುಗಳಾದ ಎ.ಪಿ. ಪಾಠಕ್ ಮತ್ತು ಎನ್.ಜಿ. ಹೆಗಡೆ ಮಾರ್ಗದರ್ಶನದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು ನಡೆಯಿತು.
ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನದ ಆಯ್ದ ಪ್ರಸಂಗಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ವಾಸುದೇವ ರಂಗಾ ಭಟ್ಟ ಭಾಗವತಿಕೆಯ ಸ್ವರೂಪ ವಿವೇಚನೆ ಕುರಿತು ಮಾತನಾಡಿ, “ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಯಕ್ಷಗಾನ ಪ್ರದರ್ಶನ, ರಂಗದಲ್ಲಿ ಶ್ರೀಮಂತವಾಗಿ ರಂಗೇರಬೇಕಾದರೆ ಭಾಗವತರ ಹೊಣೆಗಾರಿಕೆ ಮತ್ತು ಸಾಧ್ಯತೆಗಳ ಕುರಿತು ಹಲವು ದೃಷ್ಟಾಂತರಗಳ ಮೂಲಕ ಉದಾಹರಿಸಿ, ಕಲಾವಿದರ ಕಲಿಕೆ ಚೌಕಿಯಲ್ಲಿ ಸಹ ಕಲಾವಿದರೊಂದಿಗೆ ನಡೆಯಬೇಕು” ಎಂದರು.
ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ರಾಗ ತಾಳ ಹಾಡಿನ ಮೂಲಕ ವಿವಿಧ ಮಟ್ಟುಗಳ ಪರಿಚಯ ಮಾಡಿಸಿದರು. ಉಮೇಶ್ ಶಾನ್ಭಾಗ್ ಉದ್ಘಾಟಿಸಿದರು. ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರಿಂದ ಸಮರ್ಥ ಹಿಮ್ಮೇಳದೊಂದಿಗೆ ಯಕ್ಷ ಗಾನವೈಭವ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ “ಧರ್ಮ ಸಂಸ್ಕೃತಿಗಳ ಉಳಿವಿಗೆ ಯಕ್ಷಗಾನದ ಕೊಡುಗೆ ಬಹಳ ದೊಡ್ಡದು” ಎಂದರು. ಹಿರಿಯ ಭಾಗವತ ಹೇರಂಜಾಲು ಗೋಪಾಲ ಗಾಣಿಗ ಅವರನ್ನು ಸಮ್ಮಾನಿಸಲಾಯಿತು.
ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಶೇಖರ ಖಾರ್ವಿ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಪಟ್ಲ ಸತೀಶ್ ಶೆಟ್ಟಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಅಧ್ಯಕ್ಷ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಡಾ. ಆದರ್ಶ ಹೆಬ್ಬಾರ್, ಹರೀಶ್ ಶೆಟ್ಟಿ ಎರ್ಮಾಳ್, ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಂಜೆ ಅಶ್ವಿನಿ ಕೊಂಡದಕುಳಿ ಮತ್ತು ನಾದಾವಧಾನ ವಿದ್ಯಾರ್ಥಿಗಳಿಂದ ‘ಕುಶ ಲವ’ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರೊ. ಪವನ್ ಕಿರಣ್ ಕರೆ ಶುಭಶಂಸನೆ ಗೈದರು. ಮಟ್ನಕಟ್ಟಿ ಎಂ. ಗೋವಿಂದ ಸ್ವಾಗತಿಸಿ, ಡಾ. ಜಗದೀಶ್ ಶೆಟ್ಟಿ ಸಿದ್ದಾಪುರ, ಕೆಪಿ ಪಾಟಕ್ ಕಾರ್ಕಳ, ಅಶೋಕ ಆಚಾರ್ಯ ಸ್ವಾಬ್ರಕಟ್ಟೆ ನಿರೂಪಿಸಿದರು.