ಪುತ್ತೂರು : ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನ ಕೇಂದ್ರ ಮತ್ತು ಐಕ್ಯೂಎಸಿ ಘಟಕ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ “ವಿವೇಕ ಸ್ಮೃತಿ” ಉಪನ್ಯಾಸ ಮಾಲಿಕೆ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ವಾಗ್ಮಿ, ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ “ಎಲ್ಲರೊಳಗೆ ಒಳಗೊಳ್ಳುವ ಮಾನಸಿಕತೆ ಭಾರತೀಯರಿಗಿದೆ. ಅದನ್ನು ವಿಶ್ವದೆಲ್ಲೆಡೆ ಪಸರಿಸಿದ ಸ್ವಾಮಿ ವಿವೇಕಾನಂದರು ಶಾಂತಿ ಸಹಿಷ್ಣುತೆಗೆ ಹೊಸ ಆಯಾಮವನ್ನು ನೀಡಿದ್ದಾರೆ. ದೇಶಕ್ಕಾಗಿ, ಸಮಾಜಕ್ಕಾಗಿ ಪ್ರಾಣವನ್ನು ಮುಡಿಪಾಗಿಡುವ ಸಾವಿರಾರು ಯುವಕರಿಗೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದ ಮೂಲಕ ಭಾರತೀಯ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದರು. ಅವರ ಭಾಷಣ ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ಮೇಲಿರುವ ದೃಷ್ಟಿಕೋನ ಬದಲಿಸುತ್ತದೆ. ವಿವೇಕಾನಂದರು ನಾಯಕರಿಗೆ ನಾಯಕ. ಭಾರತದ ಋಷಿ ಪರಂಪರೆಯ ಪ್ರತಿನಿಧಿ ವಿವೇಕಾನಂದರು. ಮುಂದಿನ ಪೀಳಿಗೆಗೆ ವಿವೇಕಾನಂದರ ಚಿಂತನೆಗಳು ಹೊಸ ಬೆಳಕಾಗಲಿದೆ” ಎಂದು ಹೇಳಿದರು.
ವಿವೇಕಾನಂದ ಸಂಶೋಧನಾ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಪ್ರಾಸ್ತವಿಕವಾಗಿ ಮಾತಾನಾಡಿ “ಸ್ವಾಮಿ ವಿವೇಕಾನಂದರ ಚಿಂತನೆಗಳು ನಮ್ಮೆಲ್ಲರಲ್ಲೂ ಜಾಗೃತವಾಗಬೇಕು. ಜಗತ್ತಿಗೆ ಶಾಂತಿ ಸಂದೇಶ ನೀಡಿದ ಮಹಾನ್ ದಾರ್ಶನಿಕ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಉಪನ್ಯಾಸ ಮಾಲಿಕೆ “ವಿವೇಕ ಸ್ಮೃತಿ”ಯ ಮೊದಲ 12 ಮಾಲಿಕೆಗಳು ಪುಸ್ತಕ ರೂಪದಲ್ಲಿ ಸಮಾಜಕ್ಕೆ ಕೊಡುಗೆಯಾಗಿ ಮೂಡಿಬಂದಿದೆ. ವಿವೇಕ ಸ್ಮೃತಿ ಸರಣಿ ಮಾಲಿಕೆ ಸಂಸ್ಥೆಗೆ ದಿಕ್ಸುಚಿಯಾಗಿ ಮೂಡಿಬರಲಿ” ಎಂದರು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ, ನ್ಯಾಯವಾದಿ ಮುರಳಿ ಕೃಷ್ಣ ಕೆ. ಎನ್. ಇವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯ್ಕ್ ಬಿ., ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್. ಜಿ. ಶ್ರೀಧರ್, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು.
ಆಂಗ್ಲ ವಿಭಾಗದ ಉಪನ್ಯಾಸಕಿ ಡಾ. ನಿಶಿತಾ ಸ್ವಾಗತಿಸಿ, ದ್ವೀತಿಯ ಎಂ. ಕಾಂ. ವಿದ್ಯಾರ್ಥಿ ಅನನ್ಯ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ವಂದಿಸಿದರು.

