ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೆರಡನೇಯ ಉಪನ್ಯಾಸ ಕಾರ್ಯಕ್ರಮ ದಿನಾಂಕ 12 ಫೆಬ್ರವರಿ 2025 ರಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಬೆಳ್ಳಾಲ ಗೋಪಿನಾಥ ರಾವ್ “21ನೇ ಶತಮಾನದ ಯುವ ಮನಸ್ಸುಗಳಿಗೆ ವಿವೇಕಾನಂದರ ಸಂದೇಶ” ಎಂಬ ವಿಷಯದಲ್ಲಿ ಮಾತನಾಡಿ “ನಾನು ಭಾರತವನ್ನು ಯುವಕರ ಶಕ್ತಿಯ ಮೂಲಕವೇ ನೋಡುತ್ತೇನೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ವಾಮಿ ವಿವೇಕಾನಂದರು ಒಂದು ಅಮರ ಪ್ರೇರಣೆ. 21ನೇ ಶತಮಾನದ ಯುವಕರಿಗೆ ಅವರು ನೀಡಿದ ಸಂದೇಶಗಳು ಇಂದು ಇನ್ನಷ್ಟು ಪ್ರಸಕ್ತವಾಗಿದೆ. ಸ್ವಾಮಿ ವಿವೇಕಾನಂದರು ಯುವಕರನ್ನು ಶಕ್ತಿ, ಸೇವಾ ಮನೋಭಾವನೆ, ಹಾಗೂ ಆತ್ಮವಿಶ್ವಾಸ ಇವುಗಳನ್ನು ತಮ್ಮ ಜೀವನದ ಮೂಲ ಸಿದ್ಧಾಂತಗಳಾಗಿಸಿಕೊಳ್ಳಲು ಪ್ರೇರೇಪಿಸಿದರು. “ನಾನು ಭಾರತವನ್ನು ಯುವಕರ ಶಕ್ತಿಯ ಮೂಲಕವೇ ನೋಡುತ್ತೇನೆ” ಎಂಬ ಅವರ ಮಾತು ನಮ್ಮನ್ನೆಲ್ಲಾ ಚಿಂತನೆಗೆ ಒಡ್ಡುತ್ತದೆ. ನೀವು ದುರ್ಬಲರೆಂದು ಅಂದುಕೊಳ್ಳಬೇಡಿ, ನೀವು ಅಮೋಘ ಶಕ್ತಿಯೆಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಉದ್ದೇಶವಿಲ್ಲದೆ ಜೀವನ ಒಂದು ನಾಶವಾಗುವ ದೋಣಿಯಂತೆ ಆದುದರಿಂದ ಉದ್ದೇಶಪೂರಿತ ಜೀವನ ನಿಮ್ಮದಾಗಿಸಿ. ಜೀವನದಲ್ಲಿ ಪರೋಪಕಾರವೇ ಮುಖ್ಯ, ಸೇವೆಯಲ್ಲೇ ಜೀವನದ ತತ್ವವಿದೆ ಹಾಗಾಗಿ ಎಲ್ಲರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಿ. ನಾವು 21ನೇ ಶತಮಾನದ ಯುವಕರು ಈ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ಮತ್ತೊಂದು ಬಾರಿಯೂ ಜಗತ್ತಿಗೆ ಮಾರ್ಗದರ್ಶಕ ರಾಷ್ಟ್ರವಾಗಬಹುದು. “ಎದ್ದು, ಜಾಗ್ರತವಾಗಿರಿ, ಗುರಿ ಸಾಧಿಸುವವರೆಗೆ ನಿಲ್ಲಬೇಡಿ!” ಈ ವಾಕ್ಯ ನಮ್ಮ ಜೀವನದ ದಾರಿ ಪ್ರಜ್ವಲಿಸಲಿ! ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಚ್. ಎನ್. ಆಂಜನೇಯಪ್ಪ, ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮದ ಸಂಯೋಜಕರು ಹಾಗೂ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇದರ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮನೋಜ್ ಕುಮಾರ್ ವಂದಿಸಿದರು.